Chanakya Niti: ಸಂಸಾರದ ಜೊತೆ ಭವಿಷ್ಯದ ಸುಖಕ್ಕೆ ಚಾಣಕ್ಯನ ನೀತಿ ಅನುಸರಿಸಿ

By Suvarna NewsFirst Published Mar 15, 2023, 5:04 PM IST
Highlights

ಪ್ರತಿಯೊಬ್ಬ ವ್ಯಕ್ತಿ ಸುಖಕರ ಜೀವನ ಬಯಸ್ತಾನೆ. ಆರ್ಥಿಕ ಬಲದ ಜೊತೆ ಕುಟುಂಬದ ಪ್ರೀತಿ ಲಭಿಸಬೇಕೆಂದು ಬಯಸ್ತಾನೆ. ಇದಕ್ಕೆ ಸಾಕಷ್ಟು ಪ್ರಯತ್ನಪಟ್ಟು ವಿಫಲನಾಗಿರ್ತಾನೆ. ನೀವೂ ಇವೆರಡರಲ್ಲೂ ಯಶಸ್ವಿಯಾಗ್ಬೇಕೆಂದ್ರೆ ಚಾಣಕ್ಯ ಹೇಳಿದ್ದನ್ನು ಕೇಳ್ಬೇಕು. 
 

ಬದುಕಿಗಾಗಿ ಮನುಷ್ಯನ ಹೋರಾಟ ಇಂದು ನಿನ್ನೆಯದಲ್ಲ. ಮನುಷ್ಯ ಜನ್ಮತಳೆದು ಬುದ್ಧಿಬಂದಾಗಿನಿಂದ ಒಂದೊಂದೇ ಜವಾಬ್ದಾರಿ ಹೆಗಲೇರುತ್ತ ಹೋಗುತ್ತದೆ. ಬೆಳೆದು ದೊಡ್ಡವರಾದ ಹಾಗೆ ಸ್ಥಾನ-ಮಾನ, ಪರಿವಾರ, ಶಿಕ್ಷಣ, ಧರ್ಮದ ಸುತ್ತ ಸುತ್ತುತ್ತಲೇ ಇರುತ್ತದೆ. ಹಾಗಾಗಿಯೇ ಚಾಣಕ್ಯರು ಆರ್ಥಿಕ, ಮಾನಸಿಕ ಸ್ಥಿತಿಗಳಿಂದ ಜೀವನವನ್ನು ಸುರಕ್ಷಿತವಾಗಿಡಲು ಏನೆಲ್ಲ ವಿಷಯಗಳನ್ನು ಅನುಸರಿಸಬೇಕೆಂಬುದನ್ನು ಒಂದು ಶ್ಲೋಕದ ಮೂಲಕ ತಿಳಿಸಿದ್ದಾರೆ.

ತನ್ನ ಸಂಸಾರ (Family) ವನ್ನು ಎಲ್ಲ ರೀತಿಯಿಂದಲೂ ಸುರಕ್ಷಿತವಾಗಿಡಲು ಒಬ್ಬ ಮನುಷ್ಯ ಏನೆಲ್ಲ ಕೆಲಸಗಳನ್ನು ಮಾಡುತ್ತಾನೆ. ಆದರೆ ಕೆಲವೊಮ್ಮೆ ಅವನು ಮಾಡಿದ ಒಂದು ಚಿಕ್ಕ ತಪ್ಪು ಇಡೀ ಪರಿವಾರವನ್ನೇ ಕತ್ತಲೆಯಲ್ಲಿ ತಳ್ಳಿಬಿಡುತ್ತದೆ. ಚಾಣಾಕ್ಯ ನೀತಿಯಲ್ಲಿ, ಸ್ಥಾನ, ಪರಿವಾರ, ಶಿಕ್ಷಣ (Education) ಮತ್ತು ಧರ್ಮವು ನಿಮ್ಮಲ್ಲಿ ಸ್ಥಿರವಾಗಿ ನಿಲ್ಲುವಂತಹ ಪರಿಹಾರವನ್ನು ಶ್ಲೋಕದ ಮೂಲಕ ಹೇಳಲಾಗಿದೆ. 

