ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ನಾಯಕಿ ಎಲ್ಲಿ ಹೋದರು? ಈ ಪ್ರಶ್ನೆ ಕೇಳಿದರೆ ಜಯಂತಿ ತಕ್ಷಣ ನೆನಪಾಗುತ್ತಾರೆ. ಆದರೆ, ಇದು ಹಳೆಯ ಗುಡ್ಡದ ಕತೆಯಲ್ಲ. ವಿವಿನ್ ಸೂರ್ಯ ನಿರ್ದೇಶನದ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ಮೂಲಕ ಹಿರಿತೆರೆಗೆ ಪರಿಚಯಗೊಂಡ ನಟಿ ಸ್ವಾತಿ ಶರ್ಮಾ ಅವರ ಬಗ್ಗೆ.
ಸ್ವಾತಿ ಈಗ ಶಿವರಾಜ್ಕುಮಾರ್ ಅವರೊಂದಿಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಪ್ರಮೋದ್ ನಿರ್ದೇಶನದ ‘ದ್ರೋಣ’ ಚಿತ್ರದಲ್ಲಿ ಶಿವಣ್ಣ ಪ್ರಾಧ್ಯಪಕರಾಗಿ ಕಾಣಿಸಿಕೊಂಡರೆ, ಸ್ವಾತಿ ಶರ್ಮಾ ವಿದ್ಯಾರ್ಥಿನಿ ಪಾತ್ರ ಮಾಡುತ್ತಿದ್ದಾರೆ. ಆರಂಭದ ದಿನಗಳಲ್ಲೇ ದೊಡ್ಡ ಸ್ಟಾರ್ ನಟನ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿರುವುದಕ್ಕೆ ಸ್ವಾತಿ ಶರ್ಮಾ ಸಿಕ್ಕಾಪಟ್ಟೆಖುಷಿ ಆಗಿದ್ದಾರೆ. ಈ ಕುರಿತು ಅವರು ಹೇಳಿದ್ದು ಇಲ್ಲಿದೆ.
1. ನಾನು ಶಿವಣ್ಣ ಅವರೊಂದಿಗೆ ನಟಿಸುತ್ತಿರುವುದು ಇದೇ ಮೊದಲು. ಅವರು ಮೇಷ್ಟು್ರ, ನಾನು ವಿದ್ಯಾರ್ಥಿ ಪಾತ್ರ. ಹೀಗಾಗಿ ತುಂಬಾ ದೃಶ್ಯಗಳು ನಮ್ಮ ಇಬ್ಬರ ಕಾಂಬಿನೇಷನ್ನಲ್ಲೇ ಬಂದಿವೆ.
2. ಮೊದಲೆರಡು ದಿನ ತುಂಬಾ ಹೆದರಿಕೆ ಆಯಿತು. ಯಾಕೆಂದರೆ ದೊಡ್ಡ ಸ್ಟಾರ್ ನಟ. ಅವರ ಮುಂದೆ ನಾನು ಹೇಗೆ ನಟಿಸುವುದು ಎನ್ನುವ ಭಯ ಕಾಡುತ್ತಲೇ ಇತ್ತು. ಆದರೆ, ಮೊದಲ ಚಿತ್ರೀಕರಣ ಮುಗಿದಾಗಲೇ ಶಿವಣ್ಣ, ಸ್ಟಾರ್ ಜತೆಗೆ ಸಿಂಪಲ್ ವ್ಯಕ್ತಿ ಅಂತ ಗೊತ್ತಾಯಿತು. ಮುಂದೆ ಅವರ ಜತೆ ನಟಿಸುವುದಕ್ಕೆ ಹೆದರಿಕೆ ಆಗಲಿಲ್ಲ.
3. ಸಹ ಕಲಾವಿದರಿಗೆ ಒಳ್ಳೆಯ ಗೈಡ್ ಎಂದರೆ ಶಿವಣ್ಣ. ಚಿತ್ರೀಕರಣದ ಸ್ಥಳದಲ್ಲಿ ತುಂಬಾ ಸಲಹೆಗಳನ್ನು ನೀಡುತ್ತಾರೆ. ನನಗೂ ಅದೇ ಅನುಭವ ಆಯಿತು. ಚಿಕ್ಕವರು, ದೊಡ್ಡವರು ಅಂತ ನೋಡಲ್ಲ. ಎಲ್ಲರನ್ನು ಸ್ನೇಹ, ಪ್ರೀತಿಯಿಂದಲೇ ನಡೆಸಿಕೊಳ್ಳುತ್ತಾರೆ.
4. ಈ ಚಿತ್ರದಲ್ಲಿ ನಾನು ಹಳ್ಳಿಯಿಂದ ಬರುವ ಹುಡುಗಿ ಪಾತ್ರ. ಅಂದರೆ ಓದುವುದಕ್ಕೆ ತುಂಬಾ ಆಸಕ್ತಿ ಇರುತ್ತದೆ. ಆದರೆ, ಅದು ನನಗೆ ಕೈಗೂಡಲ್ಲ. ಕಷ್ಟಗಳಿಂದ ಆಚೆ ಬಂದು ನಾನು ಹೇಗೆ ವಿದ್ಯಾಭ್ಯಾಸ ಮಾಡುತ್ತೇನೆ ಎಂಬುದನ್ನು ನನ್ನ ಪಾತ್ರದ ಮೂಲಕ ಹೇಳಲಾಗಿದೆ.