ಮೌನಿ ಅಮಾವಾಸ್ಯೆಯಂದು ರಾಶಿಯನುಸಾರ ಹೀಗೆ ಮಾಡಿ…

By Suvarna NewsFirst Published Feb 8, 2021, 12:08 PM IST
Highlights

ಮೌನಿ ಅಮಾವಾಸ್ಯೆಯ ದಿನ ಮೌನವಾಗಿದ್ದು ವ್ರತವನ್ನು ಆಚರಣೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆಂದು ಹೇಳಲಾಗುತ್ತದೆ. ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಶುಭ ಫಲಪ್ರಾಪ್ತವಾಗುತ್ತದೆ. ಅಷ್ಟೇ ಅಲ್ಲದೆ ಈ ದಿನದ ಮಹೋದಯ ಯೋಗದಲ್ಲಿ ವಿಷ್ಣುವನ್ನು ಆರಾಧಿಸುವುದು ಮತ್ತು ಎಳ್ಳನ್ನು ದಾನವಾಗಿ ನೀಡುವುದರಿಂದ ಪಾಪಗಳು ಪರಿಹಾರವಾಗುತ್ತದೆ. ಹಾಗಾದರೆ ಮೌನಿ ಅಮಾವಾಸ್ಯೆಯ ದಿನದಂದು ರಾಶಿ ಪ್ರಕಾರ ಏನು ಮಾಡಿದರೆ ಶುಭ ಎಂಬುದನ್ನು ತಿಳಿಯೋಣ...

ಹಿಂದೂ ಪಂಚಾಂಗದ ಪ್ರಕಾರ ಮಾಘ ಮಾಸದ ಕೃಷ್ಣಪಕ್ಷದ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆಯೆಂದು ಕರೆಯಲಾಗುತ್ತದೆ. ಧಾರ್ಮಿಕವಾಗಿ ಈ ದಿನ ಮೌನವಾಗಿದ್ದು ಪವಿತ್ರವಾದ ನದಿಯಲ್ಲಿ ಸ್ನಾನ ಮಾಡಿ, ಉಪವಾಸವಿದ್ದು, ದಾನಾದಿಗಳನ್ನು ಮಾಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಇದೇ 11 ಫೆಬ್ರವರಿ 2021ರಂದು ಮೌನಿ ಅಮಾವಾಸ್ಯೆ ಆಚರಣೆ ಮಾಡಲಾಗುತ್ತದೆ.

ಈ ಬಾರಿ ಮೌನಿ ಅಮಾವಾಸ್ಯೆಯ ದಿನ ಶ್ರವಣ ನಕ್ಷತ್ರದಲ್ಲಿ ಚಂದ್ರ ಮತ್ತು ಆರು ಗ್ರಹಗಳು ಮಕರ ರಾಶಿಯಲ್ಲಿ ಒಟ್ಟಿಗೆ ಸ್ಥಿತರಾಗುವ ಕಾರಣ ಇದನ್ನು ಮಹೋದಯ ಯೋಗವೆಂದು ಕರೆಯಲಾಗುತ್ತದೆ. ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಶುಭ ಫಲಪ್ರಾಪ್ತವಾಗುತ್ತದೆ. ಮೌನಿ ಅಮಾವಾಸ್ಯೆಯು ಅತ್ಯಂತ ಮಹತ್ವದ ದಿನವಾಗಿದ್ದು ಈ ದಿನ ದಾನ-ಧರ್ಮಗಳನ್ನು ಮಾಡುವುದರಿಂದ ಪಾಪಗಳೆಲ್ಲ ನಾಶವಾಗಿ, ಮನೋಕಾಮನೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಮೌನಿ ಅಮಾವಾಸ್ಯೆಯಂದು ರಾಶಿಯನುಸಾರ ಕೆಲವು ಕಾರ್ಯಗಳನ್ನು ಮಾಡಿದಲ್ಲಿ ವಿಶೇಷ ಫಲ ಪ್ರಾಪ್ತಿಯಾಗುತ್ತದೆ.
ಇಷ್ಟಾರ್ಥ ಸಿದ್ಧಿಗೆ ರಾಶಿಯನುಸಾರ ಹೀಗೆ ಮಾಡಿ...

