ಶಿವಾಜಿ ಸುರತ್ಕಲ್ ನಲ್ಲಿ ಡಿಟೆಕ್ಟವ್ ಕೆಲಸ ಶುರು ಮಾಡಿದ ರಮೇಶ್ ಅರವಿಂದ್!

By Web DeskFirst Published Mar 23, 2019, 2:00 PM IST
Highlights

ಕನ್ನಡ ಚಿತ್ರರಂಗದಲ್ಲಿ ಮತ್ತೆ ಪತ್ತೇದಾರರ ಹವಾ ಶುರುವಾಗಿದೆ. ಈಗ ಹೊಸತಾಗಿ ಪತ್ತೇದಾರನಾಗಿರುವುದು ರಮೇಶ್ ಅರವಿಂದ್. ಅವರ ಹೊಸ ಚಿತ್ರಕ್ಕೆ ಟೈಟಲ್ ಫೈನಲ್ ಆಗಿದೆ. ‘ಶಿವಾಜಿ ಸುರತ್ಕಲ್- ದಿ ಕೇಸ್ ಆಫ್ ರಣಗಿರಿ ರಹಸ್ಯ’ ಎನ್ನುವ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಒಬ್ಬ ಚಾಣಾಕ್ಷ ಪತ್ತೇದಾರನ ಪಾತ್ರ ಮಾಡಲಿದ್ದಾರೆ.

ಆಕಾಶ್ ಶ್ರೀವತ್ಸ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ನಾಯಕಿಯರು ರಾಧಿಕಾ ಚೇತನ್ ಹಾಗೂ ಆರೋಹಿ ನಾರಾಯಣ್. ರೇಖಾ ಕೆ.ಎನ್. ಹಾಗೂ ಅನೂಪ್ ಗೌಡ. ಚಿತ್ರಕ್ಕೆ ಈಗಾಗಲೇ ಹತ್ತು ದಿನ ಚಿತ್ರೀಕರಣ ನಡೆದಿದೆ. ವಿಭಿನ್ನ ಟೈಟಲ್‌ಗಳಲ್ಲಿ ಸುದ್ದಿ ಆಗುತ್ತಿರುವ ಚಿತ್ರಗಳ ಸಾಲಿಗೆ ಈಗ ಇದು ಕೂಡ ಸೇರಿದೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಷೆರ್ಲಾಕ್ ಹೋಮ್ಸ್ ಥರ ಓರ್ವ ಪತ್ತೇದಾರ. ಹೆಸರು ಶಿವಾಜಿ ಸುರತ್ಕಲ್. ಇದೇ ಮೊದಲು ಅವರು ವಿಭಿನ್ನ ಪಾತ್ರ ಮತ್ತು ವಿಶಿಷ್ಟ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕರ ಪ್ರಕಾರ, ಶಿವಾಜಿ ಸುರತ್ಕಲ್ ಬೇರೆಯವರಂತಲ್ಲ. ಅವನ ತನಿಖಾ ವಿಧಾನವೇ ಅಪೂರ್ವ. ಸಾಕ್ಷ್ಯಾಧಾರಗಳನ್ನು ಶೋಧಿಸಿ, ತನ್ನ ಅದ್ಭುತವಾದ ಕಲ್ಪನಾ ಶಕ್ತಿಯಿಂದ ಅಪರಾಧಿಯನ್ನು ಹಿಡಿದು ಹಾಕುವ ಚಾಣಾಕ್ಷ ಆತ.

‘ರಣಗಿರಿಯೆಂಬುದೊಂದು ಚಿಕ್ಕ ಊರು. ಅದರ ಹೆಸರು ಕೇಳಿದ ಪ್ರತಿ ವ್ಯಕ್ತಿಗೂ ನಡುಕ ಹುಟ್ಟುತ್ತದೆ. ಆ ಊರಿನ ಬಗ್ಗೆ ಕೇಳುವ ಕಥೆಗಳು ನೂರಾರು. ಈಗ ಅಲ್ಲಿಗೆ ಶಿವಾಜಿ ಹೋಗಬೇಕು. ಅವನು ಊಹಿಸಲಾರದಷ್ಟು ದೊಡ್ಡ ಸವಾಲುಗಳು ಅಲ್ಲಿ ಎದುರಾಗುತ್ತವೆ. ಆದರೆ, ಶಿವಾಜಿ ಓರ್ವ ವಿಶೇಷ ಪತ್ತೇದಾರ. ಇಲಾಖೆ ಬಹುವಾಗಿ ಮೆಚ್ಚಿಕೊಂಡಿರುತ್ತದೆ. ಆತನ ರಣಗಿರಿಯಲ್ಲಿ ಎಷ್ಟೇ ಸವಾಲು ಎದುರಾದರೂ ಆತನಿಗೆ ಇಲಾಖೆ ವಹಿಸಿರುವ ಒಂದು ವಿಚಿತ್ರ ಕೇಸಿನ ರಹಸ್ಯ ಭೇದಿಸಬೇಕು. ಆಗ ಆತ ಅದನ್ನು ಹೇಗೆ ನಿಭಾಯಿಸುತ್ತಾನೆ’ ಎನ್ನುವುದು ಚಿತ್ರದ ಕತೆಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.

click me!