Pitru Pakshaದಲ್ಲಿ ಕಾಗೆಗಳಿಗೆ ಆಹಾರ ಹಾಕಿದ್ರೆ ಪಿತೃಗಳು ಸಂತುಷ್ಟರಾಗ್ತಾರಾ?

By Suvarna NewsFirst Published Sep 10, 2022, 10:02 AM IST
Highlights

ಜನರು ಪಿತೃ ಪಕ್ಷದಲ್ಲಿ ಕಾಗೆಗಳನ್ನು ಕರೆದು ಉಣಬಡಿಸುತ್ತಾರೆ. ಏಕೆಂದರೆ ಈ 15 ದಿನ ಕಾಗೆಗೆ ಆಹಾರ ನೀಡುವುದು ಧಾರ್ಮಿಕವಾಗಿ ವಿಶೇಷ ಮಹತ್ವ ಹೊಂದಿದೆ. ಪಿತೃ ಪಕ್ಷದಲ್ಲಿ ಕಾಗೆ ಏಕೆ ಮುಖ್ಯ ಎಂದು ತಿಳಿಯೋಣ.

ಹಿಂದೂ ಧರ್ಮಗ್ರಂಥಗಳು ಮತ್ತು ನಂಬಿಕೆಗಳ ಪ್ರಕಾರ, ಪಿತೃ ಪಕ್ಷಕ್ಕೆ ವಿಶೇಷ ಮಹತ್ವವಿದೆ. ಪಿತೃ ಪಕ್ಷವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಅಶ್ವಿನ್ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನದವರೆಗೆ ಆಚರಿಸಲಾಗುತ್ತದೆ. ಇದು ಒಟ್ಟು 16 ದಿನಗಳ ಅವಧಿಯಾಗಿದೆ. ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 25 ರಂದು ಕೊನೆಗೊಳ್ಳಲಿದೆ.  15 ದಿನಗಳ ಕಾಲ ನಡೆಯುವ ಪಿತೃ ಪಕ್ಷದಲ್ಲಿ ಪೂರ್ವಜರ ತರ್ಪಣ, ಶ್ರಾದ್ಧ ಮತ್ತು ಪಿಂಡದಾನದಂತಹ ಆಚರಣೆಗಳನ್ನು ಮಾಡಲಾಗುತ್ತದೆ. ಆದರೆ ಇದೆಲ್ಲದರ ಜೊತೆಗೆ ಪಿತೃ ಪಕ್ಷದಲ್ಲಿ ಕಾಗೆಗಳಿಗೆ ಆಹಾರ ನೀಡುವುದಕ್ಕೂ ವಿಶೇಷ ಮಹತ್ವವಿದೆ. 

ಸಾಮಾನ್ಯವಾಗಿ ಕಾಗೆ(Crow) ಬಂದರೆ ಶೂ ಶೂ ಎಂದು ಓಡಿಸುವ ಜನರು ಪಿತೃಪಕ್ಷದಲ್ಲಿ ಮಾತ್ರ ಕಾಗೆಗಳು ಬರಲಿ ಎಂದು ಕಾಯುತ್ತಾರೆ. ಅವನ್ನು ಕರೆದು ಊಟ ಹಾಕುತ್ತಾರೆ. ಕಾಗೆಗಳು ತಾವಿಟ್ಟ ಊಟ ತಿನ್ನಲಿಲ್ಲವೆಂದರೆ ಬೇಜಾರಾಗುತ್ತಾರೆ. ಅರೆ! ಇದೇನಿದು ವೈರುಧ್ಯ? ಪಿತೃಪಕ್ಷದಲ್ಲಿ ಕಾಗೆಗಳಿಗೆ ಇಷ್ಟೊಂದು ಮಹತ್ವ ಬರಲು ಕಾರಣವೇನು?

