ಕೊಪ್ಪಳ: ಗವಿಮಠ ಜಾತ್ರೆಗೆ 338 ಕ್ವಿಂಟಲ್‌ ಅಕ್ಕಿ ದೇಣಿಗೆ!

Published : Jan 14, 2025, 01:12 PM ISTUpdated : Jan 14, 2025, 01:20 PM IST
ಕೊಪ್ಪಳ: ಗವಿಮಠ ಜಾತ್ರೆಗೆ 338 ಕ್ವಿಂಟಲ್‌ ಅಕ್ಕಿ ದೇಣಿಗೆ!

ಸಾರಾಂಶ

ನಮ್ಮ ನಾಡಿನ ಆರಾಧ್ಯ ದೈವಗಳಲ್ಲಿ ಒಂದಾಗಿರುವ ಶ್ರೀ ಗವಿಸಿದ್ದೇಶ್ವರ ಮಹಾಮಹಿಮರು ಈ ನಾಡಿನಲ್ಲಿ ಸಮೃದ್ದ ಮಳೆ-ಬೆಳೆಯಾಗುವಂತೆ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್. ಶ್ರೀನಿವಾಸ್   

ಕಾರಟಗಿ(ಜ.14):  ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದ ದಾಸೋಹಕ್ಕೆ ಭತ್ತದ ಕಣಜ ಕಾರಟಗಿಯಿಂದ 210 ಕ್ವಿಂಟಲ್ ಅಕ್ಕಿಯನ್ನು ಸೋಮವಾರ ಕಳುಹಿಸಿಕೊಡಲಾಯಿತು. ಈ ವರ್ಷವೂ ಪಟ್ಟಣದ ಅಕ್ಕಿಗಿರಣಿ ಮಾಲೀಕರು, ದಲಾಲಿ ವರ್ತಕರು, ವಿವಿಧ ದಾನಿಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರು, ಭಕ್ತರಿಂದ ಸಂಗ್ರಹಿಸಿದ 210 ಕ್ವಿಂಟಲ್ ಅಕ್ಕಿ ಚೀಲಗಳನ್ನು ತುಂಬಿದ ಲಾರಿಗೆ ಪೂಜೆ ಬೀಳ್ಕೊಡಲಾಯಿತು. ಇಲ್ಲಿನ ವಿಶೇಷ ಎಪಿಎಂಸಿ ಆವರಣದಿಂದ ಲಾರಿಗೆ ಪೂಜೆ ಸಲ್ಲಿಸಿ ಅಕ್ಕಿ ಚೀಲಗಳನ್ನು ತುಂಬಿ ವಿದ್ಯುಕ್ತವಾಗಿ ಕಳುಹಿಸಿಕೊಡಲಾಯಿತು. 

ಈ ವೇಳೆ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್. ಶ್ರೀನಿವಾಸ್ ಮಾತನಾಡಿ, ಅಭಿನವ ಗವಿಸಿದ್ದೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆಯುವ ಗವಿಮಠದ ಜಾತ್ರಾ ಮಹೋತ್ಸವ ಜಗತ್ ಪ್ರಸಿದ್ಧವಾಗಿದೆ. ತಿಂಗಳು ಪರ್ಯಂತ ನಡೆಯುವ ಈ ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಏರ್ಪಡಿಸಲಾಗುವ ಮಹಾದಾಸೋಹಕ್ಕೆ ಭತ್ತದ ಕಣಜದ ಕಾರಟಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಂದ ಸಂಗ್ರಹಿಸಲಾದ 210 ಕ್ವಿಂಟಲ್ ಅಕ್ಕಿಯನ್ನು ಕಳುಹಿಸಿಕೊಡಲಾಗುತ್ತಿದೆ ಎಂದರು. 

ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೀರುವುದೇಕೆ?

ನಮ್ಮ ನಾಡಿನ ಆರಾಧ್ಯ ದೈವಗಳಲ್ಲಿ ಒಂದಾಗಿರುವ ಶ್ರೀ ಗವಿಸಿದ್ದೇಶ್ವರ ಮಹಾಮಹಿಮರು ಈ ನಾಡಿನಲ್ಲಿ ಸಮೃದ್ದ ಮಳೆ-ಬೆಳೆಯಾಗುವಂತೆ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು. 

