ನಾನು ಅಂದ್ರೆ ನಂಬರ್ರು, ನಂಬರ್ ಅಂದ್ರೆ ನಾನು ಎನ್ನುತ್ತಲೇ ಮಾತು ಆರಂಭಿಸುವ ಸಂಖ್ಯಾಶಾಸ್ತ್ರಜ್ಞ, ಬಿಗ್ ಬಾಸ್ ಕನ್ನಡ ಸ್ಪರ್ಧಿ ಆರ್ಯವರ್ಧನ್ ಗುರೂಜಿ ವಿವಿಧ ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಅವರ ಹಳೇ ವಿಡಿಯೋ ತುಣಕೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಟಿ20 ವಿಶ್ವಕಪ್ ಭಾರತ ಗೆಲ್ಲುತ್ತಾ ಎಂದು ಕೇಳಿದ್ದಕ್ಕೆ ಹೇಳಿದ್ದೇನು?
ಬೆಂಗಳೂರು: ನಂಬರ್ಗೆ ಇನ್ನೊಂದು ಹೆಸರೇ ಆರ್ಯವರ್ಧನ್ ಗುರೂಜಿ ಎಂಬಂತೆ ಬಿಂಬಿಸಿಕೊಳ್ಳುವ ಸಂಖ್ಯಾಶಾಸ್ತ್ರಜ್ಞ ಭಾರತ ಟಿ20 ವಿಶ್ವಕಪ್ ಗೆಲ್ಲುತ್ತೋ, ಸೋಲತ್ತೋ ಎಂಬುದರ ಬಗ್ಗೆ ಮೂರು ತಿಂಗಳ ಹಿದೆಯೇ ನುಡಿದಿದ್ದ ಭವಿಷ್ಯದ ವೀಡಿಯೋ ತುಣಕೊಂದು ಇದೀಗ ವೈರಲ್ ಆಗುತ್ತಿದೆ. ಅಷ್ಟಕ್ಕೂ ಕ್ಯಾಪ್ಟನ್ ರೋಹಿತ್ ಶರ್ಮಾ,ಟಿ20 ಪಂದ್ಯದ ಫೈನಲ್ ಪಂದ್ಯ ನಡೆದ ಸ್ಥಳ ಹಾಗೂ ದಿನದ ಬಗ್ಗೆ ಈ ಗುರೂಜಿ ಏನು ಭವಿಷ್ಯ ನುಡಿದಿದ್ದರು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಕಳೆದ ಫೆಬ್ರವರಿಯಲ್ಲಿ ಕೀರ್ತಿ ಇಎನ್ಟಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಗುರೂಜಿ ಹತ್ತು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದರು. ಮೇನಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಯಾರು ಗೆದ್ದು, ದೇಶವನ್ನಾಳುತ್ತಾರೆಂಬ ಪ್ರಶ್ನೆಯಿಂದ ಹಿಡಿದು, ಮುಂಬರುವ ಟಿ20 ವಿಶ್ವಕಪ್ (T20 World Cup) ಗೆಲ್ಲೋದು ಯಾರೆಂದೂ ಈ ಸಂದರ್ಶನದಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದೀಗ ಭಾರತ ಟ್ರೋಫಿ ಗೆದ್ದು ಬೀಗಿದ ಬೆನ್ನಲ್ಲೇ, ಕ್ರಿಕೆಟಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆ ಹಾಗೂ ಸಂಖ್ಯಾಶಾಸ್ತ್ರಜ್ಞರು ನೀಡಿರುವ ಉತ್ತರದ ವೀಡಿಯೋ ತುಣುಕು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಹಾವೂ ಸಾಯಬೇಕು, ಕೋಲೂ ಮುರೀಬಾರದು ಎಂಬಂತೆ , ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ನೀಡಿದ ಉತ್ತರದ ವೀಡಿಯೋ ತುಣಕು ವೈರಲ್ ಆಗುತ್ತಿದೆ.
ಇವರೇ ನೋಡಿ ಟಿ20 ವಿಶ್ವಕಪ್ ಗೆಲುವಿನ ರೂವಾರಿಗಳು..! ನೀವೇನಂತೀರಾ?
