ಯೋಗ ನಿದ್ರೆ ಮುಗಿಸಿ ರಥ ಬೀದಿಗೆ ಬಂದ ಕೃಷ್ಣ; ಸ್ವಾಗತಿಸಲು ಲಕ್ಷ ದೀಪೋತ್ಸವ

By Suvarna NewsFirst Published Nov 6, 2022, 4:54 PM IST
Highlights

ಕೃಷ್ಣಮಠದಲ್ಲಿ ಲಕ್ಷದೀಪೋತ್ಸವ
ರಥಬೀದಿಯ ಸುತ್ತಲೂ ದೀಪಾಲಂಕಾರ
ನಾಲ್ಕು ದಿನಗಳ ಕಾಲ ಲಕ್ಷದೀಪಾಲಂಕಾರ
ಮಧ್ವರ ಸರೋವರದಲ್ಲಿ ತೆಪ್ಪೋತ್ಸವದ ಸೊಬಗು

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಅಪರೂಪದ ಸಂಪ್ರದಾಯಗಳಿಗೆ ಹೆಸರಾದ ಉಡುಪಿಯ ಕೃಷ್ಣಮಠ ಲಕ್ಷದೀಪಗಳಿಂದ ಕಂಗೊಳಿಸುತ್ತಿದೆ. ನಾಲ್ಕು ಮಾಸಗಳ ಕಾಲ ಯೋಗನಿದ್ರೆಯಲ್ಲಿದ್ದ ಕಡಗೋಲು ಕೃಷ್ಣನ ಮೊದಲ ರಥೋತ್ಸವಕ್ಕೆ ಅಷ್ಟಮಠಗಳ ರಥಬೀದಿ ಅಲಂಕಾರಗೊಂಡಿದೆ. ಅಷ್ಟಮಠಾಧೀಶರ ಉಪಸ್ಥಿತಿ, ಬಿರುಸು ಬಾಣಗಳ ಕಲರವ, ತೆಪ್ಪೋತ್ಸವದ ವೈಭವದ ನಡುವೆ ಕೃಷ್ಣನ ಮೆರವಣಿಗೆ ನಡೆಸಲಾಯ್ತು. 

Latest Videos

ದೇವರ ಸ್ವಾಗತಕ್ಕೆ ಅಷ್ಟಮಠಗಳ ರಥಬೀದಿ ಸಜ್ಜಾಗಿರುವ ಬಗೆ ನೋಡಿ, ಭಕ್ತರು ಖುಷಿ ಪಡುತ್ತಿದ್ದಾರೆ. ಉಡುಪಿ ಕೃಷ್ಣ ಮಠದಲ್ಲಿ ನಿತ್ಯವೂ ರಥೋತ್ಸವ ನಡೆಯುತ್ತೆ. ಆದರೆ ಮಳೆಗಾಲದ ನಾಲ್ಕು ಮಾಸಗಳಲ್ಲಿ ಕೃಷ್ಣ ದೇವರು ಯೋಗ ನಿದ್ರೆಯಲ್ಲಿರ್ತಾನೆ ಅನ್ನೋದು ನಂಬಿಕೆ. ಉತ್ಥಾನ ದ್ವಾದಶಿಯ ದಿನ ಯೋಗ ನಿದ್ರೆ ಪೂರೈಸಿ ರಥಬೀದಿಗೆ ಬರುವ ದೇವರನ್ನು ಬರಮಾಡಿಕೊಳ್ಳಲು ನಡೆದಿರುವ ತಯಾರಿಯೇ ಲಕ್ಷದೀಪೋತ್ಸವ.

ಈ ಮಹೋತ್ಸವವನ್ನು ಲಕ್ಷದೀಪೋತ್ಸವ ಎನ್ನುತ್ತಾರೆ. ಇಳಿ ಹೊತ್ತಿನಲ್ಲಿ ಭಕ್ತರೆಲ್ಲರೂ ರಥಬೀದಿಯಲ್ಲಿ ಸೇರಿ ಸಾವಿರಾರು ದೀಪ ಬೆಳಗುತ್ತಾರೆ. ಮಧ್ವ ಸರೋವರದಲ್ಲಿ ಕ್ಷೀರಾಬ್ದಿ ಪೂಜೆ ನಡೆದು. ಅಷ್ಟಮಠಗಳ ಯತಿಗಳು, ಸರೋವರದ ನಡುವಿನಲ್ಲಿರುವ ಆಚಾರ್ಯ ಮಧ್ವರ ಮೂರ್ತಿಯ ಮುಂದೆ ಕ್ಷೀರಾಬ್ಧಿಯ ವಿಧಿಗಳನ್ನು ನಡೆಸಿಕೊಟ್ಟರು. ಇದೇ ಮೊದಲ ಬಾರಿಗೆ ಗರ್ಭಗುಡಿಯಿಂದ ಹೊರಬರುತ್ತಿರುವ ಕೃಷ್ಣ ದೇವರಿಗೆ ಕ್ಷೀರಾಬ್ದಿ ನಡೆಯಿತು. 

