
ಧಾರ್ (ಮೇ.22) ಮಧ್ಯಪ್ರದೇಶದ ವಿವಾದಿತ ಭೋಜಶಾಲ ಸಂಕೀರ್ಣ ಕುರಿತು ಇತ್ತೀಚೆಗೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಭೋಜಶಾಲ ಸಂಕೀರ್ಣ ಹಿಂದೂ ಮಂದಿರವಾಗಿದೆ. ವಾಗ್ದೇವಿ ಸರಸ್ವತಿ ಮಂದಿರ ಇದಾಗಿತ್ತು. ಇಲ್ಲಿ ನಮಾಜ್ ಮಾಡಲು ಅವಕಾಶವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಈ ತೀರ್ಪಿನ ಬಳಿಕ ಬರೋಬ್ಬರಿ 23 ವರ್ಷಗಳ ಬಳಿಕ ಭೋಜಶಾಲ ಸಂಕೀರ್ಣದಲ್ಲಿ ಶುಕ್ರವಾರದ ಮಹಾ ಆರತಿ ಬೆಳಗಿದೆ. ಇದರಿಂದ ಕೆರಳಿರುವ ಮುಸ್ಲಿಂ ಸಮುದಾಯ ತಮ್ಮ ಮನೆ ಮನೆಗಳಲ್ಲಿ ಕಪ್ಪು ಪಟ್ಟಿ ಧರಿಸಿ ನಮಾಜ್ ಮಾಡಿದ್ದಾರೆ.
ಶುಕ್ರವಾರದ ವಿಶೇಷ ಪೂಜೆಗೆ ಹಿಂದೂಗಳು ಭೋಜಶಾಲ ಮಂದಿರಕ್ಕೆ ಆಗಮಿಸಿದ್ದಾರೆ. ವಿಶೇಷ ಆರತಿ ಮೂಲಕ ಪೂಜೆ ನಡೆದಿದೆ. ಶುಕ್ರವಾರದ ಪೂಜೆ ಅದ್ಧೂರಿಯಾಗಿ ನಡೆದಿದೆ. ವಾಗ್ದೇವಿ ಸರಸ್ವತಿ ದೇವಿಗೆ ಪೂಜೆಗಳು ನಡೆದಿದೆ. ನರೆದಿದ್ದ ಹಿಂದೂಗಳು ಎರಡು ಶತಮಾನಗಳ ಬಳಿಕ ಶುಕ್ರವಾರದ ಆರತಿ ಪೂಜೆ ನೆರವೇರಿಸಿ ಸಂಭ್ರಮಿಸಿದ್ದಾರೆ.
ಹೈಕೋರ್ಟ್ ತೀರ್ಪಿನಿಂದ ಕೆರಳಿರುವ ಮುಸ್ಲಿಮ್ ಸಮುದಾಯ ಮನೆ ಮನೆಯಲ್ಲಿ ಕಪ್ಪು ಪಟ್ಟಿ ಧರಿಸಿ ಶುಕ್ರವಾರದ ನಮಜಾ ಮಾಡಿದ್ದಾರೆ. 2003ರಿಂದ ಹೈಕೋರ್ಟ್ ತೀರ್ಪಿನವರಗೆ ಶುಕ್ರವಾರ ಭೋಜಶಾಲದಲ್ಲಿ ನಮಾಜ್ ಮಾಡಲಾಗುತ್ತಿತ್ತು. ಆದರೆ ಹೈಕೋರ್ಟ್ ಇದು ಸಾಧ್ಯವಿಲ್ಲ. ಸರಸ್ವತಿ ದೇವಿ ದೇವಸ್ಥಾನದಲ್ಲಿ ನಮಾಜ್ಗೆ ಅವಕಾಶವಿಲ್ಲ ಎಂದಿತ್ತು. ಹೀಗಾಗಿ ಅನಿವಾರ್ಯವಾಗಿ ಮುಸ್ಲಿಮರು ಪ್ರತಿಭಟನಾ ರೂಪಕವಾಗಿ ಕಪ್ಪು ಪಟ್ಟಿ ಧರಿಸಿ ನಮಾಜ್ ಮಾಡಿದ್ದಾರೆ.
ಹಿಂದೂಗಳಿಗೆ ಪೂಜೆ ಮಾಡಲು ಹಾಗೂ ಮುಸ್ಲಿಮರಿಗೆ ನಮಾಜ್ ಮಾಡಲು ಇದೇ ಭೋಜಶಾಲ ಸಂಕೀರ್ಣದಲ್ಲಿ ಅವಕಾಶವಿತ್ತು. ಆದರೆ ಹಿಂದೂಗಳ ಹಲವು ವಿಶೇಷ ಹಬ್ಬಗಳು, ಪೂಜೆಗಳು ಶುಕ್ರವಾರ ಬಂದಾಗ ತೀವ್ರ ಜಟಾಪಟಿಗೆ ಕಾರಣಾಗುತ್ತಿತ್ತು. ಹೀಗಾಗಿ 2003ರಲ್ಲಿ ಭಾರತೀಯ ಪುರಾತತ್ವ ಇಲಾಖೆ ಮಂಗಳವಾರ ಹಿಂದೂಗಳಿಗೆ ಹಾಗೂ ಶುಕ್ರವಾರ ಮುಸ್ಲಮರಿಗೆ ನಮಾಜ್ ಮಾಡಲು ಸೂಚಿಸಿತ್ತು. ಆದರೆ ವಿವಾದಿತ ಸ್ಥಳದಲ್ಲಿ ಕೋರ್ಟ್ ಸೂಚನೆಯಂತೆ ಸಮೀಕ್ಷೆ ಹಾಗೂ ಅಧ್ಯಯನ ನಡೆಸಿದ ಪುರಾತತ್ವ ಇಲಾಖೆ ಕೋರ್ಟಗೆ ವರದಿ ನೀಡಿತ್ತು. ಪುರಾತತ್ವ ಇಲಾಖೆ ವರದಿ, ವೈಜ್ಞಾನಿಕ ಆಧಾರ, ಇತಿಹಾಸಗಳನ್ನು ಕ್ರೋಢೀಕರಿಸಿ ಭೋಜಶಾಲ ಹಿಂದೂ ಮಂದಿರ ಎಂದು ಹೈಕೋರ್ಟ್ ಘೋಷಿಸಿತ್ತು.