ಶಿವನ ದಯೆ ನಿಮಗಾಗಬೇಕೆಂದರೆ ಶಿವ ಪುರಾಣದ ಈ ಮಾತುಗಳ ಪಾಲಿಸಿ!

By Suvarna NewsFirst Published Jun 28, 2020, 2:16 PM IST
Highlights

ಶಿವ ಶಿವ ಎಂದರೆ ಭಯವಿಲ್ಲ ಶಿವನ ನಂಬಿದರೆ ಕಷ್ಟವಿಲ್ಲ. ಹೌದು, ಕೇಳಿದ್ದನ್ನು ಕೊಡುವಾತ ಶಿವ. ರಾವಣ ದುಷ್ಟ ಎಂದು ಗೊತ್ತಿದ್ದರೂ ಭಕ್ತಿಯಿಂದ ಕೇಳಿದಾಗ ತನ್ನ ಪ್ರಾಣವಾಗಿರುವ ಆತ್ಮಲಿಂಗವನ್ನೇ ಶಿವ ಕೊಡಲಿಲ್ಲವೇ? ಹಾಗೆ ನಮಗೆ ಕಷ್ಟಗಳು ಬರುವುದು ಸಹಜ. ಕಷ್ಟವನ್ನು ನಿವಾರಿಸು ಎಂದು ಭಕ್ತಿಯಿಂದ ಅವನ ಬಳಿ ಪ್ರಾರ್ಥಿಸಿದರೆ ಕೊಡದೇ ಇರುವನೇ? ಆದರೆ, ಶಿವನನ್ನು ಈ ಕಲಿಯುಗದಲ್ಲಿ ಒಲಿಸಿಕೊಳ್ಳುವುದು ಹೇಗೆಂಬ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ, ಈ ಬಗ್ಗೆ ಶಿವಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಹಾಗಾದರೆ ಏನು, ಎತ್ತ ಎಂಬ ಬಗ್ಗೆ ನೋಡೋಣ…

ಮಹಾದೇವನ ಮಹಿಮೆ ಅಪಾರ. ಭಕ್ತಿಯಿಂದ ಬೇಡಿಕೊಂಡರೆ ಎಲ್ಲವನ್ನೂ ನೀಡುವ ದೇವರಲ್ಲಿ ಶಿವ ಅಗ್ರಗಣ್ಯನಾಗಿದ್ದಾನೆ. ನೀವೇನು ಅಷ್ಟೈಶ್ವರ್ಯವನ್ನು ತಂದು ಇಟ್ಟರೂ ಒಲಿಯದ ಶಿವನನ್ನು ಕೇವಲ ಒಂದು ಬಿಲ್ವಪತ್ರೆಯಿಂದ ಒಲಿಸಿಕೊಳ್ಳಬಹುದು ಎಂಬ ಮಾತಿದೆ. ಆದರೆ, ಶಿವನನ್ನು ಹೇಗೆ ಒಲಿಸಿಕೊಳ್ಳಬೇಕು ಎಂಬುದು ಬಹುತೇಕರಿಗೆ ಗೊತ್ತಿರುವುದಿಲ್ಲ. ಶಿವನ ಅನುಗ್ರಹ ಪಡೆಯುವುದು ಹೇಗೆಂಬ ಬಗ್ಗೆ ಶಿವಪುರಾಣದಲ್ಲಿ ಉಲ್ಲೇಖಿಸಲಾಗಿದೆ. 

ಜಪ, ವ್ರತ, ತಪ, ಮೋಕ್ಷ, ಜ್ಞಾನ ಮತ್ತು ಫಲಗಳ ಬಗ್ಗೆ ಶಿವಪುರಾಣದಲ್ಲಿ ಹೇಳಲಾಗಿದ್ದು, ಅದರಲ್ಲಿ ಹೇಳಲಾದ ಮುಖ್ಯವಾದ ಕೆಲವೇ ಕೆಲವನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಇದು ನಿಮಗೆ ಸಹಾಯವಾಗಲಿದ್ದು, ಅನುಕೂಲ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಶಿವಪುರಾಣದಲ್ಲಿ ಏನನ್ನು ಹೇಳಲಾಗಿದೆ..? ಎಂಬ ಬಗ್ಗೆ ನೋಡೋಣ.



