Latest Videos

ಆಗಿ ಹುಣ್ಣಿಮೆ: ಕೊಪ್ಪಳದ ಹುಲಿಗಿ ದೇಗುಲಕ್ಕೆ 1 ಲಕ್ಷ ಭಕ್ತರು..!

By Kannadaprabha NewsFirst Published May 24, 2024, 9:08 AM IST
Highlights

ಬೆಳಗ್ಗೆಯಿಂದ ಅಮ್ಮನವರ ದರ್ಶನ ಪಡೆಯಲು ಭಕ್ತರು ದೇವಸ್ಥಾನದ ಮುಂದೆ ಸಾಲಿನಲ್ಲಿ ನಿಂತಿದ್ದರು. ಬಹುತೇಕ ಜನ ಭಕ್ತಾಧಿಗಳು ಟ್ರ್ಯಾಕ್ಟರ್‌ಗಳಲ್ಲಿ, ಟಾಟಾ ಏಸ್ ವಾಹನಗಳಲ್ಲಿ ಬಂದು ಅಮ್ಮನವರ ದರ್ಶನ ಪಡೆದರು. ಇನ್ನೂ ಕೆಲವು ಭಕ್ತಾಧಿಗಳು ಗಂಗಾವತಿ, ಕೊಪ್ಪಳ, ಹೊಸಪೇಟೆಯಿಂದ ಸಾರಿಗೆ ಸಂಸ್ಥೆಯ ವಿಶೇಷ ಬಸ್ಸಿನಲ್ಲಿ ಬಂದು ಅಮ್ಮನವರ ದರ್ಶನ ಪಡೆದಿದ್ದಾರೆ.

ಮುನಿರಾಬಾದ(ಮೇ.24): ಬುದ್ಧಪೂರ್ಣಿಮೆ ಹಾಗೂ ಆಗಿ ಹುಣ್ಣಿಮೆ ಪ್ರಯುಕ್ತ ಇಲ್ಲಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನ ಭಕ್ತಾಧಿಗಳು ಆಗಮಿಸಿ ದೇವಿ ದರ್ಶನ  ಪಡೆದರು. ಬೆಳಗ್ಗೆಯಿಂದ ಅಮ್ಮನವರ ದರ್ಶನ ಪಡೆಯಲು ಭಕ್ತರು ದೇವಸ್ಥಾನದ ಮುಂದೆ ಸಾಲಿನಲ್ಲಿ ನಿಂತಿದ್ದರು. ಬಹುತೇಕ ಜನ ಭಕ್ತಾಧಿಗಳು ಟ್ರ್ಯಾಕ್ಟರ್‌ಗಳಲ್ಲಿ, ಟಾಟಾ ಏಸ್ ವಾಹನಗಳಲ್ಲಿ ಬಂದು ಅಮ್ಮನವರ ದರ್ಶನ ಪಡೆದರು. ಇನ್ನೂ ಕೆಲವು ಭಕ್ತಾಧಿಗಳು ಗಂಗಾವತಿ, ಕೊಪ್ಪಳ, ಹೊಸಪೇಟೆಯಿಂದ ಸಾರಿಗೆ ಸಂಸ್ಥೆಯ ವಿಶೇಷ ಬಸ್ಸಿನಲ್ಲಿ ಬಂದು ಅಮ್ಮನವರ ದರ್ಶನ ಪಡೆದಿದ್ದಾರೆ.

ಅಮ್ಮನವರಿಗೆ ಕಂಕಣಧಾರಣ:

ಮೇ 30ರಿಂದ ಹುಲಿಗೆಮ್ಮ ದೇವಿಯ ಜಾತ್ರೆ ಮಹೋತ್ಸವ ಪ್ರಾರಂಭವಾಗಲಿದ್ದು, ಆ ಪ್ರಯುಕ್ತ ಮೇ 24ರ ಸಂಜೆ ಹುಲಿಗೆಮ್ಮ ದೇವಿಗೆ ಕಂಕಣ ಧಾರಣ ಮಾಡುವ ಕಾರ್ಯಕ್ರಮವು ದೇವಸ್ಥಾನದಲ್ಲಿ ಸಂಜೆ ಜರುಗಲಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಸುತ್ತಗುಂಡಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಶಕ್ತಿ ಯೋಜನೆ ಎಫೆಕ್ಟ್: ಹುಲಿಗಿ ದೇವಸ್ಥಾನದ ಹುಂಡಿಯಲ್ಲಿ ₹99.70 ಲಕ್ಷ ಕಾಣಿಕೆ ಸಂಗ್ರಹ!

ಪ್ರಾಣಿ ಬಲಿ ನಿಷೇಧಿಸಿ ತಹಸೀಲ್ದಾರ ಆದೇಶ:

ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿ ಮೇ 30ರಿಂದ ಜೂ. 3ರವರೆಗೆ ನಡೆಯಲಿರುವ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ 2024ನೇ ಸಾಲಿನ ವಾರ್ಷಿಕ ಜಾತ್ರೆಯಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಿ ಕೊಪ್ಪಳ ತಹಸೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿ ವಿಠ್ಠಲ್ ಚೌಗಲಾ ಆದೇಶ ಹೊರಡಿಸಿದ್ದಾರೆ.

ದೇವಸ್ಥಾನದ ಆವರಣದಲ್ಲಿ ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟ ಜಮೀನುಗಳಲ್ಲಿ ಕರ್ನಾಟಕ ಪ್ರಾಣಿ ನಿಷೇಧ ಕಾಯ್ದೆ 1959 ಮತ್ತು ಕರ್ನಾಟಕ ಪ್ರಾಣಿ ಬಲಿ ನಿಷೇಧ ನಿಯಮಗಳು 1963 ರ ರೀತ್ಯಾ ಭಕ್ತಾದಿಗಳು, ಸಾರ್ವಜನಿಕರು ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಿದೆ ಎಂದು ತಹಸೀಲ್ದಾರರು ಆದೇಶದಲ್ಲಿ ತಿಳಿಸಿದ್ದಾರೆ.

click me!