ಅಯೋಧ್ಯೆ ಶಾಂತವಾಗಿರಲು ಈ ದೇವಿಯೇ ಕಾರಣ… ರವಿಶಂಕರ್ ಗುರೂಜಿ ಹೇಳಿದ್ದೇನು?

By Suvarna NewsFirst Published Jan 12, 2024, 3:09 PM IST
Highlights

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಯಾವುದೇ ಗಲಾಟೆ- ಗೊಂದಲವಿಲ್ಲದೆ ನಡೆದಿದೆ. ರಾಮಲಾಲ ಪ್ರಾಣ ಪ್ರತಿಷ್ಠೆಗೆ ಕಾಲ ಕೂಡಿ ಬಂದಿದೆ. ಎಷ್ಟೋ ವರ್ಷ ಹೋರಾಡಿದ್ರೂ ಸಿಗದ ಫಲ ಈಗ ಸಿಗಲು ಕಾರಣ ಏನು ಎಂಬುದನ್ನು ರವಿಶಂಕರ್ ಗುರೂಜಿ ಹೇಳಿದ್ದಾರೆ.
 

ಜನವರಿ 22 ರಂದು ಲೋಕಾರ್ಪಣೆಯಾಗಲಿರುವ ಅಯೋಧ್ಯೆಯ ರಾಮಮಂದಿರಕ್ಕೆ ಇಡೀ ದೇಶವೇ ಸನ್ನದ್ಧವಾಗಿದೆ. ರಾಮಮಂದಿರದ ಉದ್ಘಾಟನೆಯ ಮೂಲಕ ಬಹುಜನರ ಬಹುನಿರೀಕ್ಷಿತ ಕನಸು ನನಸಾಗಲಿದೆ. ಸುಪ್ರೀಂ ಕೋರ್ಟ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಎಲ್ಲ ಮಧ್ಯಸ್ಥಗಾರರ ಪರಿಶ್ರಮದಿಂದ ಇಂದು ರಾಮಮಂದಿರ ತಲೆಎತ್ತಿ ನಿಂತಿದೆ.

ರಾಮಮಂದಿರ (Ram Mandir) ದ ಸುತ್ತಲೂ ಅನೇಕ ವಿವಾದಗಳು ಹಾಗೂ ಆಸಕ್ತಿದಾಯಕ ರಹಸ್ಯಗಳು ಇವೆ. ಮನುಷ್ಯ, ಕಾನೂನುಗಳು ಎಷ್ಟೇ ಪ್ರಭಲವಾಗಿದ್ದರೂ ದೈವಿ ಶಕ್ತಿಯಿಲ್ಲದೇ ಯಾವುದೂ ನಡೆಯುವುದಿಲ್ಲ ಎನ್ನುವುದಕ್ಕೆ ರಾಮಂದಿರವೇ ಸಾಕ್ಷಿ ಎಂದು ಶ್ರೀ ಶ್ರೀ ರವಿಶಂಕರ (Ravi Shankar) ಗುರೂಜಿ ಹೇಳಿದ್ದಾರೆ. ಇಂದು ರಾಮಮಂದಿರ ನಿರ್ಮಾಣ ಇಷ್ಟು ಯಶಸ್ಸಾಗಲು ಶ್ರೀರಾಮನ ಕುಲದೇವಿ ದೇವಕಾಳಿ (Devkali) ಯೇ ಕಾರಣ ಎಂದು ಗುರೂಜಿ ಹೇಳಿದ್ದಾರೆ.

ರಾಮಮಂದಿರ ಲೋಕಾರ್ಪಣೆ ಸಮಯದಲ್ಲಿ ಹೊಸ ವಿವಾದ,ಮಂದಿರ ಉದ್ಘಾಟನೆಗೆ ಯಾಕೆ ಪೀಠಾಧಿಪತಿಗಳ ವಿರೋಧ..?

ವಾದ ವಿವಾದಗಳ ಸುಳಿಯಲ್ಲಿ ರಾಮಜನ್ಮಭೂಮಿ : 2002ರ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾಗಿದ್ದ ಅಶೋಕ ಸಿಂಘಾಲ್ ಅವರು ರಾಮಜನ್ಮಭೂಮಿ – ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಕಂಚಿಯ ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿ ಅವರನ್ನು ಭೇಟಿಯಾದ ನಂತರ ಬೆಂಗಳೂರಿನಲ್ಲಿರುವ ಶ್ರೀ ರವಿಶಂಕರ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ರಾಮಮಂದಿರ ನಿರ್ಮಾಣ ಮಾಡುವುದು ಸಿಂಘಲ್ ಅವರ ಗುರಿ ಹಾಗೂ ಕನಸಾಗಿತ್ತು. 

ರವಿಶಂಕರ ಗುರೂಜಿಯವರು, “ನಾನು ಮತ್ತು ವಾಜಪೇಯಿ ಅವರು ಅಯೋಧ್ಯೆ ವಿಷಯಕ್ಕೆ ಸಂಬಂಧಿಸಿದಂತೆ ನಿಕಟ ಸಂಪರ್ಕವನ್ನು ಹೊಂದಿದ್ದೆವು. ವಾಜಪೇಯಿ ಅವರು ರಾಮಭೂಮಿಯ ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. ಹಾಗಾಗಿ ನಾನು ಮುಸ್ಲಿಂ ಸದಸ್ಯರೊಂದಿಗೆ ಹಲವು ಚರ್ಚೆಯನ್ನು ನಡೆಸಿದ್ದೆ” ಎಂದಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಅಶೋಕ ಸಿಂಘಲ್ ಅವರು ಸತತ ಹೋರಾಟ ನಡೆಸಿದ್ದರು. 76 ನೇ ವಯಸ್ಸಿನ ಸಿಂಘಲ್ ಅವರು “ಮುಂದೆ ಎಂದಾದರೂ ಈ ದೇವಾಲಯ ನಿರ್ಮಿಸಬಹುದೇ” ಎಂದು ನನ್ನನ್ನು ಕೇಳಿದ್ದರು. ಆಗ ನಾನು ಇನ್ನು 14 ವರ್ಷಗಳವರೆಗೆ ಇದು ಸಾಧ್ಯವಿಲ್ಲ ಎಂದಿದ್ದೆ ಎಂದು ತಾನು ಹೇಳಿದ ಮಾತನ್ನು ಗುರೂಜಿ ನೆನಪಿಸಿಕೊಂಡಿದ್ದಾರೆ.

