Trishika Kumari: ತ್ರಿಶಿಕಾ ಕುಮಾರಿಗೆ ಗಂಡು ಮಗು; ವಿಜಯದಶಮಿಯಲ್ಲಿ ಅರಮನೆಯವರು ಭಾಗವಹಿಸೋ ಹಾಗಿಲ್ವಾ?

By Bhavani BhatFirst Published Oct 11, 2024, 12:37 PM IST
Highlights

ಮೈಸೂರು ಸಂಸದ ಯದುವೀರ್ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ದೇವಿ ದಂಪತಿಗೆ ಗಂಡು ಮಗುವಿನ ಜನನವಾಗಿದೆ. ಅಶೌಚ ಬಾಧಿಸಿರುವ ಅವರು ನವರಾತ್ರಿಯ ವಿಜಯದಶಮಿಯ ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರಾ? 


ಮೈಸೂರು ನಾಡಹಬ್ಬದ ಸಂಭ್ರಮದಲ್ಲಿರುವಾಗಲೇ ಈ ಉತ್ಸಾಹವನ್ನು ದುಪ್ಪಟ್ಟಾಗಿಸಿದ ಸ್ವೀಟ್‌ ನ್ಯೂಸ್‌ ಎಂದರೆ  ಮಹಾರಾಜ, ಮೈಸೂರು ಸಂಸದ ಯದುವೀರ್‌ ಒಡೆಯರ್‌ ಅವರ ಪತ್ನಿ ತ್ರಿಷಿಕಾ ಕುಮಾರಿ ದೇವಿ ಒಡೆಯರ್‌ ಅವರು ಗಂಡು ಮಗುವಿಗೆ ಜನ್ಮ ನೀಡಿರುವುದು. ನವರಾತ್ರಿಯ ಆರಂಭದ ದಿನದ ಪೂಜೆಯಲ್ಲಿಯೇ ಈ ಸುಳಿವು ನೀಡಿದ್ದರು ತ್ರಿಶಿಕಾ ಕುಮಾರಿ ದೇವಿ. ಇದೀಗ ನವರಾತ್ರಿ ಮುಗಿಯುವ ಮುನ್ನವೇ, ವಿಜಯದಶಮಿಗೆ ಒಂದು ದಿನ ಮೊದಲೇ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೈಸೂರು ಅರಮನೆ ಆನಂದದಲ್ಲಿ ತೇಲಾಡುತ್ತಿದೆ.  

ಅದೆಲ್ಲ ಸರಿ. ಈಗಿನ ಪ್ರಶ್ನೆ ಎಂದರೆ ಅಶೌಚದ್ದು. ಹಿಂದೂಗಳ ರೂಢಿ ಹೇಗೆ ಎಂದರೆ ಒಂದು ಕುಟುಂಬದಲ್ಲಿ ಮಗು ಜನಿಸಿದರೆ ಆ ಕುಟುಂಬಕ್ಕೆ 10 ದಿನಗಳ ಕಾಲ ಅಶೌಚ (ಸೂತಕ) ಇರುತ್ತದೆ ಎಂದು ಪಂಚಾಂಗದ ಲೆಕ್ಕ. ಇವರು ಶುಭ ಕಾರ್ಯಗಳಲ್ಲಿ ಭಾಗವಹಿಸುವಂತಿಲ್ಲ. ಹಾಗಾದರೆ ಈಗ ಮಹಾರಾಜ ಯದುವೀರ್‌ ಅವರು ವಿಜಯದಶಮಿ ಮೆರವಣಿಗೆ, ಪೂಜೆ ಮತ್ತಿತರ ಕಾರ್ಯಮಗಳಲ್ಲಿ ಭಾಗವಹಿಸುವಂತಿಲ್ಲವೇ? ಈ ಬಗ್ಗೆ ಅರಮನೆಯ ಪುರೋಹಿತರು ಏನು ಹೇಳುತ್ತಾರೆ? ಯಾಕೆಂದರೆ ಮೈಸೂರು ಅರಮನೆಯ ಧಾರ್ಮಿಕ ರೀತಿರಿವಾಜುಗಳನ್ನು ಯಾವುದೇ ನ್ಯೂನವಾಗದಂತೆ ಪರಿಪಾಲಿಸಿಕೊಂಡು ಬಂದಿದೆ.

