ಮದಕರಿ ನಾಯಕನ ಹೆಸರಲ್ಲಿ ಎರಡು ಸಿನಿಮಾ ಖಾತ್ರಿ

By Kannadaprabha NewsFirst Published Oct 5, 2018, 9:35 AM IST
Highlights

ಮದಕರಿ ನಾಯಕ ಪಾತ್ರದಲ್ಲಿ ನಟಿಸಬೇಕು ಎಂಬ ಅಭಿಮಾನಿಗಳ ಒತ್ತಾಯಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಸುದೀಪ್. ಮದಕರಿ ಕನ್ನಡದ ವೀರ. ಆ ಪಾತ್ರವನ್ನು ಎಷ್ಟು ಮಂದಿ ಬೇಕಿದ್ದರೂ ಮಾಡಬಹುದು. ನಾನೂ ಮಾಡುತ್ತೇನೆ. ಅದು ನನ್ನ ಬಹುದಿನದ ಕನಸು ಎಂದಿದ್ದಾರೆ. ಹೀಗಾಗಿ ಕನ್ನಡಿಗರಿಗೆ ಮದಕರಿ ನಾಯಕನ ಕುರಿತ ಎರಡು ಸಿನಿಮಾ ನೋಡುವ ಭಾಗ್ಯ.

ನಾನು ನನ್ನ ತಂಡ ಹಾಗೂ ಕೆಲವು ಲೇಖಕರ ಬಳಗವು ಈಗ್ಗೆ ಸುಮಾರು ಒಂದೂವರೆ ವರ್ಷದಿಂದ ‘ವೀರ ಮದಕರಿ ನಾಯಕ’ ಸಿನಿಮಾ ನಿರ್ಮಾಣದ ದಿಸೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಒಂದಷ್ಟು ಸಂಶೋಧನೆ ಮತ್ತೂ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ. ವೀರ ಮದಕರಿ ಸಿನಿಮಾ ಮಾಡುವ ನಮ್ಮ ಆಲೋಚನೆ ವರ್ಷಗಳ ಹಿಂದೆಯೇ ಹುಟ್ಟಿದಂತಹುದು. ಆದರೆ, ಈ ದಿಸೆಯಲ್ಲಿ ಕೆಲಸ ಮಾಡಲು ಒಂದಷ್ಟು ಸಮಯ ಬೇಕಾಯಿತು. ಹೀಗಾಗಿ ಈ ಸಿನೆಮಾ ನಿರ್ದೇಶನ ಕೂಡ ಮಾಡುವ ಸೂರ್ತಿ ಚಿಗುರೊಡೆಸಿತ್ತು.

ಇತ್ತೀಚೆಗೆ ಇದೇ ಕಥೆಯ ಆಧಾರಿತ ಮತ್ತೊಂದು ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿ ನನಗೆ ನಿಜಕ್ಕೂ ಆಶ್ಚರ್ಯ ಉಂಟು ಮಾಡಿತು. ಸಹಜವಾಗಿಯೇ ನನಗೆ ಇದರಲ್ಲಿ ಏನಿದೆ ಎಂಬ ಪ್ರಶ್ನೆ ಹುಟ್ಟು ಹಾಕಿತು. ಯಾರೇ ಆಗಲೀ, ಇತಿಹಾಸದ ವಿಷಯಗಳ ಮೇಲೆ ಸಿನಿಮಾ ನಿರ್ಮಿಸಲು ಅರ್ಹರಿದ್ದಾರೆ.

ಒಂದೇ ವಿಷಯ, ಒಬ್ಬನೇ ವ್ಯಕ್ತಿಯ ಮೇಲೆ ಈಗಾಗಲೇ ಒಂದಕ್ಕಿಂತ ಹೆಚ್ಚು ಸಿನಿಮಾಗಳು ತೆರೆಕಂಡ ಉದಾಹರಣೆಗಳಿವೆ. ನಾನೊಬ್ಬನೇ ಮದಕರಿ ನಾಯಕನಪಾತ್ರ ನಿರ್ವಹಿಸಬೇಕು ಎಂಬುದು ಎಷ್ಟು ಸರಿ? ಆತ ಕರ್ನಾಟಕದ ವೀರಪುತ್ರ. ಅವರ ಬಗ್ಗೆ ಸಿನಿಮಾ ಯಾರಾದರೂ ಮಾಡಬಹುದು.

