Mahalaya Amavasya 2022: ಪೂರ್ವಜರಿಗೆ ಹೀಗೆ ವಿದಾಯ ಹೇಳಿ

By Suvarna NewsFirst Published Sep 21, 2022, 4:54 PM IST
Highlights

ಸರ್ವ ಪಿತೃ ಅಮಾವಾಸ್ಯೆಯು ಪಿತೃ ಪಕ್ಷದ ಕೊನೆಯ ದಿನಾಂಕವಾಗಿದೆ. ಈ ದಿನದಂದು ನಡೆಸುವ ಶ್ರಾದ್ಧ, ತರ್ಪಣ, ದಾನ ಮುಂತಾದ ಧಾರ್ಮಿಕ ವಿಧಿ ವಿಧಾನಗಳಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ.

ಅಶ್ವಿಜ ಮಾಸದ ಅಮಾವಾಸ್ಯೆಯನ್ನು ಸರ್ವ ಪಿತೃ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇದಕ್ಕೆ ಮಹಾಲಯ ಅಮಾವಾಸ್ಯೆ ಎಂದೂ ಹೇಳಲಾಗುತ್ತದೆ. ಶಾಸ್ತ್ರೀಯ ನಂಬಿಕೆಗಳ ಪ್ರಕಾರ, ಈ ದಿನದಂದು ಪೂರ್ವಜರಿಗೆ ಶ್ರಾದ್ಧ, ತರ್ಪಣ, ಪಿಂಡದಾನ ಇತ್ಯಾದಿಗಳನ್ನು ಮಾಡಿ ಬೀಳ್ಕೊಡಲಾಗುತ್ತದೆ. ಇದು ಶ್ರಾದ್ಧ ಪಕ್ಷದ ಕೊನೆಯ ದಿನಾಂಕವಾಗಿದೆ. ಈ ದಿನದಂದು ಮರಣದ ದಿನಾಂಕ, ತಿಥಿ ನೆನಪಿರದ ಅಗಲಿದ ಎಲ್ಲ ಪೂರ್ವಜರಿಗಾಗಿ ಶ್ರಾದ್ಧವನ್ನು ನಡೆಸಲಾಗುತ್ತದೆ. ಇದರೊಂದಿಗೆ ಈ ದಿನದಂದು ಶ್ರಾದ್ಧಕ್ಕಾಗಿ ತಯಾರಿಸಿದ ಆಹಾರದಿಂದ ಪಂಚಬಲಿ ಅಂದರೆ ಕಾಗೆ, ಹಸು, ನಾಯಿ, ಇರುವೆ ಮತ್ತು ದೇವರುಗಳಿಗೆ ಆಹಾರವನ್ನು ನೀಡಲಾಗುತ್ತದೆ. ಈ ಮೂಲಕ ಪೂರ್ವಜರು ಸಂತೃಪ್ತರಾಗುತ್ತಾರೆ ಎಂದು ನಂಬಲಾಗಿದೆ. ಅದರ ನಂತರ ಅವರು ತಮ್ಮ ಗಮ್ಯಸ್ಥಾನಕ್ಕೆ ಹೋಗುತ್ತಾರೆ. ಪೂರ್ವಜರ ತೃಪ್ತಿಯಿಂದ ಜೀವನದಲ್ಲಿ ಸಂತೋಷ ಉಳಿಯುತ್ತದೆ. 

ಸರ್ವಪಿತೃ ಅಮಾವಾಸ್ಯೆ ದಿನಾಂಕ
ಹಿಂದೂ ಕ್ಯಾಲೆಂಡರ್ ಪ್ರಕಾರ, ಅಶ್ವಿಜ ಮಾಸದ ಅಮಾವಾಸ್ಯೆ ಅಂದರೆ ಸರ್ವಪಿತೃ ಅಮಾವಾಸ್ಯೆ(Mahalaya Amavasya) ಈ ಬಾರಿ ಸೆಪ್ಟೆಂಬರ್ 25 ರಂದು. ಈ ದಿನದಂದು ಅಮಾವಾಸ್ಯೆಯ ತಿಥಿಯು ಮಧ್ಯಾಹ್ನ 3.12ರಿಂದ ಪ್ರಾರಂಭವಾಗುತ್ತಿದೆ. ಅಮಾವಾಸ್ಯೆಯ ತಿಥಿ ಸೆಪ್ಟೆಂಬರ್ 26ರಂದು ಮಧ್ಯಾಹ್ನ 3:24ಕ್ಕೆ ಕೊನೆಗೊಳ್ಳಲಿದೆ. ಸರ್ವಪಿತೃ ಅಮವಾಸ್ಯೆಯನ್ನು ಸೆಪ್ಟೆಂಬರ್ 25ರಂದು ಇಡೀ ದಿನ ಆಚರಿಸಲಾಗುತ್ತದೆ.

Navratri colours: ನವರಾತ್ರಿ ನವರಂಗ್- ಯಾವ ದಿನ ಯಾವ ಬಣ್ಣ?

