
ಕಳೆದ ಎರಡು ತಿಂಗಳುಗಳಿಂದ ಸ್ಟಾರ್ ನಟರ ಸಿನಿಮಾಗಳು ಇಲ್ಲದೆ ಹೊಸಬರ ಹಾಗೂ ಪ್ರಯೋಗಾತ್ಮಕ ಸಿನಿಮಾಗಳಿಂದಲೇ ಗಿಜಿಗುಡುತ್ತಿದ್ದ ಕನ್ನಡ ಚಿತ್ರನಗರಿಯಲ್ಲಿ ಸ್ಟಾರ್ಗಳ ಜಾತ್ರೆ ಶುರುವಾಗಲಿದೆ. ಧ್ರುವ ಸರ್ಜಾ ನಟನೆಯ ‘ಭರ್ಜರಿ’ ಹಾಗೂ ದರ್ಶನ್ ನಟನೆಯ ‘ತಾರಕ್’ ಸಿನಿಮಾಗಳ ನಂತರ ಸ್ಟಾರ್ಗಳು ಗಾಂದಿನಗರದತ್ತ ಮುಖ ಮಾಡಲೇ ಇಲ್ಲ. ಕೇವಲ ಹೊಸಬರ ಹವಾ ಗಾಂಧೀನಗರದಲ್ಲಿ ಧೂಳೆಬ್ಬಿಸಲು ಹೊರಟಿತ್ತು. ಈ ಪ್ರವೃತ್ತಿ ಅಕ್ಟೋಬರ್ನಲ್ಲಿ ಶುರುವಾಗಿ ನವೆಂಬರ್ ತನಕವೂ ಮುಂದುವರಿದಿತ್ತು. ಕಳೆದ ಎರಡ್ನೂರು ತಿಂಗಳು ಗಳಿಂದ ನಟರಾದ ಯಶ್, ಪುನೀತ್ ರಾಜ್ಕುಮಾರ್, ಸುದೀಪ್, ಉಪೇಂದ್ರ, ವಿಜಯ್, ಶ್ರೀಮುರಳಿ, ನೆನಪಿರಲಿ
ಪ್ರೇಮ್, ಪ್ರಜ್ವಲ್ ದೇವರಾಜ್, ಅಜಯ್ ರಾವ್ ಸೇರಿದಂತೆ ಯಾವುದೇ ಸ್ಟಾರ್ ನಟನ ಚಿತ್ರ ಪ್ರೇಕ್ಷಕನಿಗೆ ದರ್ಶನ ಕೊಟ್ಟಿಲ್ಲ.
ಆದರೆ, ಡಿಸೆಂಬರ್ ತಿಂಗಳು ಶುರುವಾಗುವ ಹೊತ್ತಿಗೆ ಸ್ಟಾರ್ ನಟರ ಅಭಿನಯದ ಸಿನಿಮಾಗಳ ಜಾತ್ರೆ ಆರಂಭವಾಗಲಿದೆ. ನಟರಾದ ಶಿವರಾಜ್ಕುಮಾರ್ ಹಾಗೂ ಶ್ರೀಮುರಳಿ ಕಾಂಬಿನೇಷನ್ ನ ‘ಮಫ್ತಿ’ ಚಿತ್ರದಿಂದ ಶುರುವಾಗುವ ದೊಡ್ಡ ನಟರ ಸಿನಿಮಾಗಳು ಡಿಸೆಂಬರ್ ತಿಂಗಳ ಪೂರ್ತಿ ಆವರಿಸಿಕೊಳ್ಳಲಿವೆ. ‘ಮಫ್ತಿ’ ಚಿತ್ರದ ನಂತರ ಸುದೀಪ್-ಗುರುನಂದನ್ ಜೊತೆಯಾಗಿ ಕಾಣಿಸಿಕೊಂಡ ‘ ರಾಜು ಕನ್ನಡ ಮೀಡಿಯಂ’, ದುನಿಯಾ ವಿಜಯ್ ನಟನೆಯ ‘ಕನಕ’, ಪುನೀತ್ ರಾಜ್'ಕುಮಾರ್ ನಟನೆಯ ‘ಅಂಜನಿಪುತ್ರ’, ಗಣೇಶ್ ಅಭಿನಯದ ‘ಚಮಕ್’ ಚಿತ್ರಗಳು ಯಾವ ದಿನ ಬರುತ್ತವೆಂಬ ದಿನಾಂಕ ಕೂಡ ಫಿಕ್ಸ್ ಆಗಿದೆ. ಈ ಚಿತ್ರಗಳ ನಡುವೆ ಉಪೇಂದ್ರ
ನಟನೆಯ ‘ಉಪೇಂದ್ರ ಮತ್ತೆ ಬಾ’ ಹಾಗೂ ನೆನಪಿರಲಿ ಪ್ರೇಮ್ ಅವರ ‘ದಳಪತಿ’ ಚಿತ್ರಗಳು ತೆರೆಗೆ ಸಿದ್ಧವಾಗಿವೆ.
ಅಲ್ಲಿಗೆ ಡಿಸೆಂಬರ್ ತಿಂಗಳೊಂದರಲ್ಲೇ 7 ಮಂದಿ ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರುತ್ತಿವೆ. ಅಲ್ಲಿಗೆ ಸ್ಟಾರ್ಗಳ ಸಿನಿಮಾ ಮುಗಿದು ಮತ್ತೆ ಹೊಸಬರ ಹಂಗಾಮ ಆರಂಭವಾಗಲಿದೆ. ಸಂಕ್ರಾಂತಿಗೆ ಪ್ಲಾನ್ ಮಾಡಿಕೊಂಡಿರುವ ಶಿವಣ್ಣ ಅಭಿನಯದ ಟಗರು ಮತ್ತು ಯಶ್ ಅಭಿನಯದ ಕೆಜಿಎಫ್ ಚಿತ್ರಗಳ ನಂತರ, ಮುಂದೇನಾಗುವುದೆಂದು ಕಾದು ನೋಡಬೇಕಿದೆ.?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.