ಮೇಷ ರಾಶಿ
ಮೌನಿ ಅಮಾವಾಸ್ಯೆಯಂದು ಮೇಷ ರಾಶಿಯವರು ಭೈರವ ದೇವಸ್ಥಾನಕ್ಕೆ ಹೋಗಿ  ಎಳ್ಳೆಣ್ಣೆ ದೀಪವನ್ನು ಹಚ್ಚಬೇಕು. ಅಶ್ವತ್ಥ ಮರಕ್ಕೆ ಜಲವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ  ಜೀವನದಲ್ಲಿ  ಖುಷಿ ಮತ್ತು ನೆಮ್ಮದಿ ಸಿಗುತ್ತದೆ.

ಇದನ್ನು ಓದಿ:  ಬುಧಗ್ರಹದ ಈ ಗ್ರಹಚಾರದಿಂದ ಪಾರಾಗಲು ಇಲ್ಲಿವೆ ಪರಿಹಾರಗಳು...

ವೃಷಭ ರಾಶಿ
ಮೌನಿ ಅಮಾವಾಸ್ಯೆಯಂದು ಈ ರಾಶಿಯವರು ಸುಗಂಧ ದ್ರವ್ಯವನ್ನು ಬಳಸುವುದು ಉತ್ತಮ. ಕನ್ಯೆಯರಿಗೆ  ಸಿಹಿಯನ್ನು ನೀಡುವುದರಿಂದ ಕಾರ್ಯಕ್ಷೇತ್ರದಲ್ಲಿ ಸಫಲತೆಯನ್ನು ಹೊಂದಬಹುದಾಗಿದೆ.


ಮಿಥುನ ರಾಶಿ
ಈ ರಾಶಿಯವರು ಮೌನಿ ಅಮಾವಾಸ್ಯೆಯ ದಿನ ತಾಯಿ ಅಥವಾ ತಂಗಿಗೆ ಸಮಾನರಾದವರಿಗೆ ಹಸಿರು ವಸ್ತ್ರವನ್ನು  ದಾನವಾಗಿ ನೀಡಬೇಕು ಮತ್ತು ಅಗತ್ಯವಿರುವವರಿಗೆ ಹೆಸರು ಕಾಳನ್ನು ದಾನ ಮಾಡಬೇಕು. ಸಾಧ್ಯವಾದರೆ ಈ ದಿನ ಕಿನ್ನರರ ಆಶೀರ್ವಾದವನ್ನು ಪಡೆಯುವುದು ಉತ್ತಮ. 

ಕರ್ಕಾಟಕ ರಾಶಿ
ಈ ರಾಶಿಯವರು ಮೌನಿ ಅಮಾವಾಸ್ಯೆಯ ದಿನ ಬಡವರಿಗೆ ಅಥವಾ ಅಸಹಾಯಕರಿಗೆ ಬಿಳಿ ವಸ್ತ್ರವನ್ನು ದಾನವಾಗಿ ನೀಡಬೇಕು. ಹೀಗೆ ಮಾಡುವುದರಿಂದ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ. ಹಾಗು ವಿಷ್ಣುವಿನ ಆರಾಧನೆಯನ್ನು ಮಾಡಿದರೆ ಒಳಿತಾಗುತ್ತದೆ.

ಸಿಂಹ ರಾಶಿ
ಈ ರಾಶಿಯವರು ಮೌನಿ ಅಮಾವಾಸ್ಯೆಯಂದು ಸೂರ್ಯೋದಯದ ಸಮಯದಲ್ಲಿ ಸೂರ್ಯದೇವನಿಗೆ ಜಲವನ್ನು ಅರ್ಪಿಸಬೇಕು. ಅಗತ್ಯವಿರುವವರಿಗೆ ಗೋಧಿಯನ್ನು ದಾನವಾಗಿ ನೀಡಬೇಕು. ಇದರಿಂದ ಗೌರವ ಮತ್ತು ಪ್ರತಿಷ್ಠೆ ಹೆಚ್ಚುತ್ತದೆ.

ಕನ್ಯಾ ರಾಶಿ
ಮಾಘ ಅಮಾವಾಸ್ಯೆಯ ದಿನ ಪ್ರಾಣಿಗಳಿಗೆ ಹಸಿರು ಬಣ್ಣದ ಮೇವನ್ನು ಕೊಡಬೇಕು. ಇದರಿಂದ ಜೀವನದಲ್ಲಿ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಮನೆಯಲ್ಲಿ ಸಂತೋಷ, ಸಮೃದ್ಧಿ ಉಂಟಾಗುತ್ತದೆ.

ಇದನ್ನು ಓದಿ: ಸಕಾರಾತ್ಮಕ ಶಕ್ತಿ ಹೆಚ್ಚಲು ಮನೆಯ ಶೃಂಗಾರ ಹೀಗಿರಲಿ..!