ಧನ ಸಫಲತೆಗೆ ಹೀಗೆ ಮಾಡಿ
ದುಡ್ಡನ್ನು ಉಳಿಸಿಕೊಳ್ಳುವುದು ಒಂದೆಡೆಯಾದರೆ ಅವುಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿಕೊಳ್ಳಬೇಕು. ಮೊದಲನೇ ಭಾಗವನ್ನು ಧನವೃದ್ಧಿಗೆ ಎಂದು ಮೀಸಲಿಡಬೇಕು. ಎರಡನೇ ಭಾಗವನ್ನು ಉಪಭೋಗಕ್ಕೆಂದು ಹಾಗೂ ಮೂರನೆಯದ್ದನ್ನು ಧರ್ಮ ಕಾರ್ಯಗಳಿಗೆ ಬಳಸಬೇಕು. ಈ ನೀತಿಯನ್ನು ಅನುಸರಿಸಿದವರು ಜೀವನದಲ್ಲಿ ಬಹುಬೇಗ ಸಫಲತೆಯನ್ನು ಕಾಣುತ್ತಾರೆ. 

ಇದನ್ನು ಓದಿ: ಮನೆ ಖರೀದಿಸುವಾಗ ಈ ಅಂಶ ಗಮನಿಸಿ, ವಾಸ್ತುದೋಷ ತೊಲಗಿಸಿ!

ಸಿಡುಕು ಬಿಡಿ, ವಿವೇಕ ಪಡಿಯಿರಿ
ಯಾವತ್ತೂ ಮನುಷ್ಯ ಸಿಟ್ಟು, ಕೋಪಗಳನ್ನು ಮಾಡಿಕೊಳ್ಳಬಾರದು. ಅದು ಆತನ ವಿನಾಶವನ್ನು ತೋರಿಸುತ್ತದೆ ಎಂದು ಹೇಳಲಾಗುತ್ತದೆ. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ದುಡಿಕಿದರೆ ಏಳು ಜನ್ಮ ಎತ್ತಿ ಬಂದರೂ ಸರಿಪಡಿಸಿಕೊಳ್ಳಲಾಗದು ಎಂದು ದೊಡ್ಡವರು ಹೇಳುತ್ತಾರೆ. ಹಾಗಾಗಿ ಸಿಟ್ಟು ಮಾಡಿಕೊಳ್ಳಬಾರದು. ಸಿಟ್ಟು ಮಾಡಿಕೊಂಡರೆ ವಿವೇಕವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ ಜೀವನದಲ್ಲಿ ತೊಂದರೆಗಳು ಎದುರಾಗುತ್ತವೆ.

ಸತ್ಯವೇ ಧರ್ಮ
ಸದಾ ಸತ್ಯದ ಮಾರ್ಗದಲ್ಲಿಯೇ ನಡೆಯಬೇಕು. ಈ ಮೂಲಕ ಧರ್ಮವನ್ನು ಕಾಪಾಡಬೇಕು. ಮನುಷ್ಯ ಯಾವಾಗಲೂ ಧರ್ಮವನ್ನು ಬಿಟ್ಟು ನಡೆಯಬಾರದು. ಮನಸ್ಸಿನಲ್ಲಿ ಸದಾ ಆ ಭಾವನೆಯನ್ನಿಟ್ಟುಕೊಂಡಿರಬೇಕು. ಹಾಗಾದಲ್ಲಿ ಜೀವನದಲ್ಲಿ ತಪ್ಪು ಮಾಡುವುದು ತಪ್ಪಲಿದೆ. ಒಂದು ವೇಳೆ ತಪ್ಪು ನಡೆದರೂ ಆ ತಪ್ಪಿನ ಸಂಪೂರ್ಣ ಹೊಣೆ ಹೊರಬೇಕು. ಧರ್ಮದ ಮಾರ್ಗದಲ್ಲಿ ನಡೆಯುವವರು ತಪ್ಪು ಮಾಡುವ ಸಂಭವವೂ ಕಡಿಮೆ. 

ಇದನ್ನು ಓದಿ: ಈ ಸಂಕೇತಗಳು ಗೋಚರಿಸಿದರೆ ದೇವರ ಕೃಪೆ ನಿಮ್ಮಮೇಲಾಗಿದೆ ಎಂದರ್ಥ!

