ಅಯೋಧ್ಯೆ ರಾಮಮಂದಿರದಲ್ಲಿಂದು ಮೊದಲ ರಾಮನವಮಿ ಸಂಭ್ರಮ...!

By Kannadaprabha NewsFirst Published Apr 17, 2024, 8:01 AM IST
Highlights

ಮಂದಿರ ಉದ್ಘಾಟನೆಯಾದ ಬಳಿಕ ಆಚರಿಸುತ್ತಿರುವ ಮೊದಲ ರಾಮನವಮಿ ಆಗಿರುವ ಕಾರಣದಿಂದ ಹೆಚ್ಚಿನ ಸಂಖ್ಯೆ ರಾಮಭಕ್ತರು ಸೇರುವ ನಿರೀಕ್ಷೆಯಿದೆ. ರಾಮನವಮಿ ಸಂಭ್ರಮದಲ್ಲಿ ಅಯೋಧ್ಯೆಗೆ 40 ಲಕ್ಷ ಜನ ಭಕ್ತರು ಬರುವ ನಿರೀಕ್ಷೆಯಿದೆ. ಗಣ್ಯ ಅತಿಥಿಗಳು ಏ.19 ರ ತನಕ ರಾಮದರ್ಶನ ಮುಂದೂಡಿ ಎಂದಿರುವ ರಾಮಜನ್ಮ ಭೂಮಿ ಟ್ರಸ್ಟ್ ಈ 19 ರ ತನಕ ಬುಕ್ಕಿಂಗ್ ರದ್ದು ಮಾಡಿದ್ದು, ಎಲ್ಲರೂ ಸರತಿ ಸಾಲಿನಲ್ಲಿಯೇ ನಿಂತು ದರ್ಶನ ಪಡೆಯುವಂತೆ ಹೇಳಿದೆ. 
 

ಅಯೋಧ್ಯೆ(ಏ.17):  ರಾಮ ಮಂದಿರದಲ್ಲಿ ಬಾಲಕ ರಾಮನ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಮೊದಲ ರಾಮನವಮಿ ಬುಧವಾರ ನಡೆಯುತ್ತಿದ್ದು, ಅಯೋಧ್ಯೆಯಲ್ಲಿ ಸಡಗರ ಕಳೆಗಟ್ಟಿದೆ. 500 ವರ್ಷಗಳ ಬಳಿಕ ಅಯೋಧ್ಯೆಯ ರಾಮನ ಜನ್ಮಸ್ಥಳದಲ್ಲೇ ಅದ್ಧೂರಿಯಾಗಿ ರಾಮನವಮಿ ಆಚರಣೆ ನಡೆಯುತ್ತಿದ್ದು, ಐತಿಹಾಸಿಕ ಕ್ಷಣಗಳಿಗೆ ಉತ್ತರ ಪ್ರದೇಶ ಸಾಕ್ಷಿಯಾಗಲಿದೆ.

ಬುಧವಾರ ಮುಂಜಾನೆಯೇ ಮಂದಿರ ತೆರೆಯಲಿದೆ. ಬೆಳಗಿನ ಜಾವ 3.30ಕ್ಕೆ ಮಂಗಳಾ ಆರತಿ ನೆರವೇರಿಸುವುದರ ಮೂಲಕ ಗರ್ಭಗುಡಿ ಬಾಗಿಲು ತೆರೆಯಲಿದ್ದು, ರಾತ್ರಿ 11 ರ ತನಕವೂ ಬಾಲಕರಾಮ ಭಕ್ತರಿಗೆ ದರ್ಶನವನ್ನು ನೀಡಲಿದ್ದಾನೆ. ರಾಮ ಮಂದಿರ ದಿನ ಬರೋಬ್ಬರಿ 19 ಗಂಟೆಗಳ ಕಾಲ ಮರ್ಯಾದಾ ಪುರುಷೋತ್ತಮ ಮಂದಿರ ಓಪನ್ ಇರಲಿದೆ.

ಅಯೋಧ್ಯೆ: ರಾಮಮೂರ್ತಿಯ ಮೇಲೆ ಸೂರ್ಯರಶ್ಮಿ ಪ್ರಯೋಗ ಸಕ್ಸಸ್‌

ಸಂಭ್ರಮದ ಹಬ್ಬಕ್ಕೆ ಮಂದಿರದ ಆಡಳಿತ ಮಂಡಳಿ ಈಗಾಗಲೇ ಸಕಲ ಸಿದ್ಧತೆ ಮಾಡಿದೆ. ಹಬ್ಬದ ದಿನದಂದು ರಾಮನಿಗೆ ಉಣಬಡಿಸಲು 56 ಬಗೆಯ ಭೋಗ್ ಪ್ರಸಾದಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದರ ಜೊತೆಗೆ ದೇವ್ರ ಹಂಸ್ ಟ್ರಸ್ಟ್ ನಿಂದ ಈಗಾಗಲೇ 1,11,111 ಕೆ.ಜಿ ಲಡ್ಡು ಪ್ರಸಾದವನ್ನು ಅಯೋಧ್ಯೆಗೆ ನೀಡಲಾಗಿದ್ದು, ದೇಗುಲಕ್ಕೆ ಬರುವ ಭಕ್ತರಿಗೆ ವಿತರಿಸಲಾಗುತ್ತದೆ.

ಮಂದಿರ ಉದ್ಘಾಟನೆಯಾದ ಬಳಿಕ ಆಚರಿಸುತ್ತಿರುವ ಮೊದಲ ರಾಮನವಮಿ ಆಗಿರುವ ಕಾರಣದಿಂದ ಹೆಚ್ಚಿನ ಸಂಖ್ಯೆ ರಾಮಭಕ್ತರು ಸೇರುವ ನಿರೀಕ್ಷೆಯಿದೆ. ರಾಮನವಮಿ ಸಂಭ್ರಮದಲ್ಲಿ ಅಯೋಧ್ಯೆಗೆ 40 ಲಕ್ಷ ಜನ ಭಕ್ತರು ಬರುವ ನಿರೀಕ್ಷೆಯಿದೆ. ಗಣ್ಯ ಅತಿಥಿಗಳು ಏ.19 ರ ತನಕ ರಾಮದರ್ಶನ ಮುಂದೂಡಿ ಎಂದಿರುವ ರಾಮಜನ್ಮ ಭೂಮಿ ಟ್ರಸ್ಟ್ ಈ 19 ರ ತನಕ ಬುಕ್ಕಿಂಗ್ ರದ್ದು ಮಾಡಿದ್ದು, ಎಲ್ಲರೂ ಸರತಿ ಸಾಲಿನಲ್ಲಿಯೇ ನಿಂತು ದರ್ಶನ ಪಡೆಯುವಂತೆ ಹೇಳಿದೆ. ಬಾಲಕರಾಮನ ಪೂಜೆ ಕೈಂಕರ್ಯಗಳು ನೇರ ಪ್ರಸಾರಗೊಳ್ಳಲಿದ್ದು, ಅಯೋಧ್ಯೆಯಾದ್ಯಂತ 100 ಎಲ್ಇಡಿ ಪರದೆಯ ವ್ಯವಸ್ಥೆಯನ್ನು ಮಾಡಲಾಗಿದೆ.

click me!