ಕಾಗೆ ಯಮನ ಸಂಕೇತ
ಈ 15 ದಿನಗಳಲ್ಲಿ ಜನರು ಕಾಗೆಗಳನ್ನು ಹುಡುಕಿ ಆಹಾರ ತಿನ್ನಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಛಾವಣಿಯ ಮೇಲೆ ಕಾಗೆಗಳಿಗಾಗಿ ಆಹಾರವಿಟ್ಟು ಕಾಯುತ್ತಾರೆ. ಪಿತೃ ಪಕ್ಷದಲ್ಲಿ ಕಾಗೆಗಳಿಗೆ ಏಕೆ ಪ್ರಾಮುಖ್ಯತೆ(significance) ಮತ್ತು ಶ್ರೀರಾಮನಿಗೂ ಕಾಗೆಗಳಿಗೂ ಇರುವ ಸಂಬಂಧವೇನು ಎಂಬುದನ್ನು ತಿಳಿದುಕೊಳ್ಳೋಣ.

ಪಿತೃ ಪಕ್ಷ 2022ರಲ್ಲಿ ಈ 5 ಆಹಾರಗಳಿಂದ ದೂರವಿರಿ..

ಪಿತೃಗಳಿಗೆ ತೃಪ್ತಿ ಸಿಗುತ್ತದೆ
ಹಿಂದೂ ಧರ್ಮ ಮತ್ತು ಧರ್ಮಗ್ರಂಥಗಳ ಪ್ರಕಾರ, ಪಿತೃಪಕ್ಷದ ಸಮಯದಲ್ಲಿ ಕಾಗೆಗೆ ಆಹಾರವನ್ನು ನೀಡುವುದು ಪೂರ್ವಜರಿಗೆ(Pitru) ತೃಪ್ತಿಯನ್ನು ನೀಡುತ್ತದೆ. ಕಾಗೆಗೆ ಆಹಾರ ನೀಡದೆ ಪೂರ್ವಜರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಕಾಗೆಗಳನ್ನು ಪೂರ್ವಜರ ರೂಪವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಕಾಗೆಗಳು ಸಂತೃಪ್ತಿಗೊಂಡರೆ ನಮ್ಮ ಪೂರ್ವಜರೂ ಸಂತೃಪ್ತರಾದರು ಎಂಬ ನಂಬಿಕೆ ಇದೆ.

ಪಂಚಬಲಿ ಸೇವೆ
ಪಿತೃ ಪಕ್ಷದಲ್ಲಿ, ಜನರು ಪೂರ್ವಜರಿಗೆ ಶ್ರಾದ್ಧ ಮತ್ತು ತರ್ಪಣವನ್ನು ಮಾಡುತ್ತಾರೆ. ಶ್ರಾದ್ಧದ ನಂತರ ಪಂಚಬಲಿ ಹಬ್ಬದೂಟ ಮಾಡಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅಂದರೆ, ಶ್ರಾದ್ಧ ಪೂಜೆಯ ನಂತರ ಹಸು, ನಾಯಿ, ಕಾಗೆ, ದೇವತೆ ಮತ್ತು ಇರುವೆ(ants) ಇವುಗಳಿಗೆ ಆಹಾರ ನೀಡಬೇಕು. ಇದಕ್ಕೆ ಪಂಚಬಲಿಗೆ ಆಹಾರವನ್ನು ನೀಡುವುದು ಎನ್ನಲಾಗುತ್ತದೆ.

