ಹಿಂದೂ ಧರ್ಮದಲ್ಲಿ ಮದುವೆಗೆ ಹೆಚ್ಚಿನ ಮಾನ್ಯತೆಯಿದೆ. ಪದ್ಧತಿ ಪ್ರಕಾರ ಮದುವೆ ನಡೆದ್ರೆ ದಾಂಪತ್ಯ ಸುಖವಾಗಿರುತ್ತೆ ಎಂಬ ನಂಬಿಕೆಯಿದೆ. ಸಿಂಧಿ ಜನಾಂಗದಲ್ಲೂ ಸಂಪ್ರದಾಯ ಪಾಲಿಸಿ ಮದುವೆ ಮಾಡಲಾಗುತ್ತದೆ. ಹುಡುಗಿ ಹೆಸರು ಕೂಡ ಇಲ್ಲಿ ಬದಲಾಗುತ್ತೆ.
ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಪ್ರತಿಯೊಂದು ರಾಜ್ಯದಲ್ಲಿ, ಜಾತಿ, ಧರ್ಮದಲ್ಲಿ ಮದುವೆ ಪದ್ಧತಿಗಳು ಭಿನ್ನವಾಗಿವೆ. ನಿಮ್ಮ ಕುಟುಂಬದಲ್ಲಿರುವ ಮದುವೆ ಸಂಪ್ರದಾಯ ಇನ್ನೊಂದು ಕುಟುಂಬದಲ್ಲಿ ಇರದೆ ಇರಬಹುದು. ಭಾರತದ ಮದುವೆಗಳನ್ನು ನೋಡೋದೇ ಚೆಂದ. ಐದು ದಿನಗಳವರೆಗೆ ಮದುವೆ ಸಂಪ್ರದಾಯ ನಡೆಯುತ್ತದೆ. ಸಿಂಧಿ ಮದುವೆಗಳು ಕೂಡ ವಿಶೇಷತೆಯಿಂದ ಕೂಡಿರುತ್ತವೆ. ಆಹಾರ ಕೂಡ ಭಿನ್ನವಾಗಿರುತ್ತದೆ. ನಾವಿಂದು ಸಿಂಧಿ ಮದುವೆಯ ಕೆಲ ವೈಶಿಷ್ಟತೆಯನ್ನು ನಿಮಗೆ ಹೇಳ್ತೇವೆ.
ಸಿಂಧಿ (Sindhi) ಮದುವೆಯಲ್ಲಿನ ವಿಶಿಷ್ಟತೆ ಏನು ಗೊತ್ತಾ? :
ಬದಲಾಗುತ್ತೆ ವಧುವಿನ ಹೆಸರು : ಮದುವೆ (Marriage) ಯಾದ್ಮೇಲೆ ವಧುವಿನ ಉಪನಾಮ ಬದಲಾಗೋದು ಸಾಮಾನ್ಯ. ಆದ್ರೆ ಸಿಂಧಿ ಕುಟುಂಬದಲ್ಲಿ ವಧುವಿನ ಸಂಪೂರ್ಣ ಹೆಸರನ್ನು ಬದಲಿಸಲಾಗುತ್ತದೆ. ವರನ ಹೆಸರಿಗೆ ಸೂಕ್ತವಾಗುವ ಹೆಸರನ್ನು ಇಡಲಾಗುತ್ತದೆ. ಪಂಡಿತರು ಮೂರು ಹೆಸರುಗಳನ್ನು ಸೂಚಿಸ್ತಾರೆ. ಅದ್ರಲ್ಲಿ ಒಂದನ್ನು ಹುಡುಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಮದುವೆ ನಂತ್ರ ಹುಡುಗಿಯ ಪುನರ್ಜನ್ಮವಾಗುತ್ತದೆ ಎಂದು ಅಲ್ಲಿ ನಂಬಲಾಗುತ್ತದೆ. ಆಕೆ ಹುಟ್ಟಿದ ಮನೆಯನ್ನು ಬಿಟ್ಟು ಬೇರೆ ಮನೆಗೆ ಹೋಗಿ ಜೀವನ ನಡೆಸುತ್ತಾಳೆ ಅಂದ್ಮೇಲೆ ಅದು ಆಕೆಯ ಹೊಸ ಹುಟ್ಟು. ಹಾಗಾಗಿಯೇ ಆಕೆಯ ಹೆಸರನ್ನು ಬದಲಿಸಬೇಕು ಎಂಬ ನಂಬಿಕೆ ಅಲ್ಲಿದೆ. ಹೆಸರು (Name) ಬದಲಿಸುವುದು ಮದುವೆ ನಂತ್ರದ ಭವಿಷ್ಯಕ್ಕೆ ಒಳ್ಳೆಯದು ಎನ್ನಲಾಗುತ್ತದೆ.
