ಕಾಶ್ಮೀರದ ದೇವಾಲಯಕ್ಕೆ ಶೃಂಗೇರಿಯಿಂದ ಪಂಚಲೋಹ ಮೂರ್ತಿ ಹಸ್ತಾಂತರ

By Suvarna NewsFirst Published Oct 4, 2022, 4:43 PM IST
Highlights

ತ್ರಿತ್ವಾಲ್ ನಲ್ಲಿ ಶಾರದಾದೇವಿ ದೇಗುಲ ನಿರ್ಮಾಣ ಕಾರ್ಯ
ಶೃಂಗೇರಿಯಿಂದ ನಾಳೆ ಪಂಚಲೋಹ ಮೂರ್ತಿ ಹಸ್ತಾಂತರ 
ಶಾರದೆ ಸನ್ನಿಧಿಯಿಂದ ವಿಜಯದಶಮಿಯ ದಿನ
ಕಾಶ್ಮೀರದ ಗಡಿ ಭಾಗದ ತ್ರಿತ್ವಾಲ್ ನಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯ 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಕಾಶ್ಮೀರದ ಗಡಿ ಭಾಗದ ತ್ರಿತ್ವಾಲ್ ನಲ್ಲಿ ಶಾರದಾದೇವಿ ದೇಗುಲ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಶೃಂಗೇರಿಯ ಶಾರದೆ ಸನ್ನಿಧಿಯಿಂದ ವಿಜಯದಶಮಿಯ ದಿನ ಅಂದರೆ ನಾಳೆ ಪಂಚಲೋಹ ಮೂರ್ತಿ ಹಸ್ತಾಂತರ ಕಾರ್ಯವು ನಡೆಯಲಿದೆ. ಕಾಶ್ಮೀರದ ಸೇವ್ ಶಾರದಾ ಸಮಿತಿಯವರು ಶೃಂಗೇರಿಗೆ ಬಂದು ಪಂಚಲೋಹ ವಿಗ್ರಹ ಪಡೆಯಲಿದ್ದಾರೆ, ಈ ನಿಟ್ಟಿನಲ್ಲಿ ಸಿದ್ಧತೆಗಳು ಸಹ ನಡೆಯುತ್ತಿದೆ. 

ನಾಳೆ ವಿಗ್ರಹಕ್ಕೆ ಜರುಗಲಿದೆ ವಿಶೇಷ ಪೂಜೆ
ವಿಜಯದಶಮಿಯ  ಶುಭ ದಿನವಾದ ನಾಳೆ ಪಂಚಲೋಹದಿಂದ ನಿರ್ಮಾಣ ಮಾಡಲಾಗಿರುವ ದೇವಿಯ ವಿಗ್ರಹವನ್ನು ಶೃಂಗೇರಿಯಲ್ಲಿ ವಿಶೇಷವಾಗಿ ಪೂಜಿಸಿ ಹಸ್ತಾಂತರ ಮಾಡಲಾಗುತ್ತದೆ ಎಂಬ ಮಾಹಿತಿಯು ದೊರಕಿದೆ. ಅಂತೆಯೇ ಉಭಯ ಜಗದ್ಗುರುಗಳ ಸಾನಿಧ್ಯದಲ್ಲಿ ಕೆತ್ತನೆ ಮಾಡಿರುವ ದೇವಿಯ ವಿಗ್ರಹದ ಹಸ್ತಾಂತರ ಕಾರ್ಯವು ಅತ್ಯಂತ ಅದ್ಧೂರಿಯಾಗಿ ನಡೆಯಲಿದೆ. 

ಸಿಂಹವಾಹಿನಿಯಾದ ಶಾರದಾಂಬೆ, ಸಿದ್ಧಿಧಾತ್ರಿ ಅಲಂಕಾರದಲ್ಲಿ ಅನ್ನಪೂರ್ಣೇಶ್ವರಿ

ಈ ಕುರಿತು ಮಾಹಿತಿ ನೀಡಿದ ಸಮಿತಿ ಮುಖ್ಯಸ್ಥ ರವೀಂದ್ರ ಪಂಡಿತ ಸಮಿತಿಯ '12 ಮಂದಿ ಶೃಂಗೇರಿಗೆ ಹೋಗಿ ಪಂಚಲೋಹ ಮೂರ್ತಿ ಪಡೆಯುತ್ತೇವೆ. ಕಾಶ್ಮೀರದಲ್ಲಿ ದೇಗುಲ ನಿರ್ಮಾಣ ಕಾರ್ಯ ಪೂರ್ಣ ಮುಗಿದಿಲ್ಲ. ಹೀಗಾಗಿ, ಸದ್ಯಕ್ಕೆ ಮೂರ್ತಿಯನ್ನು ಶೃಂಗೇರಿ ಅಥವಾ ಬೆಂಗಳೂರಿನಲ್ಲಿ ಇಡುತ್ತೇವೆ ಎಂದು ತಿಳಿಸಿದರು. ದೇಗುಲ ನಿರ್ಮಾಣಕ್ಕೆ ₹ 1.5 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈವರೆಗೆ ₹1 ಕೋಟಿ ಖರ್ಚಾಗಿದೆ. ಗರ್ಭಗುಡಿ 12X12 ವಿಸ್ತೀರ್ಣ ಇದೆ. ದೇಗುಲಕ್ಕೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳು ಇವೆ. ಚಾವಣಿ, ನೆಲಹಾಸು, ಅಲಂಕಾರ ಕಾಮಗಾರಿಗಳು ಬಾಕಿ ಇದೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ದೇಗುಲಕ್ಕೆ ಸಾಗುವ ಹಾದಿ ಹದಗೆಟ್ಟಿದ್ದು ರಸ್ತೆ ನಿರ್ಮಾಣಕ್ಕೆ ಜಮ್ಮು-ಕಾಶ್ಮೀರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದರೂ  ಈವರೆಗೆ ಕಾಮಗಾರಿಗೆ ಕ್ರಮ ವಹಿಸಿಲ್ಲ' ಎಂದರು. 2021 ಡಿಸೆಂಬರ್ 2ರಂದು ದೇಗುಲ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. 2023ರ ನವರಾತ್ರಿಗೆ ಉದ್ಘಾಟನೆ ನೆರವೇರಿಸಲು ಉದ್ದೇಶಿಸಿದ್ದೇವೆ  ಎಂದರು.

click me!