
ಬೆಂಗಳೂರು (ಫೆ. 17): ಇದು ಹಳ್ಳಿ ಹುಡುಗನ ಹಾಡುಪಾಡು. ಅವನು ಆಡಿದ್ದೇ ಆಟ ಎನ್ನುತ್ತಿದ್ದವನ ಬಾಳಿಗೊಂದು ತಿರುವು ಸಿಗುವುದು ಒಂದು ಪ್ರೀತಿಯ ಕತೆಯಿಂದ. ಆ ಪ್ರೀತಿ ಕೂಡ ಎದುರಾಗುವುದು ಮನೆ ಬಿಟ್ಟು ಹೋದ ಮೇಲೆ. ಸಿಟಿಯಲ್ಲಿ
ಕಂಡ ಹುಡುಗಿ ಹಳ್ಳಿ ಮನೆತನಕ ಬರುತ್ತಾಳೆಯೇ? ಆಕೆಗೆ ಮತ್ತೊಬ್ಬ ಲವರ್ ಇದ್ದಾನೆ. ಹಾಗಾದರೆ ಮುಂದೇನು? ಎನ್ನುವ ಚೋಟುದ್ದದ ಪ್ರಶ್ನೆಗೆ ಮಾರುದ್ದದ ಕತೆ ಹೇಳುತ್ತಾರೆ ನಿರ್ದೇಶಕ ರಘುವರ್ಧನ್.
ಚಿತ್ರದ ಹೆಸರು ‘ಮಿ.ಎಲ್ಎಲ್ಬಿ’. ಅಂದರೆ ಇದು ಲ್ಯಾಂಡ್ ಲಾರ್ಡ್ ಭದ್ರ ಎನ್ನುವವನ ಕತೆ. ಹಳ್ಳಿಯಿಂದ ನಗರಕ್ಕೆ ಮತ್ತೆ ನಗರದಿಂದ ಹಳ್ಳಿಗೆ ಓಡಾಡುತ್ತ ಸಾಗುವ ಕತೆಯಲ್ಲಿ ಕೇಳುವಂತಹ ಹಾಡುಗಳಿವೆ. ಅಲ್ಲಲ್ಲಿ ನಗಿಸುವ
ಸಂಭಾಷಣೆಗಳಿಂದ ಚಿತ್ರದ ಪ್ರತಿ ದೃಶ್ಯವನ್ನು ಸಾಧ್ಯವಾದಷ್ಟು ಚೊಕ್ಕವಾಗಿ ತೋರಿಸುವ ಛಾಯಾಗ್ರಾಹಕನ ಕ್ಯಾಮೆರಾ ಕಣ್ಣಿನ ಪ್ರತಿಭೆ ಎದ್ದು ಕಾಣುತ್ತದೆ. ನೋಡಲು ಮುದ್ದಾಗಿ ಕಾಣುವ ನಾಯಕಿ, ಯಾವುದೇ ಡೈಲಾಗ್ ಅನ್ನು
ಬೇಸ್ ವಾಯ್ಸ್ನಲ್ಲಿ ಹೇಳುತ್ತಲೇ ನಿರ್ದೇಶಕನ ಕನಸಿಗೆ ತೆರೆ ಮೇಲೆ ಸಾಥ್ ಕೊಡುತ್ತಾರೆ ನಾಯಕ. ಆ ಮೂಲಕ ಸಾಕಷ್ಟು ಕೊರತೆಗಳ ನಡುವೆ ಚಿತ್ರ ನೋಡಿಸಿಕೊಂಡು ಹೋಗುವುದಕ್ಕೆ ಒಂದಿಷ್ಟು ಕಾರಣಗಳು ಸಿಗುತ್ತವೆ. ತನ್ನ ಗುಂಡ್ರುಗೋವಿತನದಿಂದ ಹಳ್ಳಿ ಜನರ ಕೋಪಕ್ಕೆ ತುತ್ತಾಗುವ ನಾಯಕ, ಅಪ್ಪನ ಅದೇಶದಂತೆ ಊರು ಬಿಡುತ್ತಾನೆ. ಊರು ಬಿಟ್ಟವನು ಮತ್ತೆ ವಾಪಸ್ಸು ಬರಲ್ಲ ಎಂದು ಕೊಂಡೇ ಜನ ನೆಮ್ಮದಿಯಾಗಿರುತ್ತಾರೆ. ನಗರಕ್ಕೆ ಹೋಗುವ
ನಾಯಕನಿಗೆ ಅಲ್ಲೊಬ್ಬ ಹುಡುಗಿ ಕಾಣುತ್ತಾಳೆ. ಮೊದಲ ನೋಟದಲ್ಲೇ ಆಕೆಯ ಮೇಲೆ ಪ್ರೀತಿ ಉಂಟಾಗುತ್ತದೆ. ಹೀಗೆ ಕಂಡು ಹಾಗೆ ಮಾಯವಾಗುವ ಆಕೆ ಯಾರು ಎನ್ನುವ ಯೋಚನೆಯಲ್ಲಿದ್ದಾಗಲೇ ತನ್ನ ಗೆಳೆಯನ ಪ್ರೇಮ ಕತೆ ತೆರೆದುಕೊಳ್ಳುತ್ತದೆ. ಆದರೆ, ತನ್ನ ಗೆಳೆಯ ಪ್ರೀತಿಸುವ ಹುಡುಗಿಯ ಮೇಲೆ ಆಕೆಯ ಮಾವನೇ ಕಣ್ಣಾಕಿರುತ್ತಾನೆ. ಏನಾದರೂ ಮಾಡಿ ಆತನಿಂದ ತಪ್ಪಿಸಿಕೊಂಡು ಹೋಗಿ ತನ್ನ ಹುಡುಗನನ್ನು ವರಿಸಬೇಕು ಎನ್ನುವುದು ಹುಡುಗಿಯ ಆಸೆ. ಇವರ ಪ್ರೀತಿಗೆ ನಾಯಕ ಹೇಗೆ ಬೆನ್ನೆಲುಬಾಗಿ ನಿಲ್ಲುತ್ತಾನೆ.
