ನಿಮ್ಮ ರಾಶಿ ನೋಡಿ ವಾರದ ಈ ದಿನವೇ ವ್ರತ ಮಾಡಿ..!

By Suvarna NewsFirst Published Jul 18, 2020, 4:32 PM IST
Highlights

ಪ್ರತಿ ರಾಶಿಗೆ ಅದರದ್ದೇ ಆದ ಗುಣ ಸ್ವಭಾವಗಳಿರುವಂತೆ, ಪ್ರತಿ ರಾಶಿಯವರು ಆರಾಧಿಸಬೇಕಾದ ದೇವರುಗಳು ಬೇರೆ ಬೇರೆ. ಆಯಾ ದೇವರಿಗೆ ಅನುಗುಣವಾಗಿ ಪೂಜೆ, ಮಂತ್ರ, ಉಪಾಸನಾ ಕ್ರಮ ಭಿನ್ನವಾಗಿರುತ್ತದೆ. ಹಾಗೆಯೇ ಪ್ರತಿ ರಾಶಿಯವರಿಗೆ ಶ್ರೇಯಸ್ಸಾಗುವ ದಿನದಂದು ವ್ರತವನ್ನು ಮಾಡಿದರೆ ಶೀಘ್ರ ಫಲಪ್ರಾಪ್ತಿಯಾಗುತ್ತದೆ. ಆಯಾ ರಾಶಿಯವರು ಯಾವ ದಿನದಂದು ವ್ರತ, ಉಪಾಸನೆಗಳನ್ನು ಮಾಡಿದರೆ ಉತ್ತಮ, ಯಶಸ್ಸು, ಕೀರ್ತಿ ಮತ್ತು ಸಮೃದ್ಧಿ ಲಭಿಸುತ್ತದೆ ಎನ್ನುವುದನ್ನು ನೋಡೋಣ.

ಹಿಂದೂ ಧರ್ಮದಲ್ಲಿ ಹಲವಾರು ಆಚರಣೆಗಳಿವೆ. ಹಬ್ಬ-ಹರಿದಿನಗಳು, ವ್ರತೋಪವಾಸಗಳು, ನಿತ್ಯಾನುಷ್ಠಾನ, ಉತ್ಸವ, ತೇರು ಹೀಗೆಯೇ ಭಗವಂತನ ಉಪಾಸನೆಗಾಗಿ ಹತ್ತು ಹಲವು ಮಾರ್ಗವನ್ನು ನಮ್ಮ ಪೂರ್ವಜರು ಪಾಲಿಸುತ್ತಾ ಬಂದಿದ್ದಾರೆ. ಅದರಲ್ಲಿ ಕೆಲವು ಇಂದಿಗೂ ಆಚರಿಸಲ್ಪಡುತ್ತಿವೆ.

ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಒಂದು ಪೂಜೆಯಾದರೆ, ಸರಸ್ವತಿಯನ್ನು, ದುರ್ಗಿಯನ್ನು, ವಿಷ್ಣುವನ್ನು ಆರಾಧಿಸಲು ಕೆಲವು ಉಪಾಸನೆಗಳಿವೆ. ಪ್ರತಿ ದೇವರಿಗೂ ಒಂದು ದಿನವಿದೆ, ಒಂದು ಆಚರಣಾ ವ್ರತವಿದೆ. ಪೂಜೆಯೊಂದೇ ಆದರೂ ಪ್ರತಿ ದೇವರಿಗೂ ಬೇರೆ ಬೇರೆ ನಿಯಮ ಮತ್ತು ವಿಧಾನಗಳಿವೆ. ಶಿವನಿಗೆ ಬಿಲ್ವಪತ್ರೆಯಿಂದ ಅರ್ಚನೆ ಮಾಡಬೇಕೆಂದಿದ್ದರೆ, ವಿಷ್ಣುವಿಗೆ ತುಳಸಿ ಅರ್ಚನೆ ಶ್ರೇಷ್ಠವೆಂದು ಹೇಳುತ್ತಾರೆ. ಹಾಗೆಯೇ ವಾರದ ಏಳುದಿನಗಳಲ್ಲಿ ಯಾವ ರಾಶಿಯವರು ಯಾವ ದಿನದಂದು ವ್ರತ ಮಾಡಿದರೆ ಶ್ರೇಷ್ಠ? ರಾಶಿಯ ಅನುಸಾರ ಯಾವ ದಿನ ಶ್ರೇಷ್ಠವೋ ಅಂದು ವ್ರತ ಮಾಡಿದರೆ ಹೆಚ್ಚು ಲಾಭ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.  

