ಸೆಲೆಬ್ರಿಟಿಗಳೇಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಮಾಡಿಸ್ತಾರೆ?

Suvarna News   | Asianet News
Published : Mar 09, 2020, 12:49 PM ISTUpdated : Mar 10, 2020, 12:27 PM IST
ಸೆಲೆಬ್ರಿಟಿಗಳೇಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಮಾಡಿಸ್ತಾರೆ?

ಸಾರಾಂಶ

ಇತ್ತೀಚೆಗೆ ಕ್ರಿಕೆಟರ್ ಮನೀಶ್ ಪಾಂಡೆ ಪತ್ನಿ ಸಮೇತ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯಕ್ಕೆ ಬಂದು ಆಶ್ಲೇಷ ಬಲಿ ಮಾಡಿಸಿದರು. ಅದಕ್ಕೂ ಮೊದಲಿನ ವಾರ ಹಿಂದಿ ನಟ ಅಜಯ್ ದೇವಗನ್ ಕೂಡ ಕುಕ್ಕೆಗೆ ಬಂದು ಆಶ್ಲೇಷ ಬಲಿ ಮಾಡಿಸಿದ್ದರು. ಅದಕ್ಕೂ ಮೊದಲು ಅನೇಕ ಸೆಲೆಬ್ರಿಟಿಗಳು, ರಾಜಕಾರಣಿಗಳು ಇಲ್ಲಿಗೆ ಆಗಮಿಸಿ ಸುಬ್ರಹ್ಮಣ್ಯನ ದರ್ಶನ ಮಾಡಿ ಸೇವೆ ಮಾಡಿಸಿ ನೆಮ್ಮದಿ ಹೊಂದಿದ್ದಾರೆ. ಕುಕ್ಕೆಯಲ್ಲಿ ಮಾಡಿಸುವ ಆಶ್ಲೇಷ ಬಲಿಗೆ ಶ್ರೇಷ್ಠವೆಂಬ ಹೆಗ್ಗಳಿಕೆ ಇದೆ.

ಇತ್ತೀಚೆಗೆ ಕ್ರಿಕೆಟರ್ ಮನೀಶ್ ಪಾಂಡೆ ಪತ್ನಿ ಸಮೇತ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯಕ್ಕೆ ಬಂದು ಆಶ್ಲೇಷ ಬಲಿ ಮಾಡಿಸಿದರು. ಅದಕ್ಕೂ ಮೊದಲಿನ ವಾರ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಕುಕ್ಕೆಗೆ ಬಂದು ಆಶ್ಲೇಷ ಬಲಿ ಮಾಡಿಸಿದ್ದರು. ಅದಕ್ಕೂ ಮೊದಲು ಅನೇಕ ಸೆಲೆಬ್ರಿಟಿಗಳು, ರಾಜಕಾರಣಿಗಳು ಇಲ್ಲಿಗೆ ಆಗಮಿಸಿ ಸುಬ್ರಹ್ಮಣ್ಯನ ದರ್ಶನ ಮಾಡಿ ಸೇವೆ ಮಾಡಿಸಿ ನೆಮ್ಮದಿ ಹೊಂದಿದ್ದಾರೆ. ಕುಕ್ಕೆಯಲ್ಲಿ ಮಾಡಿಸುವ ಆಶ್ಲೇಷ ಬಲಿಗೆ ಶ್ರೇಷ್ಠವೆಂಬ ಹೆಗ್ಗಳಿಕೆ ಇದೆ.
ಆಶ್ಲೇಷ ಬಲಿ ಎಂದರೆ ಸುಬ್ರಹ್ಮಣ್ಯನಿಗೆ ಮಾಡಿಸುವ ವಿಶಿಷ್ಟವಾದ ಒಂದು ಸೇವೆ. ಇದರಲ್ಲಿ ಸರ್ಪರಾಜ ಸುಬ್ರಹ್ಮಣ್ಯನಿಗೆ ಪ್ರಿಯವಾದ ದ್ರವ್ಯಗಳನ್ನು ನೀಡಿ, ಆತನನ್ನು ಆವಾಹನೆ ಮಾಡಿ, ಆತನಲ್ಲಿ ತಮ್ಮಲ್ಲಿ ಇರಬಹುದಾದ ಸಕಲ ದೋಷಗಳನ್ನೂ ನಿವಾರಿಸು ಎಂದು ಪ್ರಾರ್ಥಿಸಲಾಗುತ್ತದೆ. ಪೂಜೆಯ ಬಳಿಕ ನೈವೇದ್ಯವನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಲಾಗುತ್ತದೆ.

