ರೆಹಮಾನ್ ಅವರ ‘ನೋಟ್ಸ್ ಆಫ್ ಎ ಡ್ರೀಮ್, ದ ಆಥರೈಸ್ಡ್ ಬಯೋಗ್ರಫಿ ಆಫ್ ಎ.ಆರ್. ರೆಹಮಾನ್’ ಎಂಬ ಆತ್ಮಚರಿತ್ರೆ ಶನಿವಾರ ಬಿಡುಗಡೆಯಾಯಿತು. ಇದರಲ್ಲಿ ತಮ್ಮ ಅನೇಕ ಸತ್ಯದ ಅನಾವರಣ ಮಾಡಿದ್ದಾರೆ.
ಮುಂಬೈ : ‘25ನೇ ವಯಸ್ಸಿನವರೆಗೂ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದೆ. ಪ್ರತಿದಿನ ಆತ್ಮಹತ್ಯೆಯ ಭಾವನೆ ಮನದೊಳಗೆ ಬರುತ್ತಿತ್ತು. ಜೀವನದಲ್ಲಿ ವೈಫಲ್ಯ ಅನುಭವಿಸುತ್ತಿದ್ದೇನೆ ಎಂದು ನನಗೆ ಎನ್ನಿಸುತ್ತಿತ್ತು.’
- ಹೀಗೆಂದವರು ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್. ಅಚ್ಚರಿಯಾದರೂ ಸತ್ಯವಿದು.
ರೆಹಮಾನ್ ಅವರ ‘ನೋಟ್ಸ್ ಆಫ್ ಎ ಡ್ರೀಮ್, ದ ಆಥರೈಸ್ಡ್ ಬಯೋಗ್ರಫಿ ಆಫ್ ಎ.ಆರ್. ರೆಹಮಾನ್’ ಎಂಬ ಆತ್ಮಚರಿತ್ರೆ ಶನಿವಾರ ಬಿಡುಗಡೆಯಾಯಿತು. ಈ ಹಿನ್ನೆಲೆಯಲ್ಲಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ರೆಹಮಾನ್, ತಮ್ಮ ಆರಂಭದ ದಿನಗಳು ಹೇಗೆ ಕಷ್ಟದಾಯಕವಾಗಿದ್ದವು? ಆದರೆ ಆ ಕಷ್ಟಗಳನ್ನೇ ಮೆಟ್ಟಿಲು ಮಾಡಿಕೊಂಡು ಜೀವನದಲ್ಲಿ ಹೇಗೆ ತಾನು ಯಶ ಕಂಡೆ ಎಂಬುದನ್ನು ವಿಸ್ತಾರವಾಗಿ ಹೇಳಿದರು.
‘25ನೇ ವಯಸ್ಸಿನವರೆಗೆ ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದೆ. ನಾವು ಸುಖವಾಗಿಲ್ಲ ಎಂದು ನಮ್ಮ ಕುಟುಂಬದವರಿಗೆ ಎನ್ನಿಸುತ್ತಿತ್ತು. ಏಕೆಂದರೆ ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೆ. ಹೀಗಾಗಿ ನಿರ್ವಾತ ವಾತಾವರಣ ಸೃಷ್ಟಿಯಾಗಿತ್ತು. ಇಂಥ ಅನೇಕ ಘಟನೆಗಳು ನಡೆಯುತ್ತಲೇ ಇದ್ದವು’ ಎಂದರು.
‘ಆದರೆ ಜೀವನದಲ್ಲಿ ತಿಂದ ಈ ಪೆಟ್ಟುಗಳು ನನ್ನನ್ನು ಮತ್ತಷ್ಟುಗಟ್ಟಿಮಾಡತೊಡಗಿದವು. ಸಾವು ಎಂಬುದು ಎಲ್ಲರಿಗೂ ಕಟ್ಟಿಟ್ಟಬುತ್ತಿ. ಪ್ರತಿಯೊಂದಕ್ಕೂ ಎಕ್ಸ್ಪೈರಿ ಡೇಟ್ ಇದ್ದೇ ಇರುತ್ತದೆ. ಹೀಗಾಗಿ ಸಾವಿಗೆ ಏಕೆ ಹೆದರಬೇಕು?’ ಎಂದು ಅವರು ಅನುಭವಗಳನ್ನು ಬಿಚ್ಚಿಟ್ಟರು.