ಭೀಷ್ಮ ಅಂಬರೀಷ್ ವಿಡಿಯೋ ವೈರಲ್

By Kannadaprabha NewsFirst Published Nov 27, 2018, 9:00 AM IST
Highlights

ಅಂಬರೀಷ್ ನಟನೆಯ ಕೊನೆಯ ಚಿತ್ರ ‘ಕುರುಕ್ಷೇತ್ರ’. ಈ ಚಿತ್ರದಲ್ಲಿ ಅವರು ಭೀಷ್ಮನ ಪಾತ್ರ ಮಾಡಿದ್ದರು. ಭೀಷ್ಮ ಪಾತ್ರಧಾರಿ ಅಂಬರೀಷ್ ಶರಶಯ್ಯೆಯಲ್ಲಿ ಮಲಗಿ ಕೊನೆಯ ಕ್ಷಣಗಳನ್ನು ಕಳೆಯುವ ದೃಶ್ಯಗಳುಳ್ಳ ವಿಡಿಯೋ ಅಂಬರೀಶ್ ಅಂತಿಮ ಯಾತ್ರೆ ಸಂದರ್ಭದಲ್ಲೇ ಬಿಡುಗಡೆಯಾಗಿ ವೈರಲ್ ಆಗಿದೆ. 

ಅದನ್ನು ನೋಡಿ ಲಕ್ಷಾಂತರ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ದರ್ಶನ್ ಅಭಿನಯದ ನಿರೀಕ್ಷಿತ ಚಿತ್ರ ‘ಕುರುಕ್ಷೇತ್ರ’ ಚಿತ್ರದಲ್ಲಿ ಅಂಬರೀಷ್ ಒತ್ತಾಯಕ್ಕೆ ಕಟ್ಟುಬಿದ್ದು ನಟಿಸಿದ್ದರು. ಆ ಪಾತ್ರದ ಲುಕ್ ರಿಲೀಸ್ ಆಗಿದ್ದಾಗ ವೈರಲ್ ಆಗಿತ್ತು. ನಂತರ ಆ ಪಾತ್ರದ ಕುರಿತು ಹೆಚ್ಚಿನ ಮಾಹಿತಿ ಚಿತ್ರತಂಡ ನೀಡಿರಲಿಲ್ಲ. ಇದೀಗ ಅಂಬರೀಷ್ ಇಹಲೋಕ ತ್ಯಜಿಸಿದ ಸಂದರ್ಭದಲ್ಲೇ ಭೀಷ್ಮನ ಪಾತ್ರದ ಕೊನೆಯ ದೃಶ್ಯಗಳನ್ನೂ ಚಿತ್ರತಂಡ ಬಿಡುಗಡೆ ಮಾಡಿದೆ. ಆ ವಿಡಿಯೋ ಕ್ಷಣಮಾತ್ರದಲ್ಲೇ ವೈರಲ್ ಆಗಿದೆ. ಭೀಷ್ಮನ ಕೊನೆ ಕ್ಷಣಗಳು ಅವರ ಅಭಿಮಾನಿಗಳ ಕರುಳು ಹಿಂಡುವಂತೆ ಮಾಡಿವೆ.

