ಲಾಂಗು- ಬ್ಲೇಡು ಹಿಡಿದು ಬೆಂಗಳೂರಿನ ಟೆರರ್ ಏರಿಯಾಗಳನ್ನು ಸುತ್ತುತ್ತಿದ್ದ ಅಥವಾ ಅಂಥ ಏರಿಯಾಗಳ ಹೆಸರಿನ ಚಿತ್ರಗಳಿಗೆ ಮಾತ್ರ ಸೀಮಿತ ಎನ್ನುವಂತಿದ್ದ ಲೂಸ್ಮಾದ ಯೋಗೀಶ್ ಅವರನ್ನ ಬಸವನಗುಡಿಗೆ ಕರೆದುಕೊಂಡು
ಬಂದಿದ್ದಾರೆ ನಿರ್ದೇಶಕ ಕೆ ಕೃಷ್ಣರಾಜ್.
ಈ ಚಿತ್ರದ ಹೆಸರು ‘ಲಂಬೋದರ’. ಗಣೇಶನ ಮತ್ತೊಂದು ಹೆಸರು. ಇದಕ್ಕೊಂದು ಟ್ಯಾಗ್ ಲೈನ್ ಕೂಡ ಇದೆ. ‘ಬಸವನಗುಡಿ ಬೆಂಗಳೂರ್’ ಎಂಬುದು. ಅಲ್ಲಿಗೆ ಚಿತ್ರದ ಕತೆ ಏನು? ಎಂಬ ಕುತೂಹಲಕ್ಕೆ ಚಿತ್ರದ ಹೆಸರಿನಲ್ಲೇ ಉತ್ತರ ಇದೆ.
ಶ್ರೀರಾಂಪುರ, ಕಲಾಸಿಪಾಳ್ಯ, ಶಿವಾಜಿನಗರ, ಕಾಟನ್ಪೇಟೆ, ಚಿಕ್ಪೇಟೆ... ಹೀಗೆ ಬೆಂಗಳೂರಿನ ಮಾಸ್ ಏರಿಯಾಗಳೆಲ್ಲ ತೆರೆ ಮೇಲೆ ಬಂದ ಮೇಲೆ ಬಸವನಗುಡಿಯಂತಹ ಸಾಫ್ಟ್ ಏರಿಯಾದ ಕತೆ ಪರದೆಯನ್ನು ಆವರಿಸಿಕೊಳ್ಳುತ್ತಿದೆ. ‘ಇದು ಬಸವನಗುಡಿ ಏರಿಯಾ ಹುಡುಗರ ಚಟುವಟಿಕೆ, ತಲೆಹರಟೆಗಳನ್ನ ಗಮನಿಸಿ ಈ ಚಿತ್ರಕ್ಕೆ ಕತೆ ಮಾಡಿಕೊಂಡಿದ್ದೇನೆ.
ಹಾಸ್ಯ, ಪ್ರೀತಿ, ಸೆಂಟಿಮೆಂಟ್ ಈ ಚಿತ್ರದ ಮುಖ್ಯಾಂಶಗಳು. ಎಲ್ಲರ ಬದುಕಿನಲ್ಲೂ ಬಂದು ಹೋಗಿರುವ ಮತ್ತು ಯಾವಾಗಲೂ ಬರುವಂತಹ ಘಟನೆಗಳೇ ಈ ಚಿತ್ರದ ಕತೆಯಾಗಿರುವುದು ಲಂಬೋದರನ ದೊಡ್ಡ ಪ್ಲಸ್ ಪಾಯಿಂಟ್. ಬಸವನಗುಡಿಯಲ್ಲಿ ಗಣಪತಿ ದೇವಸ್ಥಾನ ಇದೆ. ಆ ಕಾರಣಕ್ಕೆ ಲಂಬೋದರ ಎನ್ನುವ ಹೆಸರಿಡಲಾಗಿದೆ’ ಎಂದರು ಕೆ ಕೃಷ್ಣರಾಜ್.
ಈ ಚಿತ್ರಕ್ಕೆ ರಾಘವೇಂದ್ರ ಭಟ್ ಹಾಗೂ ವಿಶ್ವೇಶ್ವರ ಪಿ ನಿರ್ಮಾಪಕರು. ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ನನ್ನ ಪಾತ್ರ ಮೂರು ರೀತಿಯಲ್ಲಿದೆ. ಶಾಲಾ ವಿದ್ಯಾರ್ಥಿ ಪಾತ್ರಕ್ಕಾಗಿ ಮೀಸೆ ಬೋಳಿಸಿಕೊಂಡು ನಾನು ಮಾಡಿಕೊಂಡ ತಯಾರಿ ನೋಡಿ ನನ್ನ ಹೆಂಡತಿ ಒಂದು ವಾರ ಮಾತೇ ಆಡಿರಲಿಲ್ಲ. ಅಷ್ಟು ಚಿಕ್ಕ ಹುಡುಗನ ರೀತಿ ಕಾಣುತ್ತಿದ್ದೆ. ನನಗೆ ಗಡ್ಡ, ಮೀಸೆ ಇದ್ದರೆ ಮಾತ್ರ ದೊಡ್ಡವನಂತೆ ಕಾಣುತ್ತೇನಂತೆ ಕಾಣುತ್ತೇನೆಂದು ಅನಿಸಿದ್ದೇ ಆಗ. ಜತೆಗೆ ನಮ್ಮ ತಾಯಿ ಬೇರೆ ಸಿಕ್ಕಾಪಟ್ಟೆ ಆಡಿಕೊಂಡರು.
ಆದರೂ ಪಾತ್ರಕ್ಕಾಗಿ ಅಷ್ಟು ತಯಾರಿ ಬೇಕಿತ್ತು. ಹೀಗೆಲ್ಲ ಮಾಡಿದ್ದಕ್ಕೆ ಸಿನಿಮಾ ನಮ್ಮ ನಿರೀಕ್ಷೆಯಂತೆ ಬಂದಿದೆ’ ಎಂದಿದ್ದು ನಟ ಯೋಗೀಶ್. ಈ ಚಿತ್ರದ ನಾಯಕಿ ಆಕಾಂಕ್ಷ. ‘ನನ್ನ ಪಾಲಿನ ಮೊದಲ ಕಮರ್ಷಿಯಲ್ ಸಿನಿಮಾ ಇದು. ಹಾಡುಗಳನ್ನ ಎಲ್ಲರೂ ಕೇಳಿ ಇಷ್ಟಪಟ್ಟಿದ್ದಾರೆ’ ಎನ್ನುತ್ತಾರೆ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮ. ಕಶ್ಯಪ್ ಚಿತ್ರದ ಛಾಯಾಗ್ರಾಹಕ. ಧರ್ಮಣ್ಣ, ಅಚ್ಯುತ್ ಕುಮಾರ್, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ ನಟಿಸಿದ್ದಾರೆ. ಜಯಂತ್ಕಾಯ್ಕಿಣಿ, ಯೋಗರಾಜಭಟ್, ಗೌಸ್ಪೀರ್, ಹರ್ಷಪ್ರಿಯಾ ಸಾಹಿತ್ಯ ಇದೆ.