ಗಣೇಶ ಚತುರ್ಥಿಯು ವಿಶೇಷವಾದ ಹಬ್ಬವಾಗಿದೆ. ಪ್ರಥಮ ಪೂಜಕ ಗಣೇಶನ ಅನುಗ್ರಹ ಪಡೆಯಲು ಈ ದಿನ ಭಕ್ತಿ ಮತ್ತು ಶ್ರದ್ಧೆಯಿಂದ ಪೂಜಿಸಬೇಕು. ಹಾಗೆಯೇ ಗಣೇಶ ಸ್ಥಾಪನೆಯ ಸಂದರ್ಭದಲ್ಲಿ ಕೆಲವು ತಪ್ಪುಗಳು ಆಗದಂತೆ ಲಕ್ಷ್ಯವಹಿಸುವುದು ಉತ್ತಮ. ಅವು ಯಾವುವು ಎಂಬುದರ ಬಗ್ಗೆ ತಿಳಿಯೋಣ..
ಸನಾತನ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳ ಆಚರಣೆಗೆ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಗಣೇಶ ಚತುರ್ಥಿಯು ವಿಶೇಷವಾದ ಹಬ್ಬಗಳಲ್ಲಿ ಒಂದಾಗಿದೆ. ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ತಿಥಿಯಂದು ಗಣೇಶ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತದೆ. ವಿಧಿ ವಿಧಾನಗಳಿಂದ ಗಣೇಶನನ್ನು ಪೂಜಿಸಿದಲ್ಲಿ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಹೇಳಲಾಗುತ್ತದೆ.
ಯಾವುದೇ ಶುಭ ಕಾರ್ಯಗಳ ಮೊದಲು ವಿಘ್ನ ನಿವಾರಕನಾದ ಗಣೇಶನನ್ನು ಪೂಜಿಸುವುದು ಸಂಪ್ರದಾಯವಾಗಿದೆ. ಅದೇ ರೀತಿ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ತಿಥಿಯಂದು ಗಣೇಶ ಚತುರ್ಥಿಯನ್ನಾಗಿ ಆಚರಿಸಲಾಗುತ್ತದೆ. ಈ ಆಚರಣೆಗೆ ವಿಶೇಷವಾದ ಮಹತ್ವವಿದೆ. ಸ್ಕಂದ ಪುರಾಣ, ನಾರದ ಪುರಾಣ ಮತ್ತು ಬ್ರಹ್ಮ ವೈವರ್ತ ಪುರಾಣಗಳಲ್ಲಿ ಗಣೇಶನ ಬಗ್ಗೆ ವರ್ಣಿಸಲಾಗಿದೆ.
ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ತಿಥಿಯಂದು ಕೈಲಾಸ ಪರ್ವತದಿಂದ ಪಾರ್ವತಿ ದೇವಿಯೊಂದಿಗೆ ಗಣೇಶನ ಆಗಮನವಾಗಿತ್ತೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ಹಾಗಾಗಿ ಈ ದಿನವನ್ನು ಗಣೇಶ ಚತುರ್ಥಿಯನ್ನಾಗಿ ಆಚರಿಸಲಾಗುತ್ತದೆ. ಗಣೇಶನಿಗೆ ಪ್ರಿಯವಾದ ಗರಿಕೆಯನ್ನು ಅರ್ಪಿಸಿದರೆ ಮನೋಕಾಮನೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ನೈವೇದ್ಯಕ್ಕೆ ಮೋದಕ, ಕಡುಬು ಮತ್ತು ಪಂಚಕಜ್ಜಾಯಗಳನ್ನು ಅರ್ಪಿಸಬಹುದಾಗಿದೆ.
ಅಷ್ಟೇ ಅಲ್ಲದೆ ಗಣೇಶನ ಅನುಗ್ರಹವನ್ನು ಪಡೆಯುವ ಸಲುವಾಗಿ ಆಚರಿಸುವ ಗಣೇಶ ಚತುರ್ಥಿಯಂದು ಕೆಲವು ತಪ್ಪುಗಳು ಆಗದಂತೆ ಗಮನಹರಿಸುವುದು ಉತ್ತಮ. ಗಣೇಶ ಚತುರ್ಥಿಯ ಆಚರಣೆಗಳು ಹಲವು ದಿನಗಳು ನಡೆಯಲಿವೆ. ಹಾಗಾದರೆ ಈ ದಿನಗಳಲ್ಲಿ ಯಾವ ನೀತಿ, ನಿಯಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ತಿಳಿಯೋಣ.
ಗಣೇಶ ಚತುರ್ಥಿಯಂದು ಹೊಸ ಮೂರ್ತಿಯನ್ನು ತಂದು ಸ್ಥಾಪಿಸಿ ಪೂಜಿಸಬೇಕು. ಹಳೇ ಮೂರ್ತಿಗಳನ್ನು ಗಣೇಶ ಚತುರ್ಥಿಯಂದು ಸ್ಥಾಪಿಸಿ ಪೂಜಿಸುವಂತಿಲ್ಲ.
ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ಮೂರ್ತಿಯು ದಕ್ಷಿಣ ದಿಕ್ಕಿನತ್ತ ಮುಖ ಮಾಡಿರದಂತೆ ಎಚ್ಚರ ವಹಿಸಬೇಕು. ಇದರಿಂದ ಸಮಸ್ಯೆಗಳು ಉಂಟಾಗುತ್ತವೆ.
ಗಣಪತಿಯನ್ನು ಪೂಜಿಸುವಾಗ ನೀಲಿ ಮತ್ತು ಕಪ್ಪು ಬಣ್ಣದ ಬಟ್ಟೆಯನ್ನು ಹಾಕಿಕೊಳ್ಳುವುದು ಶುಭವಲ್ಲ. ಗಣೇಶನಿಗೆ ಕೆಂಪು ಮತ್ತು ಹಳದಿ ಪ್ರಿಯವಾದ ಬಣ್ಣಗಳಾಗಿವೆ. ಹಾಗಾಗಿ ಗಣಪತಿಯನ್ನು ಪೂಜಿಸುವ ಸಂದರ್ಭದಲ್ಲಿ ಕೆಂಪು ಅಥವಾ ಹಳದಿ ಬಣ್ಣದ ವಸ್ತ್ರವನ್ನು ಹಾಕಿಕೊಳ್ಳುವುದು ಶುಭ ಎಂದು ಹೇಳಲಾಗುತ್ತದೆ.
ಗಣಪತಿಗೆ ತುಳಸಿಯನ್ನು ಅರ್ಪಿಸಬಾರದು. ಪುರಾಣ ಕಥೆಗಳ ಅನುಸಾರ ತುಳಸಿ ದೇವಿಯು ಗಣೇಶನೊಂದಿಗೆ ವಿವಾಹಕ್ಕೆ ಒಪ್ಪದ ಕಾರಣ ಗಣಪತಿಯ ಕೋಪಗೊಂಡಿರುತ್ತಾನೆ. ಹಾಗಾಗಿ ಗಣಪತಿಗೆ ತುಳಸಿಯನ್ನು ಅರ್ಪಿಸುವುದು ನಿಷಿದ್ಧವಾಗಿದೆ.
ಗಣಪತಿಯನ್ನು ಸ್ಥಾಪನೆ ಮಾಡಿ ಪೂಜಿಸಿದ ನಂತರ ಮೂರ್ತಿಯೊಂದನ್ನೇ ಬಿಟ್ಟು ಹೋಗಬಾರದೆಂದು ಹೇಳಲಾಗುತ್ತದೆ. ಗಣೇಶನ ಮೂರ್ತಿಯ ಬಳಿ ಯಾರಾದರೂ ಒಬ್ಬರು ಸದಾಕಾಲ ಜೊತೆಯಲ್ಲಿರಬೇಕೆಂದು ಹೇಳಲಾಗುತ್ತದೆ.
ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದೆಂದು ಹೇಳಲಾಗುತ್ತದೆ. ಚೌತಿಯಂದು ಚಂದ್ರನನ್ನು ನೋಡಿದರೆ ಅಪವಾದ ತಪ್ಪುವುದಿಲ್ಲ. ಹಾಗಾಗಿ ಗಣೇಶ ಚತುರ್ಥಿಯಂದು ಚಂದ್ರ ದರ್ಶನ ನಿಷಿದ್ಧವೆಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗುತ್ತದೆ.
ಗಣೇಶ ಚತುರ್ಥಿಯಂದು ಸಾತ್ವಿಕವಾದ ಆಹಾರವನ್ನೇ ಸೇವಿಸಬೇಕು. ಮುಖ್ಯವಾಗಿ ಗಣೇಶನನ್ನು ಪೂಜಿಸುವವರು ಮಾಂಸ, ಮದಿರೆ ಮತ್ತು ಮೀನು ಇತ್ಯಾದಿ ತಾಮಸ ಆಹಾರವನ್ನು ಸೇವಿಸಬಾರದು.
ಗಣಪತಿ ಚೌತಿಯಂದು ಶಾಂತಿಯಿಂದ ಇದ್ದು ದೇವರ ಸ್ಮರಣೆ ಮಾಡುತ್ತಿರಬೇಕು. ಯಾವುದೇ ಜಗಳ, ಕಲಹ ಮತ್ತು ವಿವಾದಗಳನ್ನು ಮಾಡಬಾರದು. ಹೀಗೆ ಮಾಡುವುದರಿಂದ ಗಣೇಶನ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ಗಣಪತಿಗೆ ಸಂಬಂಧಿಸಿ ಭಜನೆ, ಸ್ತೋತ್ರ ಮತ್ತು ಮಂತ್ರಗಳನ್ನು ಪಠಿಸುವುದರಿಂದ ಗಣೇಶನ ಅನುಗ್ರಹ ಪ್ರಾಪ್ತವಾಗುತ್ತದೆ.
ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ಆರತಿ ಬೆಳಗಿ, ನೈವೇದ್ಯವನ್ನು ಅರ್ಪಿಸಿದ ನಂತರವೇ ಮೂರ್ತಿ ವಿಸರ್ಜನೆ ಮಾಡಬೇಕು.