ಇಷ್ಟಕ್ಕೂ ತನ್ನ ಗೆಳೆಯ ಪ್ರೀತಿಸುತ್ತಿರುವ ಹುಡುಗಿ ಯಾರು ಎನ್ನುವುದರೊಂದಿಗೆ ಚಿತ್ರಕ್ಕೆ ಹೊಸ ತಿರುವು ಸಿಗುತ್ತದೆ. ಆ ತಿರುವು ನಗರದಿಂದ ಮತ್ತೆ ಹಳ್ಳಿಯತ್ತ ಮುಖ ಮಾಡಿ ಅಲ್ಲೊಂದು ಮ್ಯಾರೇಜ್ ಡ್ರಾಮಾಕ್ಕೆ ದಾರಿ ಮಾಡಿಕೊಟ್ಟು
ಅದು ಸುಖಾಂತ್ಯವಾಗುವುದರೊಂದಿಗೆ ಸಿನಿಮಾ ಮುಗಿಯುತ್ತದೆ. ಹಳ್ಳಿ, ಅಲ್ಲಿನ ರಾಜಕೀಯ, ತಿರುಬೋಕಿತನ, ಹಳ್ಳಿ ಜನರ ಜೀವನ ಶೈಲಿ, ಅಲ್ಲೊಬ್ಬ ಜಮೀನ್ದಾರ, ಮುಂದೆ ಬರಲಿರುವ ನಗರ, ಅಲ್ಲೊಂದು ಪ್ರೀತಿ, ಪ್ರೀತಿಗೆ ಎದುರಾಗಿರುವ
ಸಮಸ್ಯೆ, ಅದನ್ನು ಬಗೆಹರಿಸುವ ಜವಾಬ್ದಾರಿ ಹೊತ್ತುಕೊಳ್ಳುವ ನಾಯಕ, ಕೊನೆಯಲ್ಲಿ ಗೆಳೆಯನ ಪ್ರೀತಿಯ ತ್ಯಾಗದಿಂದಲೇ ತನ್ನ ಹುಡುಗಿಯನ್ನು ಪಡೆದುಕೊಳ್ಳುವ ನಾಯಕ. ಇವಿಷ್ಟು ‘ಮಿ. ಎಲ್ಎಲ್ಬಿ’ ಚಿತ್ರದ ಮುಖ್ಯಾಂಶಗಳು. ಅಂಶಗಳೇನೋ ಚೆನ್ನಾಗಿವೆ. ಆದರೆ, ಅವುಗಳನ್ನು ಸರಿಯಾಗಿ ಜೋಡಿಸದೆ, ಆ ಅಂಶಗಳಿಗೆ ತಕ್ಕಂತೆ ಕಲಾವಿದರ ನಟನೆ ಇಲ್ಲದೆ, ಸೊರಗಿದ ಚಿತ್ರಕತೆಯಿಂದ ತೆರೆ ಮೇಲೆ ಬರುವ ಯಾವ ಅಂಶಗಳೂ ನೋಡುಗನನ್ನು ಅಪ್ಪಿಕೊಳ್ಳುವುದಿಲ್ಲ. ನಾಯಕಿಯನ್ನು ಅಪಹರಿಸುವ ದೃಶ್ಯ, ನಾಯಕಿ ಮತ್ತು ನಾಯಕನ ಪ್ರೇಮ ಇವು ಚಿತ್ರದ ಕತೆಯಲ್ಲಿ ಪ್ರಭಾವಿಯಾಗಿಲ್ಲ. ಆದರೆ, ಹೊಸಬರ ಸಿನಿಮಾ ಎನ್ನುವ ಕಾರಣಕ್ಕೆ ನೋಡಿಬರಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.