
ಒಂದು ವಾಹನ, ಇನ್ನೊಂದು ಅಡುಗೆ. ಅವರ ಮನೆಯಲ್ಲಿ ಏನಿಲ್ಲವೆಂದರೂ ಏಳು ಕಾರುಗಳಿವೆ, ಮನೆಯ ಮುಂದೆ ನಿಂತ ಪ್ರತಿ ಕಾರುಗಳ ಜೊತೆಗೂ ಅವರಿಗೆ ಒಂದೊಂದು ಇಮೋಶನಲ್ ಸಂಬಂಧ ಇದೆ ಅಂತ ಅವರೇ ಹೇಳುತ್ತಾರೆ. ಇದರ ಮಧ್ಯೆ ಬೈಕ್ ಕ್ರೇಜ್ ಕೂಡ ಜಾಸ್ತಿನೇ, ಹಾಗೇ ಯಾವುದೋ ಒಂದು ಸೈಕಲ್ಲು ಹತ್ತಿ ಹೊರಟು ಹೋಗಬೇಕೆನ್ನಿಸಿದರೆ ಬೆಳಿಗ್ಗೆ ಹೊರಟುಬಿಟ್ಟಾರು.
ವಾಹನಗಳ ಕ್ರೇಜ್...
ಸುದೀಪ್ ಅವರಿಗೆ ಹೋಗಬೇಕೆನ್ನಿಸಿದರೆ ಬೈಕ್ ಹತ್ತಿ ಹೊರಟೇಬಿಡುತ್ತಾರಂತೆ ಬೆಳಿಗ್ಗೆ ಬೆಳಿಗ್ಗೆ. ಕಂಡ ಕಂಡ ಕಡೆ ಸುತ್ತಾಡಿ, ಮನಸ್ಸು ಹಾರಾಡುವಂತಾದರೆ ವಾಪಾಸ್ ಗೂಡಿಗೆ. ‘ಅರೆ, ಅಭಿಮಾನಿಗಳೆಲ್ಲಾ ಸಿಕ್ಕೋದಿಲ್ವಾ, ತೊಂದರೆ ಮಾಡೋದಿಲ್ವಾ' ಅಂತ ಕೇಳಿದರೆ ‘ಪಾಪ ಅವರೇನು ತೊಂದರೆ ಮಾಡ್ತಾರೆ, ಅವರೂ ಮನುಷ್ಯರಲ್ವಾ' ಅಂತ ನಗುತ್ತಾರೆ ಸುದೀಪ್. ‘ಸಿಕ್ಕ ತಕ್ಷಣ ನಗ್ತಾರೆ, ಫೋಟೋ ತೆಗೆಸ್ಕೋತಾರೆ, ಮಾತಾಡಿಸ್ತಾರೆ. ಅವರಿಗೋಸ್ಕರ ಕೆಲ ಸೆಕೆಂಡಿನಷ್ಟು ಟೈಮು ಕೊಟ್ಟರೆ ಸಾಕು. ಅದಕ್ಕೋಸ್ಕರ ಕಾರಲ್ಲಿ ಕವರ್ ಮಾಡಿಕೊಂಡು ಓಡಾಡಬೇಕೆಂದೇನೂ ಇಲ್ಲ' ಅನ್ನುತ್ತಾರೆ ಅವರು.
ಇತ್ತೀಚೆಗೆ ಅವರು ‘ಹೆಬ್ಬುಲಿ' ಚಿತ್ರೀಕರಣಕ್ಕೆ ಅಂತನೇ ಬೆಲೆ ಬಾಳುವ 2 ಬೈಕ್ಗಳನ್ನು ತರಿಸಿದ್ದರಂತೆ. ‘ಅದು ಚಿತ್ರಕ್ಕೆ ಹೆಲ್ಪ್ ಆಯ್ತೋ ಇಲ್ಲವೋ, ನಮ್ಮ ತಿರುಗಾಟಕ್ಕಂತೂ ತುಂಬ ಉಪಯೋಗಕ್ಕೆ ಬಂತು' ಅಂತ ಹೇಳಿ ಪಕ್ಕದಲ್ಲಿರೋ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕಡೆ ನೋಡುತ್ತಾರೆ. ಚಿತ್ರೀಕರಣದ ಕಾಲದಲ್ಲಿ ಅವರ ಜೊತೆಗಿದ್ದವರೆಂದರೆ ಉಮಾಪತಿ. ಅವರನ್ನು ಕರೆದುಕೊಂಡು ಬೈಕ್ ಎತ್ತಿಕೊಂಡು ಹೊರಟರೆ ಕಂಡ ಕಂಡ ಕಡೆಗೆಲ್ಲಾ ರೌಂಡ್ ಹೊಡೆಯುವುದೇ ಆಗುತ್ತಿತ್ತಂತೆ. ಉಮಾಪತಿ ಕೂಡ ಇಂಥದ್ದೊಂದು ಫ್ರೆಂಡ್ಶಿಪ್ ಅನ್ನು ಎಂಜಾಯ್ ಮಾಡಿದ್ದಾರೆ. ‘ನಾನು ಕೆಲಸ ಅದೂ ಇದೂ ಅಂತ ತುಂಬ ಟೆನ್ಶನ್ನಲ್ಲೇ ಇರುತ್ತಿದ್ದೆ, ಈ ಚಿತ್ರ ನಿರ್ಮಾಣಕ್ಕೆ ಇಳಿದು ಸುದೀಪ್ ಅವರ ಫ್ರೆಂಡ್ಶಿಪ್ ಆದಮೇಲೆ ಬೇರೆಯದೇ ಪ್ರಪಂಚದ ಅನುಭವ ಆಯ್ತು' ಅಂತಾರೆ ಉಮಾಪತಿ.
