ಮಹಾಭಾರತ ಯುದ್ಧದಲ್ಲಿ ಹೋರಾಡಿದ ರಾಕ್ಷಸರ ಬಗ್ಗೆ ನಿಮಗೆ ಗೊತ್ತೆ?

By Suvarna NewsFirst Published Jul 8, 2021, 4:50 PM IST
Highlights

ಕುರುಕ್ಷೇತ್ರದಲ್ಲಿ ಕೌರವ- ಪಾಂಡವರ ಮಧ್ಯೆ ನಡೆದ ಯುದ್ಧದಲ್ಲಿ ರಾಕ್ಷಸರೂ ಭಾಗವಹಿಸಿದ್ದರು ಎಂಬುದು ನಿಮಗೆ ಗೊತ್ತೆ?

ರಾಮಾಯಣದಲ್ಲಿ ರಾಕ್ಷಸರು ಸಾಕಷ್ಟು ಮಂದಿ ಇದ್ದಾರೆ. ಆದರೆ ಮಹಾಭಾರತದಲ್ಲಿ ಹೆಚ್ಚಿನ ರಾಕ್ಷಸರು ಕಂಡುಬರುವುದಿಲ್ಲ. ಅದರೆ ಅಲ್ಲಿ ಇಲ್ಲಿ ಹಲವು ರಾಕ್ಷಸರು ಇದ್ದಾರೆ. ಮಹಾಭಾರತ- ಕುರುಕ್ಷೇತ್ರ ಯುದ್ಧ ನಡೆದಾಗ ಅದರಲ್ಲಿ ಕೌರವರ ಕಡೆಯಿಂದಲೂ ಪಾಂಡವರ ಕಡೆಯಿಂದಲೂ ಹಲವು ರಾಕ್ಷಸರು ಭಾಗವಹಿಸಿದ್ದರು. ಅವರು ಯಾರೆಲ್ಲ ಅಂತ ತಿಳಿಯೋಣ ಬನ್ನಿ. ಇವರೆಲ್ಲ ಬಹುಶಃ ಆಗಿನ ಕಾಲದ ಗಿರಿಜನರೋ, ನಾಗರಿಕತೆಯಿಂದ ದೂರವಾಗಿ ಬದುಕುತ್ತಿದ್ದ ಜನಾಂಗದವರೋ ಆಗಿರಬೇಕು. ಇವರಿಗೆ ರಾಜ ಮನೆತನಗಳ ಜೊತೆಗೆ ಸಂಬಂಧ ಆದದ್ದು ಕೂಡ ಇದೆ. ಉದಾಹರಣೆಗೆ ಭೀಮ- ಹಿಡಿಂಬೆ.

