ರಿಷಬ್ ಶೆಟ್ಟಿಯವರ ಬಹು ನಿರೀಕ್ಷಿತ ಚಿತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಇಂದು ಬಿಡುಗಡೆಯಾಗಲಿದೆ. ಈಗಾಗಲೇ ಮಲ್ಟಿಪ್ಲೆಕ್ಸ್ ಗಳಲ್ಲಿ ಹೌಸ್ ಫುಲ್ ಆಗಿದೆ. ಚಿತ್ರ ನೋಡಲು ಜನ ಉತ್ಸುಕರಾಗಿದ್ದಾರೆ.
ಬೆಂಗಳೂರು (ಆ. 23): ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರ ಆ.23 ರ ರಾತ್ರಿಯಿಂದಲೇ ಪ್ರೇಕ್ಷಕರ ಮುಂದೆ ಬರಲಿದೆ. ಈ ಸಂದರ್ಭದಲ್ಲಿ ಚಿತ್ರದ ಬಗೆಗೆ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ ಮಾತುಗಳು.
ಕೊಡಗಿನ ಜನ ನೋವಲ್ಲಿದ್ದಾರೆ. ಇಂಥಾ ಸಂದರ್ಭದಲ್ಲಿ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಒಂದು ಚಿತ್ರ ಬಿಡುಗಡೆ ಮಾಡುವುದು ಸುಲಭದ ಸಂಗತಿಯಲ್ಲ. ಹತ್ತು ದಿನ ಮೊದಲೇ ಎಲ್ಲವೂ ತಯಾರಾಗಿರುತ್ತದೆ.
ಕೊಡಗಿನಲ್ಲಿ ನೆರೆ ಹಾನಿಯಾಗುವ ಮೊದಲೇ ನಾನು ಚಿತ್ರ ಬಿಡುಗಡೆಗೆ ಎಲ್ಲಾ ಕೆಲಸ ಮಾಡಿದ್ದೆ. ಹಾಗಾಗಿ ಈಗ ಚಿತ್ರ ಬಿಡುಗಡೆಯನ್ನು ಮುಂದೆ ಹಾಕುವ ಸ್ಥಿತಿಯಲ್ಲಿಲ್ಲ.
ಇಂದು ರಾತ್ರಿಯಿಂದಲೇ ಮಂಗಳೂರು, ಶಿವಮೊಗ್ಗ, ಬೆಂಗಳೂರು, ಮೈಸೂರು ಮಲ್ಟಿಪ್ಲೆಕ್ಸ್ಗಳಲ್ಲಿ ಜನರು ಸಿನಿಮಾ ನೋಡಬಹುದು. ಮಂಗಳೂರಿನಲ್ಲಿ ಮೂರು ಪ್ರದರ್ಶನಗಳೂ ಫುಲ್ ಆಗಿವೆ.
ಕನ್ನಡ ಶಾಲೆಗಳು ಉಳಿಯಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ನನ್ನ ತಂಡದ ಪ್ರಾಮಾಣಿಕವಾದ ಪ್ರಯತ್ನ ಇದು. ಹಾಗಂತ ಎಲ್ಲೂ ಬೋಧನೆ ಇಲ್ಲ. ಮನರಂಜನಾತ್ಮಕವಾಗಿ ಹೇಳಬೇಕಾದ್ದನ್ನು ಹೇಳಿದ್ದೇನೆ. ಹಾಗೆ ನೋಡಿದರೆ ಇಲ್ಲಿ ಬರುವ ಎರಡು ಮುಖ್ಯ ಪಾತ್ರಗಳು ನನ್ನ ಅಣ್ಣ ಮತ್ತು ನನ್ನ ಬದುಕಿನಿಂದ ಪ್ರಭಾವಿತವಾದವುಗಳು. ಪ್ರವೀಣ ಪಾತ್ರ ನನ್ನ ಅಣ್ಣನದು.
ಮಮ್ಮುಟ್ಟಿ ಪಾತ್ರ ನನ್ನದು. ನಾನು ಹೇಗೆ ಅಣ್ಣಾವ್ರ ಅಭಿಮಾನಿಯೋ ಹಾಗೆ ಮಮ್ಮುಟ್ಟಿ ಮೋಹನ್ಲಾಲ್ ಅಭಿಮಾನಿ. ನನಗೂ ಮೋಹನ್ ಲಾಲ್ ಅಂದ್ರೆ ಭಾರಿ ಇಷ್ಟ.
ಕಾಸರಗೋಡಿನ ಸರ್ಕಾರಿ ಕನ್ನಡ ಶಾಲೆ ಈ ಚಿತ್ರದ ಕೇಂದ್ರ. ಅದರ ಸುತ್ತಲೂ ಕತೆ ನಡೆಯುತ್ತದೆ. ಅದಕ್ಕೆ ಸಂಬಂಧಿಸಿದ ಬಹಳಷ್ಟು ಕುತೂಹಲಕರ ಪಾತ್ರಗಳು ಚಿತ್ರದಲ್ಲಿವೆ.
ಈಗಾಗಲೇ ಹಾಡುಗಳನ್ನು, ಟ್ರೇಲರ್ ನೋಡಿದ ಜನ ಮೆಚ್ಚಿಕೊಂಡಿದ್ದಾರೆ. ಹಾಗಾಗಿ ಜನರಿಗೆ ಹೊಸತಾಗಿ ಹೇಳುವುದೂ ಏನೂ ಇಲ್ಲ. ಸದ್ಯಕ್ಕೆ ನಾನು ಬ್ಲಾಂಕ್ ಆಗಿದ್ದೇನೆ. ಎಲ್ಲರಿಗೂ ಹೇಳುವುದಿಷ್ಟೇ, ಜನರು ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿದರೆ ಮತ್ತಷ್ಟು ಕ್ರಿಯಾಶೀಲತೆಯಿಂದ ಹೊಸ ಥರದ ಸಿನಿಮಾ ಮಾಡಲು ಸಾಧ್ಯವಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.