ತುಲಾ ರಾಶಿ
ಮೌನಿ ಅಮಾವಾಸ್ಯೆಯ ದಿನ ಕನ್ಯೆಯರಿಗೆ ಕೀರನ್ನು ದಾನವಾಗಿ ನೀಡಬೇಕು. ಇದರಿಂದ  ಐಶ್ವರ್ಯ ಸಿಗುವುದಲ್ಲದೇ ಭೌತಿಕ ಸುಖ ವೃದ್ಧಿಸುತ್ತದೆ. ಅಷ್ಟೇ ಅಲ್ಲದೆ ಅಗತ್ಯವಿರುವವರಿಗೆ ವಸ್ತ್ರ ಮತ್ತು ಅಕ್ಕಿಯನ್ನು ದಾನವಾಗಿ ನೀಡಿದರೆ ಒಳಿತಾಗುತ್ತದೆ.


ವೃಶ್ಚಿಕ ರಾಶಿ
ಈ ರಾಶಿಯವರು ಮೌನಿ ಅಮಾವಾಸ್ಯೆಯ ದಿನ ಬೆಲ್ಲ ಮತ್ತು ಬೇಳೆಯನ್ನು ಮಾರುತಿ ರೂಪವಾದ ವಾನರರಿಗೆ ನೀಡಬೇಕು. ಇದರಿಂದ ಶತ್ರು ನಾಶವಾಗುವುದಲ್ಲದೆ, ಭಯ ದೂರವಾಗುತ್ತದೆ.

ಧನು ರಾಶಿ
ಮೌನಿ ಅಮಾವಾಸ್ಯೆಯಂದು ಈ ರಾಶಿಯವರು ದೇವಸ್ಥಾನಕ್ಕೆ ಹೋಗಿ ಬೇಳೆಯನ್ನು ದಾನವಾಗಿ ನೀಡಬೇಕು. ಹಣೆಗೆ ಹಳದಿ ಚಂದನ ಮತ್ತು ಅರಿಶಿನದ ತಿಲಕವನ್ನು ಇಟ್ಟುಕೊಳ್ಳಬೇಕು. ಇದರಿಂದ ಸಕಲ ಸುಖವು ಪ್ರಾಪ್ತವಾಗುತ್ತವೆ. 

ಮಕರ ರಾಶಿ
ಮಾಘ ಮಾಸದ ಅಮಾವಾಸ್ಯೆಯ ದಿನ ಬಡವರು ಮತ್ತು ನಿರ್ಗತಿಕರಿಗೆ ಕಂಬಳಿಯನ್ನು ದಾನವಾಗಿ ನೀಡಬೇಕು. ಹೀಗೆ ಮಾಡುವುದರಿಂದ ಕಾರ್ಯಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಕುಂಭ ರಾಶಿ
ಈ ರಾಶಿಯವರು ಮೌನಿ ಅಮಾವಾಸ್ಯೆಯ ದಿನ ಕಪ್ಪು ಉದ್ದನ್ನು ದಾನ ಮಾಡಬೇಕು. ಅಷ್ಟೇ ಅಲ್ಲದೆ ಅಗತ್ಯವಿರುವವರಿಗೆ ಕಪ್ಪು ವಸ್ತ್ರವನ್ನು ದಾನವಾಗಿ ನೀಡಬೇಕು. ಇದರಿಂದ ವ್ಯಾಪಾರ-ವ್ಯವಹಾರಗಳಲ್ಲಿ ಎದುರಾಗುವ ತೊಂದರೆಗಳು ದೂರವಾಗುತ್ತವೆ.

ಇದನ್ನು ಓದಿ: ವಿವಿಧ ಪ್ರಕಾರದ ಜಪಮಾಲೆಯಿಂದ ಧನ-ಧಾನ್ಯ ವೃದ್ಧಿ...‍! 

ಮೀನ ರಾಶಿ
ಈ ರಾಶಿಯವರು ಮೌನಿ ಅಮಾವಾಸ್ಯೆಯ ದಿನ ಅರಿಶಿನವನ್ನು ಮತ್ತು ಸಿಹಿಯನ್ನು ದಾನವಾಗಿ ನೀಡಬೇಕು. ಇದರಿಂದ ಹಣದ ಸಮಸ್ಯೆಯು ಎದುರಾಗುವುದಿಲ್ಲವೆಂದು ಹೇಳಲಾಗುತ್ತದೆ.

click me!