
ಮುಗುಳುನಗೆಯ ನಂತರ ಯೋಗರಾಜ ಭಟ್ಟರು ಏನು ಮಾಡುತ್ತಿದ್ದಾರೆ? ಸುದೀಪ್ ಸಿನಿಮಾ ಮಾಡ್ತಾರೆ. ಪೌರಾಣಿಕ ಚಿತ್ರ ನಿರ್ದೇಶಿಸುತ್ತಾರೆ. ಪುನೀತ್ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ. ಶಿವಣ್ಣ ಸಿನಿಮಾ ಒಪ್ಕಂಡಿದ್ದಾರೆ. ದನಕಾಯೋನು ಸಂಭಾವನೆಗೆ ಕನಕಪುರ ಶ್ರೀನಿವಾಸ್ ಜೊತೆ ಹೋರಾಟ ಮಾಡ್ತಿದ್ದಾರೆ ಎಂಬಿತ್ಯಾದಿ ಊಹಾಪೋಹಗಳು ಕೇಳುತ್ತಲೇ ಇದ್ದವು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಭಟ್ಟರು ಹೊಸ ಹುಡುಗರ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ನಿರ್ದೇಶನ ನಿರ್ಮಾಣ ಎರಡೂ ಅವರದೇ. ಮೂರು ಟೈಟಲ್ ಮುಂದಿಟ್ಟುಕೊಂಡು, ಒಂದನ್ನು ಫೈನಲೈಸ್ ಮಾಡಲು ಕಾಯುತ್ತಿರುವ ಭಟ್ಟರ ಚಿತ್ರದಲ್ಲಿ ನಾಲ್ಕು ಮಂದಿ ನಾಯಕರಿರುತ್ತಾರಂತೆ. ಅಲ್ಲಿಗೆ ಇದು ಗಾಳಿಪಟಕ್ಕಿಂತ ಒಂದು ಹೆಜ್ಜೆ ಮೇಲೆ ಎಂದಾಯಿತು. ಸದ್ಯಕ್ಕೆ ಪ್ರೊಡಕ್ಷನ್ ನಂ.6 ಹೆಸರಲ್ಲಿ ಡಿಸೆಂಬರ್ 6ರಂದು ಸ್ಕ್ರಿಪ್ಟ್ ಪೂಜೆ ಮಾಡಿಸಿಕೊಂಡು, ಡಿಸೆಂಬರ್ 20ರಿಂದ ಶೂಟಿಂಗಿಗೆ ಹೊರಡಲಿರುವ ಸಿನಿಮಾಕ್ಕೆ ಹರಿಕೃಷ್ಣ ಸಂಗೀತ, ಸುಜ್ಞಾನಮೂರ್ತಿ ಛಾಯಾಗ್ರಹಣ ಇರುತ್ತದೆ.
ನಾಲ್ಕೂ ನಟರೂ ಹೊಸಬರು. ನಾಯಕಿಯರ ಆಯ್ಕೆ ಇನ್ನೇನು ಮುಗಿಯುತ್ತಾ ಬಂದಿದೆ. ಡಿಸೆಂಬರ್ 6ರಿಂದ ಚಿತ್ರಕ್ಕೆ ಬೇಕಾದ ಹೊಸ ನಟರ ಆಡಿಷನ್ ಕೂಡ ಮಾಡಲಿದ್ದಾರೆ ಭಟ್ಟರು. ಹೀಗಾಗಿ ಭಟ್ಟರ ಚಿತ್ರ ದಲ್ಲಿ ನಟಿಸುವುದಕ್ಕೆ ಆಸೆ ಇರುವವರು ಈ ಆಡಿಷನ್ನಲ್ಲಿ ಪಾಲ್ಗೊಳ್ಳಬಹುದು. ಹಾಗೆ ಹೊಸ ನಾಯಕ ನಟರಿಗೆ ಹೊಸ ನಟಿಯರನ್ನೂ ಸಹ ಆಡಿಷನ್ ಮೂಲಕವೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಯೋಗರಾಜ್ ಭಟ್ ಅವರ ಚಿತ್ರದಲ್ಲಿ ನಾಯಕಿ ಆಗಲು ಕಾಯುತ್ತಿರುವವರು ಒಮ್ಮೆ ಭಟ್ಟರ ಕಚೇರಿಯ ಬಾಗಿಲು ತಟ್ಟಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.