ಕಾಗೆ ಯಮನ ಸಂಕೇತ
ಹಿಂದೂ ನಂಬಿಕೆಗಳ ಪ್ರಕಾರ, ಕಾಗೆಯನ್ನು ಯಮನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕಾಗೆಗಳಿಗೆ ತುಂಬಾ ಶಕ್ತಿಯಿದೆ. ಅವು ಮಾನವರಿಗೆ ಶುಭ ಮತ್ತು ಅಶುಭ ಘಟನೆಗಳ ಮೊದಲ ಚಿಹ್ನೆಗಳನ್ನು ನೀಡುತ್ತವೆ. ಈ ನಂಬಿಕೆಯನ್ನು ಗಮನದಲ್ಲಿಟ್ಟುಕೊಂಡು, ಪಿತೃ ಪಕ್ಷದ ಸಮಯದಲ್ಲಿ ಕಾಗೆಗೆ ಶ್ರಾದ್ಧದ ಒಂದು ಭಾಗವನ್ನು ನೀಡಲಾಗುತ್ತದೆ. ಪೂರ್ವಜರನ್ನು ಪೂಜಿಸಿದ ನಂತರ ನೀವು ಕೊಟ್ಟ ಆಹಾರವನ್ನು ಕಾಗೆ ತೆಗೆದುಕೊಂಡರೆ ನಿಮ್ಮ ಪೂರ್ವಜರು ನಿಮ್ಮ ಪೂಜೆಯಿಂದ ಸಂತೋಷಪಟ್ಟಿದ್ದಾರೆ ಎಂಬ ನಂಬಿಕೆ ಇದೆ. ಕಾಗೆ ತಿನ್ನದಿದ್ದರೆ, ಪೂರ್ವಜರು ನಿಮ್ಮ ಮೇಲೆ ಕೋಪಗೊಂಡಿದ್ದಾರೆ ಎನ್ನಲಾಗುತ್ತದೆ.

ಮಹಾಲಯ ಶ್ರಾದ್ಧ - ಯಾರು, ಯಾವಾಗ, ಹೇಗೆ ಮಾಡಬೇಕು? ಇಲ್ಲಿದೆ ವಿವರ

ರಾಮನ ಜೊತೆ ಕಾಗೆಯ ಸಂಬಂಧ
ರಾಮನ ಕಥೆ ಅನಂತ ಎಂದು ಹೇಳಲಾಗುತ್ತದೆ. ಕೆಲವು ರಾಮಾಯಣ(Ramayan)ದ ಮೂಲ ಭಾಗದಲ್ಲಿವೆ ಮತ್ತು ಕೆಲವು ಪ್ರಕ್ಷೇಪಿತ ಕಥೆಗಳು. ಅಂತಹ ಒಂದು ಕಥೆಯ ಪ್ರಕಾರ, ಒಮ್ಮೆ ಕಾಗೆಯು ತಾಯಿ ಸೀತೆಯ ಪಾದಗಳನ್ನು ಚುಚ್ಚಿತು. ಇದರಿಂದ ತಾಯಿಯ ಕಾಲಿಗೆ ಗಾಯವಾಯಿತು. ತನ್ನ ಹೆಂಡತಿ ಕಷ್ಟದಲ್ಲಿರುವುದನ್ನು ಕಂಡು ರಾಮನಿಗೆ ಕೋಪ ಬಂತು. ಅವನು ಬಾಣವನ್ನು ಗುರಿಯಿಟ್ಟು ಕಾಗೆಯ ಕಣ್ಣನ್ನು ತೆಗೆದನು. ಅದರ ನಂತರ ಕಾಗೆಯು ರಾಮನಲ್ಲಿ ಕ್ಷಮೆ ಕೇಳಿತು. ಇದರ ನಂತರ ಸಮಾಧಾನಗೊಂಡ ಶ್ರೀರಾಮನು ಕಾಗೆಗೆ, ನಿನಗೆ ಆಹಾರ ನೀಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಎಂದು ಆಶೀರ್ವದಿಸಿದರು. ಅಂದಿನಿಂದ ಪಿತೃ ಪಕ್ಷದಲ್ಲಿ ಕಾಗೆಗಳ ಪ್ರಾಮುಖ್ಯತೆ ಹೆಚ್ಚಾಯಿತು ಎಂದು ಹೇಳಲಾಗುತ್ತದೆ.
 

click me!