
ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅವರು 'ಕಾಟನ್ ಕ್ಯಾಂಡಿ' ಹೆಸರಿನ ಮ್ಯೂಸಿಕ್ ವಿಡಿಯೋದಲ್ಲಿ ಸಕತ್ ಬಿಜಿಯಾಗಿರೋ ನಡುವೆಯೇ ಇದೀಗ ಮಾಜಿ ಪತ್ನಿ ನಿವೇದಿತಾ ಗೌಡ ಅವರ ಜೊತೆಗೆ ನಟಿಸಿದ್ದ ಮುದ್ದು ರಾಕ್ಷಸಿ ಚಿತ್ರದ ಶೂಟಿಂಗ್ ಕೂಡ ಮುಗಿಸಿ ನಿರಾಳರಾಗಿದ್ದಾರೆ. ನಿವೇದಿತಾ ಜೊತೆಗಿನ ದಾಂಪತ್ಯ ಜೀವನವನ್ನು ಕೊನೆಗಾಣಿಸಿದ ಬಳಿಕ ಮತ್ತೆ ಕಮ್ಬ್ಯಾಕ್ ಆಗಿದ್ದು ನೋಡಿ ಫ್ಯಾನ್ಸ್ಗೆ ಸಕತ್ ಖುಷಿಯಾಗಿದೆ. ನಿವೇದಿತಾ ಅವರು ದಿನದಿಂದ ದಿನಕ್ಕೆ ಹಾಟ್ ಆಗಿ ಕಾಣಿಸಿಕೊಂಡು ರೀಲ್ಸ್ ಮಾಡುತ್ತಾ ನೆಗೆಟಿವ್ ಕಮೆಂಟ್ಸ್ಗಳನ್ನು ಎಂಜಾಯ್ ಮಾಡುತ್ತಿದ್ದರೆ, ಇತ್ತ ಚಂದನ್ ಶೆಟ್ಟಿ ತಮ್ಮ ಕರಿಯರ್ನಲ್ಲಿ ಮುಂದುವರೆಯುತ್ತಿರುವ ಜೊತೆಗೆ ಈಗ ಮತ್ತೊಂದು ಮದ್ವೆಗೂ ಸಿದ್ಧರಾಗಿದ್ದಾರೆ. ಈಚೆಗಷ್ಟೇ ಅವರು ಈ ಬಗ್ಗೆ ಮಾತನಾಡಿದ್ದರು.
ಚಂದನ್ ಶೆಟ್ಟಿ ಬಾಳಲ್ಲಿ ಹೊಸ ಹುಡುಗಿ ಎಂಟ್ರಿಯಾಗಬೇಕು, ಅವರು ಮೊದಲು ಮಾಡಿದ ತಪ್ಪನ್ನೇ ಮಾಡಬಾರದು, ಈ ಬಾರಿ ಎಲ್ಲಾ ವಿಚಾರಿಸಿ ಅವರಂತೆಯೇ ಒಳ್ಳೆಯ ಹುಡುಗಿಯನ್ನೇ ಮದ್ವೆಯಾಗಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಇದೀಗ ಅದರ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಚಂದನ್ ಶೆಟ್ಟಿ ಮಾತನಾಡಿದ್ದರು. ನನಗೆ ಸಿಂಗಲ್ ಆಗಿಯೇ ಮುಂದುವರೆಯುವ ಇಷ್ಟವೇನಿಲ್ಲ. ನನ್ನ ಪಾಲಕರಿಗೂ ನಾನು ಲೈಫ್ನಲ್ಲಿ ಮುಂದಕ್ಕೆ ಹೋಗಬೇಕು, ದಾಂಪತ್ಯ ಜೀವನ ನಡೆಸಬೇಕು, ಮದುವೆಯಾಗಬೇಕು ಎನ್ನುವ ಎಲ್ಲಾ ಆಸೆಯಿದೆ. ಅದಕ್ಕಾಗಿಯೇ ಮದುವೆಯಾಗುವ ನಿರ್ಧಾರ ಮಾಡಿದ್ದೇನೆ ಎಂದಿದ್ದರು. ಆದರೆ ಇದರ ನಡುವೆಯೇ ಇದೀಗ ಅವರು ದೇವಾಲಯ ಒಂದರಲ್ಲಿ ದೇವರ ಎದುರು ಕೈಮುಗಿಯುತ್ತಲೇ ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳಿಗೆ ಆತಂಕ ತರಿಸಿದೆ.