ಸಪ್ತಪದಿಯಲ್ಲ ನಾಲ್ಕು ಸುತ್ತಿನ ಮಹತ್ವ : ಮದುವೆ ಸಂದರ್ಭದಲ್ಲಿ ಸಪ್ತಪದಿಗೆ ವಿಶೇಷ ಮಹತ್ವವಿದೆ. ಸಪ್ತಪದಿ ಇಲ್ಲದೆ ಮದುವೆ ಪೂರ್ಣಗೊಳ್ಳೋದಿಲ್ಲ. ಆದ್ರೆ ಸಿಂಧಿ ಮದುವೆಯಲ್ಲಿ ಸಪ್ತಪದಿ ಬದಲು ನಾಲ್ಕು ಸುತ್ತು ಹಾಕಲಾಗುತ್ತದೆ. ಮೊದಲ ಮೂರು ಸುತ್ತನ್ನು ವಧು ಮುಂದೆ ನಿಂತು ಹಾಕ್ತಾಳೆ. ಕೊನೆಯ ಸುತ್ತಿನಲ್ಲಿ ವರ ಮುಂದಿರುತ್ತಾನೆ. ಮೊದಲ ಸುತ್ತಿನಲ್ಲಿ ವಧು-ವರರ ಧರ್ಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಲಾಗುತ್ತದೆ. ಒಬ್ಬರಿಗೊಬ್ಬರು ಹೇಗೆ ವರ್ತಿಸಬೇಕು ಮತ್ತು ಹೇಗೆ ಒಟ್ಟಿಗೆ ಬಾಳಬೇಕು ಎಂಬ ಬಗ್ಗೆ ಎರಡನೇ ಸುತ್ತಿನಲ್ಲಿ ಹೇಳಲಾಗುತ್ತದೆ. ಪ್ರೀತಿ ಮತ್ತು ಆತಿಥ್ಯವನ್ನು ಮೂರನೇ ಸುತ್ತು ಸೂಚಿಸುತ್ತದೆ. ನಾಲ್ಕನೇ ಸುತ್ತು ಇಬ್ಬರ ಮಧ್ಯೆ ಇರಬೇಕಾದ ಸ್ವಾತಂತ್ರ್ಯವನ್ನು ಸೂಚಿಸುತ್ತದೆ.
ಧನು, ಕರ್ಕಾಟಕ ರಾಶಿಯವರು ಮದುವೆಯಾದರೆ ದಾಂಪತ್ಯ ಜೀವನ ಹೇಗಿರುತ್ತೆ?