ಘಟೋತ್ಕಚ:
ಇವನು ಭೀಮನ ಮಗ. ಭೀಮನಂತೆಯೇ ಪರಾಕ್ರಮಿ, ಶೌರ್ಯವಂತ. ಪಾಂಡವರು ಕೌರವರ ನಡುವೆ ಮಹಾಯುದ್ಧ ನಡೆಯಲಿದೆ ಎಂದು ತಿಳಿದಾಗ ತಾನಾಗಿ ಯುದ್ಧದಲ್ಲಿ ಭಾಗವಹಿಸಲು ರಾಕ್ಷಸರ ಒಂದು ಪಡೆಯನ್ನೇ ಕಟ್ಟಿಕೊಂಡು ಧಾವಿಸಿ ಬರುತ್ತಾನೆ. ದ್ರೋಣಾಚಾರ್ಯರ ನೇನಾಪತಿತ್ವದಲ್ಲಿ ಒಂದು ದಿನ ರಾತ್ರಿಯೂ ಯುದ್ಧ ನಡೆಯುತ್ತದೆ. ಆ ರಾತ್ರಿಯ ಯುದ್ಧದಲ್ಲಿ ಘಟೋತ್ಕಚನು ಖಾಡಾಖಾಡಿಯಾಗಿ ಹೋರಾಡಿ ಕೌರವರಲ್ಲಿ ದಿಗಿಲು ಹುಟ್ಟಿಸುತ್ತಾನೆ. ಇವನನ್ನು ಹೀಗೇ ಬಿಟ್ಟರೆ ಇವರು ಒಂದೇ ದಿನದಲ್ಲಿ ನಮ್ಮ ಸರ್ವನಾಶ ಮಾಡುತ್ತಾನೆ ಎಂದು ಭಾವಿಸಿದ ದುರ್ಯೋಧನ, ಕರ್ಣನ ಬಳಿ ಇರುವ ವೈಜಯಂತಿ ಎಂಬ ಮಹಾಸ್ತ್ರವನ್ನು ಘಟೋತ್ಕಚನ ಮೇಲೆ ಪ್ರಹರಿಸಲು ಹೇಳುತ್ತಾನೆ. ಅದನ್ನು ಅರ್ಜುನನಿಗೆ ಮೀಸಲಾಗಿ ಇಟ್ಟಿರುವಾಗಿ ಕರ್ಣ ಹೇಳಿದರೂ, ಇಂದು ಬದುಕುಳಿದರೆ ತಾನೇ ನಾಳೆಯ ಮಾತು- ಎಂದುಕೊಂಡು ಕರ್ಣನನ್ನು ಒತ್ತಾಯಿಸಿದಾಗ, ಕರ್ಣ ಅದನ್ನು ಪ್ರಯೋಗಿಸಿ ಘಟೋತ್ಕಚನನ್ನು ಸಾಯಿಸುತ್ತಾನೆ. ಘಟೋತ್ಕಚ ಕೌರವ ಸೇನೆಯ ಮೇಲೆ ಬೀಳುವಾಗ ಒಂದು ಅಕ್ಷೋಹಿಣಿ ಸೈನಿಕರು ಸಾಯುತ್ತಾರೆ.



ಆಲಂಬುಷ:
ಇವನು ಬಕಾಸುರನ ತಮ್ಮ. ಬಕಾಸುರನನ್ನು ಭೀಮನು ಕೊಂದುದರಿಂದ, ಭೀಮನ ಮೇಲೆ ಸೇಡು ತೀರಿಸಿಕೊಳ್ಳಲು ಇವನು ಕೌರವನ ಪಡೆಯನ್ನು ಸೇರಿಕೊಂಡಿದ್ದ. ನಂತರ ಯುದ್ಧದಲ್ಲಿ ಹದಿನಾಲ್ಕನೇ ದಿನವರೆಗೂ ಹೋರಾಡಿ, ಪಾಂಡವ ಸೈನ್ಯದಲ್ಲಿ ಸಾಕಷ್ಟು ಹಾವಳಿ ಎಬ್ಬಿಸಿದ್ದ. ಏಳನೇ ದಿನ ಇವನಿಗೂ ಅರ್ಜುನನ ಮಗ ಇರಾವಾನ್‌ಗೂ ಯುದ್ಧವಾಯಿತು. ಇರಾವಾನ್, ಪಾತಾಳದ ನಾಗಕನ್ನಿಕೆ ಉಲೂಪಿಯಲ್ಲಿ ಅರ್ಜುನನಿಗೆ ಜನಿಸಿದ ಮಗ. ಯುದ್ಧದಲ್ಲಿ ಆಲಂಬುಷನು ಇರಾವಾನನನ್ನು ಕೊಂದುಹಾಕಿದ. ಮುಂದೆ ಹದಿನಾಲ್ಕನೇ ದಿನ, ಇರುಳು ನಡೆದ ಯುದ್ಧದಲ್ಲಿ, ಘಟೋತ್ಕಚನು ತನ್ನ ಎದುರಿಗೆ ಬಂದ ಆಲಂಬುಷನನ್ನು ಸಂಹರಿಸಿದ.
 