Latest Videos

ವಿತ್ತೇನ ರಕ್ಷ್ಯತೇ ಧರ್ಮೋ ವಿದ್ಯಾ ಯೋಗೇನ ರಕ್ಷ್ಯತೇ |
ಮೃದುನಾ ರಕ್ಷ್ಯತೇ ಭೂಪಃ ಸತ್ಸ್ತ್ರಿಯಾ ರಕ್ಷ್ಯತೇ ಗೃಹಮ್ || 

ಅರ್ಥ: ಆಚಾರ್ಯ ಚಾಣಕ್ಯರ ಪ್ರಕಾರ ಧರ್ಮದ ರಕ್ಷಣೆಯನ್ನು ಧನದಿಂದ ಮಾಡಲಾಗುತ್ತದೆ. ಯೋಗದಿಂದ ಜ್ಞಾನವನ್ನು ರಕ್ಷಿಸಬಹುದು. ರಾಜನ ಮೃದು ಸ್ವಭಾವದಿಂದ ಅವನ ಆಡಳಿತವು ಉತ್ತಮವಾಗುತ್ತದೆ. ಮಹಿಳೆಯು ಕುಟುಂಬವನ್ನು ರಕ್ಷಿಸುತ್ತಾಳೆ.

Sixth Sense: ನಮ್ಮೊಳಗೇ ಇದೆ ಆರನೇ ಇಂದ್ರಿಯ: ಸಿಕ್ಸ್ತ್‌ ಸೆನ್ಸ್ ಜಾಗೃತಗೊಳಿಸುವುದು ಹೀಗೆ!

ವಿದ್ಯೆಯ ಸುರಕ್ಷತೆಯೇ ಯಶಸ್ಸಿನ ಗುಟ್ಟು : ನಿರಂತರವಾದ ಪ್ರಯತ್ನದಿಂದ ವಿದ್ಯೆ ಲಭಿಸುತ್ತದೆ ಎಂದು ಚಾಣಾಕ್ಯ ನೀತಿ ಹೇಳುತ್ತದೆ. ಭವಿಷ್ಯ (Future) ವನ್ನು ಸುರಕ್ಷಿತವಾಗಿಡುವ ವಿದ್ಯೆಯ ಯೋಗವನ್ನು ಪಡೆಯಲು ಸತತ ಪ್ರಯತ್ನ ಮಾಡಲೇಬೇಕು. ವಿದ್ಯೆ ನಮ್ಮೊಳಗಿನ ಕತ್ತಲನ್ನು ದೂರಮಾಡುವುದಲ್ಲದೇ ನಮ್ಮ ಭವಿಷ್ಯಕ್ಕೆ ದಾರಿದೀಪವಾಗುತ್ತದೆ. ವಿದ್ಯೆಯಿಂದಲೇ ಧನ, ಸುಖ, ಸಂಪತ್ತು ಸಿಗುತ್ತದೆ. ಯಾರು ವಿದ್ಯೆಗಾಗಿ ನಿರಂತರ ಪರಿಶ್ರಮಪಡುತ್ತಾರೋ ಅವರು ಕಷ್ಟದ ಸಮಯದಲ್ಲಿ ಎಂದೂ ಗಾಬರಿಗೊಳ್ಳುವುದಿಲ್ಲ. ಏಕೆಂದರೆ ಅವರಿಗೆ ವಿದ್ಯೆ ನಮ್ಮನ್ನು ರಕ್ಷಿಸುತ್ತದೆ ಎಂಬ ದೃಢವಾದ ನಂಬಿಕೆ ಇರುತ್ತದೆ. ಹಾಗಾಗಿ ವಿದ್ಯೆಯ ರಕ್ಷಣೆ ಅತೀ ಮುಖ್ಯ ಅಂಶವಾಗಿದೆ.

ಅಹಂಕಾರ ಬೇಡ : ನೀವು ಅಧಿಕಾರದಲ್ಲಿ ಕುಳಿತುಕೊಳ್ಳಲು ಅಥವಾ ನಾಯಕತ್ವವನ್ನು ಉಳಿಸಿಕೊಳ್ಳಲು ಬಯಸುವವರಾದರೆ ನಿಮ್ಮ ಕೈ ಕೆಳಗೆ ಕೆಲಸಮಾಡುವವರ ಜೊತೆ ಸೌಜನ್ಯದಿಂದ ವರ್ತಿಸಿ. ನಿಮ್ಮ ಸ್ಥಾನಮಾನದ ಮೇಲೆ ನಿಮಗೆ ಅಹಂಕಾರ ಬೇಡ. ನಿಮ್ಮ ಅಧಿಕಾರ ಹಾಗೇ ಮುಂದುವರೆಯಬೇಕಾದರೆ ನಿಮ್ಮ ನಡವಳಿಕೆ ಕೂಡ ಅಷ್ಟೇ ವಿನಯವಾಗಿರಬೇಕು ಎಂದು ಚಾಣಾಕ್ಯರು ಹೇಳುತ್ತಾರೆ. 

Ugadi 2023ಕ್ಕೂ ಮೊದಲು ಮನೆಯಿಂದ ಈ ವಸ್ತುಗಳನ್ನು ಹೊರ ಹಾಕಿ, ಇಲ್ಲದಿದ್ದರೆ ದುರದೃಷ್ಟ ಬಿಡೋದಿಲ್ಲ!