ಕಲಬುರಗಿ ವೀರಭದ್ರೇಶ್ವರ ಜಾತ್ರೆ: ಕೆಂಡ ಹಾಯ್ದ ಸಾವಿರಾರು ಭಕ್ತರು!

ಆಚಾರ್ಯ ಮಧ್ವರ ಪ್ರತಿಮೆಯ ಸುತ್ತಲೂ ತೇಲುವ ತೆಪ್ಪದಲ್ಲಿ ಕೃಷ್ಣ ದೇವರ ಪ್ರದಕ್ಷಿಣೆಯನ್ನು ನೋಡೋದೇ ಕಣ್ಣಿಗೆ ಹಬ್ಬ. ಸರೋವರದ ನೀರಿನ ಮೇಲೆ ದೋಣಿಯಲ್ಲಿ ಸಾಗುವ ಮೆರವಣಿಗೆ ಹೃದಯಂಗಮವಾಗಿರುತ್ತೆ.

ಸಾಲು ಸಾಲು ದೀಪಗಳ ನಡುವೆ ಕೃಷ್ಣ ದೇವರ ಮೆರವಣಿಗೆ ನಡೆಯಿತು. ರಥದ ಮುಂಭಾಗದಲ್ಲಿ ನೂರಾರು ಚಂಡೆಗಳ ನಾದ ವೈಭವ, ಬಿರುಸು ಬಾಣಗಳ ಸೊಗಸು ಭಕ್ತರನ್ನು ಆಕರ್ಷಿಸಿತು. ಭಜನಾ ತಂಡಗಳಲ್ಲಿ ನೂರಾರು ಕಲಾವಿದರು ನೃತ್ಯ ಭಜನೆ ನಡೆಸಿಕೊಟ್ಟರು. 
.
ಈ ಬಾರಿಯ ಲಕ್ಷ ದೀಪೋತ್ಸವದಲ್ಲಿ  ಪರ್ಯಾಯ ಕೃಷ್ಣಾಪುರ ಸ್ವಾಮೀಜಿ ಪಲಿಮಾರು, ಪೇಜಾವರ ಕಾಣಿಯೂರು ಸ್ವಾಮೀಜಿ ಉಪಸ್ಥಿತರಿದ್ದರು. ಸಾವಿರಾರು ಭಕ್ತರು ಸೇರಿ ಎರಡೂ ರಥಗಳನ್ನು ಎಳೆದರು. 

ಇದೇ ವೇಳೆ ಆಕರ್ಷಕ ಸುಡುಮದ್ದು ಪ್ರದರ್ಶನವೂ ಏರ್ಪಾಟಾಗಿತ್ತು. ಮುಂದಿನ ಮೂರು ದಿನಗಳ ಕಾಲ ಸಮಾನ ವೈಭವದಿಂದ ಲಕ್ಷ ದೀಪೋತ್ಸವ ನಡೆಯುತ್ತೆ.

ಚಂದ್ರ ಗ್ರಹಣ ಕಾಲದಲ್ಲಿ ನಾವೇನು ಮಾಡಬೇಕು?

ಲಕ್ಷದೀಪೋತ್ಸವದೊಂದಿಗೆ ಆರಂಭವಾಗುವ ಕೃಷ್ಣ ದೇವರ ರಥೋತ್ಸವ ಮುಂದಿನ ಮಳೆಗಾಲದವರೆಗೆ ಪ್ರತಿದಿನ ತಪ್ಪದೆ ನಡೆಯುತ್ತೆ. ಅಷ್ಟಮಠಗಳ ರಥಬೀದಿಯಲ್ಲಿ ಸೇವಾರೂಪದಲ್ಲಿ ನಡೆಯುವ ಉತ್ಸವದಿಂದ ದಿನವೂ ಹಬ್ಬದ ವಾತಾವರಣ ಇರುತ್ತದೆ.

click me!