ಮೇಷ ರಾಶಿ
ಮೇಷ ರಾಶಿಯವರು ಶನಿವಾರದಂದು ವ್ರತ ಮಾಡಿದರೆ ಶ್ರೇಷ್ಠ. ಶನಿದೇವರನ್ನು ಮತ್ತು ಆಂಜನೇಯನ ಪೂಜೆಯನ್ನು ಮಾಡಿ ವ್ರತಮಾಡಿದರೆ ಒಳ್ಳೆಯದು. ದೇವರ ಮುಂದೆ ಎಣ್ಣೆಯ ದೀಪವನ್ನು ಹಚ್ಚಿಡಬೇಕು. ಇದರಿಂದ ಸಂಕಷ್ಟಗಳು ನಿವಾರಣೆಯಾಗಿ ಒಳಿತನ್ನು ಕಾಣಬಹುದು.

ಇದನ್ನು ಓದಿ: ಅಪರಾಧಿಯಾಗಲು ಜಾತಕದ ಈ ಗ್ರಹಗಳೇ ಕಾರಣ!

ವೃಷಭ ರಾಶಿ
ಮಂಗಳವಾರದ ದಿನ ವ್ರತ ಮಾಡಿದರೆ ವೃಷಭ ರಾಶಿಯವರಿಗೆ ಶ್ರೇಷ್ಠವಾಗಿದೆ. ಈ ದಿನದಂದು ಉಪವಾಸ ಮಾಡಿ, ದೇವರಲ್ಲಿ ಬೇಕಿರುವುದನ್ನು ಕೋರಿಕೊಂಡರೆ, ಅದು ಪೂರ್ಣವಾಗುವುದು ಖಚಿತ. ಮಂಗಳವಾರದ ವ್ರತ ಈ ರಾಶಿಯವರಿಗೆ ಅದೃಷ್ಟವನ್ನು ತಂದುಕೊಡುತ್ತದೆ. 



ಮಿಥುನ ರಾಶಿ
ಈ ರಾಶಿಯವರು ಬುಧವಾರದಂದು ವ್ರತವನ್ನು ಮಾಡಿದರೆ ಹೆಚ್ಚು ಶ್ರೇಷ್ಠವಾಗಿದೆ. ಗಣೇಶನ ಉಪಾಸನೆ ಮಾಡಿದರೆ ಇವರಿಗೆ ಯಶಸ್ಸು ಲಭಿಸುತ್ತದೆ. ಬುಧವಾರದಂದು ವ್ರತದ ಜೊತೆ ಗಣಪತಿಗೆ ತುಪ್ಪದ ದೀಪವನ್ನು ಹಚ್ಚುವುದು ಹೆಚ್ಚು ಉತ್ತಮ.

ಕಟಕ ರಾಶಿ
ಈ ರಾಶಿಯವರು ವಿಷ್ಣುವನ್ನು ಆರಾಧಿಸುವುದು ಒಳ್ಳೆಯದು. ಕಟಕ ರಾಶಿಯವರು ಗುರುವಾರದಂದು ವ್ರತವನ್ನು ಮಾಡವುದು ಒಳ್ಳೆಯದು. ಅಂದು ಪ್ರಾತಃಕಾಲದಲ್ಲಿ ಎದ್ದು ಶುಚಿರ್ಭೂತರಾಗಿ ವಿಷ್ಣುವನ್ನು ಭಜಿಸುವುದರಿಂದ ಲಾಭವುಂಟಾಗುತ್ತದೆ.

ಸಿಂಹ ರಾಶಿ
ಈ ರಾಶಿಯವರಿಗೆ ಸೋಮವಾರ ಮತ್ತು ಶನಿವಾರ ಎರಡು ದಿನಗಳೂ ವ್ರತಕ್ಕೆ ಶ್ರೇಷ್ಠವಾರವಾಗಿದೆ. ಯಾವ ದಿನ ಉಚಿತವೋ ಅಂದು ವ್ರತ ಮಾಡಿ ಭಗವಂತನನ್ನು ಶ್ರದ್ಧೆಯಿಂದ ಪೂಜಿಸಿದರೆ ಒಳಿತಾಗುತ್ತದೆ.

ಇದನ್ನು ಓದಿ: ರಾಹುವಿಗೆ ಪ್ರಿಯವಾದ ಉದ್ದಿನಕಾಳಿನ ಮಹಿಮೆ ಬಲ್ಲಿರೇನು?

