2021ರಲ್ಲಿ ಧನ ಸಮೃದ್ಧಿಯಾಗಲು ರಾಶಿಯನುಸಾರ ಹೀಗೆ ಮಾಡಿ..!

By Suvarna NewsFirst Published Jan 4, 2021, 7:28 PM IST
Highlights

2021ರ ಹೊಸ ವರ್ಷ ಬಂದಾಗಿದೆ. ಹಳೆಯ ವರ್ಷದ ಚಿಂತೆಯಿಂದ ಹೊರಬಂದು, ಆಗ ಆಗಿರುವ ನಷ್ಟಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂಬುದು ಎಲ್ಲರ ಗುರಿಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ರಾಶಿಯನುಸಾರ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಆರ್ಥಿಕವಾಗಿ ಶಕ್ತಿವಂತರಾಗಬಹುದು. ಹಾಗಾದರೆ ಯಾವ ರಾಶಿಯವರು ಏನು ಮಾಡಬೇಕು ಎಂಬುದನ್ನು ನೋಡೋಣ…

2020ರ ಕರಾಳ ವರ್ಷವನ್ನು ದಾಟಿ 2021ರ ಭರವಸೆಯ ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ವರ್ಷ ಏನಾದರೂ ಹೊಸತನವನ್ನು ಮಾಡಬೇಕೆಂಬ ಪ್ರಯತ್ನ ಎಲ್ಲರದ್ದೂ ಆಗಿರುತ್ತದೆ. ಈ ಸಂದರ್ಭದಲ್ಲಿ ವರ್ಷವಿಡೀ ಆನಂದವಾಗಿರಲು ಕೆಲವು ಸುಲಭ ಉಪಾಯಗಳನ್ನು ನಾವು ಅನುಸರಿಸಿದರೆ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ. ಹೀಗಾಗಿ ಆಯಾ ರಾಶಿಗಳವರು ಏನೇನು ಮಾಡಬೇಕು,,,? ಹೇಗೆ ಮಾಡಿದರೆ ಧನ ಸಂಪತ್ತು ವೃದ್ಧಿಯಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ…

ಮೇಷ ರಾಶಿ
ಈ ರಾಶಿಯವರು ಆರ್ಥಿಕವಾಗಿ ಮತ್ತಷ್ಟು ಸಬಲರಾಗಲು ಪ್ರತಿದಿನ ಸೂರ್ಯದೇವನ ದರ್ಶನ ಮಾಡಬೇಕು. ಇದಲ್ಲದೆ, ತಿಂಗಳ ಯಾವುದಾದರೂ ಶುಭದಿನದಿಂದ ವಿಷ್ಣುವಿಗೆ ಬೆಲ್ಲದ ಕೀರನ್ನು ನೈವೇದ್ಯ ಮಾಡಬೇಕು. 

ವೃಷಭ ರಾಶಿ
ಈ ಹೊಸ ವರ್ಷದಲ್ಲಿ ಆರ್ಥಿಕ ಚೇತರಿಕೆ ಕಾಣಲು ಪ್ರತಿ ದಿನ ಮಹಾದೇವನಾದ ಈಶ್ವರನ ದರ್ಶನ ಮಾಡಬೇಕು. ಜೊತೆಗೆ ಶುಕ್ರವಾರದಂದು ಶಿವಲಿಂಗಕ್ಕೆ ಇಡಿ ಅಕ್ಕಿಯನ್ನು ಸಮರ್ಪಿಸಬೇಕು. 

ಇದನ್ನು ಓದಿ: 2021ರ ಸುಖ-ಸಮೃದ್ಧಿಗಾಗಿ ಗ್ರಹದೋಷ ನಿವಾರಣಾ ಮಂತ್ರಗಳು! 

ಮಿಥುನ ರಾಶಿ
ಪ್ರತಿ ದಿನ ಲಕ್ಷ್ಮೀ ಮತ್ತು ದುರ್ಗೆಯ ದರ್ಶನವನ್ನು ಪಡೆಯಬೇಕು. ಜೊತೆಗೆ ಗಣೇಶನಿಗೆ ಕೆಂಪು ಬಣ್ಣದ ಪುಷ್ಪವನ್ನು ಅರ್ಪಿಸಬೇಕು. ಇದರಿಂದ ಅನೇಕ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.



