ವಿಚಿತ್ರ ಗೆಟಪ್‌ನಲ್ಲಿ ಸಂಚಾರಿ ವಿಜಯ್

By Web DeskFirst Published Sep 4, 2018, 2:11 PM IST
Highlights

ಡಿಫರೆಂಟ್ ಲುಕ್‌ನಲ್ಲಿ ಸಂಚಾರಿ ವಿಜಯ್ | ತಮ್ಮ ವಿಭಿನ್ನ ಲುಕ್ ಮೂಲಕ ದಾರಿ ಹೋಕರ ಗಮನ ಸೆಳೆದ ವಿಜಯ್ | 

ಬೆಂಗಳೂರು (ಸೆ. 04): ವಿಶಿಷ್ಟವಾದ ಗೆಟಪ್‌ನೊಂದಿಗೆ ಸಂಚಾರಿ ವಿಜಯ್  ಮೈಸೂರಿನ ರಸ್ತೆಗಳಲ್ಲಿ ಕಾಣಿಸಿಕೊಂಡರು. ವಿಶಿಷ್ಟವಾದ ಆ ಗೆಟಪ್‌ನೊಂದಿಗೆ ದಾರಿಹೋಕರ ಗಮನ ಸೆಳೆದರು.

ಕೆಲವರ ಕೈ ಕುಲುಕಿ ಕುಶಲೋಪರಿ ವಿಚಾರಿಸಿದರು. ಕೃಷ್ಣ ಜನ್ಮಾಷ್ಟಮಿ ಸಂದರ್ಭದ ವೇಷಗಳಿಗೂ ಅವರಿಗೂ ಯಾವ ಸಂಬಂಧವೂ ಇಲ್ಲ. ಅವರು ಈ ವೇಷ ಹಾಕಿದ್ದು ‘ಮೇಲೊಬ್ಬ ಮಾಯಾವಿ’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿ.
ಸೋಮವಾರ ಆ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಮೈಸೂರಿನ ಅರಮನೆ ಆವರಣದಲ್ಲಿ ನಡೆಯಿತು.

ವಿಚಿತ್ರವಾದ ವೇಷದಲ್ಲಿ ಕ್ಯಾಮರಾ ಮುಂದೆ ಮಾಧ್ಯದವರ ಜತೆಗೆ ಮಾತನಾಡುವ ಸನ್ನಿವೇಶವದು. ಬಿ. ನವೀನ್ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಪತ್ರಕರ್ತ ಚಂದ್ರಚೂಡ್ ಚಿತ್ರಕತೆ, ಸಂಭಾಷಣೆ ಬರೆದು, ಪ್ರಮುಖ
ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಚಿತ್ರದಲ್ಲಿ ಬರುವ ಸ್ವರ್ಗ ಅನ್ನುವ ಊರಿನಲ್ಲಿ ಎಲ್ಲವೂ ಇದೆ. ಆದರೆ ಏನೂ ಇಲ್ಲ ಅನ್ನುವ ಪರಿಸ್ಥಿತಿ. ಕರೆಂಟ್  ಕಂಬಗಳಿವೆ ಆದರೆ ವಿದ್ಯುತ್ ಇಲ್ಲ. ಓವರ್‌ಹೆಡ್ ಟ್ಯಾಂಕ್ಗಳಿವೆ, ನೀರಿಲ್ಲ. ಒಂದಷ್ಟು ಮಂದಿ ಸ್ವಾರ್ಥಕ್ಕಾಗಿ ಇಡೀ ಸ್ವರ್ಗವನ್ನೇ ನರಕ ಸದೃಶವಾಗಿಸಲು ಹೊರಟಿದ್ದಾರೆ.

ಅದರ ಅಟ್ಟಹಾಸವನ್ನು ಹೇಳುವುದರ ಜತೆಗೆ ಪ್ರಕೃತಿ ಮುನಿಸಿಕೊಂಡರೆ ಏನೆಲ್ಲ ಆಗುತ್ತೆ ಎಂದು ಹೇಳುವ ಪ್ರಯತ್ನ ಮಾಡಲಾಗಿದೆ. ಇನ್ನೇನು ಚಿತ್ರದ ಚಿತ್ರೀಕರಣ ಮುಕ್ತಾಯಕ್ಕೆ ಕಾಲಿಡುವ ಹೊತ್ತಿಗೆ ಕೊಡಗು ಮತ್ತು ಕೇರಳದಲ್ಲಿ ಪ್ರವಾಹ ಬಂತು. ಪ್ರಕೃತಿಯ ಮುನಿಸು ದೊಡ್ಡ ಅನಾಹುತವನ್ನೇ ಸೃಷ್ಟಿಸಿತು. ಕತೆ ಕ್ಲೈಮ್ಯಾಕ್ಸ್‌ನಲ್ಲೂ ನಾವು ಅದನ್ನೇ ಹೇಳ ಹೊರಟಿದ್ದೇವೆ.

ಪ್ರಕೃತಿಯ ಮುನಿಸಿನ ಉಗ್ರ ರೂಪ ಹೇಗೆಲ್ಲ ಇರುತ್ತೆ ಎನ್ನುವುದನ್ನು ಒಬ್ಬ ಮಾಯಾವಿ ಹೇಗೆ ಹೇಳುತ್ತಾನೆ ಅನ್ನೋದೇ ಆ ದೃಶ್ಯ’ಎನ್ನುತ್ತಾರೆ ನಿರ್ದೇಶಕ ನವೀನ್ ಕೃಷ್ಣ.  ನಿರ್ದೇಶಕರು ಹೇಳುವ ಹಾಗೆ ಇದು ಕರಾವಳಿ ಭಾಗದಲ್ಲಿ ಈಗಲೂ ಜೀವಂತಾಗಿರುವ ಒಂದು ಮಾಫಿಯಾ ಕುರಿತ ಕತೆ. 

click me!