ಕಚ್ಚಾ ಮಿಶ್ರಿ – ಪಕ್ಕಾ ಮಿಶ್ರಿ : ಸಿಂಧಿ ಮದುವೆಯಲ್ಲಿ ಹೀಗೊಂದು ಪದ್ಧತಿಯಿದೆ, ಕಚ್ಚಾ ಮಿಶ್ರಿಯಲ್ಲಿ ವಧು – ವರರ ಕುಟುಂಬ ಶಕುನ ಮತ್ತು ಉಡುಗೊರೆಯನ್ನು ನೀಡುತ್ತದೆ. ಪಕ್ಕಾ ಮಿಶ್ರಿಯನ್ನು ನಿಶ್ಚಿತಾರ್ಥವೆಂದು ಪರಿಗಣಿಸಿ. ಇಲ್ಲಿ ವಧು ಮತ್ತು ವರರು ಪರಸ್ಪರ ಉಂಗುರಗಳನ್ನು ಬದಲಾಯಿಸಿಕೊಳ್ಳುತ್ತಾರೆ. ವರನ ತಾಯಿ, ವಧುವಿನ ತಾಯಿಗೆ ಸಕ್ಕರೆ ಮಿಠಾಯಿ ತುಂಬಿದ ಮಡಕೆಯನ್ನು ನೀಡಬೇಕು. ಹಾಗೆಯೇ ಏಳು ವಿವಾಹಿತ ಮಹಿಳೆಯರು ಗಣೇಶನನ್ನು ಪೂಜಿಸಬೇಕಾಗುತ್ತದೆ.
ದೇವ್ ಪೂಜೆ : ಸಿಂಧಿ ಜನಾಂಗದಲ್ಲಿ ದೇವ್ ಪೂಜೆ ನಡೆಯುತ್ತದೆ. ವಧು ಹಾಗೂ ವರನ ಮನೆಯವರು ಕಲ್ಲೊಂದನ್ನು ತಂದು ದೇವರು ಮಾಡ್ತಾರೆ. ಅದನ್ನು ವರ ಹಾಗೂ ವಧು ಕಡೆಯವರು ಪೂಜಿಸ್ತಾರೆ. ನಂತ್ರ ಮದುವೆ ಮಂಟಪದಲ್ಲಿ ಅದನ್ನು ತಂದಿಡುತ್ತಾರೆ. ಅಲ್ಲಿಯೂ ಪೂಜೆ ನಡೆಯುತ್ತದೆ. 7 ವಿವಾಹಿತ ಮಹಿಳೆಯರು ಈ ಕಲ್ಲನ್ನು ಪೂಜಿಸಬೇಕು. ನಂತರ ವಧು ಮತ್ತು ವರನ ಮೇಲೆ ಎಣ್ಣೆಯನ್ನು ಸುರಿಯುತ್ತಾರೆ. ಇದನ್ನು ದೇವತಾ ಸ್ನಾನದಂತೆ ಪರಿಗಣಿಸಲಾಗುತ್ತದೆ.
ಸೂರ್ಯಾಸ್ತದ ಸಮಯದಲ್ಲಿ ಇಂಥ ಕೆಲಸ ಮಾಡಿದ್ರೆ ಕಾಡುತ್ತೆ ದರಿದ್ರ ಯೋಗ!
ಘರಿ ಪೂಜೆ : ಒಂದೇ ಗಿರಣಿಯಲ್ಲಿ ಧಾನ್ಯಗಳನ್ನು ಪುಡಿ ಮಾಡಲಾಗುತ್ತದೆ. ಈ ಕಾರ್ಯದಲ್ಲಿ ಕೂಡ ಮಹಿಳೆಯರು ಮಾತ್ರ ಪಾಲ್ಗೊಳ್ಳುತ್ತಾರೆ. ವಧು ಹಾಗೂ ವರ ಎರಡೂ ಮನೆಯಲ್ಲಿ ಈ ಪೂಜೆ ನಡೆಯುತ್ತದೆ. ಮದುವೆ ನಂತ್ರ ನವದಂಪತಿಗೆ ಸಮೃದ್ಧಿ, ಸಂಪತ್ತು ಸಿಗಲಿ ಎನ್ನುವ ಕಾರಣಕ್ಕೆ ಈ ಪೂಜೆ ನಡೆಯುತ್ತದೆ.