ಇದು ಅಣ್ಣಮ್ಮ ದೇವಿಯ ದೇವಸ್ಥಾನ ಎಂದು ಶೀರ್ಷಿಕೆಯಲ್ಲಿ ನೀಡಲಾಗಿದ್ದು, ಕೆಲ ವಾರಗಳ ಹಿಂದಿನ ವಿಡಿಯೋ ಇದಾಗಿದೆ. ದೇವರ ಎದುರು ಕೈಮುಗಿಯುತ್ತಲೇ ಚಂದನ್ ಶೆಟ್ಟಿ ಭಾವುಕರಾಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಅಷ್ಟಕ್ಕೂ ಮನಸ್ಸಿನ ದುಗುಡವನ್ನು ಹೊರಹಾಕಲು ದೇವಸ್ಥಾನ ಎಷ್ಟೋ ಜನರಿಗೆ ನೆರವಾಗುವುದು ಇದೆ. ದೇವರ ಮುಂದೆ ಮನಸ್ಸಿನ ನೋವನ್ನು ಹೇಳಿಕೊಂಡಾಗ ಆಗುವ ಸಂತೋಷವೇ ಬೇರೆಯದ್ದು. ಆದ್ದರಿಂದ ಅರಿಯದೇ ಕೆಲವೊಮ್ಮೆ ಹೀಗೆ ಕಣ್ಣೀರು ಬರುವುದು ಸಹಜವೇ. ಆದರೂ ಅವರ ಫ್ಯಾನ್ಸ್ ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಇವರು ಏನನ್ನು ಬೇಡಿಕೊಂಡರು, ಏನು ನೋವು ಎನ್ನುವುದು ಅವರ ಅಭಿಮಾನಿಗಳು ತಮಗೆ ಇಷ್ಟ ಬಂದ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ. ಹಲವರು ಇವರ ಡಿವೋರ್ಸ್ ಬಗ್ಗೆ ಮಾತನಾಡಿದ್ದು, ಮುಂದೆ ಒಳ್ಳೆಯ ಲೈಫ್ ಲೀಡ್ ಮಾಡಿ ಎಂದು ಹಾರೈಸುತ್ತಿದ್ದಾರೆ.
ಇದೇ 9ರಂದು ಅವರ ಸೂತ್ರಧಾರಿ ಚಿತ್ರ ರಿಲೀಸ್ ಆಗಿದ್ದು, ಆ ಸಮಯದಲ್ಲಿ ಚಂದನ್ ಶೆಟ್ಟಿ ಅವರು ಈ ದೇವಾಲಯಕ್ಕೆ ಭೇಟಿ ನೀಡಿದ್ದರು. ಇದು ಆಗಿನ ವಿಡಿಯೋ ಆಗಿರಬಹುದು ಎನ್ನುತ್ತಿದ್ದಾರೆ ಅಭಿಮಾನಿಗಳು. ಕೆಲ ದಿನಗಳ ಹಿಂದೆ ಸೂತ್ರಧಾರಿ ಚಿತ್ರದ ಕುರಿತು ಹೇಳಿಕೊಂಡಿದ್ದ ಚಂದನ್ ಶೆಟ್ಟಿ, ನನ್ನ ಬಹಳ ವರ್ಷಗಳ ಕನಸು ಈಡೇರುತ್ತಿದೆ, ಹೊಸ ಜೀವನ ಶುರು ಮಾಡುತ್ತಿದ್ದೇನೆ. ಅಪ್ಪನ ಆಸೆಯಂತೆ ಹೀಗೆ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ಇರಲಿ ಎಂದಿದ್ದರು. ಸೂತ್ರಧಾರಿ ಚಿತ್ರದ ಮೂಲಕ ಚಂದನ್ ಶೆಟ್ಟಿ ಅವರು ಸ್ಯಾಂಡಲ್ವುಡ್ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಕುರಿತು ಅವರು ಮಾತನಾಡಿದ್ದರು. ನಾನು ನಟನಾಗಬೇಕು ಎನ್ನುವುದು ನಮ್ಮ ತಂದೆಯ ಕನಸು. ಚಿಕ್ಕಂದಿನಿಂದಲೂ ನೀನು ಸಿನಿಮಾ ಹೀರೋ ಆಗಬೇಕು ಅಂತಿದ್ರು. ಆದರೆ ನಾನು ಕನ್ನಡಿ ಮುಂದೆ ನಿಂತು ನೋಡಿದ್ರೆ ನಾನು ಯಾವಾಗ ಹೀರೋ ಆಗ್ತೀನಿ ಅಂತ ನಗು ಬರುತ್ತೆ. ಆದರೆ ನನ್ನ ತಂದೆ ಆವತ್ತು ಹೇಳಿದ್ದ ಒಂದು ಮಾತು ಇದೇ ಮೇ 9ರಂದು ನಿಜ ಆಗುತ್ತಿದೆ. ನನ್ನ ತಂದೆಯ ಕನಸು ಈಡೇರುತ್ತಿದೆ ಎಂದಿದ್ದರು ನಟ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.