ಕರ್ಕಾಟಕ ರಾಶಿ
ಈ ರಾಶಿಯವರು ಪ್ರತಿ ದಿನ ಭಗವಾನ್ ಶ್ರೀ ಕೃಷ್ಣನನ್ನು ದರ್ಶನ ಮಾಡಿದರೆ ಆರ್ಥಿಕವಾಗಿ ಸಮೃದ್ಧಿಯನ್ನು ಹೊಂದಬಹುದಾಗಿದೆ. ಜೊತೆಗೆ ಶ್ರೀಕೃಷ್ಣನಿಗೆ ಕಲ್ಲುಸಕ್ಕರೆ, ಬೆಣ್ಣೆ ಹಾಗೂ ತುಳಸಿಯನ್ನು ಅರ್ಪಿಸಿ ನೈವೇದ್ಯ ಮಾಡಬೇಕು. 

ಸಿಂಹ ರಾಶಿ
ಈ ರಾಶಿಯವರಿಗೆ 2021 ಶುಭವಾಗಲಿದ್ದು, ಉತ್ತಮ ಯಶಸ್ಸು ಸಿಗಲಿದೆ. ಪ್ರತಿ ನಿತ್ಯ ಸೂರ್ಯನಾರಾಯಣನ ದರ್ಶನವನ್ನು ಪಡೆಯಬೇಕು. ಜೊತೆಗೆ ತಿಂಗಳಲ್ಲಿ ಯಾವುದಾದರೂ ಒಂದು ದಿನ ಕೆಂಪು ಗುಲಾಬಿಯನ್ನು ಆಂಜನೇಯನ ಪಾದಗಳಿಗೆ ಅರ್ಪಿಸಿ ಅದನ್ನು ತಮ್ಮ ಪರ್ಸ್ ನಲ್ಲಿ ಇಟ್ಟುಕೊಂಡರೆ ಶುಭವಾಗಲಿದೆ. 

ಕನ್ಯಾ ರಾಶಿ
ಈ ವರ್ಷ ಕನ್ಯಾ ರಾಶಿಯವರಿಗೆ ಧನ ವೃದ್ಧಿಯಾಗಲು ಪ್ರತಿ ದಿನ ಬೆಳಗ್ಗೆ ಗಣೇಶನ ದರ್ಶನ ಪಡೆಯಬೇಕು. ಜೊತೆಗೆ ದುರ್ಗಾ ದೇವಿಗೆ ಅಕ್ಕಿಯನ್ನು ಅರ್ಪಿಸಬೇಕು. 

ತುಲಾ ರಾಶಿ
2021ರ ಹೊಸ ವರ್ಷದಲ್ಲಿ ಈ ರಾಶಿಯವರು ಆರ್ಥಿಕ ವೃದ್ಧಿಯನ್ನು ಕಾಣಲು ಲಕ್ಷ್ಮೀ ನಾರಾಯಣನಿಗೆ ಕಮಲದ ಹೂವನ್ನು ಅರ್ಪಿಸಬೇಕು. ಜೊತೆಗೆ ವಾರದ ಶುಭದಿನವನ್ನು ನೋಡಿಕೊಂಡು ಭಗವಾನ್ ಆಂಜನೇಯನಿಗೆ 5 ಬೂಂದಿ ಲಾಡನ್ನು ಅರ್ಪಿಸಬೇಕು. 

ಇದನ್ನು ಓದಿ: ನಿಮ್ಮ ಕಾಲ್ಬೆರಳು ಹೀಗಿದ್ದರೆ, ಭವಿಷ್ಯ ಚೆನ್ನಾಗಿರುತ್ತೆ…!!! 

ವೃಶ್ಚಿಕ ರಾಶಿ
ಆರ್ಥಿಕ ಸಬಲತೆಯನ್ನು ಪಡೆಯಬೇಕೆಂದರೆ ಈ ರಾಶಿಯವರು ವಿಷ್ಣುವಿನ ದೇವಸ್ಥಾನದಲ್ಲಿ ತುಳಸಿ ಗಿಡವನ್ನು ನೆಡಬೇಕು. ಇನ್ನು ವ್ಯಾಪಾರ - ವ್ಯವಹಾರವನ್ನು ಮಾಡುವಂತಹ ವ್ಯಕ್ತಿಗಳು ರಾಮನ ಸ್ತುತಿಯನ್ನು ಮಾಡಬೇಕು. 

ಧನು ರಾಶಿ
2021ರಲ್ಲಿ ಧನ ಸಮೃದ್ಧಿಯನ್ನು ಹೊಂದಲು ಈ ಧನು ರಾಶಿಯವರು ಪ್ರತಿ ನಿತ್ಯ ಪ್ರಾತಃಕಾಲದಲ್ಲಿ ಭಗವಾನ್ ಆಂಜನೇಯನ ದರ್ಶನವನ್ನು ಪಡೆಯಬೇಕು. ಜೊತೆಗೆ ಗುರುವಾರದಂದು ಅಶ್ವತ್ಥ್ ಮರದ ಕೆಳಗೆ ಸಿಹಿಯನ್ನು ಇಡಬೇಕು. ಅಲ್ಲದೆ, ಕೇಸರಿ ತಿಲಕವನ್ನು ಇಟ್ಟುಕೊಳ್ಳಬೇಕು.

ಮಕರ ರಾಶಿ
2021ರಲ್ಲಿ ಈ ರಾಶಿಯವರು ಗಾಯತ್ರಿ ಮಂತ್ರವನ್ನು ಜಪಿಸಬೇಕು. ಹೀಗೆ ಮಾಡಿದಲ್ಲಿ ಶುಭ ಫಲವನ್ನು ಪಡೆಯುವುದಲ್ಲದೆ, ಆರ್ಥಿಕ ಸಮೃದ್ಧಿಯನ್ನು ಸಹ ಹೊಂದಬಹುದಾಗಿದೆ. ಜೊತೆಗೆ ಗಾಯತ್ರಿ ದೇವಿಗೆ ಪ್ರತಿ ನಿತ್ಯ ಶ್ವೇತವರ್ಣದ ಪುಷ್ಪವನ್ನು ಅರ್ಪಿಸಬೇಕು.

ಕುಂಭ ರಾಶಿ
ಈ ವರ್ಷದಲ್ಲಿ ಆರ್ಥಿಕ ಯಶಸ್ಸನ್ನು ಕಾಣಲು ಈ ರಾಶಿಯವರು ಶನಿವಾರದಂದು ಅಶ್ವತ್ಥ ಮರದ ಕೆಳಗೆ ತುಪ್ಪದ ದೀಪವನ್ನು ಹಚ್ಚಬೇಕು. ಮತ್ತು ಯಾವುದಾದರೂ ಶುಭ ಕಾರ್ಯ ನಡೆಸುವ ಮೊದಲು ಆಂಜನೇಯನಿಗೆ ವೀಳ್ಯದೆಲೆಯನ್ನು ಅರ್ಪಿಸಬೇಕು.

ಇದನ್ನು ಓದಿ: ಈ ಐದು ರಾಶಿಯವರು ಕೊನೇ ತನಕ ಪ್ರೀತಿಯನ್ನು ನಿಭಾಯಿಸಬಲ್ಲರು!. 

ಮೀನ ರಾಶಿ
ಮೀನ ರಾಶಿಯವರು ಪ್ರತಿ ಗುರುವಾರ ಶ್ರೀಹರಿಗೆ ಕೇಸರಿಯ ತಿಲಕವನ್ನು ಇಟ್ಟು, ಅದೇ ತಿಲಕವನ್ನು ಹಣೆಗೆ ಹಚ್ಚಿಕೊಳ್ಳಬೇಕು. ಜೊತೆಗೆ ಆರ್ಥಿಕ ಸಬಲತೆ ಪಡೆಯಲು ಬೂದುಗುಂಬಳಕಾಯಿಯನ್ನು ಅರ್ಪಿಸಬೇಕು. 

click me!