ಪತ್ನಿಯೊಂದಿಗೆ ಕುಕ್ಕೆಗೆ ಬಂದಿದ್ದ ಮನೀಶ್ ಪಾಂಡೆ

ದೋಷಗಳೇನು? ಸಾಮಾನ್ಯವಾಗಿ ಎಲ್ಲರ ಕುಟುಂಬದಲ್ಲೂ ಒಂದಲ್ಲ ಒಂದು ದೋಷ ಇದ್ದೇ ಇರುತ್ತದೆ. ಉದಾಹರಣೆಗೆ, ಮದುವೆಯ ವೇಳೆ ಉಂಟಾಗಿರಬಹುದಾದ ಜಾತಕ ದೋಷ. ಉಭಯ ಜಾತಕಗಳಲ್ಲಿ ಪೂರ್ಣ ಪ್ರಮಾಣದ ಗುಣಗಳು ಸೇರದಿದ್ದರೂ ಗಂಡು ಹೆಣ್ಣು ಮೆಚ್ಚಿದರೆ ಮದುವೆ ಆಗುವುದು ಸಾಮಾನ್ಯ. ಆದರೆ ಜಾತಕ ದೋಷ ಹಾಗೇ ಉಳಿಯುತ್ತದೆ. ಅದನ್ನು ಹೋಗಲಾಡಿಸಲು ಸೇವೆ ನಡೆಸುತ್ತಾರೆ. ದಂಪತಿಗೆ ಮಕ್ಕಳಿಲ್ಲ ಎಂದರೂ ಏನಾದರೂ ದೋಷವಿರಬಹುದು. ಅದು ಕೆಲವೊಮ್ಮೆ ಜಾತಕದಲ್ಲಿ, ಕೆಲವೊಮ್ಮೆ ಕುಟುಂಬದ ಹಿಸ್ಟರಿಯಲ್ಲಿ ಇರುತ್ತದೆ. ಗಂಡನ ಕುಟುಂಬದವರು ತಲೆಮಾರಿನಿಂದ ನಡೆಸಿಕೊಂಡು ಬಂದಿದ್ದ ನಾಗಾರಾಧನೆ ನಿಲ್ಲಿಸಿದ್ದರೆ, ಇನ್ಯಾರದೋ ನಾಗಾರಾಧನೆಗೆ ಅಡ್ಡಿ ಮಾಡಿದ್ದರೆ, ನಾಗರಹಾವನ್ನು ಕೊಂದಿದ್ದರೆ, ಸತ್ತ ಹಾವನ್ನು ಕಂಡರೂ ಸಂಸ್ಕಾರ ಮಾಡದೆ ಮುಂದೆ ಹೋಗಿದ್ದರೆ, ಕುಟುಂಬಕ್ಕೆ ಸೇರಿದ ಆಸ್ತಿಯಲ್ಲಿ ನಾಗನ ನೆಲೆಯಿದ್ದು ಆತನಿಗೆ ಸೂಕ್ತ ಸೂರು ಕಲ್ಪಿಸದೆ ಇದ್ದರೆ, ಅಂಥ ಸಂದರ್ಭಗಳಲ್ಲಿ ಸರ್ಪದೋಷ ಅಂಟಿಕೊಳ್ಳುತ್ತದೆ. ಈ ದೋಷ ಹೋಗಲಾಡಿಸಲು ಆಶ್ಲೇಷ ಬಲಿ ಮಾಡಿಸುತ್ತಾರೆ.

12 ಪವಿತ್ರ ಜ್ಯೋತಿರ್ಲಿಂಗಗಳ ದರ್ಶನ ನಿಮಗಾಗಿ ಇಲ್ಲಿ!

ಕೆಲವೊಮ್ಮೆ ನಮ್ಮದಲ್ಲದ ದೋಷ ಕೂಡ ನಮಗೆ ಅಂಟಿಕೊಳ್ಳುವುದುಂಟು. ಉದಾಹರಣೆಗೆ, ನಿಮ್ಮ ಅಜ್ಜನೋ ಅಜ್ಜಿಯೋ ಸರ್ಪವೊಂದನ್ನು ಕೊಂದಿದ್ದಾರೆ ಎಂದಿಟ್ಟುಕೊಳ್ಳಿ. ಆಗ ಆ ದೋಷ ಮುಂದಿನ ತಲೆಮಾರಿನಲ್ಲಿ ಚರ್ಮರೋಗವಾಗಿ ಕಾಣಿಸಿಕೊಳ್ಳಬಹುದು ಎಂದು ಕೆಲ ಪಂಡಿತರು ಹೇಳುತ್ತಾರೆ. ಹೀಗಾಗಿ, ಚರ್ಮದ ಮೇಲೆ ಸಣ್ಣ ಬಿಳಿ ಕಲೆ ಕಂಡರೂ ಸೆಲೆಬ್ರಿಟಿಗಳು ಭಯಭೀತರಾಗುತ್ತಾರೆ. ತಮ್ಮ ಜ್ಯೋತಿಷಿಗಳಲ್ಲಿ ಕೇಳುತ್ತಾರೆ. ಆಗ ಅವರು ಕುಕ್ಕೆಯಲ್ಲಿ ಆಶ್ಲೇಷ ಪುಜೆಯ ಪರಿಹಾರ ಹೇಳುತ್ತಾರೆ.

