ಸಲ್ಲೇಖನ ವೃತ ಕೈಗೊಂಡು ದೇಹತ್ಯಾಗ ಮಾಡಿದ ವೃದ್ಧೆ: ಭಕ್ತಿಪೂರ್ವಕವಾಗಿ ಅಂತ್ಯಕ್ರಿಯೆ ನೆರವೇರಿಸಿದ ಜೈನ ಸಮುದಾಯ

By Govindaraj SFirst Published Sep 27, 2024, 8:02 PM IST
Highlights

ಜೈನ ಧರ್ಮದ ಅನೇಕ ಪ್ರಕಾರದ ವೃತಾಚಾರಣಗಳಲ್ಲಿಯೇ ಶ್ರೇಷ್ಟೋತ್ತಮ ವೃತ ಆಗಿರುವ "ಸಂಥಾರಾ/ಸಲ್ಲೇಖನ" ವೃತಧಾರಣೆಯೂ ಒಂದಾಗಿರುತ್ತದೆ. ಇದೊಂದು ಕೊನೆಯ ಘಟ್ಟದ ಕಠೋರ ವೃತ.

ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ

ಕೊಪ್ಪಳ (ಸೆ.27): ಜೈನ ಧರ್ಮದಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಕಠೋರವಾದ ವೃತ ಅಂದರೆ ಅದು ಸಂಥಾರಾ-ಸಲ್ಲೇಖನಾ ವೃತಧಾರಣೆ. ಈ ವೃತ ಕೈಗೊಂಡ ಮೇಲೆ ಯಾವುದೇ ರೀತಿ ಅನ್ನ,ನೀರು ಸಹ ಸೇವಿಸುವುದಿಲ್ಲ. ಈ ವೃತ ಕೈಗೊಂಡ ಮೇಲೆ ದೇಹತ್ಯಾಗವೇ ಅಂತಿಮವಾದದ್ದು. ಇಂತಹ ಕಠೋರ ಹಾಗೂ ಶ್ರೇಷ್ಠವಾದ ವೃತ ಕೈಗೊಂಡು ಒಬ್ಬರು ದೇಹತ್ಯಾಗ ಮಾಡಿದ್ದಾರೆ.

Latest Videos

ಎಲ್ಲಿ ಸಲ್ಲೇಖನ ವೃತಧಾರಣೆ ನಡೆದದ್ದು: ದಕ್ಷಿಣ ಭಾರತದ ಜೈನ ಕಾಶಿ ಎಂದು ನಿಖರವಾದ ಪ್ರಸಿದ್ಧಿಯ ಐತಿಹಾಸಿಕ ದಾಖಲೆಗಳುಳ್ಳ ಕನ್ನಡ ನಾಡಿನ ಪುಣ್ಯ ಭೂಮಿ ಆಗಿರುವ (ಕೋಪಣ ನಗರ) ಕೊಪ್ಪಳ ನಗರದಲ್ಲಿ,  ಇವತ್ತಿನ ಸಮಯದಲ್ಲೂ ಸಹ ಜೈನ ಧರ್ಮೀಯರಿಂದ ನಿತ್ಯ ಜೀವನದ ಧರ್ಮಾಚರಣೆಯ ಅನೇಕ ವೃತಗಳಲ್ಲಿ ಜೀವಮಾನದ ಅತ್ಯುನ್ನತ ಸಾರ್ಥಕತೆಯ ಪರಮಾಧಿಯ ಈ 'ಸಂಲೇಖನಾ/ಸಂಥಾರಾ" ವೃತವನ್ನು ಜೈನ ಸಮುದಾಯದ ಹಿರಿಯರೊಬ್ಬರು ಕೈಗೊಂಡಿದ್ದರು.

ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ: ಮಾಜಿ ಸಚಿವ ಸಾ.ರಾ.ಮಹೇಶ್

ಯಾರು ಸಲ್ಲೇಖನ ವೃತಧಾರಣೆ ಕೈಗೊಂಡಿದ್ದು?: ಮೊದಲೇ ಹೇಳಿದಂತೆ ಕೊಪ್ಪಳ‌ನಗರ ಜೈನಕಾಶಿ ಎಂದು ಪ್ರಸಿದ್ಧಿ ಪಡೆದಿದೆ. ಈ ನಗರದಲ್ಲಿ ಸುಮಾರು ವರ್ಷಗಳಿಂದ ವಾಸ ಆಗಿರುವ,  ಶ್ವೇತಾಂಬರ ಜೈನ ಧರ್ಮ ಬಂಧು ಶ್ರೀ ಮಾಂಗೀಲಾಲಜೀ ಚೋಪ್ರಾ ಇವರ ಧರ್ಮ ಪತ್ನಿ, ಜೈನ ಶ್ರಾವಕಿ,  78 ವರ್ಷದ ಶ್ರೀಮತಿ ಭಾಗ್ಯವಂತೀ ದೇವಿ ಚೋಪ್ರಾ,   ಇವರು ತಮ್ಮ ಸಮಗ್ರ ಪಾರಿವಾರಿಕ ಜೀವನದ ಜೀವಿತ ಅವಧಿಯಲ್ಲಿ ಸಾಂಸಾರಿಕ ಸುಖಃ ದುಃಖಗಳ ಸುದೀರ್ಘವಾದ ಸಮಯದಲ್ಲಿ ಜೈನತ್ವದ ನಿಯಮಾವಳಿಯನ್ನು ಪಾಲಿಸುತ್ತಾ ತ್ಯಾಗ ತಪ ಜಪಾದಿ ಗಳೊಂದಿಗೆ ಸಲ್ಲೇಖನ ವೃತಧಾರಣೆ ಕೈಗೊಂಡಿದ್ದರು.

ಯಾವಾಗ ಸಲ್ಲೇಖನ ವೃತಧಾರಣೆ ಆರಂಭಿಸಿದ್ದರು: ಇನ್ನು‌ ಭಾಗ್ಯವಂತಿದೇವಿ ಅವರು ಇದೇ ತಿಂಗಳು 17 ರಂದು ಸಲ್ಲೇಖನ ವೃತಧಾರಣೆ ಆರಂಭಿಸಿದ್ದರು. ಅಂದಿನಿಂದ ಇಂದಿನವರೆಗೂ 11 ದಿನಗಳ ಕಾಲ ಭಾಗ್ಯವಂತಿದೇವಿ ಅವರು ಸಲ್ಲೇಖನ ವೃತಧಾರಣೆ ಕೈಗೊಂಡಿದ್ದರು.  

ಏನಿದು ಸಲ್ಲೇಖನ ವೃತಧಾರಣೆ: ಜೈನ ಧರ್ಮದ ಅನೇಕ ಪ್ರಕಾರದ ವೃತಾಚಾರಣಗಳಲ್ಲಿಯೇ ಶ್ರೇಷ್ಟೋತ್ತಮ ವೃತ ಆಗಿರುವ "ಸಂಥಾರಾ/ಸಲ್ಲೇಖನ" ವೃತಧಾರಣೆಯೂ ಒಂದಾಗಿರುತ್ತದೆ. ಇದೊಂದು ಕೊನೆಯ ಘಟ್ಟದ ಕಠೋರ ವೃತವಾಗಿದ್ದು,  ಮನುಷ್ಯ ಜೀವಿಯು ತನ್ನ  ಸಂಪೂರ್ಣ ಆಯುಷ್ಯಮಾನ ಜೀವನದ ಉಸಿರಿನ ಕೊನೆಯ ಕ್ಷಣದಲ್ಲಿ ಧೃಡ ಸಂಕಲ್ಪಯುಕ್ತ ಸ್ವಯಂ ಪ್ರೇರಣೆಯಿಂದ ಸಾಮಾಜಿಕ ಮತ್ತು ಪಾರಿವಾರಿಕ ಸಂಬಂಧಗಳಿಂದ ಸಂಪೂರ್ಣ ವಿಮುಕ್ತಿಯ ಸಂತೃಪ್ತಿಯೊಂದಿಗೆ ನಿವೃತ್ತಿಯ ನಿಯಮಾವಳಿಯಲ್ಲಿ ತಲ್ಲೀನರಾಗುತ್ತ ಸುಧೀರ್ಘ ನಿರಾಹಾರ ಮತ್ತು ಶಾಶ್ವತ ಮೌನದಿಂದ ಪ್ರಶಾಂತ ಮನ: ಸ್ಥಿತಿಯೊಂದಿಗೆ ಈ ಭೂ ಲೋಕದಿಂದ ಇಹ ಲೋಕದತ್ತ ತಮ್ಮ ಪ್ರಯಾಣದ ಆನಂದವನ್ನು ಅನುಭವಿಸುತ್ತ ಆತ್ಮವನ್ನು ಶಾರೀರಿಕ ಜೀವನದಿಂದ ವಿಮುಕ್ತಿಗೊಳಿಸುತ್ತ ಪಂಡಿತ್ ಮರಣದೊಂದಿಗೆ ಮೃತ್ಯುವಿನ ಮಹೋತ್ಸವದಂತೆ ದಿವಂಗತ್ವದ ಪಥವನ್ನು ಪಡೆಯುವುದಾಗಿರುತ್ತದೆ.