ಉದ್ಯಮಿ ಕೆ. ಯಂಕಾರೆಡ್ಡೆಪ್ಪ ಚನ್ನಳ್ಳಿ, ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ ಮಾತನಾಡಿ ಲಕ್ಷಾಂತರ ಜನತೆ ಸೇರುವ ಗವಿಮಠದ ಜಾತ್ರೆ ಈ ಬಾರಿ ಅತ್ಯಂತ ವೈಭವದಿಂದ ನಡೆಯುತ್ತಿದೆ. ಅಜ್ಜನ ಸನ್ನಿಧಿಯಲ್ಲಿ ನಡೆಯುವ ಮಹಾದಾಸೋಹಕ್ಕೆ ನೆರವಾಗಲಿ ಎಂದು ಈ ವರ್ಷವೂ ಅಕ್ಕಿ ರವಾನಿಸುತ್ತಿರುವುದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ವಾಣಿಜ್ಯೋದ್ಯಮಿಗಳಾದ ಸಣ್ಣ ವೀರೇಶಪ್ಪ ಚಿನಿವಾಲ, ಬಾಲಾಜಿ ಶ್ರೇಷ್ಠ, ಸತ್ಯನಾರಾಯಣ ಶ್ರೇಷ್ಟಿ, ದಲಾಲಿ ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಪಗಡದಿನ್ನಿ, ಶಿವಶರಣೇಗೌಡ ಯರಡೋಣಾ, ದೇವರಾಜ್ ರಾಮತ್ನಾಳ, ಯಂಕಪ್ಪ ಹತ್ತಿಕಾಳ, ಕಲ್ಯಾಣಪ್ಪ ಹಿರೇಗೌಡರ್, ರಮೇಶ ಮಾವಿನಮಡಗು, ಶರಣಪ್ಪ ಕಟಾಂಬ್ಲಿ, ಮಲ್ಲಪ್ಪ ಮೇಟಿ, ಪ್ರಭು ಉಪನಾಳ, ಶರಣಪ್ಪ ಗುಂಜಳ್ಳಿ, ಬಸವರಾಜ ಚಿನಿವಾಲ, ಪ್ರವೀಣ ಗದ್ದಿ, ಮಲ್ಲಪ್ಪ ಬೆಣಕಲ್, ಮಾರ್ಕಂಡೇಯ, ಮಹಾಬಳೇಶ್ವರ ಹುರಕಡ್ಡಿ, ಬಸವರಾಜ ಜುಟ್ಟದ್, ಮಲ್ಲಪ್ಪ ಬೆನಕನಾಳ ಇದ್ದರು. 

ಬಾದಾಮಿ: ಬನಶಂಕರಿ ದೇವಿಯ ಅದ್ಧೂರಿ ರಥೋತ್ಸವ, ತಾಯಿಯ ಆಶೀರ್ವಾದ ಪಡೆದ ಭಕ್ತರು!

ಹೆಚ್ಚುವರಿ ಬಸ್ ಸಾರಿಗೆ ಸೌಲಭ್ಯ: 

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯ ಪ್ರಯುಕ್ತ ಭಕ್ತರಿಗಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದಿಂದ ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಜ. 15ರಿಂದ ಜ. 29ರವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವದ ಹಿನ್ನೆಲೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕುಷ್ಟಗಿ, ಗಂಗಾವತಿ, ಯಲಬುರ್ಗಾ, ಗದಗ, ಮುಂಡರಗಿ, ಹೊಸಪೇಟೆ ಇನ್ನೂ ಮುಂತಾದ ಸ್ಥಳಗಳಿಗೆ ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಭಕ್ತರು ಸೌಲಭ್ಯ ಪಡೆದುಕೊಳ್ಳುವಂತೆ ಕ.ಕ.ರ.ಸಾ.ನಿಗಮ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

128 ಕ್ವಿಂಟಲ್ ಅಕ್ಕಿ, ₹2.65 ಲಕ್ಷ ಕಾಣಿಕೆ

ಗಂಗಾವತಿ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ನಗರ ಮತ್ತು ಗ್ರಾಮೀಣ ಪ್ರದೇಶದಿಂದ ಆಹಾರ ಧಾನ್ಯಗಳು ಸೇರಿದಂತೆ ಕಾಣಿಕೆ ಸಂಗ್ರಹಿಸಿ ಕೊಪ್ಪಳಕ್ಕೆ ಕಳುಹಿಸಿಕೊಡಲಾಯಿತು. ಅಕ್ಕಿ, 128 ಕ್ವಿಂಟಲ್, ಭತ್ತ 40 ಚೀಲ, ಗೋಧಿ 21 ಕೆಜಿ, ತೊಗರಿ ಬೇಳೆ 30 ಕೆಜಿ, ಬೆಲ್ಲ 1 ಕ್ವಿಂಟಲ್ 64 ಕೆಜಿ, ತುಪ್ಪ 3 ಲೀಟರ್, ಶೇಂಗಾ ಬೀಜ -92 ಕೆಜಿ, ಸಕ್ಕರೆ -225 ಕೆಜಿ ಮತ್ತು ₹2 ಲಕ್ಷ 65 ಸಾವಿರ ಕಾಣಿಕೆ ಸಂಗ್ರಹಿಸಿ ಎಪಿಎಂಸಿ ಆವರಣದಲ್ಲಿರುವ ಶ್ರೀ ಚೆನ್ನಬಸವಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಾಹನದಲ್ಲಿ ಕಳಿಸಿಕೊಡಲಾಯಿತು.ಈ ವೇಳೆ ಅಕ್ಕಿ ಕೊಟ್ರಪ್ಪ, ವೀರೇಶ ಕಂಪ್ಲಿ, ವೀರೇಶ ಓದೊಮಠ, ಅಕ್ಕಿ ಪ್ರಕಾಶ, ಚಂದ್ರು ರಾಮತ್ನಾಳ, ಗವಿಸಿದ್ದಪ್ಪ ಅಕ್ಕಿ, ಹನುಮಂತಪ್ಪ ಜಂತಕಲ್, ಶರಣಯ್ಯ ಸ್ವಾಮಿ, ಶಿವಪ್ರಕಾಶ, ರವಿಶಾಸ್ತ್ರಿ ಗವಿಮಠ ಇದ್ದರು.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