
Puri Jagannath Rath Yatra 2025: ಭಾರತದ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಪುರಿ ಜಗನ್ನಾಥ ದೇವಾಲಯವು ಗಮನಾರ್ಹವಾದದ್ದು. ಇಲ್ಲಿನ ರಥೋತ್ಸವ ದೇಶದೆಲ್ಲೆಡೆ ಬಹಳ ಪ್ರಸಿದ್ಧ. ವಿದೇಶದಲ್ಲಿರುವ ಕೆಲ ಭಕ್ತರು ಕೂಡ ಪುರಿ ಜಗನ್ನಾಥನ ರಥೋತ್ಸವದ ಸಮಯದಲ್ಲಿ ಅಲ್ಲಿ ಬಂದು ಸೇರುತ್ತಾರೆ. ಪ್ರತಿ ವರ್ಷ ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವರುಗಳು ಜೊತೆಗೆ ರಥದಲ್ಲಿ ಕುಳಿತು ಭಕ್ತರ ಸಡಗರದೊಂದಿಗೆ ರಥಯಾತ್ರೆಯಲ್ಲಿ ಸಾಗುವುದು ಇಲ್ಲಿ ನಡೆಯುವ ವಾಡಿಕೆ. ಹಾಗೆಯೇ ಈ ವರ್ಷದ ಪುರಿ ಜಗನ್ನಾಥ ಉತ್ಸವದ ರಥಯಾತ್ರೆಯ ಮೆರವಣಿಗೆ ನಾಳೆ ಅಂದರೆ ಜೂನ್ 27ರಂದು ನಡೆಯಲಿದೆ.
12ನೇ ಶತಮಾನದಲ್ಲಿ ನಿರ್ಮಿತವಾದ ದೇಗುಲ
ಒಡಿಶಾ ರಾಜ್ಯದ ಕರಾವಳಿ ನಗರವಾದ ಪುರಿಯಲ್ಲಿ 12ನೇ ಶತಮಾನದಲ್ಲಿ ಈ ಜಗನ್ನಾಥ ದೇವಾಲಯವನ್ನು ನಿರ್ಮಿಸಲಾಯ್ತು. ವಿಷ್ಣುವಿನ ಅವತಾರವಾದ ಜಗನ್ನಾಥ, ಆತನ ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರಾ ಮೂವರು ಮೂಲ ದೇವರುಗಳಾಗಿ ಇಲ್ಲಿ ನೆಲೆಸಿದ್ದಾರೆ. ಅವರನ್ನು ವಿಶೇಷವಾಗಿ ಪೂಜಿಸುವ ಉದ್ದೇಶದಿಂದ ಇಲ್ಲಿ ಪ್ರತಿ ವರ್ಷ ಭವ್ಯ ರಥೋತ್ಸವವನ್ನು ಆಚರಿಸಲಾಗುತ್ತದೆ. ಈ ದೇವಾಲಯದಲ್ಲಿ ನಡೆಯುವ ಜಗನ್ನಾಥನ 12 ಯಾತ್ರೆಗಳಲ್ಲಿ ಈ ರಥಯಾತ್ರೆ ಅತ್ಯಂತ ಪವಿತ್ರವಾದದ್ದು ಎಂದು ಪರಿಗಣಿಸಲಾಗಿದೆ. ಇದನ್ನು ನೋಡಲು ದೇಶದ ವಿವಿಧ ಭಾಗಗಳಿಂದ ಭಕ್ತರು ಪುರಿಗೆ ಬಂದು ಸೇರುತ್ತಾರೆ.
ಮೂರು ರಥಗಳಲ್ಲಿ ಕುಳಿತು ಒಡಹುಟ್ಟಿದವರ ಮೆರವಣಿಗೆ
ಈ ಪುರಿ ರಥಯಾತ್ರೆಗಾಗಿ ಪ್ರತಿ ವರ್ಷ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವರಿಗೆ ಹೊಸ ರಥಗಳನ್ನು ನಿರ್ಮಿಸಲಾಗುತ್ತದೆ. ಅದರಲ್ಲಿ ಈ ಮೂವರು ದೇವರು ನಗರವನ್ನು ಸುತ್ತುವ ಸೌಂದರ್ಯವನ್ನು ನೋಡಲು ಕಣ್ಣುಗಳು ಸಾಲದು ಎನ್ನುತ್ತಾರೆ ಈ ಯಾತ್ರೆಯನ್ನು ವೀಕ್ಷಿಸಿದ ಭಕ್ತರು.
