
ಬೆಂಗಳೂರು (ಜ.22): ಕಿಚ್ಚ ಸುದೀಪ್ ಹಾಗೂ ಗುರುನಂದನ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ‘ರಾಜು ಕನ್ನಡ ಮೀಡಿಯಂ’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಮನರಂಜನೆ ಜತೆಗೆ ಕನ್ನಡದ ಬಗೆಗಿನ ಕಾಳಜಿಯನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಈಗ ಹಿಂದಿಗೂ ರೀಮೇಕ್ ಆಗುತ್ತಿದೆ.
ಸದ್ಯಕ್ಕೆ ಹಿಂದಿಯಲ್ಲಿ ರೀಮೇಕ್ ಆಗುವುದಾದರೆ ಸುದೀಪ್ ಪಾತ್ರವನ್ನು ಅಮೀರ್ ಖಾನ್ ಅಥವಾ ಶಾರುಖ್ ಖಾನ್ ಅವರು ಮಾಡುವುದಕ್ಕೆ ರೆಡಿಯಾಗಿದ್ದಾರಂತೆ. ಈ ಪೈಕಿ ಅಮೀರ್ ಖಾನ್ ಅವರು ತಮ್ಮದೇ ಪ್ರೊಡಕ್ಷನ್ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುವುದಕ್ಕೆ ಆಸಕ್ತಿ ತೋರಿದ್ದು, ತಾವು ಸುದೀಪ್ ಪಾತ್ರ ಮಾಡುವ ಜತೆಗೆ ಹಿಂದಿಯ ರಾಜ್ಕುಮಾರ್ ರಾವ್ ಗುರುನಂದನ್ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ.
‘ಅಮೀರ್ ಖಾನ್ ಹಾಗೂ ಶಾರುಖ್ ಖಾನ್ ನಮ್ಮ ಚಿತ್ರವನ್ನು ರೀಮೇಕ್ ಮಾಡುವುದಕ್ಕೆ ಮುಂದೆ ಬಂದಿರುವುದು ನಿಜ. ಈ ಪೈಕಿ ಅಮೀರ್ ಖಾನ್ ಅವರು ಅವರದ್ದೇ ಬ್ಯಾನರ್'ನಲ್ಲಿ ನಿರ್ಮಿಸುವುದಾಗಿ ಹೇಳಿದ್ದಾರೆ. ಆ ಬಗ್ಗೆ ಈಗ ಮಾತುಕತೆ ನಡೆಯುತ್ತಿದೆ’ ಎನ್ನುತ್ತಾರೆ ನಿರ್ಮಾಪಕ ಕೆ ಎ ಸುರೇಶ್. ಈ ನಡುವೆ ಚಿತ್ರತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ.
ಕನ್ನಡದ ಕಾಳಜಿಯನ್ನು ಹೊಂದಿರುವ ಸಿನಿಮಾ ಇದು. ಹೀಗಾಗಿ ಜಿಎಸ್ಟಿಯಲ್ಲಿ ರಾಜ್ಯದ ಪಾಲು ಬಿಡುವ ಮೂಲಕ ಚಿತ್ರಕ್ಕೆ ಜಿಎಸ್ಟಿ ರಿಯಾಯಿತಿ ಕೊಡುವ ಮೂಲಕ ಟಿಕೆಟ್ ಬೆಲೆ ಕಡಿಮೆ ಮಾಡುವುದಕ್ಕೆ ಅನುಕೂಲ ಮಾಡಿಕೊಡುವಂತೆ ಮನವಿಪತ್ರ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರವನ್ನು ನೋಡಿದ ನಂತರ ನಿರ್ಧರಿಸುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ನಟ ಸುದೀಪ್ ಅವರು ‘ದಿ ವಿಲನ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರಿಂದ ‘ರಾಜು ಕನ್ನಡ ಮೀಡಿಯಂ’ ಚಿತ್ರವನ್ನು ನೋಡಿಲ್ಲ. ಆದರೆ, ಸಿನಿಮಾ ನೋಡುವಂತೆ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಳ್ಳುವುದರ ಜತೆಗೆ ಚಿತ್ರದ ಬಗ್ಗೆ ಬರುತ್ತಿರುವ ಪಾಸಿಟೀವ್ ವಿಮರ್ಶೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ನಟ ಸುದೀಪ್ ಅವರು ‘ರಾಜು ಕನ್ನಡ ಮೀಡಿಯಂ’ ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೂಡಿ ಸಿನಿಮಾ ನೋಡುವ ಸಾಧ್ಯತೆಗಳಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.