ಕಾಳ ಸರ್ಪ ಎಂಬುದು ದೋಷವೇ, ಯೋಗವೇ...?

By Suvarna NewsFirst Published Jun 30, 2021, 1:42 PM IST
Highlights

ಕಾಳ ಸರ್ಪ ಯೋಗ ಅಥವಾ ಇದನ್ನು ಕಾಳ ಸರ್ಪ ದೋಷ ಎಂದು ಸಹ ಕರೆಯುತ್ತಾರೆ. ವ್ಯಕ್ತಿಯ ಜಾತಕದಲ್ಲಿ ಈ ಯೋಗವು ಕಂಡು ಬಂದಲ್ಲಿ ಅದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಳ್ಳಬೇಕಾಗುತ್ತದೆ. ಕಾಳ ಸರ್ಪ ದೋಷವು ರಾಹು ಮತ್ತು ಕೇತು ಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಕಾಳ ಸರ್ಪ ಯೋಗವನ್ನು ಹೊಂದಿರುವ ಎಲ್ಲ ವ್ಯಕ್ತಿಗಳು ಜೀವನದಲ್ಲಿ ಕಷ್ಟವನ್ನು ಅನುಭವಿಸುತ್ತಾರೆಂದಲ್ಲ, ವ್ಯಕ್ತಿಯ ಜಾತಕದಲ್ಲಿ ಈ ಗ್ರಹಗಳ ಸ್ಥಾನ ಮತ್ತು ಉಳಿದ ವಿಷಯಗಳನ್ನು ಆಧರಿಸಿರುತ್ತದೆ. ಹಾಗಾದರೆ ಕಾಳ ಸರ್ಪ ದೋಷವೇ? ಅಥವಾ ಯೋಗವೇ ಎಂಬುದನ್ನು ತಿಳಿಯೋಣ...
 

ಕಾಳ ಸರ್ಪ ಎಂಬ ಹೆಸರನ್ನು ಕೇಳಿ ಭಯ ಪಡದವರಿಲ್ಲ. ಕಾಳಸರ್ಪ ದೋಷವೆಂದು ಹಲವರು ಕರೆದರೆ, ಮತ್ತೆ ಕೆಲವರು ಕಾಳ ಸರ್ಪ ಯೋಗವೆಂದು ಹೇಳುತ್ತಾರೆ. ಹಾಗಾದರೆ ಇದು ದೋಷವೇ ಅಥವಾ ಯೋಗವೇ ಎಂಬುದನ್ನು ತಿಳಿಯುವುದು ಅವಶ್ಯಕ.

ಕಾಳ ಸರ್ಪ ಅಥವಾ ಕಾಲ ಸರ್ಪ ಇಲ್ಲಿ, ಕಾಲ ಎಂದರೆ ಸಮಯ ಮತ್ತು ಸರ್ಪ ಎಂದರೆ ಹಾವು ಎಂದರ್ಥ. ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಮತ್ತು ಕೇತುವನ್ನು ಸರೀಸೃಪವೆಂದು ಹೇಳುತ್ತಾರೆ. ರಾಹುವು ಹಾವಿನ ಬಾಯಿಯಾದರೆ,ಕೇತುವು ಹಾವಿನ ಉಳಿದ ಶರೀರವನ್ನು ಪ್ರತಿನಿಧಿಸುತ್ತದೆ. ಲಗ್ನವು ಸೇರಿದಂತೆ ಎಲ್ಲ ಗ್ರಹಗಳು ರಾಹು ಮತ್ತು ಕೇತುವಿನ ಪರಿಧಿಯಲ್ಲಿ ಬಂದಿರುವುದನ್ನು ಕಾಳ ಸರ್ಪ ಯೋಗ ಅಥವಾ ದೋಷವೆಂದು ಹೇಳಲಾಗುತ್ತದೆ.

ಇದನ್ನು ಓದಿ: ಈ ನಾಲ್ಕು ರಾಶಿಯವರು ಹೆಚ್ಚು ಸೂಕ್ಷ್ಮಮತಿಗಳು, ಯಾರಿವರು..? 

ಈ ಯೋಗದಲ್ಲಿ ಜನಿಸಿದ ವ್ಯಕ್ತಿಯು, ತನ್ನ ಪೂರ್ವ ಕರ್ಮಗಳಿಗೆ ಅನುಸಾರವಾಗಿ ಜೀವನದಲ್ಲಿ ಆಕಸ್ಮಿಕ ಜಯ ಅಥವಾ ಅಪಜಯವನ್ನು ಅನುಭವಿಸುತ್ತಾರೆ. ಅಷ್ಟೇ ಅಲ್ಲದೆ ಜೀವನದಲ್ಲಿ ಅನೇಕ ಏರು-ಪೇರುಗಳನ್ನು ಕಾಣುತ್ತಾ ಹೋಗುತ್ತಾರೆ.