ಇಂದು ದೇಹತ್ಯಾಗ ಮಾಡಿದ ಭಾಗ್ಯವಂತಿದೇವಿ: ಭಾಗ್ಯವಂತಿ ದೇವಿ ಅವರು ಕಳೆದ 11 ದಿನಗಳಿಂದ ಸಲ್ಲೇಖನ ವೃತಧಾರಣೆ ಕೈಗೊಂಡಿದ್ದರು. ಈ ದಿನಗಳಲ್ಲಿ ಯಾವುದೇ ರೀತಿಯ ಆಹಾರವಾಗಲಿ,ನೀರು ಸೇವಿಸದೆ ಇಂದು ಭಾಗ್ಯವಂತಿದೇವಿ ಅವರು ತಮ್ಮ ದೇಹತ್ಯಾಗ ಮಾಡಿದರು.‌ ಈ‌  ತಮ್ಮ ವೃಧ್ಯಾಪ್ಯದ ಅಶಕ್ತಮಯ ಶಾರೀರಿಕ ಅನಾರೋಗ್ಯದ ವ್ಯವಸ್ಥೆಯ ಕೊನೆಯ ಉಸಿರಿನ ಅಂತಿಮ ಕ್ಷಣವನ್ನು ಧೃಡ ಸಂಕಲ್ಪಯುಕ್ತ ಸ್ವಯಂ ಪ್ರೇರಣೆಯಿಂದ,  ಪಂಚ ಮಹಾವೃತಾಧಾರಿ ಶ್ವೇತಾಂಬರ ಜೈನ ಸಂತ ಮುನಿವರ್ಯರ ಸಾನಿಧ್ಯದಲ್ಲಿ ಧರ್ಮಾರಾಧನೆಯ ಅತ್ಯುನ್ನತ್ತ ವೃತೋಪದೇಶವನ್ನು ಗ್ರಹಿಸಿ ಏಕಾಂತವನ್ನು ಆನಂದಿಸುತ್ತಾ ಕೊನೆಯ ಉಸಿರಿನ ವಿಮುಕ್ತಿಯನ್ನು ಹೊಂದಿದರು.
 
ಭಕ್ತಿಪೂರ್ವಕವಾಗಿ ಅಂತ್ಯಕ್ರಿಯೆ ನೆರವೇರಿಸಿದ ಜೈನ ಸಮಾಜದ ಬಂಧುಗಳು: ಕೊಪ್ಪಳ ನಗರದಲ್ಲಿರುವ ಸಮಸ್ತ ಜೈನ ಸಮಾಜದ ಬಂಧು ಬಳಗದವರು ಭಾಗ್ಯವಂತಿದೇವಿ ಅವರ ದೇಹವನ್ನು ಗವಿಮಠದ ಹಿಂಭಾಗದ ಸ್ಮಶಾನಕ್ಕೆ ತೆಗೆದುಕೊಂಡು ಬಂದರು. ಇದಾದ ಬಳಿಕ ಸಮಸ್ತ ಜೈನ ಸಮಾಜದ ಬಂಧುಗಳು  ಅನೇಕ ಧಾರ್ಮಿಕ ಪ್ರಾರ್ಥನೆಗಳನ್ನು ಶ್ರಾವಣಿಸುತ್ತಾ ಅವರ ಶರೀರದಿಂದ ಆತ್ಮವು ಶ್ರೇಷ್ಠವಾದ ಪುಣ್ಯದ ಮುಕ್ತಿಯನ್ನು ಪಡೆಯುವತ್ತ ಸಾಗಲೆಂದು ಪ್ರಾರ್ಥಿಸುತ್ತ ಅವರ ಚಿತಗೆ ಅಗ್ನಿಸ್ಪರ್ಶ ಮಾಡಿದರು.

