‘ತರ್ಲೆ ವಿಲೇಜ್’ ಚಿತ್ರ ನಿರ್ದೇಶಿಸಿದ್ದ ಕೆಎಂ ರಘು ಮತ್ತೊಂದು ಚಿತ್ರ ನಿರ್ದೇಶಿಸುತ್ತಿದ್ದಾರೆ. ಅದರ ಹೆಸರು ‘ತರ್ಲೆ ಕಾಲೇಜ್’.
ಈ ಚಿತ್ರಕ್ಕೆ ಮಂಜುನಾಥ್ ಎನ್. ಪೂಜಾರಿ ನಿರ್ಮಾಪಕರು. ಚಿತ್ರದ ಪ್ರಮುಖ ಆಕರ್ಷಣೆ ಅಂದರೆ, ಖಳನಟ ರವಿಶಂಕರ್. ರವಿಶಂಕರ್ ಅವರಿಲ್ಲಿ ಪ್ರಿನ್ಸಿಪಾಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬುದು ವಿಶೇಷ.
‘ಕತೆ ಏನು ಎಂಬ ಪ್ರಶ್ನೆಗೆ ಚಿತ್ರದ ಹೆಸರಿನಲ್ಲೇ ಇದೆ. ಇದು ಕಾಲೇಜಿನ ಲಾಸ್ಟ್ ಬೆಂಚ್ ವಿದ್ಯಾರ್ಥಿಗಳ ವಿದ್ಯಮಾನಗಳ ಸುತ್ತ ಸಾಗುವ ಸಿನಿಮಾ. ಕಿರಿಕ್ ಪಾರ್ಟಿ ಚಿತ್ರದ ನೆರಳಲ್ಲಿ, ಅದೇ ಫ್ಲೇವರ್ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದು’ ಎನ್ನುತ್ತಾರೆ ನಿರ್ದೇಶಕ ಕೆಎಂ ರಘು. ಶೇ.35ರಷ್ಟು ಅಂಕ ಪಡೆದ ಲಾಸ್ಟ್ ಬೆಂಚ್ನ ತರ್ಲೆ ಹುಡುಗರನ್ನು ತಿದ್ದಿ, ಅವರಿಗೊಂದು ಹೊಸ ವೇದಿಕೆ ರೂಪಿಸುವ ಪ್ರಿನ್ಸಿಪಾಲ್ ಕತೆ ಇಲ್ಲಿದೆ. ಹೀಗಾಗಿ ರವಿಶಂಕರ್ ಅವರೇ ಪ್ರಮುಖ ಪಾತ್ರ. ಇಲ್ಲಿ ನಾಲ್ವರು ಹೀರೋಗಳು, ನಾಲ್ವರು ನಾಯಕಿಯರೂ ಇರುತ್ತಾರೆ. ಸದ್ಯಕ್ಕೆ ಈ ಜೋಡಿಗಳ ಆಡಿಷನ್ ನಡೆಯುತ್ತಿದೆ.