
ಬೆಂಗಳೂರು (ಆ. 08): ಮಯೂರಿ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಐದು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಮಯೂರಿ ನಟಿಸಲಿರುವ ಹೊಸ ಚಿತ್ರದ ಹೆಸರು ‘ಹರಿಕೃಷ್ಣ ನಾರಾಯಣಿ’. ಈ ಚಿತ್ರವನ್ನು ಡಾ ಗಿರಿಧರ್ ನಿರ್ದೇಶಿಸುತ್ತಿದ್ದಾರೆ.
ನಾಯಕಿ ಸುತ್ತಲೇ ತಿರುಗುವ ಈ ಚಿತ್ರವನ್ನು ಸುಶೀಲ್ ನಿರ್ಮಾಣ ಮಾಡುವ ಜತೆಗೆ ಚಿತ್ರದಲ್ಲೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವಣ್ಣ ಜತೆಗೆ ‘ರುಸ್ತುಂ’ ಚಿತ್ರೀಕರಣದಲ್ಲಿ ಮಯೂರಿ ಪಾಲ್ಗೊಂಡಿದ್ದಾರೆ. ಜತೆಗೆ ‘ಸಿಗ್ನೇಚರ್’ ಚಿತ್ರಕ್ಕೂ ಶೂಟಿಂಗ್ ನಡೆಯುತ್ತಿದೆ. ಜಗ್ಗೇಶ್ ಜತೆಗೆ ನಟಿಸುತ್ತಿರುವ ‘೮ಎಂಎಂ’ ಚಿತ್ರೀಕರಣ ಜತೆಗೆ ಡಬ್ಬಿಂಗ್ ಕೂಡ ಮುಗಿಸಿದ್ದಾರೆ. ಹಾಗೆ ‘ನನ್ನ ಪ್ರಕಾರ’ ಚಿತ್ರದ ಶೂಟಿಂಗ್ ಮುಗಿಸಿ ಈಗ ‘ನಾರಾಯಣಿ’ ಆಗಲು ಹೊರಟಿದ್ದಾರೆ ಮಯೂರಿ.
ಈ ಹೊಸ ಚಿತ್ರದ ಮುಹೂರ್ತ ವರಮಹಾಲಕ್ಷ್ಮೀ ಹಬ್ಬದ ದಿನ ನಡೆಯಲಿದೆ. ಅಜಯ್ ರಾವ್ ಜತೆಗೆ ‘ಕೃಷ್ಣಲೀಲಾ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿರಿಸಿದ ಮಯೂರಿಗೆ ಮೊದಲ ಚಿತ್ರದಲ್ಲೇ ಯಶಸ್ಸು ಸಿಕ್ಕಿತು. ಆ ನಂತರ ‘ಇಷ್ಟಕಾಮ್ಯ’, ‘ನಟರಾಜ ಸರ್ವಿಸ್’, ‘ಕರಿಯಾ-2’ ಚಿತ್ರಗಳಲ್ಲಿ ನಟಿಸುವ ಮೂಲಕ ಬೇಡಿಕೆಯ ನಟಿ ಎನಿಸಿಕೊಂಡರು. ಈಗ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರದ ಚಿತ್ರೀಕರಣ ಮುಗಿದ ಕೂಡಲೇ ‘ಹರಿಕೃಷ್ಣ ನಾರಾಯಣಿ’ ಕೈ ಹಿಡಿಯಲಿದ್ದಾರೆ ಮಯೂರಿ.
‘ಹರಿಕೃಷ್ಣ ಮತ್ತು ನಾರಾಯಣಿ ಜೋಡಿಯ ಅಧುನಿಕ ಪ್ರೇಮ ಕತೆಯೇ ಆ ಚಿತ್ರದ ಮೂಲ ವಸ್ತು. ರೊಮ್ಯಾಂಟಿಕ್ ಪ್ರೇಮ ಕತೆಯನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನವಿದು. ಪ್ರೀತಿ- ಪ್ರೇಮಕ್ಕೆ ಮರು ವ್ಯಾಖ್ಯಾನ ಮಾಡುವ ಅಗತ್ಯವಿದೆ. ಆ ಕೆಲಸ ನಮ್ಮ ಈ ‘ಹರಿಕೃಷ್ಣ ನಾರಾಯಣಿ’ ಚಿತ್ರದಲ್ಲಿ ನಡೆಯಲಿದೆ’ ಎನ್ನುತ್ತಾರೆ ನಿರ್ದೇಶಕ ಡಾ ಗಿರಿಧರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.