ಗ್ರಹಗತಿಗಳು ಹೀಗಿದ್ದಾಗ –

ರಾಹು ಮತ್ತು ಕೇತು ಗ್ರಹಗಳ ಪರಿಧಿಯಿಂದ ಯಾವುದಾದರೂ ಗ್ರಹ ಹೊರಗಿದ್ದಲ್ಲಿ, ಈ ದೋಷವನ್ನು ನಾಶ ಮಾಡುತ್ತದೆ. ಹಾಗಾಗಿ ಅಂಥ ಸಂದರ್ಭದಲ್ಲಿ ಕಾಳ ಸರ್ಪ ದೋಷದ ಕೆಟ್ಟ ಪರಿಣಾಮಗಳು ವ್ಯಕ್ತಿಯನ್ನು ಬಾಧಿಸುವುದಿಲ್ಲ. ಅಷ್ಟೇ ಅಲ್ಲದೆ ಒಂದೊಮ್ಮೆ ಲಗ್ನವು ರಾಹು ಮತ್ತು ಕೇತುಗಳ ಪರಿಧಿಯಿಂದ ಹೊರಗಡೆ ಇದ್ದಾಗ ಕಾಳ ಸರ್ಪ ಯೋಗವು ಉಂಟಾಗುವುದಿಲ್ಲ.  
ಲಗ್ನದಲ್ಲಿ ಸ್ಥಿತವಾಗಿರುವ ಗ್ರಹವನ್ನು ರಾಹು ಅಥವಾ ಕೇತುಗ್ರಹವು ಸಂಧಿಸಿದಾಗ ಅಥವಾ ಏಳನೇ ಮನೆಯನ್ನು ಸೇರಿದಾಗ ಈ ಯೋಗದ ಕೆಟ್ಟ ಪರಿಣಾಮಗಳು ತಗ್ಗುತ್ತವೆ. ಅಷ್ಟೇ ಅಲ್ಲದೆ ಇದರ ಜೊತೆಗೆ ಬೇರೆ ಶುಭ ಯೋಗಗಳು ಸಹ ಜಾತಕದಲ್ಲಿ ಇದ್ದರೆ, ಪ್ರಾರಂಭದಲ್ಲಿ ಕೆಲವು ಕಷ್ಟದ ಸಮಯಗಳನ್ನು ಕಳೆದ ಮೇಲೆ, ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದಾಗಿರುತ್ತದೆ.  

ಇದನ್ನು ಓದಿ: ಈ ನಾಲ್ಕು ರಾಶಿಯವರು ಮಾತಿನಿಂದಲೇ ಮೋಡಿ ಮಾಡುವರು…! 

ಕಾಳ ಸರ್ಪ ದೋಷವೇ ಅಥವಾ ಯೋಗವೇ?

ಕಾಳ ಸರ್ಪ ದೋಷವೆಂದೇ ಹಲವರಿಂದ ಕರೆಯಲ್ಪಡುತ್ತದೆ. ಕಾರಣ ಇಷ್ಟೇ, ಸಾಮಾನ್ಯವಾಗಿ ಇದು ಕೆಟ್ಟ ಪರಿಣಾಮವನ್ನೇ ನೀಡುತ್ತದೆ. ಬೇರೆ ಎಲ್ಲ ಗ್ರಹಗಳು ರಾಹು ಮತ್ತು ಕೇತುವಿನ ಅಕ್ಷಾಂಶದೊಳಗೆ ಇದ್ದಾಗ, ಅವು ನಿಷ್ಪಲವನ್ನು ನೀಡುತ್ತವೆ ಅಥವಾ ಆ ಗ್ರಹಗಳಿಗೆ ಯಾವುದೇ ರೀತಿಯ ಪ್ರಭಾವವಿರುವುದಿಲ್ಲ. ಹಾಗಾಗಿ ಅಂಥ ಸಂದರ್ಭದಲ್ಲಿ ಗ್ರಹಗಳು ತಮ್ಮ ಶಕ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿ ಫಲವನ್ನು ನೀಡುವಲ್ಲಿ ವಿಫಲವಾಗುತ್ತವೆ. ಪರಿಣಾಮವಾಗಿ ಶ್ರಮಕ್ಕೆ ತಕ್ಕ ಫಲ ದೊರೆಯುವುದಿಲ್ಲ. ಹಾಗಾಗಿ ಇದನ್ನು ಕಾಳ ಸರ್ಪ ಯೋಗವೆಂದು ಕರೆಯುವುದಕ್ಕಿಂತ ಹೆಚ್ಚು ದೋಷವೆಂದೇ ಉಲ್ಲೇಖಿಸಲಾಗುತ್ತದೆ. ಹಾಗಂತ ಕಾಳ ಸರ್ಪ ಯೋಗವನ್ನು ಹೊಂದಿರುವ ಎಲ್ಲ ವ್ಯಕ್ತಿಗಳು ಜೀವನದಲ್ಲಿ ಕಷ್ಟವನ್ನು ಅನುಭವಿಸುವುದಿಲ್ಲ.