ಧನ ಮತ್ತು ಧರ್ಮದ ರಕ್ಷಣೆಯೇ ನಿಮ್ಮ ಭವಿಷ್ಯವನ್ನು ರಕ್ಷಿಸುತ್ತೆ : ಧನದಿಂದಲೇ ಧರ್ಮದ ರಕ್ಷಣೆಯಾಗುತ್ತದೆ ಎಂದು ಚಾಣಾಕ್ಯರು ಹೇಳುತ್ತಾರೆ. ಧನದ ಹೊರತಾಗಿ ಯಾವುದೇ ಧರ್ಮದ ಕೆಲಸ ಮಾಡಲು ಸಾಧ್ಯವಿಲ್ಲ. ಈ ಸಂಸಾರದ ಸಾರವೇ ಧರ್ಮದಲ್ಲಿ ಅಡಗಿದೆ. ಹಾಗಾಗಿಯೇ ಧರ್ಮದ ರಕ್ಷಣೆ ಆಗಬೇಕಿದೆ. ನಿಮ್ಮ ದುಡಿಮೆಯ ಹಣವನ್ನು ದಾನ-ಧರ್ಮಗಳಂತಹ ಕಾರ್ಯಗಳಲ್ಲಿ ಮತ್ತು ನಿಮ್ಮ ಮುಂದಿನ ಭವಿಷ್ಯಕ್ಕೋಸ್ಕರ ಕೂಡ ಹೂಡಿಕೆ ಮಾಡಬೇಕು. ಹೀಗೆ ಧರ್ಮದ ಕಾರ್ಯಗಳಲ್ಲಿ ಹಣವನ್ನು ಉಪಯೋಗಿಸಿದರೆ ಎಂದೂ ಮುಗಿಯದ ಸುಖ ನಿಮ್ಮದಾಗುತ್ತೆ. ನಿಮ್ಮ ಭವಿಷ್ಯಕ್ಕೋಸ್ಕರ ನೀವು ಕೂಡಿಟ್ಟ ಹಣ ಕಷ್ಟದ ಸಮಯದಲ್ಲಿ ನೀವು ಇನ್ನೊಬ್ಬರ ಮುಂದೆ ಕೈ ಚಾಚದಿರುವಂತೆ ಮಾಡುತ್ತೆ.

ಮನೆಯನ್ನು ಸುರಕ್ಷಿತವಾಗಿಡಲು ಇದು ಬಹಳ ಮುಖ್ಯ :  ಗೃಹಿಣಿ ಗೃಹಮುಚ್ಯತೇ ಎಂಬಂತೆ ಗೃಹಿಣಿಯಿಂದಲೇ ಗೃಹದ ಉನ್ನತಿಯಾಗುತ್ತದೆ. ಸದ್ಗೃಹಿಣಿಯ ಸಂಪೂರ್ಣ ಸಹಕಾರದಿಂದಲೇ ಆ ಗೃಹದ ಸರ್ವಾಂಗೀಣ ಏಳ್ಗೆಯಾಗುತ್ತದೆ. ಸ್ತ್ರೀ ಮನೆಗೆ ಮಾತ್ರವಲ್ಲದೇ ಪೂರ್ತಿ ಕುಟುಂಬದ ಬೆನ್ನೆಲುಬಾಗಿರುತ್ತಾಳೆ. ಒಬ್ಬ ಮಹಿಳೆ ತನ್ನ ಮನೆಯನ್ನು ಸುರಕ್ಷಿತವಾಗಿಡಲು ಏನು ಬೇಕೋ ಎಲ್ಲವನ್ನೂ ತನ್ನ ಶಕ್ತಿಗೂ ಮೀರಿ ಮಾಡುತ್ತಾಳೆ. ಒಬ್ಬ ಸುಸಂಸ್ಕೃತ, ಸದ್ಗುಣಶೀಲ ಹೆಣ್ಣಿನಿಂದ ಕುಟುಂಬಕ್ಕೆ ನೆಮ್ಮದಿ, ಅಭಿವೃದ್ಧಿ, ಸುಖ ಎಲ್ಲವೂ ಸಿಗುತ್ತದೆ. ಹಾಗಾಗಿ ಒಂದು ಮನೆಯ ಸುಖ, ಶಾಂತಿ, ನೆಮ್ಮದಿ ಹಾಗೂ ಕಷ್ಟಗಳಿಗೆ ರಕ್ಷಣೆ ಕೊಡುವಂತ ಗೃಹಿಣಿ ಬೇಕು ಹಾಗೂ ಅವಳ ರಕ್ಷಣೆಯೂ ಆಗಬೇಕು ಎನ್ನುತ್ತಾರೆ ಚಾಣಕ್ಯ.
 

click me!