Latest Videos

ಅಶೌಚದ ಲೆಕ್ಕ ಹೇಗೆ ಎಂದರೆ ಅದು ಸಂಬಂಧದ ಮೇಲೆ, ಕಾಲದ ಮೇಲೆ ಅವಲಂಬಿಸುತ್ತದೆ. ತೀರ ಹತ್ತಿರದ ಬಂಧುಗಳಿಗೆ ಹೆಚ್ಚು ಕಾಲ ಅಶುಚಿತ್ವ (10 ದಿನಗಳು). ಮಿಕ್ಕವರಿಗೆ ಸಂಬಂಧ ದೂರವಾದಷ್ಟೂ ಅಶೌಚದ ಕಾಲ ಕಡಿಮೆ. ಮೂರು ದಿನ, ಒಂದೂವರೆ ದಿನ, ಸ್ನಾನ ಇತ್ಯಾದಿ ಹೀಗೆ. ತಾಯಿ- ತಂದೆಗೆ ಭರ್ತಿ 10 ದಿನಗಳ ಅಶೌಚ ವ್ರತ. ಆಶೌಚಕಾಲದಲ್ಲಿ ದೇವತಾರ್ಚನೆ, ವೇದಪಾರಾಯಣ ಮಾಡಬಾರದು, ದೇವಾಲಯಕ್ಕೆ ಹೋಗಬಾರದು, ಯಾವ ವಿಧವಾದ ವೇದೋಕ್ತಕರ್ಮಗಳನ್ನೂ (ಶ್ರಾದ್ಧ ಕೂಡ) ಮಾಡಬಾರದು; ಆಶೌಚಿಯ ಮನೆಯಲ್ಲಿ ಆಶೌಚವಿಲ್ಲದವರು ಬಂದು ಊಟ ಮಾಡಬಾರದು, ಹೀಗೆಲ್ಲ ನಿಯಮ, ನಿಷೇಧಗಳನ್ನು ಇಟ್ಟುಕೊಂಡಿದ್ದಾರೆ.

ಅರಸರು ಈ ಅಶೌಚ ಪರಿಪಾಲನೆ ಮಾಡಲಿದ್ದಾರಾ? ಅರಮನೆಯಲ್ಲಿ ವಿಜಯದಶಮಿ ಪೂಜೆ ನಡೆಯುವುದಿಲ್ವಾ? ಇದಕ್ಕೆ ಅರಮನೆಯ ಪುರೋಹಿತರು ಸೂಕ್ತ ಉತ್ತರ ನೀಡಿದ್ದಾರೆ. ಹತ್ತು ದಿನಗಳ ಶುಭ ಕಾರ್ಯಕ್ರಮಗಳಿಗೆ ಮೊದಲ ದಿನವೇ ಮಹಾರಾಜರು ಕಂಕಣ ಕಟ್ಟಿದ್ದಾರೆ. ಒಮ್ಮೆ ಕಂಕಣ ಕಟ್ಟಿದ ಮೇಲೆ, ಅದನ್ನು ಬಿಚ್ಚುವವರೆಗೆ ಶುಭ ಕಾರ್ಯಗಳನ್ನು ನೆರವೇರಿಸಬಹುದು. ಕಂಕಣ ಬಿಚ್ಚುವವರೆಗೂ ಯಾವ ಅಶೌಚವೂ ಬಾಧಿಸುವುದಿಲ್ಲ.ಹಾಗಾಗಿ ಯಾವ ದೋಷವೂ ಇಲ್ಲ. ಮೈಸೂರಿನ ಎಲ್ಲ ಸಂಪ್ರದಾಯಗಳು ನಿರ್ವಿಘ್ನವಾಗಿ ನಡೆಯುತ್ತವೆ ಎಂದಿದೆ ಅರಮನೆ ಮೂಲಗಳು. 

