
ತಮಿಳು ನಟ ಆರ್ಯ ಕನ್ನಡಿಗರಿಗೂ ಚಿರಪರಿಚಿತ. ಮೂಲತಃ ಮಲಯಾಳಿಯಾದ್ರೂ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಆರ್ಯ, ದಶಕಗಳ ಕಾಲದ ತಮ್ಮ ಸಿನಿ ಬದುಕಿನಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಸದ್ಯ ಅವರು 'ಮಿಸ್ಟರ್. ಎಕ್ಸ್' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಮಂಜು ವಾರಿಯರ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಆರ್ಯ ಅವರ ವೃತ್ತಿಬದುಕಿನ ಅತ್ಯಂತ ಸವಾಲಿನ ಪಾತ್ರವೆಂದರೆ 'ನಾನ್ ಕಡವುಳ್' ಚಿತ್ರದ್ದು. ಹಲವು ಪ್ರಶಸ್ತಿಗಳನ್ನು ಬಾಚಿಕೊಂಡ ಈ ಸಿನಿಮಾದ ಶೂಟಿಂಗ್ ವೇಳೆ ಆದ ಅನುಭವಗಳನ್ನು ಆರ್ಯ ಇದೀಗ ಹಂಚಿಕೊಂಡಿದ್ದಾರೆ.
ಈ ಚಿತ್ರದ ಬಹುತೇಕ ಶೂಟಿಂಗ್ ವಾರಣಾಸಿಯಲ್ಲಿ ನಡೆದಿತ್ತು. ಅಲ್ಲಿನ ಅನುಭವದ ಬಗ್ಗೆ ' ಸಿನಿ ಉಳಗಂ' ಎಂಬ ತಮಿಳು ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಆರ್ಯ ಮಾತನಾಡಿದ್ದಾರೆ. ವಾರಣಾಸಿಯಲ್ಲಿರುವ ಸಾಧುಗಳಲ್ಲಿ ಶೇ. 60ರಷ್ಟು ಮಂದಿ ನಿಜವಾದ ಸಾಧುಗಳಿರಬಹುದು, ಆದರೆ ಉಳಿದ ಶೇ. 40ರಷ್ಟು ಮಂದಿ ಕ್ರಿಮಿನಲ್ ಚಟುವಟಿಕೆ ನಡೆಸಿ ತಲೆಮರೆಸಿಕೊಂಡವರು ಎಂದು ಆರ್ಯ ಹೇಳಿದ್ದಾರೆ.
"ನಾನು 'ನಾನ್ ಕಡವುಳ್' ಸಿನಿಮಾ ಮಾಡುವಾಗ ವಾರಣಾಸಿಗೆ ಹೋಗಿದ್ದೆ. ಅಲ್ಲಿ ತುಂಬಾನೇ ನಕಲಿ ಸಾಧುಗಳಿದ್ದರು. ಕೊಲೆ ಸೇರಿದಂತೆ ಹಲವು ಅಪರಾಧ ಮಾಡಿ ತಲೆಮರೆಸಿಕೊಂಡವರು ಅವರು. ಸುಮಾರು ಶೇ. 60ರಷ್ಟು ಮಂದಿ ನಿಜವಾದ ಸಾಧುಗಳಿರಬಹುದು. ಆದರೆ ಉಳಿದ ಶೇ. 40ರಷ್ಟು ಮಂದಿ ನಕಲಿ ಸ್ವಾಮಿಗಳು. ಅವರಲ್ಲಿ ಹಲವರು ಕ್ರಿಮಿನಲ್ಗಳು. ಕೆಲವರ ಬಳಿ ಹೆಸರು ಕೇಳಿದರೆ 'ಸ್ವಾಮಿ' ಅಂತಷ್ಟೇ ಹೇಳ್ತಾರೆ. ಅವರಿಗೆ ಸರಿಯಾದ ಹೆಸರಿಲ್ಲ. ರೇಷನ್ ಕಾರ್ಡ್, ಐಡಿ ಕಾರ್ಡ್, ಪ್ಯಾನ್ ಕಾರ್ಡ್... ಯಾವುದೂ ಇರಲ್ಲ. ಕ್ರಿಮಿನಲ್ ಕೆಲಸ ಮಾಡಿ ಬಂದು ಇಲ್ಲಿ ಅಡಗಿಕೊಂಡಿರುತ್ತಾರೆ. ಮೂರ್ನಾಲ್ಕು ವರ್ಷ ರೆಸ್ಟ್ ಮಾಡಿ ಹೋಗೋಕೆ ಬಂದವರು!!"
"ಕುಂಭಮೇಳದ ಸಮಯದಲ್ಲಿ ನಾವು ಶೂಟಿಂಗ್ಗೆ ಹೋಗಿದ್ದೆವು. ಆಗ ಪೊಲೀಸರು, 'ನಾವಿಲ್ಲಿ ಕೇವಲ 50,000 ಪೊಲೀಸರಿದ್ದೇವೆ. ನಮ್ಮ ಕೈಯಲ್ಲಿ ಇರೋದು ಸಾಮಾನ್ಯ ಗನ್ಗಳು. ಆದರೆ ಒಳಗೆ ಇರೋರ ಕೈಯಲ್ಲಿ ಎಕೆ-47 ಇದೆ. ಹಾಗಾಗಿ ಹುಷಾರಾಗಿ ಶೂಟಿಂಗ್ ಮಾಡಿ' ಅಂತ ಎಚ್ಚರಿಕೆ ಕೊಟ್ಟರು. ಅಲ್ಲಿನ ಪರಿಸ್ಥಿತಿ ಅದು. ಎಲ್ಲಾ ಕಡೆಯೂ ಎಲ್ಲಾ ತರಹದ ಜನ ಇರುತ್ತಾರೆ," ಎಂದು ಆರ್ಯ ವಿವರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.