Astrology Tips: ಮಹಿಳೆ ಕಾಲಿಗೆ ಕುಂಕುಮ ಹಚ್ಚಿದ್ರೆ ಅದೃಷ್ಟದ ಬಾಗಿಲು ತೆರೆದಂತೆ

By Suvarna NewsFirst Published Mar 16, 2023, 2:58 PM IST
Highlights

ಹಿಂದೂ ಧರ್ಮದಲ್ಲಿ ಕುಂಕುಮಕ್ಕೆ ಮಹತ್ವದ ಸ್ಥಾನವಿದೆ. ಕುಂಕುಮವನ್ನು ದೇವರ ಪೂಜೆಯಿಂದ ಹಿಡಿದು ಸೌಂದರ್ಯ ವರ್ಧಕದವರೆಗೆ ಬಳಕೆ ಮಾಡಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲೂ ಇದಕ್ಕೆ ಆದ್ಯತೆ ನೀಡಲಾಗಿದೆ. ಮಹಿಳೆ ತನ್ನ ಹಣೆಗೆ ಮಾತ್ರವಲ್ಲ ಕಾಲಿಗೆ ಕುಂಕುಮ ಹಚ್ಚಿಕೊಂಡ್ರೂ ಲಾಭ ಸಾಕಷ್ಟಿದೆ. 
 

ಕುಂಕುಮ ಅಂದ್ರೆ ಶುಭ. ಹಿಂದೂ ಧರ್ಮದಲ್ಲಿ ಕುಂಕುಮದ ಬಳಕೆ ಸುಮಾರು 5000 ವರ್ಷಗಳಿಂದಲೂ ಇದೆ ಎನ್ನಲಾಗುತ್ತದೆ. ಮದುವೆ,  ಆರತಕ್ಷತೆ, ಹುಟ್ಟುಹಬ್ಬ, ನಾಮಕರಣ, ಹಬ್ಬ ಹರಿದಿನ ಹೀಗೆ ಪ್ರತಿಯೊಂದು ಶುಭ ಕಾರ್ಯದಲ್ಲೂ ಕುಂಕುಮದ ಬಳಕೆ ಇದ್ದೇ ಇರುತ್ತೆ. ಮದುವೆಯಲ್ಲಿ ಗಂಡ ಹೆಂಡತಿಯಾದವಳ ಹಣೆಗೆ ಕುಂಕುಮ ಇಡ್ತಾನೆ. ಬೈತಲೆಗೆ ಕುಂಕುಮವನ್ನು ಧರಿಸುವವರ ಪತಿಯನ್ನು ಪಾರ್ವತಿಯು ರಕ್ಷಿಸುತ್ತಾಳೆ ಎಂಬ ಪ್ರತೀತಿಯಿದೆ. 

ಕುಂಕುಮ (Saffron) ವನ್ನು ಕನ್ಯೆಯರಿಂದ ಹಿಡಿದು ಮದುವೆಯಾದ ಮಹಿಳೆಯರವರೆಗೆ ಎಲ್ಲರೂ ಬಳಸ್ತಾರೆ. ಮದುವೆ (Marriage) ಯಾದ ಹೆಣ್ಣಿಗೆ ಇದು ಮುತ್ತೈದೆತನದ ಸಂಕೇತ. ಹಣೆಯ ಮೇಲೆ ಕುಂಕುಮವನ್ನಿಡುವುದು ಹೆಣ್ಣಿನ ಆರೋಗ್ಯಕ್ಕೆ ಒಳ್ಳೆಯದೆಂದು ವೈಜ್ಞಾನಿಕ (Scientific) ವಾಗಿಯೂ ಸಾಬೀತಾಗಿದೆ. ಅತ್ಯಂತ ಪವಿತ್ರವಾದ ಈ ಕುಂಕುಮವನ್ನು ಮದುವೆಯ ಸಮಯದಲ್ಲಿ ಮದುಮಗಳು ಮತ್ತು ಮನೆಯ ಹೆಂಗಸರೆಲ್ಲರೂ ಕಾಲಿಗೆ ಹಚ್ಚಿಕೊಳ್ಳುವ ಪದ್ಧತಿಯಿದೆ. ನವವಧುವು ಮೊದಲ ಬಾರಿ ಗಂಡನ ಮನೆಗೆ ಹೋದಾಗಲೂ ಕುಂಕುಮದಿಂದಲೇ ಅವಳ ಕಾಲಿನ ಗುರುತನ್ನು ಮೂಡಿಸಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಗೆ ಲಕ್ಷ್ಮಿಯ ಆಗಮನವಾಗುತ್ತೆ, ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬ ನಂಬಿಕೆಯಿದೆ. ಹೆಣ್ಣಿಗೆ ಭೂಷಣವಾದ, ಆರೋಗ್ಯ ನೀಡುವ ಈ ಕುಂಕುಮವನ್ನು ಕಾಲಿಗೆ ಹಚ್ಚಿಕೊಳ್ಳುವುದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ ಅವು ಯಾವುದೆಂದು ನೋಡೋಣ.