ಇನ್ನು ಕೆಲವೊಮ್ಮೆ, ನೀವೊಂದು ಜಮೀನು ಅಥವಾ ಮನೆ ಖರೀದಿಸಿದ್ದಿರಿ ಎಂದಿಟ್ಟುಕೊಳ್ಳಿ. ಆ ಜಮೀನಿನಲ್ಲಿ ಮೊದಲು ಇದ್ದ ನಾಗನ ಕಲ್ಲನ್ನು ನಿಮಗೆ ಆಸ್ತಿ ಮಾರಿದವನು‌ ಕೆಡವಿ ಸಪಾಟು ಮಾಡಿರಬಹುದು. ಅಥವಾ ಆ ಆಸ್ತಿಯಲ್ಲಿ ನಾಗನ ನಡೆ(ದಾರಿ) ಇದ್ದು, ಮನೆ ಕಟ್ಟುವ ಸಂದರ್ಭದಲ್ಲಿ ಅದು ನಾಶ ಆಗಿರಬಹುದು. ಆಗ ನಾಗಗಳು ದಾರಿ ಸಿಕ್ಕದೆ ನಿಮ್ಮ ಮನೆಯ ಸಂದುಗೊಂದುಗಳಲ್ಲಿ ನುಗ್ಗಬಹುದು. ಇದು ಅಲ್ಲಿ ನಾಗನ ನಡೆಯಿತ್ತು ಎಂಬುದರ ಸ್ಪಷ್ಟ ಸೂಚನೆ. ಆದರೆ ಈಗ ಅದಕ್ಕೆ ನಾವೇನೂ ಮಾಡಲಾರೆವು. ಸೆಲೆಬ್ರಿಟಿಗಳು ಯಾರೋ ಕಟ್ಟಿಸಿದ ದೊಡ್ಡ ದೊಡ್ಡ ಮನೆಗಳನ್ನು ಖರೀದಿಸುವುದು ಸಹಜ ತಾನೆ. ಹೀಗಾಗಿ ಎಲ್ಲ ಸೆಲೆಬ್ರಿಟಿಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ನಾಗದೋಷ ಇದ್ದದ್ದೇ. ಜ್ಯೋತಿಷಿಗಳು ಇದಕ್ಕೆ ಪರಿಹಾರವಾಗಿ ಸೂಚಿಸುವುದು ನಾಗಮಂಡಲ, ಢಕ್ಕೆಬಲಿ ಅಥವಾ ಆಶ್ಲೇಷ ಬಲಿಯನ್ನೇ.

ಧರ್ಮಸ್ಥಳ ಅಣ್ಣಪ್ಪ ದೈವದ ಬಗ್ಗೆ ನಿಮಗೆ ತಿಳಿದಿರದ ಇಂಟ್ರೆಸ್ಟಿಂಗ್ ವಿಚಾರಗಳಿವು..!.

ಇದರಿಂದ ಸದಾ ಕಾಲ ಕುಕ್ಕೆಯಲ್ಲಿ ಒಬ್ಬರಲ್ಲ, ಒಬ್ಬರು ಸೆಲೆಬ್ರಿಟಿಯನ್ನು ನೀವು ಕಾಣಬಹುದು. ದಕ್ಷಿಣ ಕನ್ನಡದ ಕುಡುಪು, ಚಿಕ್ಕಬಳ್ಳಾಪುರ ಸಮೀಪದ ಘಾಟಿ ಸುಬ್ರಹಣ್ಯ ಕೂಡ ಸರ್ಪಸಂಸ್ಕಾರಕ್ಕೆ ಪ್ರಸಿದ್ಧವಾದ ಕ್ಷೇತ್ರಗಳೇ ಆಗಿವೆ. ಆದರೆ ಕುಕ್ಕೆ ಸುಬ್ರಹ್ಮಣ್ಯದ ಕಾರ್ಣಿಕ, ಶಕ್ತಿಯ ಬಗ್ಗೆ ದೂರದ ಮುಂಬಯಿಯಲ್ಲಿ ಕೂತ ಜ್ಯೋತಿಷಿಗಳು ಕೂಡ ತಮ್ಮ ಸೆಲೆಬ್ರಿಟಿ ಗ್ರಾಹಕರ ಜೊತೆ ಮಾತಾಡುತ್ತಾರೆ.

PREV
click me!

Recommended Stories

ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?
ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