
ಉಡುಪಿ (ಜೂ.12) ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೊಸೆಫ್ ಕೊಲ್ಲೂರು ಮೂಕಾಂಬಿಗೆ ದೇವಿ ದರ್ಶನ ಪಡೆದಿದ್ದಾರೆ. ಇಂದು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ವಿಜಯ್ ಭಕ್ತಿಯ ಕಾಣಿಕೆಯಾಗಿ ಬೆಳ್ಳಿ ಖಡ್ಗ ನೀಡಿದ್ದಾರೆ. ಕೊಲ್ಲೂರು ಮೂಕಾಂಬಿಕೆ ದೇವಿ ಆಶೀರ್ವಾದದಿಂದ ತಮಿಳುನಾಡಿನಲ್ಲಿ ಪಕ್ಷ ಸ್ಥಾಪಿಸಿ, ಮುಖ್ಯಮಂತ್ರಿಯಾಗಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ತಮಿಳುನಾಡಿನ ಮುಖ್ಯಮಂತ್ರಿ ಎಂಜಿಆರ್ ಹಿಂದೆ ಇದೇ ಮೂಕಾಂಬಿಗೆ ಶಕ್ತಿ ಅಡಗಿದೆ. ವಿಶೇಷ ಅಂದರೆ ಎಂಜಿಆರ್ ಪಕ್ಷ ಸ್ಥಾಪನೆ ಮಾಡಿದ್ದು ಮೂಕಾಂಬಿಕೆ ದರ್ಶನ ಪಡೆದ ಬಳಿಕ, ಇಷ್ಟೇ ಅಲ್ಲ ಪಕ್ಷದ ಚಿಹ್ನೆ ಹಿಂದೆ ಮೂಕಾಂಬಿಕೆ ಪವಾಡ ಆಡಗಿದೆ.
ಕೊಲ್ಲೂರು ಮೂಕಾಂಬಿಕೆ ದೇಗುಲದ ಪುರೋಹಿತರಾದ ಸುರೇಶ್ ಭಟ್ ಕೆಲ ರೋಚಕ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾಯದಲ್ಲಿ ಜನಪ್ರಿಯ ನಟನಾಗಿ ಭಾರಿ ಪ್ರಭಾವ ಹೊಂದಿದ್ದ ಎಂಜಿಆರ್ ಶೂಟಿಂಗ್ಗಾಗಿ ಮಣಿಪಾಲಕ್ಕೆ ಆಗಮಿಸಿದ್ದರು. ಮಣಿಪಾಲದಲ್ಲೇ ತಂಗಿದ್ದ ಎಂಜಿಆರ್, ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಆಗಮಿಸಿದ್ದರು. ದರ್ಶನ ಪಡೆದ ಎಂಜಿಆರ್ ಯಶಸ್ವಿಯಾಗಿ ಶೂಟಿಂಗ್ ಮುಗಿಸಿದ್ದರು.
ಶೂಟಿಂಗ್ ಮುಗಿಸಿ ಮರಳುವಾಗ ತಮಿಳುನಾಡು ವಿಧಾನಸಭೆ ಚುನಾವಣೆ ಸಮೀಪಿಸಿತ್ತು. ತಮಿಳುನಾಡಿಗೆ ಮರಳಿದ ಎಂಜಿಆರ್ ಮೂಕಾಂಬಿಕೆ ಆಶೀರ್ವಾದಿಂದ ದೃಢ ಸಂಕಲ್ಪ ಮಾಡಿ ಎಐಎಡಿಎಂಕೆ ಪಕ್ಷ ಸ್ಥಾಪಿಸಿದ್ದರು. ಮೂಕಾಂಬಿಕೆ ದರ್ಶನದ ವೇಳೆ ಎಂಜಿಆರ್ ಗೋಪುರದ ಮೇಲಿನ ಚಿಹ್ನೆ ಗಮನಿಸಿದ್ದರು. ದೇಗುಲದ ಗೋಪುರದ ಮೇಲೆ ಎರಡು ಎಲೆಯ ಚಿಹ್ನೆ ಇದೆ. ಇದನ್ನೇ ಪಕ್ಷದ ಚಿಹ್ನೆಯಾಗಿ ಮಾಡಿದ್ದರು. ಬಳಿಕ ಪವಾಡವೇ ನಡೆದಿತ್ತು. ಎಂಜಿಆರ್ ಅಭೂತಪೂರ್ವ ಗೆಲುವು ದಾಖಲಿಸಿದ್ದರು. ಎಂಜಿಆರ್ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಬಳಿಕ ಕೆಲವೇ ದಿನಗಳಲ್ಲಿ ಕೊಲ್ಲೂರು ಮೂಕಾಂಬಿಕೆಗೆ ಆಗಮಿಸಿ ಚಿನ್ನದ ಖಡ್ಗ ಕಾಣಿಕೆಯಾಗಿ ಅರ್ಪಿಸಿದ್ದರು ಎಂದು ಸುರೇಶ್ ಭಟ್ ಮಾಹಿತಿ ನೀಡಿದ್ದಾರೆ.
