
ಹಾಸ್ಯ ನಟ ಚಿಕ್ಕಣ್ಣ ಮದುವೆಗೆ ರೆಡಿ ಆಗಿದ್ದಾರೆ. ಈಗ ಅವರಿಗೆ ಇಷ್ಟವಾಗುವ ವಧು ಹುಡುಕಾಟ ನಡೆದಿದೆ. ಒಂದಲ್ಲ, ಎರಡಲ್ಲ ಇದುವರೆಗೂ ಬರೋಬ್ಬರಿ 99 ವಧು ಅನ್ವೇಷಣೆ ನಡೆದಿದೆ. ಕೊನೆಗೆ ಸಿಕ್ಕಿದ್ದು ಶ್ರುತಿ ಹರಿಹರನ್. ಅಷ್ಟಕ್ಕೂ ಶ್ರುತಿ ಹರಿಹರನ್, ಚಿಕ್ಕಣ್ಣ ಅವರನ್ನು ಒಪ್ಪಿಕೊಂಡಿದ್ದು ಯಾಕೆ? ಆ ಕತೆ ಗೊತ್ತಾಗಬೇಕಾದ್ರೆ ನೀವು ‘ಭೂತಯ್ಯನ ಮೊಮ್ಮಗ ಅಯ್ಯು’ ದರ್ಶನ ಪಡೆಯಲೇಬೇಕು.
ನಾಗರಾಜ ಪೀಣ್ಯ ಇದೇ ಮೊದಲು ಕಾಮಿಡಿ ಚಿತ್ರವೊಂದನ್ನು ನಿರ್ದೇಶಿಸಿದ್ದು, ಈ ವಾರ ತೆರೆಗೆ ಬರುತ್ತಿದೆ. ‘ಇದು ಪಕ್ಕಾ ಕಾಮಿಡಿ ಚಿತ್ರ. ಸಾವಿನ ಮನೆಯಲ್ಲೂ ಹಾಸ್ಯ ಹೇಗೆ ಹುಟ್ಟುತ್ತೆ. ಆ ಮೂಲಕ ಇನ್ನೆಲ್ಲ ಸಂಗತಿಗಳು ಚರ್ಚೆಗೆ ಬರುತ್ತವೆ’ ಎನ್ನುವುದೇ ಈ ಚಿತ್ರದ ವಿಶೇಷ ಎನ್ನುತ್ತಾರೆ ನಿರ್ದೇಶಕರು. ಸಾವಿನ ಮನೆಯಲ್ಲೂ ಕಾಮಿಡಿ ಹುಡುಕುವ ಈ ಕತೆಯ ವೈಶಿಷ್ಟ್ಯವೇ ರೋಚಕವಂತೆ. ಅದಕ್ಕಾಗಿ ನಿರ್ದೇಶಕರು ೬೦ಕ್ಕೂ ಹೆಚ್ಚು ಮನೆಗಳಿಗೆ ಹೋಗಿ ಬಂದು ಕತೆ ರೆಡಿ ಮಾಡಿದ್ದಾರೆ. ಅಲ್ಲಿಗೆ ಇದೊಂದು ಪಕ್ಕಾ ಸಂಶೋಧನೆಯ ಕತೆ ಅನ್ನೋದು ತಬಲ ನಾಣಿ ಮಾತು.
ನಾಣಿ ಈ ಚಿತ್ರದ ಪ್ರಮುಖ ಆಕರ್ಷಣೆ. ಕಥಾ ನಾಯಕ ಚಿಕ್ಕಣ್ಣನ ಸೋದರ ಮಾವ. ಚಿಕ್ಕಣ್ಣನಿಗೆ ಸರಿಯಾದ ವಧು ಹುಡುಕಿ ಮದುವೆ ಮಾಡಿಸುವುದೇ ಅವರ ಜವಾಬ್ದಾರಿ. ಚಿತ್ರೀಕರಣದ ವೇಳೆ ಸೆಟ್ನಲ್ಲಿ ಎದ್ದು ಬಿದ್ದು ನಕ್ಕಿದ್ದಾರಂತೆ ನಾಣಿ. ಅದು ಪ್ರೇಕ್ಷಕರನ್ನು ರಂಜಿಸುತ್ತಾ ಎನ್ನುವ ವಿಶ್ವಾಸ ಅವರದು. ಬುಲೆಟ್ ಪ್ರಕಾಶ್, ರಾಕ್ಲೈನ್ ಸುಧಾಕರ್, ಮನದೀಪ್ ರಾಯ್, ಮೋಹನ್ ಜುನೇಜಾ, ಉಮೇಶ್, ಗಿರೀಜಾ ಲೋಕೇಶ್ ತಾರಾಗಣದಲ್ಲಿದ್ದಾರೆ.
ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಕತೆಗೆ ತಕ್ಕಂತೆ ಸಂಗೀತ ಸಂಯೋಜಿಸಲು 45 ದಿವಸ ಸಮಯ ತೆಗೆದುಕೊಂಡರಂತೆ. ಅದಕ್ಕೆ ಕಾರಣ ಚಿತ್ರದ ಕತೆ. ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಸಿನಿಜರ್ನಿಯಲ್ಲಿ ಇದು ವಿಶೇಷವಾದ ಚಿತ್ರ. ಯಾಕಂದ್ರೆ ಅವರ ಸಿನಿ ಕರಿಯರ್ನಲ್ಲಿ ಇದು 1000 ನೇ ಚಿತ್ರ. ಶ್ರುತಿ ಹರಿಹರನ್ ಈ ಚಿತ್ರದಲ್ಲಿ ಪಕ್ಕಾ ಕಾಮಿಡಿ ನಟರ ಜತೆಗೆ ತೆರೆ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.