 ನಿರ್ಮಾಪಕ ಮುನಿರತ್ನ ‘ಕುರುಕ್ಷೇತ್ರ’ ಹೆಸರಲ್ಲಿ ಸಿನಿಮಾ ಮಾಡುತ್ತಿದ್ದಾರೆಂದಾಗ ಅದರಲ್ಲಿ ಅಂಬರೀಷ್ ಕೂಡ ಅಭಿನಯಿಸುತ್ತಿದ್ದಾರೆಂಬ ಸುದ್ದಿ ಇತ್ತು. ಜತೆಗೆ ಅವರು ಅಭಿನಯಿಸುತ್ತಾರೋ ಇಲ್ಲವೋ ಎನ್ನುವ ಗೊಂದಲವೂ ಇತ್ತು. ಆಗ ಅಂಬರೀಷ್ ಅದಕ್ಕೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಭೀಷ್ಮ ನ ಪಾತ್ರಕ್ಕೆ ನಾನೇ ಬೇಕು ಅಂತೇನಿಲ್ಲ, ಯಾರಿಗಾದ್ರೂ ಕಾಸ್ಟ್ಯೂಮ್ ಹಾಕಿ, ಶರಶಯ್ಯೆ ಮೇಲೆ ಮಲಗಿಸಬಹುದು ಅಂತ ಚಿತ್ರತಂಡವನ್ನು ರೇಗಿಸಿದ್ದರು. ಕೊನೆಗೆ ಚಿತ್ರತಂಡದ ಮನವಿಗೆ ಇಲ್ಲ ಎನ್ನದೇ ಒಪ್ಪಿಕೊಂಡು ಭೀಷ್ಮನ ಪಾತ್ರಕ್ಕೆ ಬಣ್ಣ ಹಚ್ಚಿ ಅಭಿನಯಿಸಿ ಬಂದಿದ್ದರು. ಅದಕ್ಕಾಗಿಯೇ ಸುಮಾರು ಒಂದು ವಾರಗಳ ಕಾಲ ಹೈದ್ರಾಬಾದ್‌ನಲ್ಲಿದ್ದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. 

ಅಂಬರೀಷ್ ಕೌಟುಂಬಿಕ, ಸಾಮಾಜಿಕ ಚಿತ್ರಗಳ ಜತೆಗೆ ಪೌರಾಣಿಕ ಚಿತ್ರಗಳಲ್ಲಿನ ಪಾತ್ರಗಳಿಗೂ ಬಣ್ಣಹಚ್ಚಿದ್ದಾರೆ. ಈಗ ತಮ್ಮ ಕೊನೆಯ ಚಿತ್ರದ ಮೂಲಕ ಶರಶಯ್ಯೆಯಲ್ಲಿ ಮಲಗಿದ ಭೀಷ್ಮನ ಅವತಾರವನ್ನು ಬಾಕಿ ಉಳಿಸಿ ಹೋಗಿದ್ದಾರೆ. ಕಾಕತಾಳೀಯ ಎನ್ನುವ ಹಾಗೆ ಜೀವನದ ಉದ್ದಕ್ಕೂ ಕರ್ಣನೆಂದು ಗುರುತಿಸಿಕೊಂಡ ಅಂಬರೀಷ್, ಈಗ ಭೀಷ್ಮನ ಪಾತ್ರವನ್ನು ಮನಸ್ಸಲ್ಲಿ ಉಳಿಸಿ ಮರೆಯಾಗಿದ್ದಾರೆ.

ಚಿತ್ರದ ಬರವಣಿಗೆ ಕೆಲಸ ಮುಗಿದು, ಕಲಾವಿ ದರ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ನಿರ್ಮಾಪಕರ ಮೊದಲ ಸಲಹೆಯೇ ಅಂಬರೀಷ್ ಅವರು ಚಿತ್ರದಲ್ಲಿರಬೇಕು ಎನ್ನು ವುದೇ ಆಗಿತ್ತು. ಆ ಪ್ರಕಾರವೇ ಅವರನ್ನು ಸಂಪರ್ಕಿಸಿ, ಪಾತ್ರದ ಬಗ್ಗೆ ತಿಳಿಸಿ, ನಿಮ್ಮ ಆಶೀರ್ವಾದ ಚಿತ್ರದ ಮೇಲಿರಲಿ ಎಂದು ಕೇಳಿಕೊಂಡಿದ್ದೆವು. ಭೀಷ್ಮನ ಪಾತ್ರಕ್ಕೆ ಬಣ್ಣ ಹಚ್ಚಿ, ಚಿತ್ರದ ಮೆರಗು ಹೆಚ್ಚಿಸಿದರು. ಈಗ ಚಿತ್ರ ತೆರೆಗೆ ಬರುವ ಮುನ್ನವೇ ಅವರಿಲ್ಲ ಎನ್ನುವುದು ತೀವ್ರ ನೋವು ತಂದಿದೆ. - ನಾಗಣ್ಣ ನಿರ್ದೇಶಕ 

 

"

 

click me!