1977ನೇ ಇಸವಿಯ ವರೆಗೆ ಕೊಲ್ಲೂರೂ ಮೂಕಾಂಬಿಕೆಗೆ ಯಾರು ಕೂಡ ಖಡ್ಗ ಕೊಟ್ಟ ಇತಿಹಾಸ ಇಲ್ಲ. ಎಂಜಿಆರ್ ಸಿಎಂ ಆಗುವ ಪೂರ್ವದಲ್ಲಿ ಅವರಿಗೆ ಅಭಿಮಾನಿಗಳು ಖಡ್ಗ ನೀಡಿದ್ದರು. ಮಧುರೈ ವೀರನ್ ನಾಡೋಡಿ ಮಣ್ಣನ್ ಚಿತ್ರದಲ್ಲಿ ನಟಿಸಿದ್ದಕ್ಕೆ ಅಭಿಮಾನಿಗಳು ಕಾಣಿಕೆ ನೀಡಿದ್ದರು. ಇಲ್ಲಿ ಖಡ್ಗಕೊಟ್ಟ ನಂತರ ಅವರು ಸಿಎಂ ಆದರು. ಆಮೇಲೆ ಸುಮಾರು ನೂರು ಬೆಳ್ಳಿಯ ಖಡ್ಗಗಳು ಇಲ್ಲಿಗೆ ಕಾಣಿಕೆಯಾಗಿ ಬಂದಿದೆ. ಮೂರು ಚಿನ್ನದ ಖಡ್ಗಗಳು ಬಂದಿವೆ. ಖಡ್ಗ ನೀಡುವುದು ವಿಜಯದ ಸಂಕೇತ ಇರಬಹುದು. ರಾಜಕಾರಣಿಯಾದ ಕಾರಣ ಶತ್ರು ಸಂಹಾರದ ಸಂಕಲ್ಪ ಮಾಡಿಯೂ ಕೊಟ್ಟಿರಬಹುದು ಎಂದು ಸುರೇಶ್ ಭಟ್ ಹೇಳಿದ್ದಾರೆ.
ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದ ಬಳಿಕ ಜೊಸೆಫ್ ವಿಜಯ್ ಕೈಗೆ ದಾರ ಕಟ್ಟಿದ್ದರು. ಈ ಕುರಿತು ಸುರೇಶ್ ಭಟ್ ಮಾಹಿತಿ ನೀಡಿದ್ದಾರೆ. ರಾಜಕಾರಣಿಗಳು ಬಂದಾಗ ದಾರಕಟ್ಟುವ ಪದ್ಧತಿ ಇದೆ. ಎದುರಾಳಿಗಳ ದೃಷ್ಟಿ ಆಗದೆ ಶ್ರೀರಕ್ಷೆ ಸಿಗಲಿ ಎಂದು ದಾರ ಕಟ್ಟುತ್ತೇವೆ. ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಎಲ್ಲರಿಗೂ ನಾವು ದಾರ ಕಟ್ಟಿದ್ದೇವೆ. ನಿಮಗೆ ದಾರ ಕಟ್ಟಬಹುದೇ ಎಂದು ವಿಜಯ್ ಬಳಿ ಕೇಳಿದ್ದೆ. ಇದಕ್ಕೆ ವಿಜಯ್ ಸಮ್ಮತಿಸಿದ್ದರು. ಹೀಗಾಗಿ ದಾರ ಕಟ್ಟಿದ್ದೇವೆ ಎಂದು ದೇಗುಲದ ಪುರೋಹಿತರಾದ ಸುರೇಶ್ ಭಟ್ ಹೇಳಿದ್ದಾರೆ.