
ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಾದೇಶಿಕ ಚಲನಚಿತ್ರೋತ್ಸವ ಕಾರ್ಯಕ್ರಮ ಆರಂಭಿಸಿದೆ. ಮೊದಲನೆಯ ಪ್ರಾದೇಶಿಕಚಿತ್ರೋತ್ಸವ ಮಂಗಳೂರಿನಲ್ಲಿ ಸೆಪ್ಟೆಂಬರ್ 21 ರಿಂದ 23ರವರೆಗೆ ನಡೆಯಲಿದೆ. ಕನ್ನಡ, ಕೊಡವ, ಕೊಂಕಣಿ, ತುಳು, ಬಂಜಾರ ಹಾಗೂ ಬ್ಯಾರಿ ಸೇರಿ ಆರು ಭಾಷೆಗಳನ್ನೊಳಗೊಂಡ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ನೂತನ ಹವಾ ನಿಯಂತ್ರಿತ ಚಿತ್ರಮಂದಿರದಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಚಿತ್ರೋತ್ಸವಕ್ಕೆ ಒಟ್ಟು ಒಂಭತ್ತು ಚಿತ್ರಗಳು ಆಯ್ಕೆ ಆಗಿವೆ.
ಕನ್ನಡ ವಿಭಾಗದಲ್ಲಿ ರಿಷಭ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’, ತುಳು ವಿಭಾಗದಲ್ಲಿ ಅಭಯ ಸಿಂಹ ನಿರ್ದೇಶನದ
‘ಪಡ್ಡಾಯಿ’, ರಿಚರ್ಡ್ ಕ್ಯಾಸ್ಟಲಿನೋ ನಿರ್ದೇಶನದ ‘ಬಂಗಾರ್ ಪಟ್ಲೇರ್’, ವಿಜಯ್ಕುಮಾರ್ ಕೊಡಿಯಾಲ್ಬೈಲ್ ನಿರ್ದೇಶನದ ‘ಒರಿಯರ್ದೊರಿ
ಅಸಲ್’ಹಾಗೂ ವೀರೇಂದ್ರ ಶೆಟ್ಟಿ ನಿರ್ದೇಶನದ ‘ಚಾಲಿ ಪೋಲಿಲು’, ಕೊಡವ ಭಾಷೆ ವಿಭಾಗದಲ್ಲಿಗೋಪಿ ಪೀಣ್ಯ ನಿರ್ದೇಶನದ ‘ತಳಂಗ್ ನೀರ್’,
ಬಂಜಾರ ಭಾಷೆ ವಿಭಾಗದಲ್ಲಿ ಉಮೇಶ್ ನಾಯಕ್ ನಿರ್ದೇಶನದ ‘ಕೊಂಜಾವರಮ್’, ಕೊಂಕಣಿ ಭಾಷೆ ವಿಭಾಗದಲ್ಲಿ ಕಾಸರಗೋಡು ಚಿನ್ನ ನಿರ್ದೇಶನದ
‘ಉಜ್ಜಾಡು’, ಬ್ಯಾರಿ ಭಾಷೆ ವಿಭಾಗದಲ್ಲಿ ಸುವಿರನ್ ನಿರ್ದೇಶನದ ‘ಬ್ಯಾರಿ’ ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆ ಆಗಿವೆ. ಜತೆಗೆ ಆಯಾ ಚಿತ್ರಗಳ ನಿರ್ದೇಶಕರ ಜತೆಗೆ ಸಂವಾದ ಕಾರ್ಯಕ್ರಮವೂ ನಡೆಯಲಿದೆ. ಸೆ.21ಕ್ಕೆಚಿತ್ರೋತ್ಸವಕ್ಕೆ ಚಾಲನೆ ಸಿಗಲಿದೆ. ನಗರಾಭಿವೃದ್ಧಿ ಸಚಿವ ಖಾದರ್ ಉದ್ಘಾಟಿಸಲಿದ್ದಾರೆ. ಸಂತ ಅಲೋಷಿಯಸ್ ಕಾಲೇಜು ಪ್ರಾಂಶುಪಾಲರಾದ ಫಾ.ಪ್ರವೀಣ್ ಮಾರ್ಟಿಸ್, ನಿರ್ದೇಶಕ ರಿಷಭ್ ಶೆಟ್ಟಿ, ನಟ ಶಿವಧ್ವಜ್ ಭಾಗವಹಿಸುತ್ತಿದ್ದಾ ರೆಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಸಿನಿಮಾಗಳು ಜನರಿಗೆ ತಲುಪಬೇಕು. ಈ ಹಿನ್ನೆಲೆ ಯಲ್ಲಿ ಅಕಾಡೆಮಿಯು ರಾಜ್ಯದ ವಿವಿಧೆಡೆಗಳಲ್ಲಿ ಪ್ರಾದೇಶಿಕ ಚಿತ್ರೋತ್ಸವ ಆಯೋಜಿಸಲು
ಮುಂದಾಗಿದೆ. ಮೊದಲ ಹಂತದಲ್ಲೀಗ ಮಂಗಳೂರು ಚಿತ್ರೋತ್ಸವ ನಡೆಯುತ್ತಿದೆ. ಚಿತ್ರಮಂದಿರವು 400 ಸೀಟುಗಳ ಸಾಮರ್ಥ್ಯ ಹೊಂದಿದೆ. ಈಗಾಗಲೇ 150 ವಿದ್ಯಾರ್ಥಿಗಳು, 100 ಮಂದಿ ಸಾರ್ವಜನಿಕರುಹೆಸರು ನೋಂದಣಿ ಮಾಡಿಸಿದ್ದಾರೆ’ ಎಂದರು.
‘ಮಂಗಳೂರು ಚಿತ್ರೋತ್ಸವದ ನಂತರ ಬೆಳಗಾವಿ, ಧಾರವಾಡ ಹಾಗೂ ಶಿವಮೊಗ್ಗದಲ್ಲೂ ಚಿತ್ರೋತ್ಸವ ನಡೆಸುವ ಗುರಿ ಹೊಂದಲಾಗಿದೆ’ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.