
ಹೈದರಾಬಾದ್ (ಜೂ.12): ಆಂಧ್ರದ ಉಪಮುಖ್ಯಮಂತ್ರಿ, ಖ್ಯಾತ ನಟ ಪವನ್ ಕಲ್ಯಾಣ್ ಅವರು 17ನೇ ವಯಸ್ಸಿನಲ್ಲಿ ನಕ್ಸಲ್ ಆಗಲು ಮುಂದಾಗಿದ್ದರಂತೆ, ಬಂದೂಕು ಕೈಗೆತ್ತಿಕೊಳ್ಳಲೂ ಬಯಸಿದ್ದರಂತೆ! ಆದರೆ, ಆ ರೀತಿ ನಕ್ಸಲ್ವಾದದ ಹಾದಿಯಲ್ಲಿ ಸಾಗದಂತೆ ಹಿರಿಯ ಸೋದರ, ಮೆಗಾಸ್ಟಾರ್ ಚಿರಂಜೀವಿ ತಡೆದರು ಎಂದು ಸಂದರ್ಶನವೊಂದರಲ್ಲಿ ಪವನ್ ಕಲ್ಯಾಣ್ ಹೇಳಿಕೊಂಡಿದ್ದಾರೆ.
1980ರ ದಶಕದಲ್ಲಿ ಹದಿಹರೆಯದಲ್ಲಿದ್ದಾಗ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ, ಎಲ್ಟಿಟಿಇ ಚಳವಳಿ, ಶೀತಲ ಸಮರದ ಪ್ರಭಾವ, ಜರ್ಮನಿ ಅಸ್ಥಿರತೆ, ಖಲಿಸ್ತಾನಿ ಉಗ್ರವಾದ ಮತ್ತಿತರ ವಿಚಾರಗಳು ಪವನ್ ಕಲ್ಯಾಣ್ರ ಆಲೋಚನೆಗಳ ಮೇಲೆ ತೀವ್ರ ಪರಿಣಾಮ ಬೀರಿದ್ದವು. ಪರಿಣಾಮ ಹರೆಯದಲ್ಲಿದ್ದಾಗ ನಕ್ಸಲ್ ಆಗ ಬಯಸಿದ್ದೆ, ಬಂದೂಕು ಕೈಗೆತ್ತಿಕೊಳ್ಳಲೂ ಮುಂದಾಗಿದ್ದೆ. ಆಗ ನನ್ನ ಸೋದರ ಚಿರಂಜೀವಿ ನಾನು ರಚನಾತ್ಮಕವಾಗಿ ಏನಾದರೂ ಮಾಡಲು ಪ್ರೋತ್ಸಾಹಿಸಿದರು.
ಇಂಥ ಉನ್ಮಾದಗಳೆಲ್ಲ ನಿನಗೆ ಎಲ್ಲಿಂದ ಬರುತ್ತೆ ಅಂತ ಪ್ರಶ್ನಿಸಿದರು. ಆಗ, ನಾನು ಅನ್ಯಾಯದ ಕುರಿತು ಮಾತನಾಡುತ್ತಿದ್ದೇನೆ. ನಾವು ಅದನ್ನು ಮಾಡಬೇಕು, ಇದನ್ನು ಮಾಡಬೇಕು ಎಂದು ಹೇಳಿದೆ. ಅವರು ತುಂಬಾ ಚಿಂತೆಗೀಡಾಗಿದ್ದರು. ಇದೆಲ್ಲ 17 ರಿಂದ 21 ವರ್ಷದವರೆಗೂ ಮುಂದುವರಿಯಿತು. ಆ ವಯಸ್ಸಿನಲ್ಲೇ ನಾವು ಇಂಥದ್ದಕ್ಕೆಲ್ಲ ಆಕರ್ಷಿತರಾಗುವುದು’ ಎಂದಿದ್ದಾರೆ ಪವನ್ ಕಲ್ಯಾಣ್.
ನಾನು ವಿದ್ಯಾರ್ಥಿಗಳ ಜತೆ ಸೇರಿಕೊಂಡು ನಕ್ಸಲರ ಜನಸಭೆಗಳಲ್ಲೂ ಪಾಲ್ಗೊಳ್ಳುತ್ತಿದ್ದೆ. ಡಾಕ್ಯುಮೆಂಟರಿಗಳನ್ನು ಮಾಡಲು ಮುಂಬೈಗೆ ತೆರಳಿ ಶಾರ್ಟ್ ಫಿಲ್ಮ್ ಫೆಸ್ಟಿವಲ್ನಲ್ಲೂ ಪಾಲ್ಗೊಂಡಿದ್ದೆ ಎಂದು ತಿಳಿಸಿರುವ ಅವರು, ನಾನು ಪ್ರಯೋಗಗಳನ್ನು ಮಾಡುತ್ತಿದ್ದೆ. ಆದರೂ ಬಯಸಿದ್ದು ಸಾಧಿಸಲಾಗದೆ ಎಲ್ಲೋ ಸಿಕ್ಕಿಹಾಕಿಕೊಂಡ ಭಾವನೆಯಲ್ಲಿದ್ದೆ ಎಂದಿದ್ದಾರೆ.
‘ನನ್ನ ತಲೆ ಹತ್ತು ಹಲವು ವಿಚಾರಗಳಿಂದ ತುಂಬಿ ಸಿಡಿದು ಹೋಗುವಂತಾಗಿತ್ತು. ಒಂದು ರೀತಿಯಲ್ಲಿ ಹುಚ್ಚನಂತಾಗಿದ್ದೆ. ಆ ಸಂದರ್ಭದಲ್ಲಿ ನನ್ನ ಅಣ್ಣನ ಪ್ರವೇಶವಾಯಿತು. ಒಂದು ವೇಳೆ ನಿನ್ನ ಸೋದರ ಚಿರಂಜೀವಿ ಆಗಿರದಿದ್ದರೆ, ನಿನಗೆ ನಿನ್ನ ಕುಟುಂಬದ ಜವಾಬ್ದಾರಿ ಇರುತ್ತಿದ್ದರೆ, ನಿನ್ನ ವೇತನ, ಕಠಿಣ ಪರಿಶ್ರಮದ ಮೇಲೆ ಯಾರಾದರೂ ಅವಲಂಬಿತರಾಗಿದ್ದರೆ ಇದೇ ರೀತಿ ಮಾಡ್ತಿದ್ದಿಯಾ ಅಂತ ಕೇಳಿದರು. ಆ ಒಂದು ಮಾತಿಗೆ ನನ್ನಲ್ಲಿ ಉತ್ತರವೇ ಇರಲಿಲ್ಲ. ನಾನು ಸುಮ್ಮನಾದೆ’ ಎಂದು ಪವನ್ ಕಲ್ಯಾಣ್ ಸ್ಮರಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.