ರೋಹಿತ್ ಶರ್ಮಾ ಮೊದಲ ಐದು ಓವರ್ನಲ್ಲಿ ಕ್ರೀಸ್ನಲ್ಲಿ ನಿಲ್ಲಬೇಕು. ಕಷ್ಟಪಟ್ಟರೆ ಭಾರತ ಗೆಲುವಿನ ನಿರೀಕ್ಷೆ ಇಟ್ಟುಕೊಳ್ಳಬಹುದೆಂದು ಗುರೂಜಿ ಹೇಳಿದ್ದರು. ಬಹುತೇಕ ಟೂರ್ನಮೆಂಟಿನ ಎಲ್ಲ ಮ್ಯಾಚಲ್ಲೂ ಅತ್ಯುತ್ತಮ ಪ್ರದರ್ಶನ ನೀಡದ್ದ ರೋಹಿತ್, ಅಂತಿಮ ಹಣಾಹಣಿಯಲ್ಲಿ ಕೇವಲ 9 ರನ್ಸ್ ಸಿಡಿಸಿ, ಔಟಾಗಿದ್ದು, ಅಭಿಮಾನಗಲ್ಲಿ ನಿರಾಸೆ ಮೂಡಿಸಿತ್ತು. ಹಿಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದೇ, ಅಂತಿಮ ಕಾದಾಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆಂದು ವಿರಾಟ್ ಕೊಹ್ಲಿ ಮೇಲಿಟ್ಟಿದ್ದ ಭರವಸೆ ಸುಳ್ಳು ಮಾಡದೇ, ತೋರಿದ ಪ್ರದರ್ಶನದಿಂದ ಭಾರತ ಗೆದ್ದಿದ್ದು ಹೌದು. ಆದರೆ, ರೋಹಿತ್ ಬೇಗ ಔಟಾಗಿದ್ದರು. ಭಾನುವಾರ ಹೊರತಪಡಿಸಿ ಬೇರೆ ದಿನ ಪಂದ್ಯವಿದ್ದರೆ ಗೆಲುವಿನ ಸಾಧ್ಯತೆ ಹೆಚ್ಚೆಂದು ಗುರೂಜಿ ಹೇಳಿದ್ದು, ಶನಿವಾರವಾದ್ದರಿಂದ ಫೈನಲ್ ಪಂದ್ಯ ಇದ್ದ ಕಾರಣ ಭಾರತ ಈ ಸಾರಿ ಕಪ್ಪನ್ನು ತನ್ನದಾಗಿಸಿಕೊಂಡಿದೆ ಎನ್ನಬಹುದು. ಕಪಿಲ್ ದೇವ್ ವರ್ಲ್ಡ್ ಕಪ್ ಗೆದ್ದಾಗಲೂ ಆಡಿದ್ದು ಶನಿವಾರವೆಂದ ಗುರೂಜಿ ಭವಿಷ್ಯ ಸತ್ಯವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ತುಣುಕಿಗೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ಜೂ.29ರ ಶನಿವಾರ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ರೋಚಕ 7 ರನ್ಗಳಿಂದ ಮಣಿಸಿದ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ವಿಶ್ವ ಚಾಂಪಿಯನ್ ಆಗಿದೆ. ಈ ಮೂಲಕ ಭಾರತ 17 ವರ್ಷಗಳ ಬಳಿಕ 2ನೇ ಬಾರಿ ಟಿ20 ವಿಶ್ವಕಪ್ ಅನ್ನು ಮುಡಿಗೇರಿಸಿದೆ. ಐಸಿಸಿ ಟೂರ್ನಿಗಳಲ್ಲಿ ಒಂದೂ ಕಪ್ ಗೆಲ್ಲದೆ 11 ವರ್ಷಗಳಿಂದ ಅನುಭವಿಸಿದ್ದ ನೋವಿಗೆ ಇದೀಗ ಮದ್ದು ಸಿಕ್ಕಿದೆ. ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಆರಂಭಿಕ ಕುಸಿತ ಕಂಡಿತಾದರೂ, ನಂತರ ಆ ತಂಡದ ಬ್ಯಾಟ್ಸ್ಮನ್ಗಳು ಭಾರತದ ಬೌಲರ್ಗಳನ್ನು ಚಚ್ಚಿದರು. ಕಪ್ ಭಾರತ ಕೈ ತಪ್ಪೇ ಬಿಟ್ಟಿತು ಎಂಬಂಥ ಸ್ಥಿತಿ ಒಂದು ಕ್ಷಣದಲ್ಲಿ ಉದ್ಭವವಾಗಿತ್ತು. ಆದರೆ ಕೊನೆ 3 ಓವರ್ನಲ್ಲಿ ಪಂದ್ಯದ ದಿಕ್ಕೇ ಬದಲಾಯಿತು. ಆ ಮೂರೂ ಓವರ್ಗಳು ಜನರು ಟೀವಿ ಬಿಟ್ಟು ಕದಲದಂತೆ ಟೆನ್ಷನ್ ಸೃಷ್ಟಿಸಿತು. ಪಂದ್ಯ ಭಾರತದ ಕೈ ತಪ್ಪುತ್ತಿದೆ ಎಂಬ ಸ್ಥಿತಿಯಲ್ಲಿದ್ದಾಗ 17ನೇ ಓವರ್ನಲ್ಲಿ ಬೌಲಿಂಗ್ ದಾಳಿಗೆ ಇಳಿದ ಜಸ್ಪ್ರೀತ್ ಬೂಮ್ರಾ, ರನ್ ನಿಯಂತ್ರಿಸಿ ಪಂದ್ಯದ ದಿಕ್ಕನ್ನೇ ಬದಲಿಸಿದರು.