ಕನ್ಯಾ ರಾಶಿ
ಈ ರಾಶಿಯವರು ಶುಕ್ರವಾರ ವ್ರತ ಮಾಡಿದರೆ ಶ್ರೇಷ್ಠ. ಶುಕ್ರವಾರ ಲಕ್ಷ್ಮೀಯನ್ನು ಪೂಜಿಸಿದರೆ ಒಳ್ಳೆಯದು. ಇದರಿಂದ ಆರ್ಥಿಕ ಸಂಕಷ್ಟ ನಿವಾರಣೆಯಾಗಿ, ಧನ ಸಂಪತ್ತು ಲಭಿಸುತ್ತದೆ.



ತುಲಾ ರಾಶಿ
ತುಲಾ ರಾಶಿಯವರು ಶನಿವಾರದಂದು ವ್ರತ ಮಾಡಿದರೆ ಶ್ರೇಷ್ಠ. ಇವರ ಜೀವನದಲ್ಲಿರುವ ಎಲ್ಲ ಕಷ್ಟಗಳು ನಿವಾರಣೆಯಾಗಲು ಶನಿ ದೇವಾಲಯಕ್ಕೆ ಹೋಗಿ ಎಣ್ಣೆಯ ದೀಪವನ್ನು ಹಚ್ಚಬೇಕು. ಈ ರಾಶಿಯವರು ಈ ವ್ರತವನ್ನು ಮಾಡುವುದರಿಂದ ಸಮಸ್ಯೆಗಳು ದೂರಾಗುತ್ತವೆ.

ವೃಶ್ಚಿಕ ರಾಶಿ
ಈ ರಾಶಿಯವರು ಭಾನುವಾರ ವ್ರತ ಮಾಡಿದರೆ ಒಳ್ಳೆಯದು. ಸೂರ್ಯದೇವನ ಕೃಪೆಯಿಂದ ಭಾಗ್ಯ ಲಭಿಸುತ್ತದೆ. ಭಾನುವಾರ ಪ್ರಾತಃಕಾಲದಲ್ಲಿ ಸೂರ್ಯನಿಗೆ ಜಲ ಅರ್ಪಿಸುವುದರಿಂದ ಒಳಿತಾಗುತ್ತದೆ.

ಧನು ರಾಶಿ
ಮಂಗಳವಾರ ವ್ರತ ಮಾಡಿದರೆ ಧನು ರಾಶಿಯವರಿಗೆ ಒಳ್ಳೆಯದು. ವ್ರತದ ಜೊತೆಗೆ ಯಾವುದಾದರೂ ಹೊಸ ಕಾರ್ಯವನ್ನು ಆರಂಭಿಸಿದರೆ ಒಳ್ಳೆಯದಾಗುತ್ತದೆ.

ಮಕರ ರಾಶಿ
ಮಕರ ರಾಶಿಯವರು ಬುಧವಾರ ಅಥವಾ ಗುರುವಾರ ವ್ರತ ಮಾಡಿದರೆ ಒಳ್ಳೆಯದು. ಈ ದಿನ ದೇವಾಲಯಕ್ಕೆ ಹೋಗಿ ದೇವರಿಗೆ ನೈವೇದ್ಯ ಅರ್ಪಿಸಿದರೆ ಒಳಿತಾಗುತ್ತದೆ.

ಕುಂಭ ರಾಶಿ
ಈ ರಾಶಿಯವರು ಬುಧವಾರ ವ್ರತ ಮಾಡಿದರೆ ಉತ್ತಮ. ಗಣೇಶನ ವಿಶೇಷ ಕೃಪೆಯಿಂದ ಲಾಭವನ್ನು ಪಡೆಯುತ್ತಾರೆ. ಈ ರಾಶಿಯವರಿಗೆ ಗಣಪತಿಯನ್ನು ಭಜಿಸಿದರೆ ಅದೃಷ್ಟ ಒಲಿಯುತ್ತದೆ.

ಇದನ್ನು ಓದಿ: ಸಮುದ್ರದಲ್ಲಿ ನಡೆದು ನಿಷ್ಕಳಂಕ ಶಿವನ ದರ್ಶನ ಮಾಡಿ, ಪುನೀತರಾಗಿ..!

ಮೀನ ರಾಶಿ
ಈ ರಾಶಿಯವರು ಸೋಮವಾರ ಅಥವಾ ಗುರುವಾರ ವ್ರತವನ್ನು ಮಾಡಿದರೆ ಒಳ್ಳೆಯದು. ಇದರಿಂದ ಮೀನ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಆಗುತ್ತದೆ.

click me!