ಆಸೆಗಳ ಮೇಲೆ ನಿಯಂತ್ರಣ ಬೇಕು
ಮನುಷ್ಯ ಎಂದ ಮೇಲೆ ಆಸೆಗಳು ಸಹಜ. ಆದರೆ, ಆಸೆಗಳ ಮೇಲೆ ನಿಯಂತ್ರಣವನ್ನಿಟ್ಟುಕೊಳ್ಳುವುದನ್ನು ಕಲಿಯಬೇಕು. ಆಸೆ ಹೆಚ್ಚುತ್ತಾ ಹೋದರೆ ಇತ್ತ ಸುಖ ಇದ್ದರೂ ಇಲ್ಲವಾಗುತ್ತದೆ. ಜೊತೆಗೆ ಸಂತೃಪ್ತಿಯೂ ದೊರೆಯುವುದಿಲ್ಲ. ಯಾರಿಗೆ ಆಸೆ ಇರುವುದಿಲ್ಲವೋ ಅಂಥವರ ಜೀವನ ಸುಖಮಯವಾಗಿರುತ್ತದೆ. 

ಮೋಹಕ್ಕೆ ಬೀಳಬಾರದು
ಯಾವುದೇ ವಸ್ತುವಿನ ಮೇಲೆ ಇಲ್ಲವೇ ವ್ಯಕ್ತಿಗಳ ಮೇಲೆ ಮೋಹವನ್ನು ಹೊಂದಬಾರದು. ಹೆಚ್ಚು ಹೆಚ್ಚು ಮೋಹವನ್ನು ಇಟ್ಟುಕೊಂಡಷ್ಟು ಜೀವನದಲ್ಲಿ ಮುಂದುಬರಲು ಆಗದು. ಇದರಿಂದ ಸಫಲತೆಯನ್ನು ಹೊಂದುವುದು ಕಷ್ಟವಾಗುತ್ತದೆ. 

ಇದನ್ನು ಓದಿ: ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ವಿಚಾರ, ಕಲ್ಪನೆಗಳ ನಿಯಂತ್ರಣವಿರಲಿ
ನಮ್ಮ ವಿಚಾರ ಹಾಗೂ ಕಲ್ಪನೆಗಳನ್ನು ಮನಬಂದಂತೆ ಹರಿಯಬಿಡಬಾರದು. ಅವುಗಳಿಗೂ ನಾವು ನಿಯಂತ್ರಣವನ್ನಿಟ್ಟುಕೊಳ್ಳಬೇಕು. ಶಿವಪುರಾಣದಲ್ಲಿ ಹೇಳಿರುವ ಪ್ರಕಾರ, ನಾವು ಯಾವ ತರ ಯೋಚನೆ ಮಾಡುತ್ತೇವೆಯೋ ಅದೇ ರೀತಿಯ ಪರಿಸ್ಥಿತಿಯಲ್ಲಿ ನಾವು ಸಿಲುಕಿಕೊಳ್ಳುತ್ತೇವೆ. ಹಾಗಾಗಿ ನಾವು ಸದಾ ಧನಾತ್ಮಕ ಚಿಂತನೆಯನ್ನೇ ಮಾಡಬೇಕು. ಜೊತೆಗೆ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಜಪ-ತಪಗಳನ್ನು ಇಟ್ಟುಕೊಳ್ಳಬೇಕು. 

ಮೋಕ್ಷ ಪಡೆಯಲು ಹೀಗೆ ಮಾಡಿ
ಶಿವಪುರಾಣದಲ್ಲಿ ಹೇಳಿರುವ ಪ್ರಕಾರ, ಯಾರು ಶಿವರಾತ್ರಿ ವ್ರತವನ್ನು ಮಾಡುತ್ತಾರೋ, ಯಾರು ಮಹಾದೇವನ ಪೂಜೆ, ಅರ್ಚನೆ ಮಾಡುತ್ತಾರೋ ಅಂಥವರು ಮೋಕ್ಷವನ್ನು ಪಡೆಯುತ್ತಾರೆ. ಮನುಷ್ಯನ ಪುಣ್ಯ ಕರ್ಮವೇ ಮೋಕ್ಷವನ್ನು ಪಡೆಯುವ ಮಾರ್ಗವಾಗಿದೆ. 

click me!