ಕಾಳ ಸರ್ಪ ಯೋಗದಲ್ಲಿ ಎರಡು ಬಗೆ:

- ಎಲ್ಲ ಗ್ರಹಗಳಿಗಿಂತ ಆರು ರಾಶಿಗಳ ಮುಂದೆ ರಾಹು ಸ್ಥಿತವಾಗಿದ್ದು, ಕೇತು ಆ ಎಲ್ಲ ಗ್ರಹಗಳ ಹಿಂದೆ ಸ್ಥಿತವಾಗಿದ್ದ ಸಂದರ್ಭದಲ್ಲಿ ಈ ಯೋಗವು ಹೆಚ್ಚು ತೊಂದರೆ ಕೊಡುವುದಿಲ್ಲ. ಅಂದರೆ ಕೆಟ್ಟ ಪರಿಣಾಮಗಳ ಪ್ರಭಾವ ತಗ್ಗಿರುತ್ತದೆ. ರಾಹು ಅಥವಾ ಕೇತುವು ತ್ರಿಕೋನಾಕೃತಿಯಲ್ಲಿ ಸ್ಥಿತವಾಗಿದ್ದಾಗ ಕಾಳ ಸರ್ಪ ಯೋಗವು ಪರಿಣಾಮಗಳು ಹೆಚ್ಚು ಉತ್ತಮವಾಗುತ್ತಾ ಬರುತ್ತದೆ. ರಾಹು ಗ್ರಹವು ಬಲವಾಗಿದ್ದು, ಎಲ್ಲ ಗ್ರಹಗಳು ರಾಹು ಗ್ರಹಕ್ಕೆ ಅಭಿಮುಖವಾಗಿ ಚಲಿಸುತ್ತಿದ್ದ ಸಂದರ್ಭದಲ್ಲಿ ಶುಭ ಪರಿಣಾಮಗಳು ಹೆಚ್ಚುತ್ತದೆ. 

ಇದನ್ನು ಓದಿ: ಗುರುವಾರ ಹೀಗೆ ಮಾಡಿ ಜೀವನ-ಉದ್ಯೋಗದಲ್ಲಿ ಯಶಸ್ಸು ಗಳಿಸಿ..! 

- ಕೇತು ಗ್ರಹವು ಎಲ್ಲ ಗ್ರಹಗಳಿಗಿಂತ ಆರು ರಾಶಿಗಳ ಮುಂದೆ ಸ್ಥಿತವಾಗಿದ್ದು, ರಾಹು ಗ್ರಹವು ಎಲ್ಲ ಗ್ರಹಗಳ ಹಿಂದೆ ಸ್ಥಿತವಾಗಿದ್ದರೆ ಅಶುಭ ಪರಿಣಾಮಗಳು ಉಂಟಾಗುತ್ತವೆ. ಅಷ್ಟೇ ಅಲ್ಲದೆ ರಾಹು ಅಥವಾ ಕೇತು ಗ್ರಹವು ಕೇಂದ್ರ ಭಾಗವನ್ನು ಆಕ್ರಮಿಸಿಕೊಂಡಲ್ಲಿ ಕೆಟ್ಟ ಪರಿಣಾಮಗಳು ಹೆಚ್ಚುತ್ತವೆ. ರಾಹು ಗ್ರಹವು ದುರ್ಬಲವಾಗಿದ್ದ ಸಂದರ್ಭದಲ್ಲಿ ಎಲ್ಲ ಗ್ರಹಗಳು ಅದರ ಬಳಿಗೆ ಚಲಿಸಿದಾಗ ಅಶುಭ ಪರಿಣಾಮಗಳು ಹೆಚ್ಚಾಗುತ್ತವೆ.

ರಾಹು ಮತ್ತು ಕೇತು ಗ್ರಹಗಳ ಫಲವು ವ್ಯಕ್ತಿಯ ಪೂರ್ವಜನ್ಮದ ಕರ್ಮವನ್ನು ಆಧರಿಸಿರುತ್ತದೆ. ಅಷ್ಟೇ ಅಲ್ಲದೆ ಪೂರ್ವ ಜನ್ಮದಲ್ಲಿ ಈಡೇರದೆ ಉಳಿದ ಆಸೆ-ಆಕಾಂಕ್ಷೆಗಳಿಗೆ ನೇರವಾಗಿ ಸಂಬಂಧಿಸಿರುತ್ತದೆ. ಹಾಗಾಗಿ ಎಲ್ಲ ಗ್ರಹಗಳು ಮತ್ತು ಲಗ್ನವು ರಾಹು ಮತ್ತು ಕೇತು ಗ್ರಹಗಳ ಅಧೀನದಲ್ಲಿದ್ದಾಗ, ವ್ಯಕ್ತಿಯ ಜೀವನವು ಪೂರ್ಣವಾಗಿ ಪೂರ್ವ ಜನ್ಮದ ಕರ್ಮಕ್ಕೆ ತಕ್ಕಂತೆ ನಡೆಯುತ್ತದೆ.

click me!