ಭಾಗ್ಯವಂತಿದೇವಿ ಅವರ ಮನೆಯಲ್ಲಿ ಇದ್ದಾರೆ  ಸನ್ಯಾಸಿನಿ: ಭಾಗ್ಯವಂತಿದೇವಿ ಇವರ ಪರಿವಾರದ ತವರಿನ ಮೊಮ್ಮೊಗಳಾದ ವಿಧಿಶ್ರೀ ತಮ್ಮ 19 ನೆಯ ತುಂಬು ತಾರುಣ್ಯದ ವಯಸ್ಸಿನಲ್ಲೇ ಸಂಸಾರ & ಪಾರಿವಾರಿಕ ಸಮಗ್ರ ಸಿರಿ ಸಂಪತ್ತಿನ ಐಶ್ವರ್ಯದ ಸುಖಃ ಭೋಗಗಳನ್ನು ತ್ಯಜಿಸಿ 2023 ರಲ್ಲಿ ಶ್ವೇತಾಂಬರ ಜೈನ ಭಗವತಿ ದೀಕ್ಷೆಯನ್ನು ಪಡೆದು,  ಜೈನ ಸನ್ಯಾಸಿನಿ ಶ್ರೀ ವಿದೇಶನಾಶ್ರೀಜೀ ನಾಮಕರಣದಿಂದ  ಸನ್ಯಾಸತ್ವದ ವ್ರತಾಚರಣೆಯಿಂದ ಕಬ್ಬಿಣದ ಕಡಲೆಯನ್ನು ನುರಿಸುತ್ತ ತ್ಯಾಗ & ತಪಶ್ಚರ್ಯದ ಜಗತ್ತಿಗೆ ಸತ್ಯ ಧರ್ಮದಲ್ಲಿ ಅಡಗಿರುವ ಮುಳ್ಳಿನ ಹಾದಿಯನ್ನು ಮುಗುಳ್ನಗುತ್ತ ಧರ್ಮಾರಾಧನೆಯಲ್ಲಿದ್ದಾರೆ.

ಚುನಾವಣೆ ಘೋಷಣೆಯಾದರೇ ಕಾಂಗ್ರೆಸ್‌ಗೆ ಸೋಲು ಖಚಿತ: ನಿಖಿಲ್ ಕುಮಾರಸ್ವಾಮಿ ಭವಿಷ್ಯ

ಒಟ್ಟಾರೆ ಜೈನ ಧರ್ಮದವು ಭೂ ಮಂಡಲದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಮೂಲತಃ ಜೀವನದಲ್ಲಿನ ಪೂರ್ವ ಜನ್ಮದ ಪಾಪ ಮತ್ತು ಪುಣ್ಯಗಳ ಕರ್ಮ ಸಿದ್ಧಾಂತದ ಆಸ್ಥೆಯೊಂದಿಗೆ ನಿಖರವಾದ ಮಾರ್ಗದರ್ಶನದ ಫಲಿತಾಂಶಗಳನ್ನು ಹೊಂದಿದ್ದು,  ಪ್ರಚಲಿತ ಸಮಯದ ಆಧುನಿಕ ವಿಜ್ಞಾನದ ತಂತ್ರಜ್ಞರೂ ಸಹ ಇದಕ್ಕೆ ಬಹುಪಾಲು ತಲೆಬಾಗಿ ಒಪ್ಪುವಷ್ಟು ಅಧ್ಯಯನಕ್ಕೆ ಪ್ರೇರೇಪಿಸುತ್ತದೆ.ಇದಕ್ಕೆ ಭಾಗ್ಯವಂತಿದೇವಿ ಅವರು ಸಲ್ಲೇಖನ ವೃತಧಾರಣೆ ಕೈಗೊಂಡು ದೇಹತ್ಯಾಗ ಮಾಡಿದ್ದೇ ಸಾಕ್ಷಿ ಎನ್ನಬಹುದು.

click me!