ರಾಕ್‌ಲೈನ್ ವೆಂಕಟೇಶ್ ಅವರ ಸಿನಿಮಾ ಆಸಕ್ತಿ ಅದ್ವಿತೀಯವಾದದ್ದು. ಇದನ್ನೊಂದು ಅತ್ಯುತ್ತಮ ಚಿತ್ರವಾಗಿ ತೆರೆಯ ಮೇಲೆ ತರುತ್ತಾರೆ ಎಂಬುದಕ್ಕೆ ಅನುಮಾನವೇ ಇಲ್ಲ. ರಾಜೇಂದ್ರ ಸಿಂಗ್ ಬಾಬು ಅವರ ಅನುಭವ ಕೂಡಾ ಇದರಲ್ಲಿ ಸಮ್ಮಿಲನವಾಗಿದೆ. ಆದರೆ, ನಾನು ಮತ್ತು ನನ್ನ ತಂಡವು ಮಾಡಹೊರಟಿರುವ ಚಿತ್ರಕ್ಕೆ ಇದು ಅಡ್ಡಿಯಾಗುವುದಿಲ್ಲ. ಇದು ನಮ್ಮ ಕನಸೂ ಕೂಡಾ. ಇದು ಬರೀ ನನ್ನೊಬ್ಬನ ಕನಸಲ್ಲ. ಇಡೀ ತಂಡದ ಕನಸನ್ನು ನಾನು ಭಗ್ನಗೊಳಿಸಲು ಇಚ್ಛಿಸುವುದಿಲ್ಲ. ಅದರ ಬದಲಿಗೆ ಮಾಡಿ ಮಡಿಯುವುದೇ ಮೇಲು. ನಾನೂ ಒಬ್ಬ ಮದಕರಿ!ರಾಕ್‌ಲೈನ್ ಅವರ ತಂಡವನ್ನು ನಾನು ಇಂತಹ ಒಳ್ಳೆಯ ಕರ್ನಾಟಕದ ನೆಲದ ಕಥೆಯನ್ನು ಆಯ್ಕೆ ಮಾಡಿರುವುದಕ್ಕೆ ಅಭಿನಂದಿಸುತ್ತೇನೆ. ಅವರಿಗೆ ನನ್ನ ಶುಭಾಷಯಗಳು. ಅದೇ ರೀತಿಯಾಗಿ ನನ್ನ ನಿರ್ಣಯವನ್ನು ನೀವೆಲ್ಲರೂ
ಸಮ್ಮತಿಸುತ್ತೀರೆಂದು ನಂಬಿರುವೆ.
ನಿಮ್ಮವ
ಕಿಚ್ಚ

ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಸುದೀಪ್

ಗಂಡುಗಲಿ ಮದಕರಿ ನಾಯಕ ಚಿತ್ರದಲ್ಲಿ ದರ್ಶನ್ ನಟಿಸುತ್ತಾರೆ ಎಂಬ ಸುದ್ದಿ ಬಂದ ಕೂಡಲೇ ಸುದೀಪ್ ಅಭಿಮಾನಿಗಳು ಸುದೀಪ್ ಮದಕರಿ ನಾಯಕ ಪಾತ್ರದಲ್ಲಿ ನಟಿಸಬೇಕು ಎಂದು ಸೋಷಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದರು. ಸುದೀಪ್ ಆಪ್ತ ಮೂಲಗಳ ಮಾಹಿತಿಯಂತೆ ನಿನ್ನೆ ಕನ್ನಡಪ್ರಭ ಸುದೀಪ್ ಅವರು ಮದಕರಿನಾಯಕನ ಆತ್ಮ ಕತೆ ಆಧರಿಸಿದ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರಕ್ಕೆ ದುರ್ಗದ ಹುಲಿ ಎಂದು ಹೆಸರಿಡುವ ಸಾಧ್ಯತೆ ಇದೆ ಎಂದು ವರದಿ ಮಾಡಿತ್ತು. ಸುದೀಪ್ ಈ ವರದಿಗೆ ಪ್ರತಿಕ್ರಿಯಿಸಿದ್ದಾರೆ. ಕನ್ನಡಪ್ರಭ ವರದಿಯನ್ನು ಟ್ವೀಟ್ ಮಾಡಿದ ಅವರು ಮದಕರಿ ನನ್ನ ಮತ್ತು ನನ್ನವರ ಕನಸು, ಈ ಚಿತ್ರ ಮಾಡುವುದು ನಿಶ್ಚಿತ ಎಂದಿದ್ದಾರೆ. ಅಲ್ಲದೇ ಒಂದು ವಿಷಯದ ಕುರಿತಾಗಿ ಎರಡು ಸಿನಿಮಾ ಬರುವುದು ಹೊಸತೇನಲ್ಲ, ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು ಸಿನಿಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಹಾಗಾಗಿ ಒಬ್ಬರೇ ವ್ಯಕ್ತಿಯ ಆತ್ಮಕಥನದ ಆಧಾರದಲ್ಲಿ ಎರಡು ಸಿನಿಮಾ ಬರುವುದು ಖಚಿತವಾಗಿದೆ.

click me!