
ಜುನಾಘಡ (ಮೇ.15) ಧಾರ್ಮಿಕ ಕಾರ್ಯಕ್ರಮದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಶ್ರೀಮದ್ ಭಗವತ್ ಕಠಾ ಸುಶ್ರಾವ್ಯವಾಗಿ ಹಾಡಿದ ಜನಪದ ಗಾಯಕನಿಗೆ ಭಕ್ತರು ಹಣದ ಸುರಿಮಳೆ ಮಾಡಿದ್ದಾರೆ. ಗೋಣಿ ಚೀಲದಲ್ಲಿ ತಂದು ಹಣ ಸುರಿದಿದ್ದಾರೆ. ಭಕ್ತರು ಸುರಿದ ನೋಟುಗಳ ಕಂತೆಯಲ್ಲಿ ಗಾಯಕ ಮುಳುಗಿ ಹೋಗಿದ್ದಾನೆ. ಆದರೂ ತನ್ನ ಶ್ರೀಮದ್ ಭಗವತ್ ಕಥಾ ನಿಲ್ಲಿಸದೆ ಹಾಡಿದ ಘಟನೆ ಗುಜರಾತ್ನ ಜುನಾಘಡ ಜಿಲ್ಲೆಯಲ್ಲಿ ನಡೆದಿದೆ.
ಜುನಾಘಡದಲ್ಲಿ ಆಯೋಜಿಸಲಾಗಿದ್ದ ಒಂದು ವಾರದ ಶ್ರೀಮದ್ ಭಗವತ್ ಕಥಾ ಪುರಾಣ ಕಾವ್ಯ ಕಾರ್ಯಕ್ರಮದಲ್ಲಿ ಜನಪದ ಗಾಯಕ ಜಿಗ್ನೇಶ್ ಕವಿರಾಜ್ ಪುರಾಣ ಕಾವ್ಯಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಜಿಗ್ನೇಶ್ ಕವಿರಾಜ್ ಕಂಠಕ್ಕೆ ಭಕ್ತರು ಭಕ್ತಿ ಪರಕಾಷ್ಠೆಯಲ್ಲಿ ಮುಳುಗಿದ್ದಾರೆ. ಈ ವೇಳೆ ಭಕ್ತರು ಹಣದ ಸುರಿಮಳೆ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಕಂಬಾಲಿಯಾ ಗ್ರಾಮದಲ್ಲಿ ಅಹಿರ್ ಸಮಾಜ್ ಹಾಗೂ ಪ್ರಯಾಗರಾಜ್ ಗ್ರೂಪ್ ಒಂದು ವಾರಗಳ ಶ್ರೀಮದ್ ಭಗವತ್ ಕಥಾ ಕಾರ್ಯಕ್ರಮ ಆಯೋಸಿತ್ತು. ಈ ಕಾರ್ಯಕ್ರಮದಲ್ಲಿ ಪ್ರತಿ ದಿನ ಶ್ರೀಕೃಷ್ಣನ ಭಜನೆ, ಪುರಾಣ ಕಾವ್ಯಗಳನ್ನು ಹಾಡಲಾಗಿತ್ತು. ಈ ಪೈಕಿ ಒಂದು ದಿನ ಸಂಜೆ ಜನಪದ ಗಾಯಕ ಜಿಗ್ನೇಶ್ ಕವಿರಾಜ್ ಹಾಗೂ ತಂಡ ಶ್ರೀಕೃಷ್ಣನ ಜನಪದ ಗೀತೆಯ, ಪುರಾಣ ಕಾವ್ಯಗಳನ್ನು ಹಾಡಿತ್ತು. ಗುಜರಾತ್ನ ಜನಪ್ರಿಯ ಆಧ್ಯಾತ್ಮಿಕ ಡೈರೋ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಈ ವೇಳೆ ಜಿಗ್ನೇಶ್ ಕವಿರಾಜ್ ಸತತ ಒಂದೂವರೆ ಗಂಟೆ ನಿರಂತರವಾಗಿ ಶ್ರೀಕೃಷ್ಣನ ಲೀಲೆಗಳನ್ನು ತಮ್ಮ ಸುಮಧುರ ಕಂಠದಿಂದ ಹಾಡಿದ್ದರು. ಭಕ್ತರು ಭಕ್ತಿಯಲ್ಲಿ ಮುಳಿಗಿದ್ದರು. ಜೊತೆಗೆ ಹಲವು ಭಕ್ತರು ಕುಣಿದು ಭಕ್ತಿ ಭಾವಪ್ರದರ್ಶಿಸಿದ್ದರು.
ಅಂತಿಮ ಹಂತ ತಲುಪುತ್ತಿದ್ದಂತೆ ಭಕ್ತರು ಜಿಗ್ನೇಶ್ ಕವಿರಾಜ್ ಮೇಲೆ ಹಣ ತಂದು ಸುರಿದಿದ್ದಾರೆ. ಒಬ್ಬೊಬ್ಬ ಭಕ್ತರು ಗೋಣಿ ಚೀಲದಲ್ಲಿ ಹಣ ತಂದು ಸುರಿದಿದ್ದಾರೆ. ನೋಟುಗಳಿಂದ ಜಿಗ್ನೇಶ್ ಕವಿರಾಜ್ ಮುಳುಗಿ ಹೋಗಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಇದೇ ವೇಳೆ ಕೆಲವರು ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ವಿದೇಶಿ ವಿನಿಮಯ ಸಮಸ್ಯೆ, ತೈಲ ಬೆಲೆ ಏರಿಕೆ, ಹಣದುಬ್ಬರ ಸಮಸ್ಯೆಗಳ ನಡುವೆ ಹಣದ ಸುರಿಮಳೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಆದರೆ ಅಸಲಿ ಕಾರಣ ತಿಳಿದರು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಹಿರ್ ಸಮಾಜ ಬಾಲಕಿಯ ಹಾಸ್ಟೆಲ್ ನಿರ್ಮಾಣ ಮಾಡುತ್ತಿದೆ. ಸಮುದಾಯದ ಬಡ ಮಕ್ಕಳಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಮಾಡುತ್ತಿದೆ. ಇದಕ್ಕಾಗಿ ದೇಣಿಗೆ ಸಂಗ್ರಹಿಸುತ್ತಿದೆ. ಜಿಗ್ನೇಶ್ ಕವಿರಾಜ್ ಕೂಡ ಇದಕ್ಕೆ ಕೈಜೋಡಿಸಿದ್ದಾರೆ. ಇದರ ಅಂಗವಾಗಿ ಜಿಗ್ನೇಶ್ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಭಕ್ತರು ಹಣದ ಸುರಿಮಳೆ ಮಾಡಿದ್ದಾರೆ. ಇಲ್ಲಿ ಸಂಗ್ರವಾದ ಹಣವನ್ನು ಅಹಿರ್ ಸಮಾಜದ ಬಾಲಕಿಯ ಹಾಸ್ಟೆಲ್ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿದೆ.