Chanakya Niti: ಚಾಣಕ್ಯ ಹೇಳಿದ ಈ ನಾಲ್ಕು ವಿಷಯ ಪಾಲಿಸಿದರೆ ಎಂದೂ ಹಣದ ಕೊರತೆ ಇರದು!

By Suvarna NewsFirst Published May 5, 2022, 12:01 PM IST
Highlights

ತಮ್ಮ ಕುಟಿಲ ತಂತ್ರಗಳಿಗಾಗಿ ಕೌಟಿಲ್ಯ ಎಂದೇ ಹೆಸರಾಗಿದ್ದ ಆಚಾರ್ಯ ಚಾಣಕ್ಯರು ಉತ್ತಮ ರಾಜತಾಂತ್ರಿಕರು. ಹಣದ ವಿಷಯದಲ್ಲಿ ಅವರು ನೀಡಿರುವ ಈ ನಾಲ್ಕು ಸಲಹೆಗಳನ್ನು ಪಾಲಿಸಿದರೆ ಬದುಕಿನಲ್ಲಿ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ. 

ಆಚಾರ್ಯ ಚಾಣಕ್ಯರು ರಾಜ ವಿಷ್ಣುಗುಪ್ತನ ಆಸ್ಥಾನದ ಅತ್ಯುತ್ತಮ ರಾಜತಾಂತ್ರಿಕರು. ಚಾಣಕ್ಯ ನೀತಿ(Chanakya Niti)ಯಲ್ಲಿ ಜೀವನದ ಸಾಕಷ್ಟು ವಲಯಗಳನ್ನು ಅತ್ಯುತ್ತಮವಾಗಿ ಕಳೆಯಲು ಬೇಕಾದ ಸಲಹೆಗಳಿವೆ. ಬಹುತೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ. ಕೃಷಿ, ರಾಜಕೀಯ(politics), ಆರ್ಥಿಕತೆ ವಿಷಯಗಳಿಗೆ ಬಂದಾಗ ಚಾಣಕ್ಯ ಅತ್ಯುತ್ತಮ ಜ್ಞಾನಿ. ಜೀವನದಲ್ಲಿ ಹಣದ ಸಮಸ್ಯೆ ಇಲ್ಲವೆಂದರೆ ಜೀವನ ಅರ್ಧಕ್ಕರ್ಧ ಸುಗಮವಾಗುತ್ತದೆ. ಆದರೆ, ಬಹುತೇಕ ಬಾರಿ ಹಣದ ಸಮಸ್ಯೆಗಳಿಗೆ ನಮ್ಮದೇ ಬೇಜವಾಬ್ದಾರಿ ಕಾರಣ ಎನ್ನುತ್ತಾರೆ ಚಾಣಕ್ಯ. ಅಂಥ ಬೇಜವಾಬ್ದಾರಿಗಳನ್ನು ಸರಿ ಪಡಿಸಿಕೊಂಡರೆ, ಹಣವನ್ನು ಸರಿಯಾಗಿ ನಡೆಸಿಕೊಂಡರೆ ಜೀವನದಲ್ಲಿ ಎಂದಿಗೂ ಹಣ(money)ಕ್ಕೆ ಕೊರತೆ ಬಾರದು. ಹಣದ ವಿಷಯದಲ್ಲಿ ಚಾಣಕ್ಯರು ಹೇಳಿದ ಮುತ್ತಿನಂಥ ಸಲಹೆಗಳನ್ನು ನೋಡೋಣ.

ಮನೆಯ ಪರಿಸ್ಥಿತಿ
ಮನೆಯಲ್ಲಿ ಸದಾ ಜಗಳ, ಚಿಂತೆಗಳು, ಅಳು, ಆತಂಕ ತುಂಬಿದ್ದರೆ ಅಂಥ ಮನೆಗೆ ಹೋಗಬೇಕೆಂದು ಯಾರಿಗೆ ತಾನೇ ಅನಿಸುತ್ತದೆ? ನಮಗೇ ಅನಿಸದಿದ್ದ ಮೇಲೆ ಲಕ್ಷ್ಮೀದೇವಿ(Lakshmidevi)ಗೆ ತಾನೇ ಹೇಗನಿಸಬೇಕು? ಅಂಥ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಮನೆಯಲ್ಲಿ ಸದಾ ದುಡ್ಡಿರಬೇಕೆಂದರೆ ಮೊದಲು ಕುಟುಂಬದಲ್ಲಿ ಸಮನ್ವಯ ಸಾಧಿಸಿ. ಮತ್ತೊಬ್ಬರ ಮನಸ್ಸಿಗೆ ನೋವು ಕೊಡುವುದು ಬಿಡಿ. ಯಾವ ಮನೆಯಲ್ಲಿ ಒಗ್ಗಟ್ಟಿರುತ್ತದೆಯೋ, ಯಾವ ಮನೆ ಸಂತೋಷದಿಂದ ತುಂಬಿರುತ್ತದೆಯೋ ಅಲ್ಲಿ ಲಕ್ಷ್ಮೀ ನೆಲೆಸುತ್ತಾಳೆ. 

ಹಣದ ಮೇಲಿನ ಮನೋಭಾವ
ಚಾಣಕ್ಯರ ಪ್ರಕಾರ ಯಾರೊಬ್ಬರೂ ಹಣವನ್ನು ಅತಿಯಾಗಿ ತಲೆಗೆ ತುಂಬಿಸಿಕೊಳ್ಳಬಾರದು. ಕೈಗೆ ಹಣ ಬರುತ್ತಿದ್ದಂತೆಯೇ ಅಹಂಕಾರವೂ ಹೆಚ್ಚಿತೆಂದರೆ ಮುಗಿಯಿತು.. ಆ ಹಣ ಹೆಚ್ಚು ಕಾಲ ನಿಲ್ಲುವುದಿಲ್ಲ. ಹಣ ಸಿಕ್ಕ ಕೂಡಲೇ ಇತರರನ್ನು ಕಡೆಗಣಿಸುವುದು, ಭೂಮಿಯ ಮೇಲೆ ಕಾಲಿಲ್ಲದವರ ಹಾಗೆ ನಡೆದುಕೊಳ್ಳುವುದು, ಮತ್ತೊಬ್ಬರನ್ನು ಅವಮಾನಿಸುವ ಮಾತುಗಳನ್ನಾಡುವುದು, ಮದದ ಮಾತುಗಳನ್ನಾಡುವುದು ಮಾಡಿದರೆ ಅಂಥವರೊಂದಿಗೆ ಹೆಚ್ಚು ಸಮಯ ಹಣ ನಿಲ್ಲುವುದಿಲ್ಲ. ಎಷ್ಟೇ ಹಣ ಬಂದರೂ ವಿನಯವಂತಿಕೆಯಿಂದ ಇದ್ದರೆ, ಪ್ರತಿಯೊಬ್ಬರನ್ನೂ ಗೌರವದಿಂದ ನಡೆಸಿಕೊಂಡರೆ ಅಂಥವರೊಂದಿಗೆ ಹಣ ಉಳಿಯುತ್ತದೆ. 

ಸ್ಪರ್ಧೆ ಯಾವ್ದೇ ಇರಲಿ, ಗೆಲ್ಲೋ ಕುದುರೆಗಳು ಈ ಐದು ರಾಶಿಯವರು!

ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ
ನಾವು ಸಮಸ್ಯೆಯಲ್ಲಿದ್ದಾಗ ಹಣವು ಆಪ್ತಮಿತ್ರನ ಹಾಗೆ ವರ್ತಿಸುತ್ತದೆ. ನಮ್ಮ ಬಳಿ ಹೆಚ್ಚು ಹಣವಿದ್ದಾಗ ಅದನ್ನು ದಾನ ಕಾರ್ಯಗಳಿಗೆ ಬಳಸಬೇಕು. ಹೂಡಿಕೆ ಮಾಡಬೇಕು ಮತ್ತು ಅತ್ಯಗತ್ಯ ವಿಷಯಗಳಿಗಾಗಿ ಬಳಸಬೇಕು. ಬಹಳ ಆಸ್ತಿ ಮಾಡಬೇಕೆಂದು ಹಣವನ್ನು ಬಚ್ಚಿಟ್ಟು ಕೂಡಿಡುತ್ತಲೇ ಹೋದರೆ ಅದು ನಿಮ್ಮ ಪಾಲಿಗೆ ಅಗತ್ಯದಲ್ಲಿ ದಕ್ಕುವುದಿಲ್ಲ. ಹಾಗಂಥ ನೀರಿನಂತೆ ಖರ್ಚು ಮಾಡಿದರೂ ಅದು ಉಳಿಯುವುದಿಲ್ಲ. ಹಣವನ್ನು ಗೌರವದಿಂದ ನಡೆಸಿಕೊಳ್ಳಬೇಕು. ಸರಿಯಾದ ಸಮಯಕ್ಕೆ, ನಿಜವಾದ ಅಗತ್ಯಕ್ಕೆ ಹಣದ ಬಳಕೆಯಾಗಬೇಕು. 

ಬೇಕಾಬಿಟ್ಟಿ ಖರ್ಚು
ಬಹಳಷ್ಟು ಜನ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹಣವನ್ನು ದುಂದು ವೆಚ್ಚ ಮಾಡುತ್ತಾರೆ. ಕಂಡಿದ್ದೆಲ್ಲ ಬೇಕು ಎಂಬ ಮನೋಭಾವನೆ ಹೊಂದುತ್ತಿದ್ದಾರೆ. ಆನ್‌ಲೈನ್ ವೆಬ್‌ಸೈಟ್‌ಗಳ ಆಮಿಷಕ್ಕೆ ಬಲಿಯಾಗಿ ಬೇಡದ ವಸ್ತುಗಳ ಮೇಲೆ ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಿದ್ದಾರೆ. ಅಷ್ಟು ಸಾಲದೆ ತಮ್ಮ ಚಟಗಳಿಗೆ, ನಾಲಿಗೆ ಚಪಲಕ್ಕೆ, ತೋರುಗಾಣಿಕೆಗಾಗಿ ಸಾಕಷ್ಟು ಹಣ ವ್ಯಯಿಸುತ್ತಾರೆ. ಹೀಗೆ ಹಣ ವ್ಯರ್ಥ ಮಾಡುವವರ ಜೊತೆ ಲಕ್ಷ್ಮೀದೇವಿ ನಿಲ್ಲುವುದಿಲ್ಲ ಎನ್ನುತ್ತಾರೆ ಚಾಣಕ್ಯ. ಹಣವನ್ನು ಅಗತ್ಯವಿದ್ದಾಗ ಮಾತ್ರ ಬಳಸಬೇಕು. 

ಈ ಐದು ರಾಶಿಗಳಿಗೆ ಹಳೆಯ ಪ್ರೇಮಿಯನ್ನು ಮರೆಯೋದು ಸುಲಭವಲ್ಲ!

ಗಳಿಕೆ ವಿಧಾನ
ಬಹಳ ಬಾರಿ ಜನರು ಕಷ್ಟ ಪಟ್ಟು ಸಂಪಾದಿಸಿದಾಗ ಬಹಳ ಕಡಿಮೆ ಆದಾಯ ಬರುತ್ತಿರುತ್ತದೆ. ಆಗ ಅಡ್ಡ ದಾರಿಗಳನ್ನು ಹಿಡಿಯಲು ಪ್ರಯತ್ನಿಸುತ್ತಾರೆ. ಅಡ್ಡ ದಾರಿಗಳಲ್ಲಿ ಒಂದೇ ಬಾರಿಗೆ ಹೆಚ್ಚು ಹಣ ಸಿಗಬಹುದು. ಆದರೆ, ಅದು ಹೆಚ್ಚು ಕಾಲ ನಿಲ್ಲುವುದಿಲ್ಲ. ನಿಂತರೂ ಗೌರವವೂ ಇರುವುದಿಲ್ಲ, ಅದನ್ನು ನೆಮ್ಮದಿಯಿಂದ ಅನುಭವಿಸುವ ಅವಕಾಶವೂ ಇರುವುದಿಲ್ಲ. ಹಾಗಾಗಿ ಪ್ರಾಮಾಣಿಕವಾಗಿಯೇ ಹಣ ಸಂಪಾದನೆ ಮಾಡಬೇಕು ಎನ್ನುತ್ತಾರೆ ಚಾಣಕ್ಯ. 

click me!