Mysuru Dasara 2022: ಇಂದಿನಿಂದ ದಸರಾ ವೈಭವ: ಮೈಸೂರಿನಲ್ಲಿ 413ನೇ ನಾಡಹಬ್ಬ

By Govindaraj SFirst Published Sep 26, 2022, 1:00 AM IST
Highlights

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸೋಮವಾರ ಆರಂಭವಾಗಲಿದ್ದು, ಇದೇ ಮೊದಲ ಬಾರಿಗೆ ಉತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಲಿದ್ದಾರೆ. ಕಳೆದೆರಡು ವರ್ಷ ಕೋವಿಡ್‌ನಿಂದಾಗಿ ದಸರಾವನ್ನು ಸರಳವಾಗಿ ಆಚರಿಸಲಾಗಿತ್ತು.

ಅಂಶಿ ಪ್ರಸನ್ನಕುಮಾರ್‌

ಮೈಸೂರು (ಸೆ.26): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸೋಮವಾರ ಆರಂಭವಾಗಲಿದ್ದು, ಇದೇ ಮೊದಲ ಬಾರಿಗೆ ಉತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಲಿದ್ದಾರೆ. ಕಳೆದೆರಡು ವರ್ಷ ಕೋವಿಡ್‌ನಿಂದಾಗಿ ದಸರಾವನ್ನು ಸರಳವಾಗಿ ಆಚರಿಸಲಾಗಿತ್ತು. ದಸರೆಯ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಯನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿತ್ತು. ಆದರೆ, ಈ ಬಾರಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ‘ನಾಡಹಬ್ಬ’ ದಸರೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇದೇ ವೇಳೆ, ಕೊಲ್ಲೂರು, ಶೃಂಗೇರಿ, ಸವದತ್ತಿ ಸೇರಿದಂತೆ ರಾಜ್ಯದ ಪ್ರಮುಖ ಶಕ್ತಿಕ್ಷೇತ್ರಗಳಲ್ಲಿಯೂ ಶರನ್ನವರಾತ್ರಿ ಉತ್ಸವ ಆರಂಭಗೊಳ್ಳಲಿದೆ. ಅಲ್ಲದೆ, ಮಡಿಕೇರಿ ದಸರಾ, ಮಂಗಳೂರು ದಸರಾ, ಶಿವಮೊಗ್ಗ ದಸರಾ ಸೇರಿದಂತೆ ರಾಜ್ಯದ ಇತರೆಡೆಯೂ ದಸರಾ ಮಹೋತ್ಸವಗಳಿಗೆ ಚಾಲನೆ ನೀಡಲಾಗುವುದು.

Mysuru Dasara 2022: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ರಾಜಮನೆತನವನ್ನು ಆಹ್ವಾನಿಸಿದ ಸಚಿವ ಸೋಮಶೇಖರ್‌

ಇಂದು ರಾಷ್ಟ್ರಪತಿ ಆಗಮನ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಬೆಳಗ್ಗೆ 9ಕ್ಕೆ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ನೇರವಾಗಿ ಚಾಮುಂಡಿಬೆಟ್ಟಕ್ಕೆ ತೆರಳಿ, ನಾಡದೇವತೆ ಚಾಮುಂಡೇಶ್ಪರಿ ದೇವಿಯ ದರ್ಶನ ಪಡೆಯಲಿದ್ದಾರೆ. ನಂತರ, ಹೊರಾವರಣದಲ್ಲಿ ಬೆಳ್ಳಿ ರಥದಲ್ಲಿರುವ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಬೆಳಗ್ಗೆ 9.45 ರಿಂದ 10.05 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಜ್ಯೋತಿ ಬೆಳಗಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಪ್ರಹ್ಲಾದ ಜೋಶಿ, ರಾಜೀವ್‌ ಚಂದ್ರಶೇಖರ್‌, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ, ಸಚಿವರಾದ ಎಸ್‌,ಟಿ.ಸೋಮಶೇಖರ್‌, ಸುನಿಲ್‌ಕುಮಾರ್‌, ಶಶಿಕಲಾ ಜೊಲ್ಲೆ, ಆನಂದ್‌ಸಿಂಗ್‌, ಮೇಯರ್‌ ಶಿವಕುಮಾರ್‌ ಉಪಸ್ಥಿತರಿರಲಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ದಸರಾ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಭೇಟಿಗೆ ನಿಷೇಧ ಹೇರಲಾಗಿದೆ.

ಇದೇ ವೇಳೆ, ದಸರಾ ಚಲನಚಿತ್ರೋತ್ಸವ, ಫಲಪುಷ್ಪ ಪ್ರದರ್ಶನ, ಕುಸ್ತಿ ಪಂದ್ಯಾವಳಿ, ವಸ್ತು ಪ್ರದರ್ಶನ, ಯೋಗ ದಸರಾ, ಮಕ್ಕಳ ದಸರಾ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೂ ಸೋಮವಾರವೇ ಚಾಲನೆ ದೊರೆಯಲಿದೆ. ಈ ಮಧ್ಯೆ, ಅ.5ರಂದು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ನಡೆಯಲಿರುವ ಅದ್ದೂರಿ ಜಂಬೂ ಸವಾರಿಯೊಂದಿಗೆ ಮೈಸೂರು ದಸರಾಕ್ಕೆ ತೆರೆ ಬೀಳಲಿದೆ.

ರಾಷ್ಟ್ರಪತಿ ಮುರ್ಮು ಮೊದಲ ರಾಜ್ಯ ಪ್ರವಾಸ: ಕಳೆದ ಜು.25ರಂದು ದೇಶದ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ದ್ರೌಪದಿ ಮುರ್ಮು ಅವರು ರಾಜ್ಯವೊಂದಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅವರ ಮೊದಲ ರಾಜ್ಯ ಪ್ರವಾಸ ಕರ್ನಾಟಕಕ್ಕೆ ಎಂಬುದು ವಿಶೇಷ.

ಮೈಸೂರು ದಸರಾ ಮಹೋತ್ಸವ: ಭದ್ರತೆಯ ನೆಪದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ

ಇಂದು ಧಾರವಾಡ ಐಐಐಟಿ ಉದ್ಘಾಟನೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಸೋಮವಾರ ಅದ್ಧೂರಿ ಪೌರ ಸನ್ಮಾನ ನಡೆಯಲಿದೆ. ಆ ಬಳಿಕ ಅವರು ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯ ನೂತನ ಕ್ಯಾಂಪಸ್‌ ಅನ್ನು ಉದ್ಘಾಟಿಸಲಿದ್ದಾರೆ.

click me!