ದೇವಕಾಳಿ ದೇವಸ್ಥಾನದ ಪುನರುಜ್ಜೀವನದಿಂದಲೇ ನಿರ್ಮಾಣವಾಯ್ತು ರಾಮಮಂದಿರ :  ಅಶೋಕ ಸಿಂಘಲ್ ಅವರೊಡನೆ ನಡೆದ ಮಾತುಕತೆಯ ಮಾರನೇ ದಿನ ರವಿಶಂಕರ ಗುರೂಜಿಯವರು ಧ್ಯಾನದಲ್ಲಿದ್ದಾಗ ಅವರಿಗೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ದೇವಿಕಾಳಿಯ ದೇವಸ್ಥಾನವೊಂದು ಕಾಣಿಸಿತು. ಆದರೆ ಆಗ ಗುರೂಜಿಯವರು ಅದರ ಕಡೆ ಹೆಚ್ಚು ಗಮನಹರಿಸಲಿಲ್ಲ. ಇದಾದ ಕೆಲವು ದಿನಗಳ ನಂತರ ತಮಿಳನಾಡಿದ ಜ್ಯೋತಿಷಿಗಳೊಬ್ಬರು ಗುರೂಜಿಯವರ ಆಶ್ರಮಕ್ಕೆ ಭೇಟಿ ನೀಡಿ ತಾಳೆಗರಿಗಳನ್ನು ಓದಿ, “ಗುರೂಜಿ, ರಾಮಜನ್ಮಭೂಮಿಯ ವಿವಾದ ಬಗೆಹರಿಯಲು ನೀವು ಎರಡೂ ಸಮುದಾಯಗಳನ್ನು ಒಟ್ಟುಗೂಡಿಸಬೇಕು ಹಾಗೂ ಶ್ರೀರಾಮನ ಕುಲದೇವಿ ದೇವಕಾಳಿಯ ದೇವಾಲಯ ಶಿಥಿಲಾವಸ್ಥೆಯಲ್ಲಿದೆ ಅದನ್ನು ಪುರುಜ್ಜೀವನಗೊಳಿಸಬೇಕು. ಅಲ್ಲಿಯವರೆಗೆ ಅಯೋಧ್ಯೆ ವಿವಾದ ಕೊನೆಗೊಳ್ಳುವುದಿಲ್ಲ” ಎಂದಿದ್ದರಂತೆ. 

ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆ, ಇತರೆ ಪೂಜೆಗಳು ಹೇಗೆ ನಡೆಯುತ್ತೆ? ಪ್ರಧಾನ ಅರ್ಚಕರು ಹೇಳಿದ್ದೀಗೆ..

ಆ ಸಮಯದಲ್ಲಿ ಅಲ್ಲಿ ದೇವಿಯ ದೇವಸ್ಥಾನ ಇರುವ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಆದರೆ ಕೆಲವೇ ಕೆಲವು ದಿನಗಳಲ್ಲಿ ಅಲ್ಲಿ ಶ್ರೀರಾಮನ ಕುಲದೇವಿಯಾದ ಚಿಕ್ಕ ದೇವಕಾಳಿ ಮತ್ತು ದೇವಕಾಳಿಯ ದೇವಸ್ಥಾನವಿತ್ತು ಎನ್ನುವುದನ್ನು ಪತ್ತೆ ಮಾಡಲಾಯಿತು. ಸಪ್ಟೆಂಬರ್ 19, 2002ರಲ್ಲಿ ದೇವಕಾಳಿಯ ಪುನರ್ ಪ್ರತಿಷ್ಠಾಪನೆ ನಡೆಯಿತು. ಇದಾದ ನಂತರ ಪವಾಡವೆಂಬಂತೆ ನಗರದಲ್ಲಿ ಯಾವುದೇ ರೀತಿಯ ಕೋಮುಗಲಭೆಯಾಗಲೀ, ರಕ್ತಪಾತವಾಗಲೀ ಆಗಲೇ ಇಲ್ಲ ಎಂದು ರವಿಶಂಕರ ಗುರೂಜಿ ಹೇಳಿದ್ದಾರೆ. 500 ವರ್ಷಗಳ ಸಂಘರ್ಷ, ಒಂದು ಭವಿಷ್ಯವಾಣಿಯಿಂದ ಸಂಪೂರ್ಣವಾಗಿ ಕೊನೆಯಾಗಿತ್ತು. ದೇವಿಕಾಳಿಯ ಅನುಗ್ರಹದಿಂದ ಇಂದು ಭವ್ಯ ರಾಮಂದಿರ ತಲೆಎತ್ತಿದೆ ಎಂದು ರವಿಶಂಕರ ಗುರೂಜಿ ಹೇಳಿದ್ದಾರೆ.
 

click me!