ನವರಾತ್ರಿ ಪೂಜಾರಂಭಕ್ಕೆ ಮುನ್ನವೇ ತಿಂಗಳು ತುಂಬಿ ಗರ್ಭಿಣಿಯಾಗಿದ್ದ ತ್ರಿಶಿಕಾ, ಯಾವುದೇ ಸಮಯದಲ್ಲೂ ಹೆರಬಹುದು ಎಂದು ರಾಜಮನೆತನಕ್ಕೆ ತಿಳಿದಿತ್ತು. ಈಗಾಗಲೇ ಎಂಟು ತಿಂಗಳು ಮುಗಿದಿದ್ದರಿಂದ ಹೆರಿಗೆ ದಿನಗಳನ್ನು ತ್ರಿಷಿಕಾ ಎಣಿಸುತ್ತಿದ್ದರು. ಇದರಿಂದ ಈ ಬಾರಿ ಅವರು ಹೆಚ್ಚು ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ ಅವರು ಅದಕ್ಕೆ ಸಜ್ಜಾಗಿಯೇ ಇದ್ದರು ಎನ್ನಲಾಗುತ್ತದೆ. ಹೀಗಾಗಿ ಶುಭಕಾರ್ಯಗಳಲ್ಲಿ ಯಾವುದೇ ಬದಲಾವಣೆ ಇಲ್ಲವಂತೆ. 

Good news: ಮೈಸೂರು ಅರಮನೆಗೆ ನಾಡಹಬ್ಬದ ಬಂಪರ್;‌ ತ್ರಿಶಿಕಾ ಕುಮಾರಿ ಒಡೆಯರ್‌ಗೆ ಗಂಡು ಮಗು ಜನನ!
 

ಇದು ಯದುವೀರ್-‌ ತ್ರಿಶಿಕಾ ದಂಪತಿಗೆ ಎರಡನೇ ಗಂಡು ಮಗು. ಮೊದಲ ಮಗು ಆದ್ಯವೀರ್‌ಗೆ ಈಗ ಏಳು ವರ್ಷ. ಈಗ ಮತ್ತೊಬ್ಬ ಪುತ್ರ ರಾಜವಂಶಕ್ಕೆ ಬಂದಿದ್ದಾನೆ. ಯದುವೀರ್‌ ಅವರು ಖಾಸಗಿ ದರ್ಬಾರ್‌ ಚಟುವಟಿಕೆಗಳಲ್ಲಿ ಒಂದು ವಾರದಿಂದ ಭಾಗಿಯಾಗಿದ್ದು, ಶುಕ್ರವಾರ ಆಯುಧಪೂಜೆ ಸಂಭ್ರಮದಲ್ಲಿದ್ದರು. ಈ ವೇಳೆ ಖುಷಿಯ ವಿಚಾರ ಬಂದಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇಡೀ ಕುಟುಂಬ ದಸರಾದ ಸಡಗರದಲ್ಲಿದೆ. ಈಗಾಗಲೇ ಎಂಟು ದಿನ ಖಾಸಗಿ ದರ್ಬಾರ್‌ ನಡೆಸಿರುವ ಯದುವೀರ್‌ ಅವರು ನಾಳೆ ವಿಜಯದಶಮಿಗೆ ಅಣಿಯಾಗುತ್ತಿದ್ದರು. ಇದರ ನಡುವೆ ಗುರುವಾರ ರಾತ್ರಿಯೇ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತ್ರಿಷಿಕಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗಿನ ಜಾವ ತ್ರಿಷಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ ಸುದ್ದಿ ಅರಮನೆಯಲ್ಲಿದ್ದ ಯದುವೀರ್‌ ಒಡೆಯರ್‌ ಅವರಿಗೆ ತಲುಪಿತು. ಖಾಸಗಿ ದರ್ಬಾರ್‌ ಇರುವ ಕಾರಣದಿಂದ ಕಂಕಣಧಾರಿಯಾಗಿರುವ ಯದುವೀರ್‌ ಅರಮನೆಯಿಂದ ಹೊರಗೆ ಹೋಗುವುದಿಲ್ಲ. ಇಂದು ಖಾಸಗಿ ದರ್ಬಾರ್‌ ಮುಗಿದ ಬಳಿಕ ಹೊರ ಬರಲಿದ್ದಾರೆ. 

ಅಡುಗೆ ಹವ್ಯಾಸದಿಂದ ಬೇಕರಿ ಉದ್ಯಮದಲ್ಲಿ ಕೋಟ್ಯಧಿಪತಿಯಾದ ಟೀಂ ಇಂಡಿಯಾ ಕ್ರಿಕೆಟಿಗನ ಪತ್ನಿ!
 

click me!