ಅಡ್ಗೇಲಿ ಏನ್ ಬೇಕು ಹೇಳಿ...
ಸುದೀಪ್ ಅವರ ಮನೆಯ ಟೆರೇಸ್ ಮೇಲೆ ಒಂದು ಅದ್ಭುತ ಅಡುಗೆ ಮನೆಯ ಸೆಟಪ್ ಇದೆ. ಓಪನ್ ಕಿಚನ್ ಅದು. ‘ನಾನೇ ನನ್ನ ಕೈಯಾರೆ ಬೇರೆ ಬೇರೆ ಕಡೆಗಳಿಂದ ತಂದು ಇದನ್ನೆಲ್ಲಾ ರೆಡಿ ಮಾಡಿದ್ದೇನೆ' ಅಂತ ಇತ್ತೀಚೆಗೆ ಪತ್ರಕರ್ತರಿಗೆ ತೋರಿಸುತ್ತಿದ್ದರು. ಅವರಿಗೆ ತುಂಬ ಇಷ್ಟಅಡುಗೆ ಮಾಡುವುದಂತೆ. ‘ನಾನೇ ಮನೆಗೆ ಬಂದವರಿಗೆಲ್ಲಾ ಅಡುಗೆ ಮಾಡಿ ಬಡಿಸುತ್ತೇನೆ, ಅದು ನಂಗಿಷ್ಟ' ಅನ್ನುತ್ತಾರೆ ಸುದೀಪ್. ಇಂಥ ಅಡುಗೆಯಲ್ಲಿ ಸುದೀಪ್ ಎಕ್ಸ್ ಪರ್ಟ್ ಂತೇನೂ ಇಲ್ವಂತೆ. ‘ನೀವು ಇಂಥಿಂಥ ವಸ್ತು ಕೊಟ್ಟು ಅಡುಗೆ ಮಾಡು ಅಂತ ಹೇಳಿದರೆ ಸಾಕು, ಏನನ್ನು ಬೇಕಾದರೂ ಮಾಡಿ ಕೊಡುತ್ತೇನೆ. ಅದು ಕೊಡುವಷ್ಟು ಖುಷಿ ಇನ್ಯಾವುದೂ ಕೊಡೋದಿಲ್ಲ' ಎನ್ನುತ್ತಾರೆ ಅವರು.
ಸುದೀಪ್ ಅಡುಗೆ ಬಗ್ಗೆ ಅವರ ಆಪ್ತವಲಯದಲ್ಲಿ ನೂರಾರು ಕತೆಗಳಿವೆ. ಮೊನ್ನೆ ಮೊನ್ನೆ ಮುಗಿಸಿದ ‘ಬಿಗ್ಬಾಸ್' ಸೀಜನ್ನಲ್ಲಿ ಅವರಿಗೋಸ್ಕರ ಅಲ್ಲೊಂದು ಅಡುಗೆ ಮನೆಯ ಸೆಟಪ್ ಮಾಡಿಕೊಡಲಾಗಿತ್ತು. ಅವರು ಸೆಟ್ನ ತಂತ್ರಜ್ಞರಿಗೆಲ್ಲಾ ಅಡುಗೆ ಮಾಡಿ ಉಣಬಡಿಸಿ ತೃಪ್ತಿ ಪಡಿಸುತ್ತಿದ್ದರಂತೆ. ‘ಆ ಅನುಭವ ಚೆನ್ನಾಗಿತ್ತು, ಎಲ್ಲರೂ ಇಷ್ಟಪಡೋರು, ನನಗೂ ಬೇರೆ ಬೇರೆ ಥರದ ಅಡುಗೆ ಮಾಡುವುದಕ್ಕೆ ಇಷ್ಟ, ಅದು ತುಂಬ ಒಳ್ಳೆಯ ದಿನಗಳು' ಅನ್ನುತ್ತಾರೆ ಅವರು. ಅಂದಹಾಗೆ ಕಾಶ್ಮೀರಕ್ಕೆ ‘ಹೆಬ್ಬುಲಿ' ಶೂಟಿಂಗ್ ಹೋದ ಸಂದರ್ಭದಲ್ಲೂ ಚಾಯ್ವಾಲಾಗಳನ್ನೇ ಬೇರೆ ಕಡೆ ಕಳುಹಿಸಿ ಅವರೇ ನಿಂತು ಚಾಯ್ ಮಾಡಿಕೊಟ್ಟಿದ್ದೂ ಇದೆ ಅನ್ನುತ್ತಾ ನಿರ್ಮಾಪಕ ಉಮಾಪತಿ ಜ್ಞಾಪಿಸಿಕೊಳ್ಳುತ್ತಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.