ಸಲಾಂ ಕ್ಯಾಪ್ಟನ್ ರೋಹಿತ್ ಶರ್ಮಾ! ಕೊಟ್ಟ ಮಾತಿನಂತೆ ನಡೆದುಕೊಂಡ ನಾಯಕ!
ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ಭಾರತ ಫೈನಲ್ನ ನಡುವೆ ಮುಗ್ಗರಿಸುವ ಭೀತಿಗೆ ಒಳಗಾಗಿತ್ತು. ಅದ್ಭುತ ಕಮ್ಬ್ಯಾಕ್ ಮೂಲಕ ಭಾರತ ಟ್ರೋಫಿ ಗೆದ್ದುಕೊಂಡಿತು. ವಿರಾಟ್ ಕೊಹ್ಲಿಯ ಅಮೋಘ ಆಟದಿಂದ ಭಾರತ ಕಲೆ ಹಾಕಿದ್ದು 7 ವಿಕೆಟ್ ನಷ್ಟಕ್ಕೆ 176 ರನ್ಸ್. ಅಕ್ಷರ್ ಪಟೇಲ್, ಶಿವಂ ದುಬೆಯ ಆಟವೂ ಭಾರತದ ಬತ್ತಳಿಕೆಗೆ ತಕ್ಕಮಟ್ಟ ರನ್ ಸೇರಿಸುವಲ್ಲಿ ಸಫಲವಾಯಿತು. ಕ್ಲಾಸೆನ್ ಆರ್ಭಟ ಗಮನಿಸಿದಾಗ ದಕ್ಷಿಣ ಆಫ್ರಿಕಾ ಈ ಮೊತ್ತವನ್ನು ಬೆನ್ನತ್ತಿ ಟ್ರೋಫಿ ಗೆಲ್ಲುತ್ತೆಂದು, ಟೆನ್ಷನ್ ತಾಳಲಾರದ ಹಲವರು ಹೊದ್ದು ಮಲಗಿದ್ದು ಸುಳ್ಳಲ್ಲ. ಭಾರತ ಟ್ರೋಫಿ ಭರವಸೆಯನ್ನೇ ಕಳೆದು ಕೊಂಡಂತೆ ಭಾಸವಾಗಿತ್ತು. ಆದರೆ ಕಡೆಯ ಓವರ್ಗಳಲ್ಲಿ ಭಾರತ ಅತ್ಯಾಕರ್ಷಕ ಪ್ರದರ್ಶನ ನೀಡಿ,ಟಿ20 ವಿಶ್ವಕಪ್ ಕಿರೀಟವನ್ನು 2ನೇ ಬಾರಿಗೆ ಮುಡಿಗೇರಿಸಿಕೊಂಡಿತ್ತು. ಚೋಕರ್ಸ್ ಹಣೆಪಟ್ಟಿ ಹೊತ್ತುಕೊಂಡಿರುವ ದ.ಆಫ್ರಿಕಾ ಮತ್ತೊಮ್ಮೆ ಐಸಿಸಿ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಟ್ರೋಫಿ ಗೆಲ್ಲುವ ಅವಕಾಶದಿಂದ ವಂಚಿತವಾಯಿತು.