ಪೂರ್ವಜರಿಗೆ ವಿದಾಯ ಹೇಳುವುದು ಹೇಗೆ?
ಪಿತೃ ಪಕ್ಷದ 15 ದಿನಗಳಲ್ಲಿ ಶ್ರಾದ್ಧವನ್ನು ಮಾಡಲು ಸಾಧ್ಯವಾಗದ ಜನರು ಮತ್ತು ಪೂರ್ವಜರ ಮರಣದ ತಿಥಿ ನೆನಪಿಲ್ಲದವರು ಮಹಾಲಯ ಅಮಾವಾಸ್ಯೆಯಂದು ಪರ್ವಣ, ತರ್ಪಣ, ಶ್ರಾದ್ಧ, ದಾನ ಇತ್ಯಾದಿಗಳನ್ನು ಆಚರಿಸಬೇಕು. ಈ ದಿನ ಪೂರ್ವಜರನ್ನು ತೃಪ್ತಿಪಡಿಸಲು ಮತ್ತು ಅವರ ಆಶೀರ್ವಾದ ಪಡೆಯಲು ಗೀತೆಯ ಏಳನೇ ಅಧ್ಯಾಯವನ್ನು ಪಠಿಸುವುದು ಒಳ್ಳೆಯದು ಎಂದು ನಂಬಲಾಗಿದೆ.

ಅಮಾವಾಸ್ಯೆ ಶ್ರಾದ್ಧವನ್ನು ಹೀಗೆ ಮಾಡಿ
ಅಮಾವಾಸ್ಯೆ ಶ್ರಾದ್ಧದ ದಿನದಂದು ಪೂರ್ವಜರಿಗಾಗಿ ಆಹಾರ ತಯಾರಿಸಿ. ಈ ದಿನ ಪೂರ್ವಜರ ಶ್ರಾದ್ಧವನ್ನು ಮಧ್ಯಾಹ್ನ ಮಾಡಬೇಕು. ಇದರೊಂದಿಗೆ ಈ ದಿನದಂದು ಶ್ರಾದ್ಧ ಮಾಡಿಸಿದವರಿಗೆ ಅನ್ನ ನೀಡುವ ಮೊದಲು ಪಂಚಬಲಿಯನ್ನು ನೀಡಲಾಗುತ್ತದೆ. ನಂತರ ಗೌರವಪೂರ್ವಕವಾಗಿ ದಾನ  ನೀಡಬೇಕು. ಇದಾದ ನಂತರ ಮನೆಯ ಸದಸ್ಯರು ಊಟ ಮಾಡಬೇಕು. ಪೂರ್ವಜರ ಶಾಂತಿಗಾಗಿ ಪ್ರಾರ್ಥಿಸಬೇಕು.

ತಿರುಪತಿ ದೇವಸ್ಥಾನಕ್ಕೆ 1.02 ಕೋಟಿ ರೂ. ದೇಣಿಗೆ ನೀಡಿದ ಮುಸ್ಲಿಂ ದಂಪತಿ!

ಅಶ್ವತ್ಥ ಮರ ಪೂಜಿಸಿ
ಸರ್ವಪಿತೃ ಅಮಾವಾಸ್ಯೆಯ ದಿನ ಅಶ್ವತ್ಥ ಮರ ಪೂಜಿಸುವ ನಿಯಮ ಇದೆ. ಹಿಂದೂ ಪುರಾಣಗಳ ಪ್ರಕಾರ ನಮ್ಮ ಪೂರ್ವಜರ ಆತ್ಮಗಳು ಈ ಮರದಲ್ಲಿ ವಾಸಿಸುತ್ತವೆ. ಅದಕ್ಕಾಗಿಯೇ ಅಶ್ವತ್ಥ ಮರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ಅಶ್ವತ್ಥ ಮರವನ್ನು ಪೂಜಿಸುವುದರಿಂದ ಪೂರ್ವಜರಿಗೆ ಸಂತೋಷವಾಗುತ್ತದೆ. ಈ ಮರದ ಬುಡದಲ್ಲಿ ಅರ್ಪಿಸುವ ಎಲ್ಲವೂ ಅವರನ್ನು ತಲುಪುತ್ತದೆ.

ಈ ದಿನ ಪೂರ್ವಜರನ್ನು ಮೆಚ್ಚಿಸಲು ಸ್ಟೀಲ್ ಪಾತ್ರೆಯಲ್ಲಿ ನೀರು, ಹಾಲು, ಕಪ್ಪು ಎಳ್ಳು, ಜೇನುತುಪ್ಪ ಮತ್ತು ಬಾರ್ಲಿಯನ್ನು ಬೆರೆಸಿ. ಅಲ್ಲದೆ, ಬಿಳಿ ಸಿಹಿತಿಂಡಿಗಳು, ತೆಂಗಿನಕಾಯಿ, ಕೆಲವು ನಾಣ್ಯಗಳು ತೆಗೆದುಕೊಂಡ ನಂತರ ಮೊದಲು ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿ. ಇದರ ನಂತರ, 'ಓಂ ಸರ್ವಪಿತ್ರೀ ದೇವತಾಭ್ಯೋ ನಮಃ' ಎಂಬ ಮಂತ್ರವನ್ನು ಪಠಿಸುತ್ತಾ, ಅಶ್ವತ್ಥ ಮರವನ್ನು ಪ್ರದಕ್ಷಿಣೆ ಮಾಡಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!