Pitru Paksha 2022: ಗಯಾ ಹೊರತಾಗಿ ಈ ಪುಣ್ಯ ಕ್ಷೇತ್ರಗಳಲ್ಲಿ ಕೂಡಾ ಪಿಂಡದಾನ ಮಾಡಬಹುದು!

By Suvarna NewsFirst Published Sep 15, 2022, 1:38 PM IST
Highlights

ಗಯಾವನ್ನು ಹೊರತುಪಡಿಸಿ, ನಿಮ್ಮ ಪೂರ್ವಜರ ಪಿಂಡ ದಾನವನ್ನು ಮಾಡುವ ಅನೇಕ ಪವಿತ್ರ ಸ್ಥಳಗಳಿವೆ. ಇಂಥ ಪವಿತ್ರ ಸ್ಥಳಗಳಲ್ಲಿ ಪಿಂಡದಾನ ಮಾಡುವುದು ಬಹಳ ಶ್ರೇಷ್ಠವಾಗಿದ್ದು, ಪಿತೃಗಳಿಗೆ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. 

ಸಾವಿರಾರು ವರ್ಷಗಳಿಂದ, ಪಿತೃ ಪಕ್ಷದಲ್ಲಿ, ಜನರು ತಮ್ಮ ಪೂರ್ವಜರಿಗೆ ಪಿಂಡವನ್ನು ಅರ್ಪಿಸುತ್ತಾರೆ. ಹಾಗೊಂದು ವೇಳೆ ಕುಟುಂಬದಲ್ಲಿ ಯಾರಿಗಾದರೂ ಸರಿಯಾಗಿ ಶ್ರಾದ್ಧಕರ್ಮಗಳನ್ನು ಮಾಡದಿದ್ದಲ್ಲಿ ಅವರು ತಮ್ಮ ಲೋಕದಲ್ಲಿ ಮುಕ್ತಿ ಇಲ್ಲದೆ ನರಳುತ್ತಿರುತ್ತಾರೆ ಎನ್ನಲಾಗುತ್ತದೆ. ಪಿಂಡ ದಾನಕ್ಕೆ ಅತ್ಯಂತ ಪ್ರಸಿದ್ಧವಾದ ಧಾರ್ಮಿಕ ಸ್ಥಳವೆಂದರೆ ಬಿಹಾರದ ಗಯಾ. ಜನರು ಈ ಸಂದರ್ಭದಲ್ಲಿ ಇಲ್ಲಿಗೆ ಹೋಗಿ ಪೂರ್ವಜರ ಕಾರ್ಯಗಳನ್ನು ಮಾಡುತ್ತಾರೆ. ಆದರೆ ಎಲ್ಲರಿಗೂ ಈ ಸಮಯದಲ್ಲಿ ಗಯಾಗೆ ಹೋಗುವುದು ಸಾಧ್ಯವಿಲ್ಲ. ಅವರು ದೇಶದ ಇನ್ನೂ ಹಲವೆಡೆ ಪಿಂಡ ಪ್ರದಾನಕ್ಕೆ ಹೆಸರಾಗಿರುವ ಈ ಸ್ಥಳಗಳಿಗೆ ಹೋಗಲು ಪ್ರಯತ್ನಿಸಬಹುದು. ಯಾವುದೂ ಸಾಧ್ಯವಿಲ್ಲವೆಂದವರು ಮನೆಯಲ್ಲೇ ಪಿತೃ ಕಾರ್ಯಗಳನ್ನು ನಡೆಸಬಹುದು. ಈ ಸಂದರ್ಭದಲ್ಲಿ ಪವಿತ್ರ ಕ್ಷೇತ್ರಗಳಲ್ಲಿ ಪಿಂಡದಾನ ಮಾಡುವುದರಿಂದ ಮೃತರ ಆತ್ಮಕ್ಕೆ ಸದ್ಗತಿ ದೊರೆಯುತ್ತದೆ, ಮೋಕ್ಷ ದೊರಕುತ್ತದೆ ಎಂಬ ಮಾತಿದೆ.  ಸಧ್ಯ ನಿಮ್ಮ ಪೂರ್ವಜರಿಗೆ ನೀವು ಪಿಂಡದಾನ ಮಾಡಬಹುದಾದ ಪುಣ್ಯ ಕ್ಷೇತ್ರಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. 

ಕುರುಕ್ಷೇತ್ರ(Kurukshetra)
ದೆಹಲಿಯ ಸಮೀಪ ವಾಸಿಸುವ ಜನರು ಹರಿಯಾಣದ ಕುರುಕ್ಷೇತ್ರದಲ್ಲಿ ಪಿಂಡ ದಾನ ಮಾಡುತ್ತಾರೆ. ಈ ಸರೋವರವು 7 ಪವಿತ್ರ ನದಿಗಳ ಸಂಗಮವಾಗಿದೆ. ಅದಕ್ಕಾಗಿಯೇ ಇದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇಲ್ಲಿ ಪಿತೃ ಕಾರ್ಯಗಳನ್ನು ನಡೆಸಿದರೆ ಮೋಕ್ಷ ದೊರೆಯುವುದು ಖಚಿತ ಎಂಬ ನಂಬಿಕೆ ಇದೆ.