Latest Videos

ವಿಷ್ಣುವಿನ ದಶಾವತಾರಗಳ ಬಗ್ಗೆ ನಿಮಗೆಷ್ಟು ಗೊತ್ತು?

• ಕುಂಕುಮದ ಬಣ್ಣ ಕೆಂಪಾಗಿರುತ್ತದೆ. ಕೆಂಪು ಬಣ್ಣವನ್ನು ಸೌಭಾಗ್ಯ ಮತ್ತು ಲಕ್ಷ್ಮಿ ದೇವಿಯ ಪ್ರತೀಕ ಎನ್ನಲಾಗುತ್ತದೆ.
• ಯಾವ ಮನೆಯ ಮಹಿಳೆಯರು ಕಾಲಿಗೆ ಕುಂಕುಮವನ್ನು ಹಚ್ಚಿಕೊಳ್ಳುತ್ತಾರೋ ಆ ಮನೆಯಲ್ಲಿ ಎಂದೂ ಹಣದ ಕೊರತೆಯಾಗುವುದಿಲ್ಲ. ಮನೆ ಸದಾಕಾಲ ಧನ-ಧಾನ್ಯದಿಂದ ತುಂಬಿರುತ್ತದೆ ಮತ್ತು ಮನೆಯಲ್ಲಿ ಶಾಂತಿ ಸ್ಥಿರವಾಗಿ ನೆಲೆಸುತ್ತದೆ.
• ಪಾದಗಳಿಗೆ ಕುಂಕುಮವನ್ನಿಡುವುದರಿಂದ ಮಂಗಳ ಗ್ರಹದ ಆಶೀರ್ವಾದ ದೊರಕುತ್ತೆ. ಏಕೆಂದರೆ ಮಂಗಳಗ್ರಹದ ಬಣ್ಣ ಕೂಡ ಕೆಂಪೇ ಆಗಿದೆ. ಹಾಗಾಗಿ ಮನೆಯ ಹೆಂಗಸರು ಕಾಲಿಗೆ ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಮನೆಯವರು ಕೂಡ ಮಂಗಳನ ದೋಷಕ್ಕೆ ಒಳಗಾಗುವುದಿಲ್ಲ.
• ಪಾರ್ವತಿ ದೇವಿಗೂ ಕೂಡ ಕುಂಕುಮ ಎಂದರೆ ಬಹಳ ಇಷ್ಟ. ಇದು ಸ್ತ್ರೀ ಶಕ್ತಿಯ ಸಂಕೇತವೂ ಹೌದು. ಪಾರ್ವತಿಯು ಕೂಡ ಶಿವನಿಗೋಸ್ಕರ ಕಾಲಿಗೆ ಕುಂಕುಮವನ್ನು ಹಚ್ಚಿಕೊಳ್ಳುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ ಮನೆಯ ಮುತ್ತೈದೆಯರು ತಮ್ಮ ಪಾದಗಳಿಗೆ ಕುಂಕುಮವನ್ನು ಇಟ್ಟುಕೊಳ್ಳುವುದರಿಂದ ಅವರ ವೈವಾಹಿಕ ಜೀವನ ಯಾವಾಗಲೂ ಸುಖ, ಪ್ರೇಮ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ. ಕುಂಕುಮದಿಂದ ಸಂಗಾತಿ ಯಾವಾಗಲೂ ಜೊತೆಯಿರುತ್ತಾನೆ.