ಸಮಸಪ್ತಕರು:
ಇವರು ಒಟ್ಟು ಏಳು ಜನ, ತ್ರಿಗರ್ತದವರು ಇವರು ಮೂಲತಃ ರಾಕ್ಷಸರು. ಅರ್ಜುನನನ್ನು ಕೊಲ್ಲಬೇಕು ಎಂಬುದು ಇವರ ಪ್ರತಿಜ್ಞೆ. ದ್ರೋಣಾಚಾರ್ಯದ ಸೇನಾಪತಿತ್ವದಲ್ಲಿ ಚಕ್ರವ್ಯೂಹ ರಚನೆಯಾಗುವ ಸಂದರ್ಭ, ಕೃಷ್ಣಾರ್ಜುನರ ಗಮನವನ್ನು ಅಲ್ಲಿಂದ ಬೇರೆ ಕಡೆಗೆ ಸೆಳೆಯಲು ದ್ರೋಣ- ದುರ್ಯೋಧನ ತೀರ್ಮಾನಿಸಿ, ಇವರನ್ನು ಅರ್ಜುನನ ಮುಂದೆ ಬಿಡುತ್ತಾರೆ. ಇವರು ಕಾದಾಡುತ್ತಾ ಕೃಷ್ಣಾರ್ಜುನರನ್ನು ಬೇರೊಂದು ಕಡೆಗೆ ಸೆಳೆದುಕೊಂಡು ಹೋಗುತ್ತಾರೆ. ಅರ್ಜುನ ಇವರನ್ನು ಕೊಲ್ಲುತ್ತಾನೆ. ಅವರು ಮರಳಿ ಬಂದಾಗ ಅಭಿಮನ್ಯುವಿನ ಮರಣ ಆಗಿರುತ್ತದೆ.


 

ಬರ್ಬರೀಕ:
ಇವನು ಮಹಾವೀರ, ಘಟೋತ್ಕಚನ ಮಗ, ತಪಸ್ಸಿನಲ್ಲಿ ಶಿವನನ್ನು ಒಲಿಸಿ, ಒಂದೇ ಪ್ರಯೋಗದಿಂದ ಎಲ್ಲರನ್ನೂ ಸಂಹರಿಸಬಲ್ಲ ಬಾಣಗಳನ್ನು ವರವಾಗಿ ಪಡೆದಿರುತ್ತಾನೆ. ಇವನ್ನು ಉಳಿಯಗೊಟ್ಟರೆ ಅಪಾಯ ಎಂದು ಚಿಂತಿಸಿದ ಶ್ರೀಕೃಷ್ಣ, ಉಪಾಯದಿಂದ ಅವನನ್ನ ಸಂಹರಿಸುತ್ತಾನೆ. ಆದರೆ ಇವನ ತಲೆ ಕುರುಕ್ಷೇತ್ರದ ಒಂದು ಎತ್ತರವಾದ ಜಾಗದಲ್ಲಿದ್ದು, ಇಡೀ ಯುದ್ಧವನ್ನು ನೋಡುತ್ತಿರುತ್ತದೆ. ಕೊಟ್ಟ ಕೊನೆಗೆ, ಯುದ್ಧದಲ್ಲಿ ಎಲ್ಲರ ಸಂಹರಿತರಾದುದು ಸುದರ್ಶನ ಚಕ್ರದಿಂದ ಎಂದು ಆ ತಲೆ ನುಡಿಯುತ್ತದೆ.

ಇವರಲ್ಲದೆ ಅಲಾಯುಧ ಮುಂತಾದ ಇನ್ನೂ ಹಲವು ರಾಕ್ಷಸರು ಇದ್ದರು. ಇವರೆಲ್ಲ ಆಲಂಬುಷ ಮತ್ತು ಘಟೋತ್ಕಚನ ಪಡೆಯಲ್ಲಿ ಸೇರಿಕೊಂಡು ಕಾದಾಡಲು ಬಂದವರಾಗಿದ್ದರು. ಯಾರೂ ಯುದ್ಧದಲ್ಲಿ ಉಳಿಯಲಿಲ್ಲ.


 

click me!