ಹರಿದ್ವಾರ(Hardwara)
ಇಲ್ಲಿನ ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಸರ್ವ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ, ಇಲ್ಲಿ ಪಿತೃಕಾರ್ಯಗಳನ್ನು ನಡೆಸಿದರೆ ಗತಿಸಿದ ಆತ್ಮಕ್ಕೆ ಕೂಡಾ ಮುಕ್ತಿ ಸಿಗಲಿದೆ. 

ಪುಷ್ಕರ್(Pushkar)
ರಾಜಸ್ಥಾನದ ಅಜ್ಮೀರ್ ನಗರದಲ್ಲಿರುವ ಪುಷ್ಕರ್ ಪಟ್ಟಣದಲ್ಲಿ ಪಿಂಡದಾನವನ್ನು ಮಾಡುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಜನರು ತೀರ್ಥಯಾತ್ರೆಗೆ ಹೋಗುವ ಪವಿತ್ರ ಸರೋವರವೂ ಇಲ್ಲಿದೆ. ಇಲ್ಲಿ ಬ್ರಹ್ಮನ ದೇವಸ್ಥಾನವೂ ಇದೆ.

Vivah Muhurat 2022: ಈ ವರ್ಷ ಮದುವೆಗೆ ಪ್ರಶಸ್ತ ಮುಹೂರ್ತಗಳು ಯಾವಾಗಿವೆ?

ಮಥುರಾ(Mathura)
ಉತ್ತರ ಪ್ರದೇಶದ ಮಥುರಾ ನಗರವನ್ನು ಪಿಂಡ ದಾನಕ್ಕೆ ಉತ್ತಮವೆಂದು ಪರಿಗಣಿಸಲಾಗಿದೆ. ಇದನ್ನು ಶ್ರೀ ಕೃಷ್ಣನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಈ ಸ್ಥಳವನ್ನು ನೋಡಲು ಜನರು ದೇಶದಿಂದ ಮಾತ್ರವಲ್ಲದೆ ಪ್ರಪಂಚದಾದ್ಯಂತ ಬರುತ್ತಾರೆ. ಇಲ್ಲಿನ ಸರಯೂ ನದಿ ತಟದಲ್ಲಿ ಪಿಂಡ ದಾನ ಮಾಡಲಾಗುತ್ತದೆ.

ಬನಾರಸ್ ಘಾಟ್(Banaras)
ಅತ್ಯಂತ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಬನಾರಸ್‌ನ್ನು ಕೂಡ ಪಿಂಡ ದಾನಕ್ಕೆ ಉತ್ತಮವೆಂದು ಪರಿಗಣಿಸಲಾಗಿದೆ. ಪಿತೃ ಪಕ್ಷದಲ್ಲಿ ಇಲ್ಲಿ ಪಿಂಡ ದಾನ ಮಾಡುವವರ ದಂಡೇ ಜಾಸ್ತಿ ಇರುತ್ತದೆ.

ಕರ್ನಾಟಕದಲ್ಲಿ ಕೂಡಾ ಕೆಲವು ಕ್ಷೇತ್ರಗಳು ಪಿಂಡದಾನಕ್ಕೆ ಶ್ರೇಷ್ಠವೆನಿಸಿವೆ.
ಲಕ್ಷ್ಮಣಬಾಣ(Lakshmanabana)

ಕರ್ನಾಟಕದಲ್ಲಿನ ಲಕ್ಷ್ಮಣಬಾಣದಲ್ಲಿ ಶ್ರೀ ರಾಮನು ತನ್ನ ತಂದೆ ದಶರಥನ ಶ್ರಾದ್ಧ ಕರ್ಮವನ್ನು ಮಾಡಿದನೆಂಬ ಉಲ್ಲೇಖವಿದೆ. ಇಲ್ಲಿ ಪಿಂಡ ದಾನ ಮಾಡುವುದರಿಂದ ಮರಣ ಹೊಂದಿದ ವ್ಯಕ್ತಿಗಳ ಆತ್ಮವು ಜನನ ಮರಣ ಚಕ್ರದಿಂದ ಮುಕ್ತಿ ಪಡೆಯುತ್ತದೆ ಎನ್ನುವ ನಂಬಿಕೆಯಿದೆ. ಹಾಗಾಗಿ, ಇಲ್ಲಿ ಕೂಡಾ ಪಿತೃಪಕ್ಷದಲ್ಲಿ ಕಾರ್ಯಗಳನ್ನು ಮಾಡಬಹುದು. 

ಗುರುವಾರ ವ್ರತದಿಂದ ಅವಿವಾಹಿತರಿಗೆ ಹೆಚ್ಚುತ್ತೆ ಗುರುಬಲ, ಬೇಗ ವಿವಾಹ ಸಾಧ್ಯ

ಗೋಕರ್ಣ(Gokarna)
ರಾಮಾಯಣ ಕಾಲದಷ್ಟು ಹಳೆಯದಾದ, ಭೂಮಿ ಮೇಲಿನ ಕೈಲಾಸ ಎನಿಸಿಕೊಂಡಿರುವ ಗೋಕರ್ಣವು ವಿಶ್ವಪ್ರಸಿದ್ಧಿ ಪಡೆದಿದೆ. ಇಲ್ಲಿ ಕೂಡಾ ಪಿತೃಗಳಿಗೆ ಪಿಂಡ ದಾನ ಮಾಡುವುದು ಶ್ರೇಷ್ಠವೆನಿಸಿದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!