ಪುರಿ ರಥಯಾತ್ರೆ;
ಕಳೆದ ಜೂನ್ 12 ರಂದು ಜಗನ್ನಾಥನಿಗೆ ಅಭಿಷೇಕದೊಂದಿಗೆ ಪೂಜೆಗಳು ಆರಂಭವಾದವು. ಮೂಲ ದೇವರುಗಳಿಗೆ ಪ್ರಾರ್ಥಿಸಿದ ಭಕ್ತರು ಜೂನ್ 12 ರಿಂದಲೇ ಇಲ್ಲಿಗೆ ಬರಲು ಪ್ರಾರಂಭಿಸಿದ್ದಾರೆ. ಈ ವರ್ಷದ ರಥಯಾತ್ರೆಯ ಪೂಜೆಗಳು ಜೂನ್ 26 ರಂದು ಮಧ್ಯಾಹ್ನ ಅಂದರೆ ಇಂದು ಮಧ್ಯಾಹ್ನ 1:24 ರಿಂದ ಆರಂಭವಾಗಿ ಜೂನ್ 27 ರಂದು ಅಂದರೆ ನಾಳೆ ಬೆಳಗ್ಗೆ 11:19 ಕ್ಕೆ ಮುಕ್ತಾಯಗೊಳ್ಳುತ್ತದೆ. ಜಗನ್ನಾಥ, ಬಲಭದ್ರ(Balaram) ಮತ್ತು ಸುಭದ್ರಾ (Subhadra)ದೇವರನ್ನು ತಮ್ಮ ರಥಗಳಲ್ಲಿ ಕರೆದೊಯ್ಯುವ ಪ್ರಮುಖ ರಥಯಾತ್ರೆಯ(Puri rath Yatra) ಮೆರವಣಿಗೆ ನಾಳೆಯೇ ನಡೆಯಲಿದೆ.
ವಿಶೇಷತೆಗಳು:
ಈ ರಥಯಾತ್ರೆಯನ್ನು ಜೀವನ ಯಾನ ಮತ್ತು ಆತ್ಮ ವಿಮೋಚನೆಯನ್ನು ವಿವರಿಸುವ ರೀತಿಯಲ್ಲಿ ಆಚರಿಸಲಾಗುತ್ತದೆ. ಪುರಿ ರಥಯಾತ್ರೆಯಲ್ಲಿ ತನ್ನ ಭಕ್ತರನ್ನು ನೋಡಲು ಜಗನ್ನಾಥನೇ ರಥದಲ್ಲಿ ಬರುತ್ತಾನೆ ಎಂದು ನಂಬಲಾಗಿದೆ. ಪುರಾಣಗಳ (Mythology)ಪ್ರಕಾರ, ಈ ರಥಯಾತ್ರೆಯಲ್ಲಿ ಜಗನ್ನಾಥ ತಾನು ಹುಟ್ಟಿದ ಸ್ಥಳವಾದ ಮಥುರಾಗೆ ಮರಳುತ್ತಾನೆ ಎಂದು ನಂಬಲಾಗಿದೆ. ರಥವನ್ನು ಎಳೆಯುವಾಗ ಹಗ್ಗವನ್ನು ಮುಟ್ಟುವ ಭಕ್ತರಿಗೆ ಆಶೀರ್ವಾದ ಮತ್ತು ಪಾಪ ಮೋಕ್ಷ (Moksh)ದೊರೆಯುತ್ತದೆ ಎಂಬ ನಂಬಿಕೆಯಿದೆ. ಎಲ್ಲಾ ವರ್ಗದ ಜನರನ್ನು ಈ ರಥಯಾತ್ರೆ ಒಂದುಗೂಡಿಸುವುದರಿಂದ ಇದನ್ನು ಐಕ್ಯತೆಯ ಆಚರಣೆ ಎಂದು ಕರೆಯಲಾಗುತ್ತದೆ. ಪುರಿ ರಾಜನಿಂದ ಸೇರಾ ಪನ್ಹಾರಾ ಸಮಾರಂಭವನ್ನು ನಡೆಸಲಾಗುತ್ತದೆ. ಈ ಕಾರ್ಯಕ್ರಮ ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದನ್ನು ಸಾಬೀತುಪಡಿಸುತ್ತದೆ.