Chanakya Niti: ಸಂಸಾರದ ಜೊತೆ ಭವಿಷ್ಯದ ಸುಖಕ್ಕೆ ಚಾಣಕ್ಯನ ನೀತಿ ಅನುಸರಿಸಿ

• ಮನೆಯಲ್ಲಿರುವ ಕನ್ಯೆಯರು ತಮ್ಮ ಕಾಲುಗಳಿಗೆ ಕುಂಕುಮ ಹಚ್ಚಿಕೊಂಡರೆ ಶಿವನಂತಹ ಸಂಗಾತಿ ಅವರಿಗೆ ಸಿಗುತ್ತಾನೆ. ಗಂಡನ ಮನೆಯಲ್ಲಿ ಕೂಡ ಆಕೆಗೆ ಎಲ್ಲರಿಂದ ಬಹಳ ಪ್ರೀತಿ ಸಿಗುತ್ತದೆ. ಕಾಲಿಗೆ ಹಚ್ಚುವ ಕುಂಕುಮದಿಂದ ಮನೆಗೆ ಅಶುಭವಾಗುವುದಿಲ್ಲ ಎಂದು ಜ್ಯೋತಿಷ್ಯ ಹೇಳುತ್ತದೆ.
• ವಿವಾಹಿತ ಮಹಿಳೆ ದಕ್ಷಿಣ ದಿಕ್ಕಿಗೆ ಮುಖವಾಗಿ ಕಾಲಿಗೆ ಕುಂಕುಮ ಹಚ್ಚಿಕೊಳ್ಳಬಾರದು. ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿ ಬಣ್ಣ ಹಚ್ಚಿಕೊಳ್ಳಬಹುದು
• ಯಾವ ಮನೆಯ ಮಹಿಳೆ ಕುಂಕುಮವನ್ನು ಇಟ್ಟುಕೊಳ್ಳುತ್ತಾಳೋ ಆ ಮನೆಯ ಪುರುಷ ಯಾವಾಗಲೂ ಆರೋಗ್ಯವಂತ ಮತ್ತು ನೆಮ್ಮದಿಯ ಜೀವನ ನಡೆಸುತ್ತಾನೆ. ಕಾಲಿಗೆ ಕುಂಕುಮ ಇಡುವ ಮಹಿಳೆಯ ಪತಿಗೆ ಎಂದಿಗೂ ಯಾವ ಸಂಕಟವೂ ಎದುರಾಗುವುದಿಲ್ಲ.
• ಪಾದಗಳ ಮುಂಭಾಗದಿಂದ ಆರಂಭವಾಗಿ ಹಿಂಭಾಗದವರೆಗೂ ಕುಂಕುಮವನ್ನು ಹಚ್ಚಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹಿಂಬಾಗದಿಂದ ಕುಂಕುಮ ಹಚ್ಚಬಾರದು ಮತ್ತು ಮಧ್ಯದಲ್ಲಿ ಎಲ್ಲೂ ಪಾದವನ್ನು ಖಾಲಿ ಬಿಡಬಾರದು.
• ಕುಂಕುಮವನ್ನು ಹಚ್ಚಿ ಸ್ವಲ್ಪ ಸಮಯದ ನಂತರ ಹಾಗೇ ಅದನ್ನು ತೊಳೆದುಕೊಳ್ಳುವುದು ಕೂಡ ಶ್ರೇಯಸ್ಸಲ್ಲ. ಹೀಗೆ ಮಾಡುವುದರಿಂದ ಗಂಡನಿಗೆ ದುರಾದೃಷ್ಟ ಒದಗಬಹುದು.

click me!