
ಬೆಂಗಳೂರು (ಫೆ. 24): ವಿದ್ಯಾ ಮತ್ತು ವಿನಾಯಕ ಇಟಲಿಯಲ್ಲಿದ್ದಾರೆ. ಅದು ಅವರ ಹನಿಮೂನ್ ಟ್ರಿಪ್. ಹಾಗಂತ, ಅದು ಅವರೇ ಕೈಗೊಂಡ ಪ್ರವಾಸ ಅಲ್ಲ. ಅರೆ, ಇದು ಯಾರ ಕತೆ ಅಂತ ಅನ್ಕೋಬೇಡಿ, ಜೀ ಕನ್ನಡದ ‘ವಿದ್ಯಾವಿನಾಯಕ ಧಾರಾವಾಹಿಗೆ ಸಿಕ್ಕ ಇಟಲಿ ಪ್ರವಾಸದ ಟ್ವಿಸ್ಟ್ ಇದು.
ಸಿನಿಮಾ ಮಂದಿ ಚಿತ್ರೀಕರಣಕ್ಕೆ ಅಂತ ವಿದೇಶಕ್ಕೆ ಹೋಗಿ ಬರುತ್ತಿದ್ದಾಗ ಕಿರುತೆರೆ ಜಗತ್ತು ಕೂಡ ತಾನೇನು ಕಮ್ಮಿ ಇಲ್ಲ ಅಂದಿದ್ದು ಸುಳ್ಳಲ್ಲ. ಈಗಾಗಲೇ ಕನ್ನಡದ ನಾಲ್ಕೈದು ಧಾರಾವಾಹಿ ತಂಡ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋಗಿ ಬಂದು ದಾಖಲೆ ಮಾಡಿವೆ. ಆ ಸಾಲಿನಲ್ಲಿ ಈಗ ‘ವಿದ್ಯಾ ವಿನಾಯಕ’ಸೀರಿಯಲ್ ಸರದಿ. ನಟ ದಿಲೀಪ್ ರಾಜ್ ಹಾಗೂ ಶ್ರೀವಿದ್ಯಾರಾಜ್ ದಂಪತಿ ನಿರ್ಮಾಣದ ಧಾರಾವಾಹಿಯೇ ‘ವಿದ್ಯಾ ವಿನಾಯಕ’. ಕಥಾ ನಾಯಕ ಹಾಗೂ ನಾಯಕಿ ಮದುವೆ ನಂತರ ಹನಿಮೂನ್ಗೆ ಹೋಗುವ ಸಂದರ್ಭ. ವಿದೇಶಕ್ಕೆ ಹೋದ್ರೆ ಅವರಿಬ್ಬರು ಮತ್ತಷ್ಟು ಹತ್ತಿರವಾಗುತ್ತಾರೆನ್ನುವ ಯೋಚನೆ. ಈ ಸಂದರ್ಭಕ್ಕೆ ಎಲ್ಲಿಗೆ ಹೋಗುವುದು ಅಂತ ಯೋಚಿಸುತ್ತಿದ್ದಾಗ ನಮಗೆ ಹೊಳೆದಿದ್ದು ಇಟಲಿ. ಕನ್ನಡದ ಕಿರುತೆರೆಯಲ್ಲಿ ಯಾವುದೇ ಧಾರಾವಾಹಿಗೆ ಇಟಲಿಯಲ್ಲಿ ಚಿತ್ರೀಕರಣ ಆಗಿರಲಿಲ್ಲ. ಇದೇ ಮೊದಲು ಅಂತಹ ಸಾಹಸ ಮಾಡೋಣ ಅಂತ ನಾವು ಅಲ್ಲಿಗೆ ಹೋದೆವು. ಅಲ್ಲಿನ ಸುಂದರ ತಾಣಗಳ ದೃಶ್ಯರೂಪದಲ್ಲಿ ರೋಚಕ ಕತೆಯನ್ನು ತೆರೆಗೆ ತಂದಿದ್ದೇವೆ. ಅದು
ಈ ಧಾರಾವಾಹಿಯ ವಿಶೇಷ ಎಂದೆನಿಸಿಕೊಳ್ಳಲಿದೆ’ ಎನ್ನುತ್ತಾರೆ ನಟ, ನಿರ್ಮಾಪಕ ದಿಲೀಪ್ ರಾಜ್.
ವಿದೇಶ ಚಿತ್ರೀಕರಣ ಅಂದುಕೊಂಡಷ್ಟು ಸುಲಭವೇನಲ್ಲ. ಜತೆಗೆ ಅಲ್ಲಿನ ನೈಸರ್ಗಿಕ ಏರುಪೇರುಗಳು ಕೂಡ ಚಿತ್ರೀಕರಣಕ್ಕೆ ಸವಾಲು. ಅಂಥದ್ದೇ ಒಂದು ಸವಾಲಿನ ಚಿತ್ರೀಕರಣ ಇದು ಕೂಡ ಆಗಿತ್ತು ಎನ್ನುವುದು ಚಿತ್ರ ತಂಡದ ಮಾತು.‘ ಇಟಲಿಯಲ್ಲೀಗ ಕೊರೆಯುವ ಚಳಿ. ಅದರಲ್ಲಿ ನಡೆದಾಡುವುದೇ ಕಷ್ಟ. ಅಂತಹದರಲ್ಲಿ ಗಂಟೆಗಟ್ಟಲೆ ಮೇಕಪ್ ಹಾಕ್ಕೊಂಡು ನಿಂತುಕೊಂಡು ಚಿತ್ರೀಕರಣ ಮಾಡುವುದು ತುಂಬಾನೆ ಕಷ್ಟದ ಕೆಲಸವಾಗಿತ್ತು. ಆದರೂ ನಮಗದು ಖುಷಿ ಅನುಭವ. ಅವೆಲ್ಲ ಮರೆಯಲಾಗದ
ಕ್ಷಣಗಳು’ ಎನ್ನುತ್ತಾರೆ ಧಾರಾವಾಹಿ ಕಥಾ ನಾಯಕಿ ಪಾತ್ರಧಾರಿ ಕವಿತಾ. ನಾಯಕ ದಿಲೀಪ್ ಶೆಟ್ಟಿ, ಛಾಯಾಗ್ರಾಹಕ ಮನು ಯಪ್ಲಾರ್ ಸೇರಿದಂತೆ ಒಂದು ತಂಡವೇ ಅಲ್ಲಿಗೆ ಹೋಗಿ ಬಂದಿದೆ. ಇದರ ಇಟಲಿ ಪ್ರವಾಸದ
ಸಂಚಿಕೆಗಳು ಮಾರ್ಚ್ 1 ರಿಂದ ಶುರುವಾಗಲಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.